Advertisement

ಜಿ.ಪಂ.ಎಂಜಿನಿಯರ್‌ ಗೋವರ್ಧನ್‌ ಪರಿಶೀಲನೆ

02:22 PM Jun 21, 2018 | Team Udayavani |

ಸವಣೂರು: ಕಳೆದ 10 ದಿನಗಳ ಅಂತರದಲ್ಲಿ 3ನೇ ಬಾರಿಗೆ ಸಂಪರ್ಕ ಕಡಿತಗೊಂಡ ಪಾಲ್ತಾಡಿ ಗ್ರಾಮದ ಪರಣೆಯಿಂದ ಮೀನಕೊಳೆಂಜಿ, ಜಾರಿಗೆತ್ತಡಿ, ಚಾಕೋಟೆತ್ತಡಿ ಸೇರಿದಂತೆ ಬಂಬಿಲಬೈಲು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜಿ.ಪಂ. ಎಂಜಿನಿಯರ್‌ ಗೋವರ್ಧನ್‌ ಬುಧವಾರ ಬೇಟಿ ನೀಡಿ ಪರಿಶೀಲಿಸಿದರು.

Advertisement

ಈ ರಸ್ತೆಯ ಸಮಸ್ಯೆಯ ಕುರಿತು ಈ ಹಿಂದೆ ಹಲವು ಬಾರಿ ಉದಯವಾಣಿ ಸುದಿನದಲ್ಲಿ ಜು. 24, ಮಳೆ ಬಂದಾಗ
ಮುಳುಗಡೆಯಾದ ಕುರಿತು ಜೂ.9,ಜೂ.19ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಸಂಬಂಧಿಸಿದವರನ್ನು ಎಚ್ಚರಿಸಲಾಗಿತ್ತು. ಅಲ್ಲದೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪುತ್ತೂರು ಉಪ ವಿಭಾಗದ ಸಹಾಯಕ ಕಮೀಷನರ್‌ ಎಚ್‌. ಕೆ. ಕೃಷ್ಣ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ದೂರವಾಣಿ ಮೂಲಕ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಕೇಳಿಕೊಂಡಿದ್ದರು.

ಈ ರಸ್ತೆಯ ಮೂಲಕ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಸಂಪರ್ಕವಿದ್ದು, ಮನೆ ತಲುಪಲು ಹರಸಾಹಸ
ಪಡಬೇಕಾದ ಸ್ಥಿತಿ. ಈ ರಸ್ತೆಯನ್ನು ದಾಟಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಸಣ್ಣಮಕ್ಕಳನ್ನು ಹೆತ್ತವರು ಭಯದಲ್ಲೇ ಕಳುಹಿಸಬೇಕಾದ ಸ್ಥಿತಿ ಇತ್ತು. ಈ ಕುರಿತು ಉದಯವಾಣಿ ಸುದಿನ ವರದಿಯಲ್ಲಿ ಸಚಿತ್ರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಈ ವರದಿಗೆ ಎಚ್ಚೆತ್ತು ಜಿ.ಪಂ. ಎಂಜಿನಿಯರ್‌ ಗೋವರ್ಧನ್‌ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ಹಾಗೂ ವರದಿಯನ್ನು ಜಿ.ಪಂ. ಗೆ ಸಲ್ಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ., ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್‌., ಸದಸ್ಯ ಸತೀಶ್‌ ಅಂಗಡಿಮೂಲೆ, ಸಿಬಂದಿ ಪ್ರಮೋದ್‌ ಕುಮಾರ್‌ ರೈ, ದಯಾನಂದ ಸ್ಥಳೀಯರಾದ ಸೋಮಪ್ಪ ಗೌಡ, ಕೃಷ್ಣಪ್ಪ ಪೂಜಾರಿ, ಕಿಟ್ಟಣ್ಣ ರೈ ಬರೆಮೇಲು, ವಸಂತ ಗೌಡ ಚಾಕೋಟೆತ್ತಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next