Advertisement

Kannada Development Authority: ಮದ್ರಸಾಗಳಲ್ಲಿ ಕನ್ನಡ ಕಲಿಕೆ ಯೋಜನೆ ಕೈಬಿಟ್ಟಿಲ್ಲ

01:37 AM Aug 21, 2024 | Team Udayavani |

ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮತ್ತು ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದ ಮದ್ರಸಾಗಳಲ್ಲಿ ಕನ್ನಡ ಕಲಿಕೆ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕೈಬಿಟ್ಟಿಲ್ಲ. ಸರಕಾರದ ವ್ಯಾಪ್ತಿಯ ಮದ್ರಸಾಗಳಲ್ಲಿ ಕನ್ನಡ ಕಲಿಕಾ ತರಗತಿಗಳನ್ನು ಆಯೋಜಿಸುವಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒತ್ತಾಯ ಕೇಳಿಬರುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಕೋಮುವಾದಕ್ಕೆ ಆಸ್ಪದ ಕೊಡದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಪ್ರಾಧಿಕಾರವು ಮದ್ರಸಾಗಳಲ್ಲಿ ಕನ್ನಡ ಕಲಿಕೆ ಯೋಜನೆ ಅನುಷ್ಠಾನಕ್ಕೆ ತರಲಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಉದಯವಾಣಿ’ ನೇರಾ ನೇರ ಸಂದರ್ಶನದಲ್ಲಿ ಅವರು ಮದ್ರಸಾಗಳಲ್ಲಿ ಕನ್ನಡ ಕಲಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಭವಿಷ್ಯತ್ತಿನ ಹಿತದೃಷ್ಟಿಯಿಂದ ಸರಕಾರ ಬಿಬಿಎಂಪಿ ಯನ್ನು ಹಲವು ಭಾಗಗಳನ್ನಾಗಿ ಮಾಡಲಿ. ಆದರೆ ಅದಕ್ಕೂ ಮೊದಲು ಮೇಯರ್‌, ಉಪ ಮೇಯರ್‌ ಹುದ್ದೆಗಳು ಕನ್ನಡಿಗರಿಗೆ ಮೀಸಲು ಎಂಬ ಕಾಯೆ ಜಾರಿಗೆ ತರಲಿ ಎಂದಿದ್ದಾರೆ. ಭವಿಷ್ಯತ್ತಿನಲ್ಲಿ ಬೆಂಗಳೂರು ಮತ್ತೂಂದು ಬೆಳಗಾವಿ ಆಗುವುದು ಬೇಡ ಎಂದು ಸಲಹೆ ನೀಡಿದ್ದಾರೆ.

* ಕನ್ನಡೇತರ ಐಟಿ-ಬಿಟಿ ಉದ್ಯೋಗಿಗಳಿಗೆ ಕನ್ನಡ ಕಲಿಕೆ ಬಗ್ಗೆ ಪ್ರಾಧಿಕಾರದ ಯೋಜನೆ ಏನು?
ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡ ಕಲಿಕೆ ಬಗ್ಗೆ ಬೇಡಿಕೆಯಿದೆ. ಈಗಾಗಲೇ ಹಲವು ಸಂಸ್ಥೆಗಳು ನಮ್ಮಲ್ಲಿ ಕನ್ನಡ ಕಲಿಸಿ ಎಂದು ಪ್ರಾಧಿಕಾರಕ್ಕೆ ಮನವಿ ಮಾಡುತ್ತಿವೆ. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಈಗಾಗಲೇ ಕನ್ನಡ ಕಲಿಕೆ ತರಗತಿಗಳು ಕೂಡ ಆರಂಭವಾಗಿದೆ. 30 ಮಂದಿಗೆ ಕನ್ನಡ ಭಾಷೆ ಕಲಿಸುವ ಕೆಲಸ ನಡೆದಿದೆ. ಜತೆಗೆ ರಾಜ್ಯದಲ್ಲಿರುವ ವಿವಿಧ ಐಟಿ – ಬಿಟಿ ಸಂಸ್ಥೆಗಳು ಕೂಡ ಪತ್ರದ ಮುಖೇನ ಕನ್ನಡ ಕಲಿಕಾ ತರಗತಿಗಳನ್ನು ನಡೆಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿವೆ. ಆ ಹಿನ್ನೆಲೆಯಲ್ಲಿ ಕೆಲವು ಅತಿಥಿ ಶಿಕ್ಷರನ್ನು ನೇಮಿಸಿಕೊಂಡು ತರಬೇತಿ ನೀಡುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ. ನವೆಂಬರ್‌ ತಿಂಗಳೊಳಗೆ 600-700 ಮಂದಿಗೆ ಕನ್ನಡ ಕಲಿಸುವ ವಿಶ್ವಾಸವಿದೆ.

*ಕರ್ನಾಟಕ ಸಂಭ್ರಮ-50 ಕಾರ್ಯಕ್ರಮಕ್ಕೆ ಪ್ರಾಧಿಕಾರ ಯಾವ ರೀತಿ ಸಿದ್ಧವಾಗಿದೆ?
ಕರ್ನಾಟಕ ಸಂಭ್ರಮ ಕಾರ್ಯಕ್ರಮಕ್ಕಾಗಿ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆ.28ರಂದು ಜತ್‌ ಹತ್ತಿರದ ಗುದ್ದಾಪುರ ಎಂಬ ಊರಿನಲ್ಲಿ ಹೊರನಾಡ ಕನ್ನಡಿಗರ ಸಮಾವೇಶ, ಸೆ.23 ರಂದು ಮಂಗಳೂರಿನಲ್ಲಿ ಬ್ಯಾರಿ ಅಕಾಡೆಮಿ, ತುಳುಭಾಷಾ ಅಕಾಡೆಮಿ, ಕೊಂಕಣಿ ಅಕಾಡೆಮಿ ಜತೆಗೆ ಸೇರಿ ಸೌಹಾರ್ದ ಸಮಾವೇಶ, ಜತೆಗೆ ಅ.5ಕ್ಕೆ ರಾಯಚೂರಿನಲ್ಲಿ ಗೋಕಾಕ್‌ ಚಳವಳಿಯ ಹಿನ್ನೋಟ ಮತ್ತು ಮುನ್ನೋಟ ಕಾರ್ಯಕ್ರಮ ಆಯೋಜಿಸಲಾಗುವುದು.

Advertisement

ಗೋಕಾಕ್‌ ಹೋರಾಟದಲ್ಲಿ ಭಾಗವಹಿಸಿದ್ದ ಕೋಣಂದೂರು ಲಿಂಗಪ್ಪ. ಜಿ.ಕೆ.ಸತ್ಯ, ಪಿ.ವಿ. ನಾರಾಯಣ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರ ರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ ಮೈಸೂರಿನಲ್ಲಿ ಕಾ.ತ.ಚಿಕ್ಕಣ್ಣ ನೇತೃತ್ವದಲ್ಲಿ 200 ಬುದ್ಧಿಜೀವಿಗಳ ಸಮಾವೇಶ ನಡೆಸಲಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಸ್ಥಾನಮಾನ ಏನು? ಕರ್ನಾಟಕ ಬೆಳೆಯುತ್ತಿರುವ ರೀತಿ ಸರಿಯಿದೆಯೋ? ರಾಜಕೀಯ ಬೆಳವಣಿಗೆ ಏನಾಗುತ್ತಿದೆ? ಸಾಂಸ್ಕೃತಿಕ ಬೆಳವಣಿಗೆ ಏನಾಗುತ್ತಿದೆ? ಭಾಷಿಕ ನೆಲಗಳು ಹೇಗಿವೆ ಇದೆಲ್ಲದರ ಕುರಿತು ದೊಡ್ಡ ಮಟ್ಟದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ.

*ಮದ್ರಸಾಗಳಲ್ಲಿ ಕನ್ನಡ ಕಲಿಕೆ ಯೋಜನೆಯನ್ನು ದಿಢೀರನೇ ಕೈಬಿಟ್ಟಿದ್ದು ಏಕೆ?
ರಾಜ್ಯ ಸರಕಾರದ ವ್ಯಾಪ್ತಿಗೆ ಸೇರುವ ಎಲ್ಲ ಮದ್ರಸಾಗಳಲ್ಲಿ ಕನ್ನಡ ಕಲಿಕೆಗೆ ಪ್ರಾಧಿಕಾರ ಯೋಜನೆ ರೂಪಿಸಿತ್ತು. ಜತೆಗೆ ಹಲವು ಜಿಲ್ಲೆಗಳ ಮುಸ್ಲಿಂ ಧರ್ಮ ಗುರುಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಯುವಕರು ಮದ್ರಸಾಗಳಲ್ಲಿ ಪ್ರಾಧಿಕಾರ ಕನ್ನಡ ಕಲಿಕೆಗೆ ಮುಂದಾಗಿದ್ದುದನ್ನು ಸ್ವಾಗತಿಸಿದ್ದರು.

ಆ ಹಿನ್ನೆಲೆಯಲ್ಲಿ ಪಠ್ಯವನ್ನು ಕೂಡ ಪ್ರಾಧಿಕಾರ ಸಿದ್ಧಪಡಿಸಿತ್ತು. ಮುಸ್ಲಿಮರಲ್ಲಿ ಕೂಡ ಉತ್ತಮವಾಗಿ ಕನ್ನಡ ಮಾತನಾಡುವ, ಬರೆಯಬಲ್ಲ ಸಾಹಿತಿಗಳು, ಶಿಕ್ಷಕರು, ಯುವಕರು ಇದ್ದಾರೆ. ಅವರಿಗೆ ತರಬೇತಿ ನೀಡಿ ಕನ್ನಡ ಕಲಿಕೆಗೆ ಬಳಸಿಕೊಂಡು ಯೋಜನೆ ಜಾರಿಗೆ ನಿರ್ಧಾರ ಮಾಡಲಾಗಿತ್ತು. ಆದರೆ ಜಾಲತಾಣದಲ್ಲಿ ಕೆಲವೇ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ವಿಧಾನಸಭೆ ಅಧಿವೇಶನ ವೇಳೆ ಇದು ಚರ್ಚೆಗೆ ಬಂದಿತ್ತು. ಸರಕಾರ‌ ಆ ರೀತಿಯ ಯೋಜನೆ ಇಲ್ಲ ಎಂದು ಹೇಳಿದರೆ ಕಷ್ಟವೆಂದು ಆ ಕೆಲಸವನ್ನು ಸದ್ಯಕ್ಕೆ ತಡೆ ಹಿಡಿದಿದ್ದೆವು. ಆದರೆ ಈ ಯೋಜನೆಯ ಕೈಬಿಡುವ ನಿರ್ಧಾರ ಪ್ರಾಧಿಕಾರದ ಮುಂದೆ ಇಲ್ಲ.

* ಕನ್ನಡ ಕಲಿಕೆ ಯೋಜನೆ ಕೈಬಿಡುವಂತೆ ಯಾರದ್ದಾದರೂ ಒತ್ತಡವಿತ್ತಾ?
ಆ ರೀತಿಯ ಯಾವುದೇ ಒತ್ತಡಗಳು ಇಲ್ಲ. ಬದಲಿಗೆ ಮುಸ್ಲಿಂ ಸಮುದಾಯದ ಹಲವು ಮೌಲ್ವಿಗಳು, ಧಾರ್ಮಿಕ ಮುಖಂಡರು ಕಲಿಕಾ ಯೋಜನೆ ಜಾರಿಗೆ ಮನವಿ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮೌಲ್ವಿಗಳು, ಚಿಂತಕರು, ರಾಜಕಾರಣಿ­ಗಳು, ಹೋರಾಟಗಾರರು, ಸಾಹಿತಿಗಳು ಹಾಗೂ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತ-ಹಂತವಾಗಿ ಜಾರಿಗೊಳಿಸಲಾ­ಗುವುದು. ಕೋಮುವಾದಕ್ಕೆ ಆಸ್ಪದವಿಲ್ಲದಂತೆ ಯೋಜನೆ ಸಿದ್ದಪಡಿಸಲಾಗುತ್ತಿದೆ. ಈ ಬಗ್ಗೆ ಮದ್ರಸಾಗಳಿಗೆ ಭೇಟಿ ನೀಡಿ ಮೌಲ್ವಿಗಳ ಜತೆ ಮಾತನಾಡುತ್ತಿದ್ದೇನೆ. ಸೂಕ್ತವಾದ ವಾತಾವರಣ ಸಿದ್ದವಾಗುವವರೆಗೆ ತಡೆಯಲಾಗುತ್ತದೆ. ಆದರೆ ಯೋಜನೆ ಕೈಬಿಡುವ ಚಿಂತನೆ ಪ್ರಾಧಿಕಾರದ ಮುಂದೆ ಇಲ್ಲ.

* ಬೆಂಗಳೂರಿನಲ್ಲಿ ಕನ್ನಡೇತರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸರಕಾರ‌ಕ್ಕೆ ಏನು ಸಲಹೆ ನೀಡುತ್ತೀರಿ?
ಕನ್ನಡೇತರರಿಗೆ ಕನ್ನಡ ಕಲಿಸುವುದಕ್ಕೆ ಇದುವರೆಗೂ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಆದ್ದರಿಂದ ಸರಕಾರ‌ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮೂಲಕ ಈಗ ಕನ್ನಡೇತರರಿಗೆ ಕನ್ನಡ ಕಲಿಸುವ ಒಂದು ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಇದರಿಂದಾಗಿ ಕನ್ನಡಿಗರಿಗೆ ಉದ್ಯೋಗ ದೊರೆತು, ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಜಾಸ್ತಿಯಾಗುತ್ತದೆಂದು ಹೇಳಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕಾದರೆ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರಕಬೇಕು.

ಹಾಗೆ ಮಾಡಿದಾಗ ಕನ್ನಡಿಗರು ಬೆಂಗಳೂರಿಗೆ ಬರುತ್ತಾರೆ. ಆದರೆ ಅದಕ್ಕೆ ಬೇಕಾದ ಕಾನೂನು ಇನ್ನೂ ಸ್ವಷ್ಟವಾಗಿ ರೂಪಗೊಂಡಿಲ್ಲ. ಡಾ| ಸರೋಜಿನಿ ಮಹಿಷಿ ಆಯೋಗದಲ್ಲಿ ಕನ್ನಡಿಗರಿಗೆ 100ಕ್ಕೆ ನೂರರಷ್ಟು ಉದ್ಯೋಗ ಅಂತಿದೆ. ಆದರೆ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಕಾರಣ ಭಾರತದ ಯಾವುದೇ ಪ್ರಜೆಗೆ ಭಾರತದ ಯಾವ ಪ್ರದೇಶದಲ್ಲಿ ಕೆಲಸ ಮಾಡುವ ಹಕ್ಕಿದೆ. ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಾಗಂತ ಹೇಳಿ ಬೇರೆ, ಬೇರೆ ಭಾಷೆಯವರು ಇಲ್ಲಿ ತುಂಬಿಕೊಂಡರೆ ಕನ್ನಡಕ್ಕೆ ಅವಕಾಶ ಇಲ್ಲದೆ ಹೋದರೆ ಒಕ್ಕೂಟ ವ್ಯವಸ್ಥೆಗೆ ಅರ್ಥ ಬರುವುದಿಲ್ಲ. ಈ ನಿಟ್ಟಿನಲ್ಲಿ ಸಂಸತ್‌ನಲ್ಲಿ ಹೊಸ ಬಗೆಯ ಕಾನೂನು ರಚಿಸದೇ ಹೋದರೆ ನಿಧಾನವಾಗಿ ದುರ್ಬಲ ರಾಜ್ಯಗಳು ಆಸ್ಮಿತೆ ಕಳೆದುಕೊಳ್ಳುತ್ತವೆ.

ಭವಿಷ್ಯತ್ತಿನ ದೃಷ್ಟಿಯನ್ನಿಟ್ಟುಕೊಂಡು ಸರಕಾರ‌ ಈಗ ಬಿಬಿಎಂಪಿಯನ್ನು ಹಲವು ಭಾಗಗಳಾಗಿ ಮಾಡಲು ಹೊರಟಿದೆಯಲ್ಲಾ?
ವೀಕೇಂದ್ರೀಕರಣ ನಿಟ್ಟಿನಲ್ಲಿ ಸರಕಾರ‌ ಬಿಬಿಎಂಪಿಯನ್ನು ಹಲವು ಭಾಗಗಳನ್ನಾಗಿ ಮಾಡಲು ಹೊರಟಿರುವುದು ಸರಿ. ಆದರೆ ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಮೇಯರ್‌ ಸೇರಿದಂತೆ ಇತರ ಎಲ್ಲ ಅಧಿಕಾರಿಗಳು ಕನ್ನಡೇತರರು ಬಂದರೆ ಆಗ ಕರ್ನಾಟಕದಲ್ಲೇ ಕನ್ನಡಿಗರು ಪರಕೀಯರಾಗುವ ದೊಡ್ಡ ಆತಂಕವಿದೆ. ಈ ಬಗ್ಗೆ ಕೂಡ ಸರಕಾರ‌ ಆಲೋಚನೆ ಮಾಡಬೇಕು. ಈಗಿನ ಬೆಂಗಳೂರಿನ ಜನವಸತಿ ಸ್ಥಿತಿ ನೋಡಿದರೆ ಪರಭಾಷಿಗರೇ ಮೇಯರ್‌, ಉಪಮೇಯರ್‌ ಆಗುವ ಪರಿಸ್ಥಿತಿಯಿದೆ.

ಮಹಾರಾಷ್ಟ್ರದವರು ಈಗ ಬೆಳಗಾವಿಯಲ್ಲಿ ಮಾಡು ತ್ತಿರುವ ಕಥೆ ಭವಿಷ್ಯತ್ತಿನಲ್ಲಿ ರಾಜಧಾನಿ ಬೆಂಗಳೂರಿಗೂ ಬರುವ ಸಾಧ್ಯತೆ ಯನ್ನು ನಾವು ತಳ್ಳಿ ಹಾಕುವಂತಿಲ್ಲ. ಆ ಹಿನ್ನೆಲೆಯಲ್ಲಿ ಮೇಯರ್‌, ಉಪಮೇಯರ್‌ ಹುದ್ದೆಯನ್ನು ಕನ್ನಡಿಗರಿಗೆ ಮೀಸ­ಲಿಡುವ ನಿಟ್ಟಿನಲ್ಲಿ ಸರಕಾರ‌ ಕಾನೂನು ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ ಸರಕಾರ‌ಕ್ಕೆ ಕೂಡ ಪತ್ರ ಬರೆದಿದ್ದು, ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.

* ಪ್ರತಿ ವರ್ಷ ನವೆಂಬರ್‌ ಬಂದಾಗ ಸರಕಾರ‌ ಕನ್ನಡದಲ್ಲಿ ಆಡಳಿತ ಎಂದು ಹೇಳುತ್ತದೆ. ಆದರೆ ಕನ್ನಡ ಭಾಷೆ ಆಡಳಿತದಲ್ಲಿ ಸಂಪೂರ್ಣ ಜಾರಿಯಾಗಿಲ್ಲ ಏಕೆ?
ಕನ್ನಡಕ್ಕೆ ಬೇಕಾದ ಆದೇಶಗಳನ್ನು ರಾಜ್ಯ ಸರಕಾರ‌ ಸಾಕಷ್ಟು ಮಾಡಿದೆ. ಈ ಬಗ್ಗೆ ರಾಜ್ಯ ಸರಕಾರ‌ದ ಬಗ್ಗೆ ನನಗೆ ಯಾವುದೇ ತಕರಾರುಗಳು ಇಲ್ಲ. 2023ರ ಕನ್ನಡ ನಿಯಮ ಕೂಡ ಆಗಿದ್ದು ಗೆಜೆಟ್‌ ನೋಟಿಫಿಕೇಶನ್‌ ಆಗಿದೆ. ಆದರೆ ಕನ್ನಡ ಭಾಷೆ ಜಾರಿ ವಿಚಾರದಲ್ಲಿ ಅಧಿಕಾರಿಗಳು ಸರಕಾರ‌ ಆದೇಶ ಪರಿಪಾಲಿಸುವಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡಿಲ್ಲ. ಆ ಹಿನ್ನೆಲೆಯಲ್ಲಿ ಆಡಳಿತ ಭಾಷೆಯಲ್ಲಿ ಕನ್ನಡ ಸಂಪೂರ್ಣ ವಾಗಿ ಜಾರಿಯಾಗುವ ವಿಚಾರದಲ್ಲಿ ಹಿನ್ನಡೆಯಾಗಿದೆ. ಈ ಸಮಸ್ಯೆ ಯಿರುವುದು ಸರಕಾರ‌ದ ಆದೇಶಗಳಲ್ಲಿ ಅಲ್ಲ. ಜಾರಿಗೆ ತರುವ ಉತ್ಸುಕತೆ ಅಧಿಕಾರಿಗಳಲ್ಲಿ ಇಲ್ಲದೆ ಇಷ್ಟಕ್ಕೆಲ್ಲ ಕಾರಣವಾಗಿದೆ.

* ಈ ಹಂತದಲ್ಲಿ ಪ್ರಾಧಿಕಾರ ಏನು ಮಾಡುತ್ತದೆ?
ಆಡಳಿತದಲ್ಲಿ ಕನ್ನಡ ಸಂಪೂರ್ಣ ಜಾರಿಯಾಗಿದೆಯೇ ಇಲ್ಲವೇ ಎಂಬುದರ ಕುರಿತು ಸಮೀಕ್ಷೆ ಮಾಡುತ್ತಿದೆ. ಆದರೆ ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವ ವಿಚಾರದಲ್ಲಿ ಸರಕಾರಿ ಅಧಿಕಾರಿಗಳ ಕೆಲಸ ನನಗೆ ತೃಪ್ತಿ ತಂದಿಲ್ಲ. ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಇಲ್ಲ. ಆ ಹಿನ್ನೆಲೆಯಲ್ಲಿ ಸರಕಾರ‌ದ ಕನ್ನಡಪರ ಆದೇಶಗಳು ನವೆಂಬರ್‌ 1ರ ಒಳಗಡೆ ಗರಿಷ್ಠ ಅನುಷ್ಠಾನಕ್ಕಾಗಿ ಪ್ರಾಧಿಕಾರ ಕೆಲಸ ಮಾಡುತ್ತಿದೆ.

* ಬಿಬಿಎಂಪಿ ನಾಮಫ‌ಲಕಗಳಲ್ಲೇ ಕನ್ನಡ ಭಾಷೆಯನ್ನು ಕೊಲ್ಲಲಾಗಿದೆ. ಇದು ಪ್ರಾಧಿಕಾರ ಏನನ್ನುತ್ತದೆ?
ಬಿಬಿಎಂಪಿ ಬೋರ್ಡ್‌ಗಳಲ್ಲೇ ಕನ್ನಡ ಭಾಷೆಯನ್ನು ತಪ್ಪು ಬರೆಯ ಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಇದು ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಪಾಲಿಕೆ ಮುಖ್ಯ ಆಯುಕ್ತರ ಜತೆಗೆ ಸಭೆ ನಡೆಸಿ ಮಾಹಿತಿ ಕಲೆಹಾಕುವ ಕೆಲಸ ಪ್ರಾಧಿಕಾರ ಮಾಡಲಿದೆ.


ಉದಯವಾಣಿ ಸಂದರ್ಶನ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next