Advertisement

“ಕಾಮಲೆ ಕಣ್ಣಿಂದ ವಿವಿಗಳನ್ನು ನೋಡದಿರಿ’

12:42 PM Jan 11, 2017 | Team Udayavani |

ಮೈಸೂರು: ಎಂಟು ವರ್ಷಗಳ ತಮ್ಮ ಸೇವಾ ಅವಧಿ ಪೂರೈಸಿ ಕರ್ನಾಟಕ ರಾಜ್ಯ ಮುಕ್ತ ವಿವಿ ಮತ್ತು ಮೈಸೂರು ವಿವಿಯಂತಹ ಎರಡು ವಜ್ರಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಎರಡೂ ವಿವಿಗಳನ್ನು ಮುಂದೆ ನೋಡುವ ಜನರ ನೋಟ ಯಾವುದೇ ಬಣ್ಣದಿಂದ ಕೂಡಿರದಿದ್ದರೆ ಅವರ ಸಾಧನೆ ಅರ್ಥವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ಮೈಸೂರು ವಿವಿಯ ಕ್ರಾಫ‌ರ್ಡ್‌ ಭವನದಲ್ಲಿ ಮಂಗಳವಾರ ನಡೆದ ಕುಲಪತಿ ಪ್ರೊ. ಕೆ.ಎಸ್‌. ರಂಗಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಪ್ರೊ.ರಂಗಪ್ಪ ಅವರು ತನ್ನ ಸಂಬಂಧಿ, ಹೀಗಾಗಿ ಅವರ ಸಾಧನೆ ಬಗ್ಗೆ ಮಾತ ನಾಡುವಾಗ ಎಚ್ಚರಿಕೆಯಿಂದಲೇ ಮಾತನಾಡ ಬೇಕಾಗುತ್ತದೆ ಎಂದ ಅವರು, ನೋಡುವ ದೃಷ್ಟಿಕೋನ ಹಳದಿಯಾದರೆ ಎಲ್ಲವೂ ಹಳದಿ ಯಾಗಿಯೇ ಕಾಣುತ್ತದೆ. ಯಾವುದೇ ಬಣ್ಣ ಬೆರಸದೆ ನೋಡಿದರೆ ಸ್ವತ್ಛವಾಗಿ ಕಾಣುತ್ತದೆ. ಕುಲಪತಿಯಾಗಿ ಎಂಟು ವರ್ಷಗಳ ಅವರ ಸೇವೆ ಮಹತ್ತರವಾದುದು. ರೈತನ ಮಗನಾಗಿ ಸಣ್ಣ ಕೊಪ್ಪಲಿನಲ್ಲಿ ಬೆಳೆದ ರಂಗಪ್ಪ ಅವರು ಈ ಎತ್ತರಕ್ಕೆ ಏರಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದನ್ನು ಕೇಳಿದಾಗ ನೋವಾಗುತ್ತದೆ. ರಂಗಪ್ಪ ಅವರ ತಪ್ಪು-ನೆಪ್ಪುಗಳನ್ನು ಹುಡುಕಲು ಹೋದ ಮಹಾನುಭಾವರಿಗೆ ಈ ಬೀಳ್ಕೊಡುಗೆ ಸಮಾರಂಭ ನೋಡಿ ಅರ್ಥವಾಗಲಿ ಎಂದು ಹೇಳಿದರು.

ರಂಗಪ್ಪ ಅವರನ್ನು ಹೊಗಳುವವರು, ತೆಗಳುವವರು ಇದ್ದಾರೆ. ಅವರು ಈ ಎತ್ತರಕ್ಕೆ ಕೊಂಡೊಯ್ದಿರುವ ವಿಶ್ವವಿದ್ಯಾನಿಲಯದ ಕೀರ್ತಿಯನ್ನು ಕುಗ್ಗಿಸಬಾರದು. ರಂಗಪ್ಪ ಅವರು ಸಮಾಜಕ್ಕೆ ಕೊಡುಗೆ ಕೊಡುವುದು ಇನ್ನೂ ಇದೆ. ಅದರಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಈ ಸಮಾ ರಂಭಕ್ಕೆ ಬರಲು ಮೊದಲು ಹಿಂಜರಿದೆ. ಯಾರ್ಯಾರ ಮನಸ್ಸಿನಲ್ಲಿ ಏನೇನಿದೆಯೋ ಎಂದು, ಆದರೆ ಹಂಪನಾ ಮಾತನಾಡಿದ ಮೇಲೆ ಈ ಸಮಾರಂಭಕ್ಕೆ ಬರಲು ಧೈರ್ಯ ಬಂತು ಎಂದರು.

ದುಡಿಮೆಗೋಸ್ಕರವೇ ಹುಟ್ಟಿದ್ದೇನೆ: ತಾನೊಬ್ಬ ರೈತನ ಮಗ. ಮೊಮ್ಮಕ್ಕಳ ಜತೆ ಆಟವಾಡಿ ಕೊಂಡು ಇರಬಾರದ ಈ ದೇವೇಗೌಡ ಎಂದು ಮಾತನಾಡುತ್ತಾರೆ. ಎಲ್ಲವನ್ನೂ ಕೇಳಿಸಿಕೊಳ್ಳುತ್ತೇನೆ. ತಾನು ಸುಖ ಪಡೆಯಲು ಹುಟ್ಟಿಲ್ಲ. ದುಡಿಮೆಗೋಸ್ಕರವೇ ಹುಟ್ಟಿದ್ದೇನೆ. ತಾನು ಈ ಎತ್ತರಕ್ಕೆ ಬೆಳೆದಿದ್ದರೆ ತಾನ್ನ ಹೆಂಡತಿ ಚೆನ್ನಮ್ಮನೇ ಕಾರಣ, ಕೊನೆ ವರೆಗೂ ಇದನ್ನು ನೆನೆಸಿಕೊಳ್ಳುತ್ತೇನೆ ಎಂದರು.

ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂದು ದುಡಿಯುತ್ತಿದ್ದೇನೆ, ಮೋಕ್ಷ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಸಮಾಜ ವನ್ನು ಸರಿಪಡಿಸುವ ಶಕ್ತಿ ದೇಶದ 130 ಕೋಟಿ ಜನತೆಗೆ ಇದೆ. ನೋವನ್ನು ಊಟ ಮಾಡುತ್ತಿರುವ ಜನತೆ ಸಂದರ್ಭ ಬಂದಾಗ ಸೂಕ್ತ ತೀರ್ಪು ಕೊಡುತ್ತಾರೆ. ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ಅಂದು ವಿಶ್ವವಿದ್ಯಾ ನಿಲಯಗಳ ಕ್ಯಾಂಪಸ್‌ಗಳಲ್ಲಿ ಸ್ವಾಗತ ಮಾಡಿದರು. ಆದರೆ, ಮುಂದೆ ನಡೆದ ಚುನಾವಣೆ ಯಲ್ಲಿ ದೇಶದ ಅನಕ್ಷರಸ್ಥ ಜನತೆ ಸೂಕ್ತ ತೀರ್ಪು ಕೊಟ್ಟರು. ಇಂದೂ ಕೂಡ ದೇಶದ ಜನತೆ ಮೌಖೀಕವಾಗಿ ನೋವುಣ್ಣು ತ್ತಿದ್ದಾರೆ. ಸಂದರ್ಭ ಬಂದಾಗ ತೀರ್ಪು ನೀಡುತ್ತಾರೆ ಎಂದು ಪರೋಕ್ಷವಾಗಿ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

Advertisement

ಆಕಸ್ಮಿಕವಾಗಿ ಪ್ರಧಾನಿ ಆದವನು ತಾನು. 13 ಪಕ್ಷಗಳನ್ನು ಒಗ್ಗೂಡಿಸಿ ಅಧಿಕಾರ ನಡೆಸುವುದು ಕಷ್ಟದ ಕೆಲಸ. ಅದರ ಮಧ್ಯೆಯೂ ಹತ್ತು ಹಲವು ಸಮಸ್ಯೆಗಳನ್ನು ಹೋಗಲಾಡಿಸಿದ ಹೆಮ್ಮೆ ತನಗಿದೆ. ನಮ್ಮ ಪ್ರಧಾನಿ ಮೊದಲ ದೀಪಾವಳಿಯನ್ನು ಕಾಶ್ಮೀರದಲ್ಲಿ ಆಚರಿಸಿದರು. ಭಯೋತ್ಪಾದಕರ ದಮನಕ್ಕೆ ಕಪ್ಪುಹಣ ಸಂಪೂರ್ಣ ನಾಶ ಮಾಡುತ್ತೇನೆ ಎಂದಾಗ ಸ್ವಾಗತಿಸಿದೆ. ಇಂದು ದೇಶದಲ್ಲಿ ಏನಾಗುತ್ತಿದೆ ಪ್ರಶ್ನಿಸಿದರು.

ಮುಖ್ಯಮಂತ್ರಿಯಾಗಿ ಈದ್ಗಾ ಮೈದಾನದ ವಿವಾದವನ್ನು ಬಗೆಹರಿಸಿದೆ. ಪ್ರಧಾನಿಯಾಗಿ ಯಾವುದೇ ವಿಶೇಷ ಭದ್ರತೆ ಪಡೆಯದೆ ಕಾಶ್ಮೀರಕ್ಕೆ ಭೇಟಿ ನೀಡಿ ತೆರೆದ ವಾಹನದಲ್ಲಿ ಅಲ್ಲಿ ಓಡಾಡಿದ್ದೇನೆ. ಆರು ಬಾರಿ ಹುರಿಯತ್‌ ನಾಯಕ ಗಿಲಾನಿಯನ್ನು ಭೇಟಿ ಮಾಡಿದ್ದೆ. ಆದರೆ, ಅದ್ಯಾವುದರ ಬಗ್ಗೆಯೂ ಪ್ರಚಾರ ಪಡೆಯಲಿಲ್ಲ ಎಂದರು. ಇದೇ ಸಂದರ್ಭದಲ್ಲಿ ಪ್ರೊ.ಕೆ.ಎಸ್‌.ರಂಗಪ್ಪ ಅವರ ಸಾಧನೆ ಕುರಿತು ಹೊರ ತರಲಾಗಿರುವ ಶೃಂಗಳಗಳ ಅಂಗಳದಲ್ಲಿ’ ಚಿತ್ರ ಸಂಪುಟವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬಿಡುಗಡೆ ಮಾಡಿದರು.

ಸುತ್ತೂರು ಮಠಾಧೀಶರಾದ ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮಿಗಳು ಹಾಗೂ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ನಾಡೋಜ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ.ಎಸ್‌.ಎನ್‌.ಹೆಗಡೆ, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಗಮಿತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ಪೂರ್ಣಿಮಾದೇವಿ ರಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

“ಹಳೇ ಕಾರು ಜೋಡಿಸುವ ಕೆಲಸಕ್ಕೆ ಕೈಹಾಕಿದ್ದೇನೆ’
ಮೈಸೂರು:
ಜನತಾ ಪರಿವಾರದ ನಾಯಕರನ್ನು ಒಗ್ಗೂಡಿಸುವ ಕೆಲಸಕ್ಕೆ ಕೈಹಾಕಿದ್ದು, ಸಂಕ್ರಾಂತಿ ನಂತರ ಎಲ್ಲವನ್ನೂ ವಿಸ್ತಾರವಾಗಿ ಹೇಳುತ್ತೇನೆ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಮ್ಮದೇ ಶೈಲಿಯಲ್ಲಿ ಹೇಳಿದರು. ಮೈಸೂರು ವಿವಿಯ ಆಡಳಿತ ಸೌಧ ಕ್ರಾಫ‌ರ್ಡ್‌ಭವನದಲ್ಲಿ ಮಂಗಳವಾರ ನಡೆದ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ನಿಜಲಿಂಗಪ್ಪನವರು ತನ್ನನ್ನು ರಾಜಕೀಯಕ್ಕೆ ಕರೆತಂದ ನಂತರ ದೇವೇಗೌಡರ ಜತೆಗೆ 45 ವರ್ಷಗಳ ಸಹವಾಸ ತನ್ನದು, ಸಾಬ್ರು ನಾವು ಹೊಸ ಕಾರು ತರುವುದಿಲ್ಲ, ಗುಜರಿಗೆ ಹೋಗಿ ಬೇರೆ ಬೇರೆ ಸಾಮಾನುಗಳನ್ನು ತಂದು ಜೋಡಿಸಿ, ಕಾರು ಮಾಡಿಬಿಡುತ್ತೇವೆ. ಆ ಕಾರಿಗೆ ವಾರಂಟಿ-ಗ್ಯಾರಂಟಿ ಏನೂ ಇರುವುದಿಲ್ಲ. ಎಲ್ಲವನ್ನೂ ಕೊಡುವವರೇ ನಾವು, ಎಲ್ಲಿ ಸಡಿಲವಾಗಿದೆ, ಎಲ್ಲಿ ಟೈಟ್‌ ಮಾಡಿದರೆ ಸರಿಹೋಗುತ್ತೆ ಎಂಬುದು ನಮಗೆ ಗೊತ್ತಿರುತ್ತೆ, ಅದರಂತೆಯೇ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

ರೈತರು, ರೈತರ ಮಕ್ಕಳ ಸ್ಥಿತಿ ಅನಾಥವಾಗಿದೆ. ಕಾವೇರಿ ವಿಚಾರದಲ್ಲಿ ದೇವೇಗೌಡರು ಉಪವಾಸ ಕೂರದೆ ಇದ್ದಿದ್ದರೆ ರಾಜ್ಯಕ್ಕೆ ಹೊರೆ ಬೀಳುತ್ತಿತ್ತು ಎಂದ
ಅವರು, ರಾಜ್ಯ ಮತ್ತು ರಾಷ್ಟ್ರಕ್ಕೆ ದೇವೇಗೌಡರ ಮಾರ್ಗದರ್ಶನ ಅಗತ್ಯವಿದೆ. ಸಂಕ್ರಾಂತಿ ಕಳೆದ ಮೇಲೆ ರಾಜ್ಯದ ಜನರ ಮುಂದೆ ಎಲ್ಲವನ್ನೂ ವಿಸ್ತಾರವಾಗಿ ಮಾತನಾಡುತ್ತೇನೆ ಎಂದರು. ಹಿಂದೂ- ಮುಸ್ಲಿಮರು ಒಂದು ತಾಯಿಯ ಮಕ್ಕಳಂತೆ ಬಾಳುವುದನ್ನು ಕಾಣಬೇಕು ಎಂಬುದಷ್ಟೇ ತನ್ನ ಜೀವನದ ಆಸೆ, ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಬಗೆಹರಿದ್ದನ್ನು ನೆನೆದ ಅವರು, ದೇವೇಗೌಡರು ಇನ್ನೊಂದು ವರ್ಷ ಪ್ರಧಾನಿಯಾಗಿ ಇದ್ದಿದ್ದರೆ ರಾಮಮಂದಿರ ವಿವಾದವನ್ನೂ ಬಗೆಹರಿಸಿ ಬಿಡುತ್ತಿದ್ದರು ಎಂದು ಹೇಳಿದರು.

ರಾಜಕೀಯಕ್ಕೆ ಬನ್ನಿ: ಜಾnನ ಪ್ರಸರಣ ಮಾಡುವುದೇ ವಿಶ್ವವಿದ್ಯಾನಿಲಯಗಳ ಕೆಲಸ. ಈ ನಿಟ್ಟಿನಲ್ಲಿ ಮೈಸೂರು ವಿವಿ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆತ್ಮಕ್ಕೆ ಶಾಂತಿಸಿಗುವ ಕೆಲಸ ಮಾಡಿದ್ದಾರೆ. ಆದರೆ, ಜನರನ್ನು ತೃಪ್ತಿಪಡಿಸಲಾಗಲ್ಲ. ಎಲ್ಲ ಕಾಲದಲ್ಲೂ ಟೀಕೆ ಮಾಡುವವರು ಇದ್ದೇ ಇದ್ದರು. ದೇವರು ಮತ್ತು ನಮ್ಮ ಮನಃಸಾಕ್ಷಿ ಮೆಚ್ಚುವ ಕೆಲಸ ಮಾಡಬೇಕಷ್ಟೇ. ಸೇವೆಯಿಂದ ನಿವೃತ್ತರಾಗುತ್ತಿರುವ ಪ್ರೊ.ರಂಗಪ್ಪ ರಾಜಕೀಯಕ್ಕೆ ಬರಬೇಕು. ರಾಜಕೀಯದಲ್ಲಿ ಹರಡಿರುವ ಪಾರ್ಕಿನ್ಸನ್‌, ಕ್ಯಾನ್ಸರ್‌ ಕಾಯಿಲೆ ತೆಗೆಯಲು ಸಂಶೋಧನೆ ಮಾಡಿ, ವಿಧಾನಸೌಧದಲ್ಲಿ ನಿಮಗೆ ಒಳ್ಳೆಯ ಸ್ಥಾನ ಸಿಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next