Advertisement

ಕೊನೆಗೂ ದಕ್ಕಿದ ನ್ಯಾಯ

11:17 AM Mar 22, 2020 | mahesh |

ನ್ಯಾಯ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ನ್ಯಾಯಾಂಗದ ಜನಜನಿತ ಮಾತು ನಿರ್ಭಯಾ ಪ್ರಕರಣದಲ್ಲಿ ಅರ್ಧ ಸತ್ಯವಾಗಿದೆ. ನ್ಯಾಯ ಸಿಗುವುದು ಸಾಕಷ್ಟು ವಿಳಂಬಗೊಂಡರೂ ಕಡೆಗೂ ನ್ಯಾಯ ಸಿಕ್ಕಿತಲ್ಲ ಎಂದು ದೇಶ ನಿಟ್ಟುಸಿರುಬಿಟ್ಟಿದೆ.

Advertisement

ದೇಶದ ಅಂತಃಕರಣವನ್ನು ಕಲಕಿದ್ದ ದಿಲ್ಲಿಯ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರೊಂದಿಗೆ ಈ ಪ್ರಕರಣ ಇಲ್ಲಿಗೆ ಅಂತ್ಯಗೊಂಡಂತಾಗಿದೆ. ನ್ಯಾಯ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ನ್ಯಾಯಾಂಗದ ಜನಜನಿತ ಮಾತು ನಿರ್ಭಯಾ ಪ್ರಕರಣದಲ್ಲಿ ಅರ್ಧ ಸತ್ಯವಾಗಿದೆ. ನ್ಯಾಯ ಸಿಗುವುದು ಸಾಕಷ್ಟು ವಿಳಂಬಗೊಂಡರೂ ಕಡೆಗೂ ನ್ಯಾಯ ಸಿಕ್ಕಿತಲ್ಲ ಎಂದು ದೇಶ ನಿಟ್ಟುಸಿರು ಬಿಟ್ಟಿದೆ. ಈ ಪ್ರಕರಣದಲ್ಲಿ ನ್ಯಾಯ ಪಡೆದುಕೊಳ್ಳಲು ನಿರ್ಭಯಾ ಎಂಬ ಯುವತಿಯ ಹೆತ್ತವರು ನಿರ್ದಿಷ್ಟವಾಗಿ ಹೇಳಬೇಕಾದರೆ ಆಕೆಯ ತಾಯಿ ನಡೆಸಿದ ಹೋರಾಟವನ್ನು ಮೆಚ್ಚಿಕೊಳ್ಳಲೇ ಬೇಕು. ಇದು ಈ ಮಾದರಿಯ ಪ್ರಕರಣಗಳ ಸಂತ್ರಸ್ತ ಮಹಿಳೆಯರಿಗೆಲ್ಲ ಸ್ಫೂರ್ತಿಯಾಗುವಂಥ ಹೋರಾಟ.

ಇದು ನಮ್ಮ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಅಪರೂಪಗಳಲ್ಲಿ ಅಪರೂಪಗಳ ಸಾಲಿಗೆ ಸೇರುವ ಪ್ರಕರಣ. ಕೆಳಗಿನ ನ್ಯಾಯಾಲಯ ನೀಡಿದ ಗಲ್ಲು ಶಿಕ್ಷೆಯ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದು ರಾಷ್ಟ್ರಪತಿ ಪ್ರಾಣಭಿಕ್ಷೆಯ ಅರ್ಜಿಯನ್ನು ತಿರಸ್ಕರಿಸಿದ ಬಳಿಕವೂ ಅಪರಾಧಿಗಳು ಪ್ರಾಣ ಉಳಿಸಿಕೊಳ್ಳಲಿಕ್ಕಾಗಿ ನಡೆಸಿದ ಪ್ರಯತ್ನಗಳು ಕಾನೂನು ಕಲಿಯುವವರಿಗೆ ಪಠ್ಯವಾಗಲು ಅರ್ಹವಾದ ವಿಷಯ. ಅಪರಾಧಿಗಳ ವಕೀಲ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡ ರೀತಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಕೆಲವು ಲೋಪದೋಷಗಳಿಗೆ ಕನ್ನಡಿ ಹಿಡಿದಿದೆ.

ಯಾವುದೇ ಕ್ರಿಮಿನಲ್‌ ಪ್ರಕರಣ ಕೆಳಗಿನ ನ್ಯಾಯಾಲಯದಿಂದ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಎಂದು ಮೇಲಿನ ಹಂತಗಳಿಗೆ ಹೋಗುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾದ ಪ್ರಕರಣವನ್ನು ಮರಳಿ ವಿಚಾರಣಾ ನ್ಯಾಯಾಲಯಕ್ಕೆ ತರಲಾಗಿತ್ತು. ಗಲ್ಲು ಶಿಕ್ಷೆಯನ್ನು ತಪ್ಪಿಸಲು ಅಥವಾ ಸಾಧ್ಯವಾದಷ್ಟು ಮುಂದೂಡಲು ಲಭ್ಯವಿರುವ ಎಲ್ಲ ಕಾನೂನಾತ್ಮಕ ಅಂಶಗಳನ್ನು ಈ ವಕೀಲ ಬಳಸಿಕೊಂಡಿದ್ದಾರೆ. ಅವರು ಮಾಡಿದ್ದು ಸರಿಯೇ ಅಥವಾ ತಪ್ಪೇ ಎನ್ನುವುದು ಬೇರೊಂದು ಚರ್ಚೆಗೆ ಅರ್ಹವಾದ ವಿಚಾರ. ಆದರೆ ನಮ್ಮ ಕಾನೂನನ್ನು ಹೇಗೆಲ್ಲ ಎಳೆದು, ಜಗ್ಗಿ ಕಾಲಹರಣ ಮಾಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ವಕೀಲರಾಗಿ ಅವರು ತನ್ನ ವೃತ್ತಿಗೆ ನ್ಯಾಯಸಲ್ಲಿಸಿದರೂ ಇದೇ ವೇಳೆ ಇಡೀ ಕಾನೂನು ವ್ಯವಸ್ಥೆಯನ್ನೇ ಅಣಕಿಸಿದರು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಗುರುತಿಸಿ ಸರಿಪಡಿಸಲು ಮತ್ತು ಗಲ್ಲು ಶಿಕ್ಷೆಯಂಥ ಮಹತ್ವದ ತೀರ್ಪನ್ನು ಜಾರಿಗೊಳಿಸಲು ಕಾಲಮಿತಿಯನ್ನು ಹಾಕಿಕೊಳ್ಳುವ ಕುರಿತು ಚಿಂತನೆ ನಡೆಸಲು ಈ ಪ್ರಕರಣ
ಕಾರಣವಾಗಬೇಕು.

ನ್ಯಾಯದಾನ ಈ ರೀತಿ ವಿಳಂಬವಾಗುತ್ತಿರುವ ಕಾರಣಕ್ಕೆ ಹೈದರಾಬಾದ್‌ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದ ಕ್ರಮವೇ ಸರಿ ಎಂದು ಜನರು ಒಪ್ಪಿಕೊಳ್ಳುವಂಥ ವಾತಾವರಣ ಸೃಷ್ಟಿಯಾಗಿದೆ.ಇದು ಬಹಳ ಅಪಾಯಕಾರಿಯಾದ ಪರಿಸ್ಥಿತಿ. ಈ ಬಗ್ಗೆಯೂ ನ್ಯಾಯಾಂಗ ಗಂಭೀರವಾಗಿ ಚಿಂತನೆ ನಡೆಸಲು ಇದು ಸಕಾಲ.

Advertisement

ಅಪರಾಧಿಗಳನ್ನು ಗಲ್ಲಿಗೇರಿಸಿದ ಕೂಡಲೇ ಅಥವಾ ಗುಂಡಿಕ್ಕಿ ಕೊಂದ ಕೂಡಲೇ ಅಪರಾಧಗಳು ಕಡಿಮೆಯಾಗುತ್ತವೆಯೇ ಎಂಬ ಪ್ರಶ್ನೆಯಿದೆ. ಹಾಗೊಂದು ವೇಳೆ ಶಿಕ್ಷೆಯ ಭೀತಿ ಇರುತ್ತಿದ್ದರೆ ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾದ ಬಳಿಕವೂ ಈ ಮಾದರಿಯ ಹಲವು ಕೃತ್ಯಗಳು ಸಂಭವಿಸಿದ್ದು ಹೇಗೆ ಎಂದು ಕೇಳುವವರಿದ್ದಾರೆ. ಈ ಕುರಿತಾದ ಚರ್ಚೆಗಳು ಏನೇ ಇದ್ದರೂ ಅಪರಾಧಿಗಳಿಗೆ ಶಿಕ್ಷೆಯ ಭಯವೇ ಇಲ್ಲ ಎನ್ನುವಂತಾದರೆ ಒಂದು ರೀತಿಯ ಅರಾಜಕ ಪರಿಸ್ಥಿತಿ ಸೃಷ್ಟಿಯಾಗಬಹುದು. ಅತ್ಯಾಚಾರ ಎಸಗಿದರೂ, ಕೊಲೆ ಮಾಡಿದರೂ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಬಹುದು ಅಥವಾ ಲಘು ಶಿಕ್ಷೆ ಅನುಭವಿಸಿ ಪಾರಾಗಬಹುದು ಎಂಬ ನಂಬಿಕೆಯೊಂದು ಪಾತಕಿಗಳಲ್ಲಿ ಹುಟ್ಟಿಕೊಂಡರೆ ಅದು ಅರಾಜಕತೆಗೆ ಸಮನಾದ ಸ್ಥಿತಿಯೊಂದಕ್ಕೆ ಎಡೆ ಮಾಡಿಕೊಡುತ್ತದೆ. ಎಲ್ಲ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ವಾದಿಸಲು ಸಾಧ್ಯವಿಲ್ಲ. ಆದರೆ ಅಪರಾಧ ಎಸಗಿದರೆ ಸಿಕ್ಕಿ ಬೀಳುತ್ತೇವೆ ಮತ್ತು ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ ಎಂಬ ಭಯ ಇರಬೇಕು. ಇಂಥ ಭಯ ಹುಟ್ಟ ಬೇಕಾದರೆ ನ್ಯಾಯದಾನ ಇನ್ನಷ್ಟು ಪರಿಣಾಮಕಾರಿ ಮತ್ತು ಕ್ಷಿಪ್ರವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next