Advertisement

ಕನ್ನಡವೇ ಸತ್ಯ ಕನ್ನಡವೇ ನಿತ್ಯ

06:00 AM Dec 23, 2018 | |

1989 ಮೇ: ನನ್ನ ಮೊದಲ ವಿದೇಶ ಪ್ರವಾಸ (ಪಶ್ಚಿಮ) ಜರ್ಮನಿಯ ಹೈಡಲ್‌ಬರ್ಗ್‌ಗೆ. ಹೈಡಲ್‌ಬರ್ಗ್‌ ವಿವಿಯ ದಕ್ಷಿಣ ಏಶ್ಯಾ ಸಂಸ್ಥೆಯಲ್ಲಿ ಪ್ರಾಧ್ಯಾಪಕಿ ಆಗಿದ್ದ ಹೈಡ್ರೂನ್‌ ಬ್ರೂಕ್ನರ್‌ ಅವರ ಆಹ್ವಾನದಂತೆ ಮೇ 9 ಮತ್ತು 11ರಂದು ಅಲ್ಲಿ ಎರಡು ಉಪನ್ಯಾಸಗಳನ್ನು ಕೊಟ್ಟೆ: The First Phase of Kannada Novels : Evolution and Structure  ಮತ್ತು The Genres of Tulu Folk-Poetry: An Introduction. ಆ ಸಂದರ್ಭದಲ್ಲಿ ಒಂದು ದಿನ ಬ್ರೂಕ್ನರ್‌ ಜೊತೆಗೆ ಹೈಡಲ್‌ಬರ್ಗ್‌ನಿಂದ ತ್ಯೂಬಿಂಗನ್‌ಗೆ ಹೋದೆ. ತ್ಯೂಬಿಂಗನ್‌ ವಿವಿಗೂ ಕನ್ನಡಕ್ಕೂ ಐತಿಹಾಸಿಕ ನಂಟು ಇದೆ. ಕನ್ನಡ ಪ್ರಾಚೀನಕಾವ್ಯಗಳನ್ನು ಬಿಬ್ಲಿಯಾಥಿಕಾ ಕರ್ನಾಟಿಕಾ ಸಂಪುಟಗಳಲ್ಲಿ ಪ್ರಕಟಿಸಿದ ಹರ್ಮನ್‌ ಮೋಗ್ಲಿಂಗ್‌, ಕನ್ನಡ ಭಾಷಾತಜ್ಞ ಭಾಷಾಂತರಕಾರ ಗಾಡ್‌ಫ್ರೆ ವೈಗ್ಲೆ , ಕನ್ನಡ-ಇಂಗ್ಲಿಷ್‌ ನಿಘಂಟುವಿನ ಖ್ಯಾತಿಯ ಫ‌ರ್ಡಿನಾಂಡ್‌ ಕಿಟ್ಟೆಲ್‌- ಇವರು ಬದುಕಿದ ಪರಿಸರ ಮತ್ತು ನಡೆಸಿದ ಕನ್ನಡ ಕೆಲಸಗಳ ಕಾರಣವಾಗಿ ತ್ಯೂಬಿಂಗನ್‌ ವಿವಿ ನನ್ನ ಪಾಲಿಗೆ ಪವಿತ್ರ ಯಾತ್ರಾಸ್ಥಳವಾಗಿತ್ತು. ಕನ್ನಡದ ಮೊತ್ತಮೊದಲ ಎರಡು ಗೌರವ ಡಾಕ್ಟರೇಟ್‌ಗಳನ್ನು ಮೋಗ್ಲಿಂಗ್‌ (1858ರಲ್ಲಿ) ಮತ್ತು ಕಿಟ್ಟೆಲ್‌ (1896ರಲ್ಲಿ) ಅವರಿಗೆ ಕೊಟ್ಟದ್ದು ಜರ್ಮನಿಯ ತ್ಯೂಬಿಂಗನ್‌ ವಿಶ್ವವಿದ್ಯಾನಿಲಯ! 

Advertisement

ತ್ಯೂಬಿಂಗನ್‌ ವಿವಿ ಗ್ರಂಥಾಲಯದಲ್ಲಿ ಕನ್ನಡ ಹಸ್ತ ಪ್ರತಿಗಳನ್ನು ಅವಲೋಕಿಸು ತ್ತಿದ್ದಾಗ ಮಲಯಾಳ ಹಸ್ತಪ್ರತಿಗಳ ಜೊತೆಗೆ ಸೇರಿಹೋಗಿದ್ದ ಕನ್ನಡ ಲಿಪಿಯಲ್ಲಿ ಇದ್ದ ತುಳು ಪಾಡªನಗಳ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅವು ಕಾಂತೇರಿ ಜುಮಾದಿ ಮತ್ತು ಮಲರಾಯ ದೈವದ ಸಂದಿಗಳು ಎಂದು ಗುರುತಿಸಿದೆ. ಅವುಗಳ ಅಧ್ಯಯನಕ್ಕಾಗಿ ನಾನು ಸಲ್ಲಿಸಿದ ಯೋಜನೆಗೆ ಜರ್ಮನ್‌ ಸಂಶೋಧನಾ ಸಂಸ್ಥೆ “ಡಾಡ್‌’ ಒಪ್ಪಿಗೆ ಕೊಟ್ಟ ಕಾರಣ, 1993 ಜುಲೈ-ಸೆಪ್ಟಂಬರ್‌ ಮೂರು ತಿಂಗಳ ಕಾಲ ತ್ಯೂಬಿಂಗನ್‌ ವಿವಿಯ ಇಂಡಾಲಜಿ ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಾಪಕನಾಗಿ ಹೋದೆ. ಆಗ ಪ್ರೊ. ಬ್ರೂಕ್ನರ್‌ ಪ್ರಾಧ್ಯಾಪಕರಾಗಿ ತ್ಯೂಬಿಂಗನ್‌ ವಿವಿಗೆ ಬಂದಿದ್ದರು. ಅಲ್ಲಿ ತುಳು ಪಾಡªನದ ಅಧ್ಯಯನ ನಡೆಸುವುದರ ಜೊತೆಗೆ ಅಲ್ಲಿನ ಗ್ರಂಥಾಲಯದಲ್ಲಿ ಇದ್ದ ಕನ್ನಡ ಹಸ್ತಪ್ರತಿಗಳನ್ನು ವಿವರವಾಗಿ ಓದಿ ಟಿಪ್ಪಣಿ ಮಾಡಿಕೊಂಡೆ. ಹೆಚ್ಚಿನ ಕನ್ನಡ ಹಸ್ತಪ್ರತಿಗಳು ಮೋಗ್ಲಿಂಗ್‌ ಮತ್ತು ವೈಗ್ಲೆ ಅವರದ್ದು ಆಗಿದ್ದವು; ಅವರ ಕನ್ನಡ ಅಭ್ಯಾಸದ ಟಿಪ್ಪಣಿಗಳೂ ಸಾಕಷ್ಟು ಇದ್ದವು. ಈ ಕೆಲಸಗಳ ಜೊತೆಗೆ ಬ್ರೂಕ್ನರ್‌ ಜರ್ಮನ್‌ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಹೊಸ ಉಪಕ್ರಮವನ್ನು ಆರಂಭಿಸಿದರು. ನಾನು ಜರ್ಮನ್‌ ಆಸಕ್ತರಿಗೆ ಕನ್ನಡ ಭಾಷೆಯನ್ನು ಕಲಿಸಲು ಆರಂಭಿಸಿದ್ದು 1993ರಲ್ಲಿ ತ್ಯೂಬಿಂಗನ್‌ ವಿವಿಯಲ್ಲಿ. ಅದೊಂದು ಪ್ರಾಥಮಿಕ ಹಂತದ ಸಣ್ಣ ಪ್ರಯತ್ನ ಆಗಿತ್ತು. 

ಪ್ರೊ. ಹೈಡ್ರೂನ್‌ ಬ್ರೂಕ್ನರ್‌ 2001ರಲ್ಲಿ ಪೂರ್ಣಪ್ರಮಾಣದ ಪ್ರೊಫೆಸರ್‌ ಆಗಿ ಜರ್ಮನಿಯ ವ್ಯೂತ್ಸ್ìಬುರ್ಗ್‌ ವಿಶ್ವವಿದ್ಯಾಲಯದ ಇಂಡಾಲಜಿ ಪೀಠದ ಮುಖ್ಯಸ್ಥರಾದರು. ಕನ್ನಡ ಸಾಹಿತ್ಯದ ಬಗೆಗಿನ ಪ್ರೀತಿಯಿಂದ ಬ್ರೂಕ್ನರ್‌ ತಮ್ಮ ಇಂಡಾಲಜಿ ವಿಭಾಗದಲ್ಲಿ ಎಂಎ ಅಧ್ಯಯನಮಾಡುವ ಜರ್ಮನ್‌ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಹೆಚ್ಚುವರಿ ಭಾಷೆಯಾಗಿ ಕಲಿಸುವ ಕಾರ್ಯಕ್ರಮವನ್ನು ಆರಂಭಿಸಿದರು. ಅವರು ಮತ್ತು ತ್ಯೂಬಿಂಗನ್‌ನಲ್ಲಿ ನಾನು ಕನ್ನಡ ಕಲಿಸಿದ ಅವರ ಸಹೋದ್ಯೋಗಿ ಅನ್ನಾ ಎನ್ಪೊಸಿತೊ ಸೇರಿ ಕನ್ನಡವನ್ನು ಕಲಿಸುವ ಕಾರ್ಯಕ್ರಮವನ್ನು ಆರಂಭಿಸಿದರು. 2003ರಲ್ಲಿ ಕಿಟ್ಟೆಲ್‌ ಸಮ್ಮೇಳನಕ್ಕೆ ಜರ್ಮನಿಯ ಸ್ತುತ್‌ಗಾರ್ತ್‌ಗೆ ಹೋದವನು ವ್ಯೂತ್ಸ್ì ಬುರ್ಗ್‌ ವಿವಿಗೆ ಹೋಗಿ ಕೆಲವು ದಿನ ಇದ್ದು, ಅಲ್ಲಿನ ಜರ್ಮನ್‌ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ಪಾಠಗಳನ್ನು ಮಾಡಿದೆ.

ಮತ್ತೆ ಪ್ರೊ. ಬ್ರೂಕ್ನರ್‌ ಅವರ ಒತ್ತಾಸೆಯ ಆಹ್ವಾನದಂತೆ 2009 ಅಕ್ಟೋಬರ್‌ ಎರಡನೆಯ ವಾರ ಜರ್ಮನಿಯಲ್ಲಿ ಇಳಿದಾಗ ಯೂರೋಪಿನ ಚಳಿಯ ಕೊರೆಯುವ ಅನುಭವದ ಮೊದಲ ಸ್ಪರ್ಶವಾಯಿತು. ವ್ಯೂತ್ಸ್ìಬುರ್ಗ್‌ ವಿಶ್ವವಿದ್ಯಾಲಯದಲ್ಲಿ ವರ್ಷಕ್ಕೆ ಎರಡು ಸೆಮಿಸ್ಟರ್‌ಗಳು: ಚಳಿಗಾಲದ ಸೆಮಿಸ್ಟರ್‌ ಅಕ್ಟೋಬರ ಎರಡನೆಯ ವಾರದಿಂದ ಫೆಬ್ರವರಿ ನಡುವಿನವರೆಗೆ. ಬೇಸಗೆ ಸೆಮಿಸ್ಟರ್‌ ಎಪ್ರಿಲ್‌ ಎರಡನೆಯ ವಾರದಿಂದ ಜುಲೈ ಕೊನೆಯವರೆಗೆ. ಚಳಿಗಾಲದ ನನ್ನ ಮೊದಲ ಸೆಮಿಸ್ಟರ್‌ನಲ್ಲಿ ನಾಲ್ಕು ತರಗತಿಗಳಿಗೆ ಕನ್ನಡ ಪಾಠಮಾಡುವ ಅವಕಾಶ ದೊರೆಯಿತು. ಕನ್ನಡ-1 ತರಗತಿಯಲ್ಲಿ ಇದ್ದ ವಿದ್ಯಾರ್ಥಿಗಳು-ಲೀಸಾ, ಮರ್ತಿನ, ಸ್ಟೆಫ‌ನ್‌, ಲೌರ, ನದ್ಯಾ, ಮರಿಯಾನ್‌. ಕನ್ನಡ-4 ತರಗತಿಯಲ್ಲಿನ ವಿದ್ಯಾರ್ಥಿಗಳು-ಫ್ರಾನ್ಸಿಸ್ಕ, ಕತ್ರಿನ್‌, ಲರಿಸಾ, ವೆನ್‌ಜೆಲ್‌, ಮಿಗುವೆಲ್‌. ಇವರಲ್ಲಿ ಕನ್ನಡ-1 ತಂಡದವರು ಆರಂಭದ ಕನ್ನಡ ವಿದ್ಯಾರ್ಥಿಗಳು. ಕನ್ನಡ-4ರವರು ಈಗಾಗಲೇ ಎರಡು ಸೆಮಿಸ್ಟರ್‌ ಕನ್ನಡ ಓದಿದವರು. ಇವರಿಗೆ ಪಠ್ಯವಾಗಿ ಇಟ್ಟದ್ದು-ಲಿಂಗದೇವರು ಹಳೆಮನೆ ಮತ್ತು ಲೀಲಾವತಿ ಅವರ ಪುಸ್ತಕ An Intensive Course in Kannada. (CIIL,Mysore). ಕನ್ನಡ ಪ್ರಾಧ್ಯಾಪಕನಾಗಿ ಕನ್ನಡ ಭಾಷೆಯನ್ನು ಕಲಿಸುವುದು ಸುಲಭ ಎಂದು ತಿಳಿದುಕೊಂಡಿದ್ದ ನನಗೆ ಭಾಷಾಪಾಠದ ಪ್ರಾಯೋಗಿಕ ಸಮಸ್ಯೆಗಳ ಅರಿವಾಯಿತು. ಜರ್ಮನ್‌ ವಿದ್ಯಾರ್ಥಿಗಳಿಗೆ ನಾನು ಕನ್ನಡ ಪಾಠ ಮಾಡಬೇಕಾಗಿದ್ದದ್ದು ಇಂಗ್ಲಿಷ್‌ನಲ್ಲಿ. ಹಳೆಮನೆಯವರ ಪುಸ್ತಕ ಸಿದ್ಧವಾದದ್ದು ಕನ್ನಡೇತರ ಭಾರತೀಯರಿಗೆ ಕನ್ನಡ ಕಲಿಯಲು. ಆ ಪುಸ್ತಕದಲ್ಲಿ ಬಳಸಿದ ಕನ್ನಡ ವಾಕ್ಯಗಳು, ಸಂಭಾಷಣೆಗಳು ಹಳೆಯ ಮೈಸೂರಿನ ಆಡುಭಾಷೆಯವು, ವ್ಯಾಕರಣಬದ್ಧವಾದ ಬರಹದ ಭಾಷೆ ಅಲ್ಲ. ಹೊಸಗನ್ನಡ ವ್ಯಾಕರಣದ ಪರಿಭಾಷೆ ಯನ್ನು ನಾನು ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ವಿವರಿಸಬೇಕು. ಕನ್ನಡ ವ್ಯಾಕರಣದ ಅನೇಕ ಪರಿಭಾಷೆಗಳಿಗೆ ಸರಿಯಾದ ಇಂಗ್ಲಿಷ್‌ ಪದ ಕೊಟ್ಟಿರಲಿಲ್ಲ. ಕನ್ನಡ ವ್ಯಾಕರಣವನ್ನು, ಕನ್ನಡ ಕಲಿಸುವಿಕೆಯನ್ನು ಇಂಗ್ಲಿಷ್‌ನಲ್ಲಿ ಹೇಳುವ ಸಾಕಷ್ಟು ಪುಸ್ತಕಗಳು ದೊರೆಯುತ್ತವೆ. ಕನ್ನಡದಲ್ಲೂ ಪುಸ್ತಕಗಳು ಇವೆ. ವಿಭಾಗದ ಗ್ರಂಥಾಲಯದ ಎಲ್ಲ ಪುಸ್ತಕಗಳನ್ನು ಪರಿಶೀಲಿಸಿದೆ. ಪೂರ್ಣಪ್ರಯೋಜನ ದೊರೆಯಲಿಲ್ಲ. ಕೊನೆಗೆ ನನ್ನದೇ ಆದ ಪಾಠಗಳನ್ನು ಸಿದ್ಧಪಡಿಸಿದೆ. ಜರ್ಮನ್‌ ವಿದ್ಯಾರ್ಥಿಗಳು ಬಹುಭಾಷೆಗಳ ಕಲಿಕೆಯಲ್ಲಿ ಬಹಳ ಪರಿಣತಿ ಹೊಂದಿದವರು. ಹೆಚ್ಚಿನವರು ಎಂಟು-ಹತ್ತು ಭಾಷೆ ಕಲಿತಿರುತ್ತಾರೆ; ವ್ಯಾಕರಣದಲ್ಲಿ ಬಹಳ ನುರಿತವರಾಗಿರುತ್ತಾರೆ. ಹುಡುಗಿಯರು ತಮಗೆ ಪೂರ್ಣ ಮನವರಿಕೆ ಆಗದೆ ಅಧ್ಯಾಪಕರನ್ನು ಪಾಠ ಮುಂದುವರಿಸಲು ಬಿಡುವುದಿಲ್ಲ. ಅಂತಹ ಇಬ್ಬರು ಕಠಿಣ ವಿದ್ಯಾರ್ಥಿನಿಯರು-ಮರ್ತಿನ ಮತ್ತು ಫ್ರಾನ್ಸಿಸ್ಕ, ನನ್ನ ತರಗತಿಯಲ್ಲಿ ಒಂದು ವ್ಯಾಕರಣ ಪ್ರಕ್ರಿಯೆಯ ಬಗ್ಗೆ ಒಂದು ಗಂಟೆ ಕಾಲ ನನ್ನ ಜೊತೆಗೆ ಬಿರುಸಿನ ಚರ್ಚೆ ಮಾಡಿದ ಸಂದರ್ಭಗಳು ಇವೆ. ಚೀನಾದಲ್ಲಿ ಒಂದು ಸೆಮಿಸ್ಟರ್‌ ಓದಿಬಂದ ಚೀನೀ ಸಹಿತ ಬಹುಭಾಷೆಗಳನ್ನು ಬಲ್ಲ ಫ್ರಾನ್ಸಿಸ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಯುವ ಅಧ್ಯಾಪಕರು ತಡವರಿಸುತ್ತಿದ್ದರು. ಕನ್ನಡಭಾಷೆಯ ಅನೇಕ ಸೂಕ್ಷ್ಮಸಂಗತಿಗಳನ್ನು ಕಲಿಯಲು ನನಗೆ ಈ ಹುಡುಗಿಯರು ಪ್ರೇರಣೆಯನ್ನು ಕೊಟ್ಟರು. ನನ್ನ ಬೀಳ್ಕೊಡುಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ನನಗೆ ಅರ್ಪಿಸಿದ ನೆನಪಿನ ಹೊತ್ತಗೆಯಲ್ಲಿ ಇವರು ಬರೆದ ಮೆಚ್ಚುಗೆಯ ನುಡಿಗಳು ನನಗೆ ಸಂತಸ ಕೊಟ್ಟಿವೆ.  

ಕನ್ನಡಭಾಷೆಯನ್ನು ಈಗಾಗಲೇ ಓದಲು ಬರೆಯಲು ಕಲಿತ ವಿದ್ಯಾರ್ಥಿಗಳ ತರಗತಿಗೆ ಕನ್ನಡ ಸಾಹಿತ್ಯದ ಕೆಲವು ಪದ್ಯಗಳನ್ನು ಪಾಠಮಾಡಿದೆ. ಕುವೆಂಪು (ಅನಿಕೇತನ), ಬೇಂದ್ರೆ (ಕುರುಡು ಕಾಂಚಾಣ), ಸಿದ್ದಲಿಂಗಯ್ಯ (ಸಾವಿರಾರು ನದಿಗಳು), ಬಸವಣ್ಣ ವಚನ (ಉಳ್ಳವರು ಶಿವಾಲಯವ ಮಾಡುವರು), ಅಕ್ಕಮಹಾದೇವಿ ವಚನ (ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ), ಕನಕದಾಸ ಕೀರ್ತನೆ (ಕುಲ ಕುಲ ಕುಲವೆನ್ನುತಿಹರು)- ಇವು ನಾನು ಆರಿಸಿಕೊಂಡ ಪದ್ಯಗಳು. ಕನ್ನಡ ಪದ್ಯವನ್ನು ಮೂಲದಲ್ಲಿ ಓದಿ, ಇಂಗ್ಲಿಷ್‌ನಲ್ಲಿ ಅರ್ಥವಿವರಣೆ ಕೊಡುವುದರ ಜೊತೆಗೆ, ಪ್ರಕಟವಾಗಿರುವ ಅವುಗಳ ಇಂಗ್ಲಿಷ್‌ ಅನುವಾದವನ್ನೂ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದೆ. ಸಾಧ್ಯವಾದ ಮಟ್ಟಿಗೆ ಈ ಕವನಗಳ ರೆಕಾರ್ಡ್‌ ಆದ ಹಾಡುಗಳನ್ನು ಕ್ಲಾಸ್‌ನಲ್ಲಿ ಪ್ಲೇ ಮಾಡುತ್ತಿದ್ದೆ. ಬೇಂದ್ರೆಯವರ ಕುರುಡು ಕಾಂಚಾಣವನ್ನು ಸಿ. ಅಶ್ವಥ್‌ ಮತ್ತು ಯಶವಂತ ಹಳಿಬಂಡಿ ಹಾಡಿದ್ದನ್ನು ಪ್ಲೇ ಮಾಡಿದಾಗ ವಿದ್ಯಾರ್ಥಿಗಳು ಬಹಳ ಖುಷಿ ಪಟ್ಟರು. ಇದು ಕುಣಿತಕ್ಕೆ ಒಳ್ಳೆಯ ಹಾಡು ಎಂದರು; ಜೊತೆಗೆ ಹಾಡಿನ ನೋವನ್ನು ಚೆನ್ನಾಗಿ ಅರ್ಥಮಾಡಿಕೊಂಡರು. ಆ ತಂಡದಲ್ಲಿ ಇದ್ದ ಸಾಹಿತ್ಯದ ವಿದ್ಯಾರ್ಥಿಗಳು- ಸಾರಾ ಮೆಕ್ಲೆರ್‌, ಸೀನಾ ಸೊಮ್ಮೆರ್‌, ಯೂಲಿಯಾ, ಮರೀನಾ, ಅನಿಕಾ, ಸ್ಟೀಫ‌ನ್‌ ಪಾಪ್‌. 

Advertisement

2009-2012ರ ಅವಧಿಯಲ್ಲಿ ಬೇರೆ ಬೇರೆ ತರಗತಿಗಳಲ್ಲಿ ಕರ್ನಾಟಕ ಅಧ್ಯಯನ, ಕನ್ನಡ ಸಾಹಿತ್ಯ ಚರಿತ್ರೆ (ಅನ್ನೆತ್ತೆ), ಕರ್ನಾಟಕದ ಮೌಖೀಕ ಪರಂಪರೆ, ಕರ್ನಾಟಕದ ಧಾರ್ಮಿಕ ಪರಂಪರೆ (ಕತ್ರಿನ್‌ ಹೊಲ್ಜ್, ಲಲಿತ ದೀಕರ್ಸ್‌), ಸಾಂಸ್ಕೃತಿಕ ಅನನ್ಯತೆ (ಪೌಲಿನೆ)- ಇಂತಹ ವಿಷಯಗಳನ್ನು ನಾನೇ ಸಿಲೆಬಸ್‌ ತಯಾರಿಸಿ ಪಾಠಮಾಡಿದೆ. ವಿದ್ಯಾರ್ಥಿಗಳಿಗೆ ಇಮೈಲ್‌ ಮೂಲಕ ಮುಂಚಿತವಾಗಿ ಮಾಹಿತಿಗಳನ್ನು ಕಳುಹಿಸುತ್ತಿದ್ದೆ. ಲೇಖನಗಳನ್ನು ಪ್ರತಿಮಾಡಿ ಕೊಡುತ್ತಿದ್ದೆ. ಒಂದು ಸೆಮಿಸ್ಟರ್‌ಗೆ ಬೇಕಾದ ಸಿಲೆಬಸ್‌ನ್ನು ರೂಪಿಸುವುದು, ಇಂಗ್ಲಿಷ್‌ನಲ್ಲಿ ಪಾಠಮಾಡುವುದು, ಮೂಲಪಠ್ಯಗಳನ್ನು ಕನ್ನಡದಲ್ಲೇ ಓದುವುದು, ಪರೀಕ್ಷೆಗಳನ್ನು ನಡೆಸುವುದು- ಈ ಎಲ್ಲ ವಿಷಯಗಳಲ್ಲೂ ಪ್ರಾಧ್ಯಾಪಕರು ಸ್ವತಂತ್ರರು. 

ನಾನು ಅಲ್ಲಿ ಅತಿಥಿ ಪ್ರಾಧ್ಯಾಪಕನಾಗಿ ಇದ್ದ ಕಾಲದಲ್ಲಿ 2012 ಫೆಬ್ರವರಿ 5ರಂದು ಒಂದು ಅಂತಾರಾಷ್ಟ್ರೀಯ ಕಮ್ಮಟವನ್ನು ನಡೆಸಿದೆವು. ಪ್ರೊ. ಬ್ರೂಕ್ನರ್‌, ತಮಿಳುನಾಡಿನ ಜಾನಪದ ವಿದ್ವಾಂಸ ಡಾ. ಮುತ್ತುಕುಮಾರಸ್ವಾಮಿ ಮತ್ತು ನಾನು ಸಂಯೋಜಕರಾಗಿ ನಡೆಸಿದ ಕಮ್ಮಟ- New Perspectives on Gender and Transgender in South Asia. ಈ ಕಮ್ಮಟದಲ್ಲಿ ನಾನು ಮಂಡಿಸಿದ ಪ್ರಬಂಧ: Transgression of Genders in a Classical Kannada Epic Pampabharata. ಪಂಪಭಾರತದ ಭೀಷ್ಮ ಮತ್ತು ಅಂಬೆ ಪಾತ್ರಗಳನ್ನು ಮುಖಾಮುಖೀಯಾಗಿಸಿ ಮೂರನೆಯ ಲಿಂಗದ ಪರಿಕಲ್ಪನೆಯ ನೆಲೆಯಲ್ಲಿ ರಚಿಸಿದ ಪ್ರಬಂಧವು ವಿದ್ವಾಂಸರ ಗಮನಸೆಳೆಯಿತು. ಅನೇಕರು ಬಂದು ಪಂಪಭಾರತದ ಇಂಗ್ಲಿಷ್‌ ಅನುವಾದ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದರು. “ಅನುವಾದ ಆಗಿಲ್ಲ’ ಎಂದು ಸಂಕೋಚದಿಂದ ಹೇಳಿದೆ. ಭಾರತದ ಅನೇಕ ಭಾಷೆಗಳ ಕ್ಲಾಸಿಕಲ್‌ ಪಠ್ಯಗಳು ಇಂಗ್ಲಿಷ್‌ಗೆ ಅನುವಾದವಾಗಿ ವಿದ್ವಾಂಸರ ಓದಿಗೆ ದೊರೆತಿವೆ. ಊರಿಗೆ ಬಂದೊಡನೆಯೇ ಪ್ರೊ. ಸಿ. ಎನ್‌. ರಾಮಚಂದ್ರನ್‌ ಅವರಲ್ಲಿ ವಿನಂತಿಮಾಡಿದೆ- “ಹಳಗನ್ನಡ ಕಾವ್ಯಗಳ ಆಯ್ದಭಾಗಗಳ ಇಂಗ್ಲಿಷ್‌ ಅನುವಾದದ ಪಠ್ಯವೊಂದನ್ನು ನಿರ್ಮಾಣ ಮಾಡೋಣ’ ಎಂದು. ಅನುವಾದ ಕ್ಷೇತ್ರದಲ್ಲಿ ವಿಶೇಷ ಅನುಭವಿಗಳಾದ ಪ್ರೊ. ರಾಮಚಂದ್ರನ್‌ ಒಪ್ಪಿಕೊಂಡರು. ಎರಡು ವರ್ಷಗಳ ನಮ್ಮ ಸತತ ಸಮಾಲೋಚನೆ ಮತ್ತು ಕೆಲಸಗಳ ಹಂಚುವಿಕೆಯ ಫ‌ಲವಾಗಿ ಪ್ರಾಚೀನ ಕನ್ನಡ ಸಾಹಿತ್ಯದ ಒಂದು ಉಪಯುಕ್ತ ರೀಡರ್‌ ಕನ್ನಡ ವಿವಿ ಹಂಪಿಯಿಂದ ಪ್ರಕಟವಾಯಿತು: Classical Kannada Poetry and Prose: A Reader (C N Ramachandran, B A Viveka Rai, 2015). ಈ ಗ್ರಂಥದಲ್ಲಿ ಹಲ್ಮಿಡಿ ಮತ್ತು ಬಾದಾಮಿ ಶಾಸನ, ಕವಿರಾಜಮಾರ್ಗ, ವಡ್ಡಾರಾಧನೆ, ಚಾವುಂಡರಾಯ ಪುರಾಣ, ಪಂಚತಂತ್ರ ಮತ್ತು ಕವಿಗಳಾದ ಪಂಪ, ಪೊನ್ನ, ರನ್ನ, ನಾಗವರ್ಮ, ನಾಗಚಂದ್ರ, ಶಾಂತಿನಾಥ, ನಯಸೇನ, ನೇಮಿಚಂದ್ರ, ರುದ್ರಭಟ್ಟ, ಬ್ರಹ್ಮಶಿವ, ಜನ್ನ ಮತ್ತು ಆಂಡಯ್ಯರ ಕವಿಕಾವ್ಯ ಪರಿಚಯ ಹಾಗೂ ಅವರ ಕೃತಿಭಾಗಗಳ ಇಂಗ್ಲಿಷ್‌ ಅನುವಾದ ಇದೆ. ಈ ರೀಡರ್‌ ಅನ್ನು ಜರ್ಮನಿಯಲ್ಲಿ ಕನ್ನಡ ಶಿಬಿರಗಳ ವಿದ್ಯಾರ್ಥಿಗಳು ಮುಖ್ಯ ಆಕರಗ್ರಂಥವಾಗಿ ಬಳಸುತ್ತಿ¨ªಾರೆ. ಯುರೋಪಿನಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಈ ಇಂಗ್ಲಿಷ್‌ ರೀಡರ್‌ ಕನ್ನಡದ ಸಣ್ಣ ಮಾನಸ್ತಂಭವಾಗಿ ಜನಪ್ರಿಯವಾಗಿದೆ. 

ಪ್ರಿಯ ಪ್ರೊಫೆಸರ್‌, 
ನಮಸ್ಕಾರ! ಹೇಗೆ ಇದ್ದೀರಿ?
ನಮ್ಮ ಸಣ್ಣ ಕನ್ನಡ ಗುಂಪಿನ ಮೊತ್ತಮೊದಲನೆಯ ತರಗತಿಯನ್ನು ನಾನು ನೆನೆದುಕೊಳ್ಳುತ್ತಿದ್ದೇನೆ: ಲೀಸಾ, ಸ್ಟೆಫ‌ನ್‌, ಫ್ರೆಡೆರಿಕೆ, ಮರಿಯೊನ್‌, ಲೌರ ಮತ್ತು ನಾನು-ನಾವು ಕನ್ನಡದಲ್ಲಿ ಮೊದಲ ವಾಕ್ಯಗಳನ್ನು ಮಾತನಾಡಲು ಪ್ರಯತ್ನಿಸುತ್ತಿದ್ದೆವು: “ನಾನು ಕನ್ನಡ ವಿದ್ಯಾಥಿ ìನಿ. ನಿಮ್ಮ ಹೆಸರು ಏನು?’ ನಾವು ಕಲಿಯಬೇಕಾದ ಕನ್ನಡ ಅಕ್ಷರಮಾಲೆಯನ್ನು ಅದರ ಸ್ವರ ಮತ್ತು ವ್ಯಂಜನ ಅಕ್ಷರಗಳನ್ನು ನೋಡಿದಾಗ ಹೆದರಿಕೊಂಡೆ. ಈ ಕನ್ನಡವನ್ನು ಓದಲು ಮತ್ತು ಬರೆಯಲು ಅರ್ಧ ಶತಮಾನ ಬೇಕಾಗಬಹುದು ಅಂದುಕೊಂಡೆ. ಆದರೆ ನಮಗೆ ಯಾವುದೇ ಸಂಶಯಗಳು ಸಮಸ್ಯೆಗಳು ಬಂದರೂ ನೀವು ಅವನ್ನು ಕೂಡಲೇ  ಸುಲಭವಾಗಿ ನಿವಾರಣೆ ಮಾಡಿದಿರಿ. ಮೊದಲನೆಯ ದಿನದಿಂದಲೇ ನಿಮ್ಮ ತರಗತಿಗಳಲ್ಲಿ ವಿದ್ಯಾರ್ಥಿ ಆಗುವುದು ನನಗೆ ಬಹಳ ಖುಷಿಯ ಸಂಗತಿಯಾಗಿತ್ತು. ನಾನು ನನ್ನ ಪ್ರಾಥಮಿಕ ಶಾಲೆಯಿಂದ ತೊಡಗಿ ವಿಶ್ವವಿದ್ಯಾಲಯದವರೆಗೆ ಹತ್ತು ಭಾಷೆಗಳನ್ನು ಮೂವತ್ತು ಅಧ್ಯಾಪಕರಿಂದ ಕಲಿತಿದ್ದೇನೆ. ಆ ಎಲ್ಲಾ ಭಾಷಾ ಅಧ್ಯಾಪಕರಲ್ಲಿ ಅತ್ಯಂತ ಉಲ್ಲಾಸದಿಂದ ಪ್ರೀತಿಯಿಂದ ತಾಳ್ಮೆಯಿಂದ ಭಾಷೆಯನ್ನು ಕಲಿಸಿದ ನೀವು ಮೆಚ್ಚುಗೆಯವರು. ವಿದ್ಯಾರ್ಥಿಗಳು ಹೊಸ ಭಾಷೆಯನ್ನು ಕಲಿಯುವಾಗ ಒತ್ತಡಕ್ಕೆ ಒಳಗಾದಾಗ, ನೀವು ಅವರನ್ನು ಉತ್ತೇಜಿಸುತ್ತೀರಿ, ಪ್ರೋತ್ಸಾಹಿಸುತ್ತೀರಿ. ಇದು ನಾನು ನಿಮ್ಮಲ್ಲಿ ಕಂಡ ವಿಶಿಷ್ಟ ಗುಣ. ನೀವು ವಿದ್ಯಾರ್ಥಿಗಳ ದುರ್ಬಲ ಅಂಶಗಳ ಬದಲು ಅವರ ಪ್ರಬಲ ಅಂಶಗಳ ಬಗ್ಗೆ ಗಮನ ಕೊಡುತ್ತೀರಿ.
– ಮರ್ತಿನ,
  ಕನ್ನಡ ವಿದ್ಯಾರ್ಥಿನಿ

ಪ್ರಿಯ ಪ್ರೊಫೆಸರ್‌, 
ಇಲ್ಲಿ ವ್ಯೂತ್ಸ್ìಬುರ್ಗ್‌ನಲ್ಲಿ ನಿಮ್ಮ ಮೊದಲನೆಯ ಸೆಮಿಸ್ಟರ್‌ ನನ್ನ ಕನ್ನಡದ ಮೊದಲನೆಯ ಸೆಮಿಸ್ಟರ್‌ ಕೂಡಾ ಆಗಿತ್ತು. ಶೈಕ್ಷಣಿಕವಾಗಿ ಅಗತ್ಯವಾದ ಎರಡು ಸೆಮಿಸ್ಟರ್‌ಗಳನ್ನು ಕನ್ನಡದಲ್ಲಿ ಮುಗಿಸಿ ಮತ್ತೆ ಬೇರೆ ವಿಷಯವನ್ನು ತೆಗೆದುಕೊಳ್ಳುವ ಯೋಜನೆ ನನ್ನದಾಗಿತ್ತು. ಆದರೆ, ನಿಮ್ಮ ಕನ್ನಡ ಪಾಠಗಳನ್ನು ಕೇಳಿದ ಮೇಲೆ ಅವನ್ನು ಮಿಸ್‌ ಮಾಡಿಕೊಳ್ಳಲು ಮನಸ್ಸಾಗಲಿಲ್ಲ. ಈಗ ನಿಮ್ಮ ಕನ್ನಡ ಪಾಠದ ಆರು ಸೆಮೆಸ್ಟರ್‌ಗಳನ್ನು ಮುಗಿಸಿದ್ದೇನೆ; ನಾನು ಅಂತಿಮ ಪರೀಕ್ಷೆಗೂ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಮತ್ತು ಯೂರೋಪಿನ ಪರಂಪರೆಗಳ ಎಲ್ಲಾ ಒಳ್ಳೆಯ ಅಂಶಗಳನ್ನು ಒಳಗೊಂಡ ನಿಮ್ಮ ಅಧ್ಯಾಪನಕ್ಕಾಗಿ, ನಿಮ್ಮ ಅಪಾರ ಸಹನೆಯ ಗುಣಕ್ಕಾಗಿ, ಪ್ರತೀದಿನ ನಮ್ಮ ಬಗ್ಗೆ ನೀವು ತೋರಿಸಿದ ಅಕ್ಕರೆಗಾಗಿ ನಿಮಗೆ ನನ್ನ ಕೃತಜ್ಞತೆಗಳು.
– ಲೀಸಾ,
  ಕನ್ನಡ ವಿದ್ಯಾರ್ಥಿನಿ

ಬಿ. ಎ. ವಿವೇಕ ರೈ

Advertisement

Udayavani is now on Telegram. Click here to join our channel and stay updated with the latest news.

Next