Advertisement

ಗಡಿ ರಸ್ತೆಗೆ ಝಾರ್ಖಂಡ್‌ ಕಾರ್ಮಿಕರು!

02:24 AM Jun 09, 2020 | Sriram |

ರಾಂಚಿ: ಚೀನವು ಶಾಂತಿ ಸಂಧಾನಕ್ಕೆ ಒಪ್ಪಿಕೊಂಡರೂ ಭಾರತ ಅದನ್ನು ಸಂಪೂರ್ಣವಾಗಿ ನಂಬುತ್ತಿಲ್ಲ. ಲಡಾಖನ್ನು ಬಲಿಷ್ಠಗೊಳಿಸುವ ಹೊಣೆಯನ್ನು ಝಾರ್ಖಂಡ್‌ನ‌ 8 ಸಾವಿರ ಕಾರ್ಮಿಕರಿಗೆ ವಹಿಸಿದೆ. ಈ ಕಟ್ಟಾಳುಗಳು ಅಲ್ಲಿ ಸದೃಢ ರಸ್ತೆಗಳನ್ನು ನಿರ್ಮಿಸಲಿದ್ದಾರೆ.

Advertisement

ಕಾರ್ಮಿಕರನ್ನು ಕಳುಹಿಸಿಕೊಡುವಂತೆ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಇತ್ತೀಚೆಗಷ್ಟೇ ಝಾರ್ಖಂಡ್‌ ಸರಕಾರ ವನ್ನು ಕೇಳಿಕೊಂಡಿತ್ತು. ಅಲ್ಲಿನ ಸಿಎಂ ಹೇಮಂತ್‌ ಸೊರೇನ್‌ ಇದಕ್ಕೆ ಸಮ್ಮತಿಸಿದ್ದಾರೆ. ಚೀನ ಗಡಿಯಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಿ ಯಶಸ್ವಿಯಾಗಿದ್ದ ಬಿಆರ್‌ಒ ಈಗ “ಆಪರೇಷನ್‌ ವಿಜಯಕ್‌’ ಅಡಿ ಲಡಾಖ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲಿದೆ.

11,800 ಕಾರ್ಮಿಕರು!
ಝಾರ್ಖಂಡ್‌ ಒಟ್ಟು 11,800 ಕಾರ್ಮಿಕರನ್ನು ಕಳುಹಿಸಿದೆ. ಇವರಲ್ಲಿ ಕೆಲವರು ಉತ್ತರಾಖಂಡ ಗಡಿಯ ಶಿವಾಲಿಕ್‌ ಯೋಜನೆ, ಹಿಮಾಚಲ ಪ್ರದೇಶ ಅಂಚಿನ ದೀಪಕ್‌ ಯೋಜನೆ ಮತ್ತು ಕಾಶ್ಮೀರದ ಬೀಕಾನ್‌ ರಸ್ತೆ ಯೋಜನೆಗಾಗಿ ಕೆಲಸ ಮಾಡಲಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ಲಡಾಖ್‌ ರಸ್ತೆ ನಿರ್ಮಾಣದ ಅಖಾಡಕ್ಕೆ ಇಳಿಯಲಿದ್ದಾರೆ.

ಭದ್ರತೆ ನಿಮ್ಮ ಹೊಣೆ
ಝಾರ್ಖಂಡ್‌ನ‌ ಬುಡಕಟ್ಟು ಜನಾಂಗದ ಕೆಲಸಗಾರರು ಈ ಹಿಂದೆಯೂ ಭಾರತದ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣದಲ್ಲಿ ಭಾಗವಹಿಸಿದ್ದರು. ದೇಶಕ್ಕಾಗಿ ಅತೀ ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುವ ಅವರಿಗೆ ಸೂಕ್ತ ರಕ್ಷಣೆ, ಆಶ್ರಯ, ಇನ್ನಿತರ ಮೂಲಸೌಕರ್ಯ ಒದಗಿಸುವುದು ಬಿಆರ್‌ಒ ಹೊಣೆ. ಜೀವವಿಮೆ, ವೈದ್ಯಕೀಯ ವೆಚ್ಚಗಳನ್ನೂ ಭರಿಸಬೇಕು ಎಂದು ಸೊರೇನ್‌ ಸೂಚಿಸಿದ್ದಾರೆ. ಎಲ್ಲ ಷರತ್ತುಗಳಿಗೂ ಒಪ್ಪಿರುವ ಬಿಆರ್‌ಒ, ಕೂಲಿಯನ್ನೂ ಶೇ.15-20ರಷ್ಟು ಏರಿಸಿದೆ. ಜೂ.10ರಿಂದ ರಸ್ತೆ ಕಾಮಗಾರಿ ಆರಂಭವಾಗಲಿದ್ದು, ಈಗಾಗಲೇ 11 ರೈಲು, ಟ್ರಕ್ಕುಗಳ ಮೂಲಕ ಕಾರ್ಮಿಕರು, ನಿಗದಿತ ಸ್ಥಳ ತಲುಪಿದ್ದಾರೆ.

ಮಿಲಿಟರಿ ತಂತ್ರಜ್ಞಾನಗಳ ಮೇಲೆ ಚೀನ ಕಣ್ಣು
ಮಿಲಿಟರಿ ತಂತ್ರಜ್ಞಾನದ ರಹಸ್ಯಗಳನ್ನು ಕದಿಯಲು ಚೀನ ಜಗತ್ತಿನಾದ್ಯಂತ ಸಂಶೋಧಕರನ್ನು ನೇಮಿಸುತ್ತಿದೆ ಎಂದು ತಿಳಿದುಬಂದಿದೆ. ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನ (ಸಿಪಿಸಿ)ದ ಕೇಂದ್ರ ಸಮಿತಿಯು “ಯುನೈಟೆಡ್‌ ಫ್ರಂಟ್‌ ವರ್ಕ್‌’ ಇಲಾಖೆಗೆ ಈ ಹೊಣೆಯನ್ನು ವಹಿಸಿದೆ ಎನ್ನಲಾಗಿದೆ.ಅಮೆರಿಕದ ಲ್ಯಾಬ್‌ಗಳ ವೈದ್ಯಕೀಯ ರಹಸ್ಯ ಕದಿಯಲು ಚೀನ ಸಂಶೋಧಕರನ್ನು ನೇಮಿಸಿದ್ದ ಸಂಗತಿ ಕೆಲವು ತಿಂಗಳ ಹಿಂದಷ್ಟೇ ಬಯಲಾಗಿತ್ತು. ಇದೇ ಕಳ್ಳಬುದ್ಧಿಯನ್ನು ಮಿಲಿಟರಿ ಕ್ಷೇತ್ರಕ್ಕೂ ವಿಸ್ತರಿಸಲು ಅದು ಮುಂದಾಗಿದೆ.

Advertisement

ಬಿಕ್ಕಟ್ಟು ಶಮನಕ್ಕೆ ಚೀನ ಒಲವು
ಲಡಾಖ್‌ ಸಭೆಯ ಅನಂತರ ಇದೇ ಮೊದಲ ಬಾರಿಗೆ ಚೀನ ಪ್ರತಿಕ್ರಿಯಿಸಿದೆ. ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಗಡಿವಿವಾದ ಭವಿಷ್ಯದಲ್ಲಿ ಉಲ್ಬಣಗೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡಲು ಲಡಾಖ್‌ ಸಭೆ ತೀರ್ಮಾನಿಸಿದೆ. ಪ್ರಸ್ತುತ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಡಿ ಬಿಕ್ಕಟ್ಟನ್ನು ದೀರ್ಘ‌ ಕಾಲದ ವರೆಗೆ ಮುಂದುವರಿಸದೆ, ಮಾತುಕತೆ ಮೂಲಕ ಶೀಘ್ರವೇ ಪರಿಹಾರ ಕಂಡುಕೊಳ್ಳಲು ಎರಡೂ ದೇಶಗಳು ಬಯಸುತ್ತಿವೆ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next