Advertisement

ಮಲೆನಾಡು ಭಾಗದಲ್ಲಿ ಜೆಡಿಎಸ್‌ ಬಿರುಸಿನ ಪ್ರಚಾರ

07:36 AM Mar 16, 2019 | Team Udayavani |

ಸಕಲೇಶಪುರ: ಬಿಜೆಪಿಗೆ ತಕ್ಕ ಪಾಠ ಕಲಿಸಲು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣರ ಗೆಲುವಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಮನವಿ ಮಾಡಿದರು.

Advertisement

ಪಟ್ಟಣದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಮೂಡಲಹಿಪ್ಪೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಹಿರಿಯ ಜೆಡಿಎಸ್‌ ನಾಯಕರ ಒಪ್ಪಿಗೆ ಪಡೆದು ಪ್ರಜ್ವಲ್‌ ರೇವಣ್ಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.

ಮೂಡಲಹಿಪ್ಪೆ ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ನೀಡಿದ ಸ್ಥಳ. ಅಂದಿನ ಸಭೆಯಲ್ಲಿ ತನಗೆ ರಾಜಕೀಯ ಶಕ್ತಿನೀಡಿದ ಜನರಿಗೆ ಏನಾದರೂ ಮಾಡಬೇಕು ಹಾಗೂ ಗ್ರಾಮದಲ್ಲಿದ್ದ ತನ್ನ ಸಮಾನ ವಯಸ್ಸಿನ ಅಗಲಿದ ಸ್ನೇಹಿತರನ್ನು ನೆನೆದು ದೇವೇಗೌಡರು ಕಣ್ಣಿರಿಟ್ಟರೆ ಹೊರತು, ರಾಜಕೀಯಕ್ಕೆ ಹೆದರಿ ಕಣ್ಣೀರಿಟ್ಟಿಲ್ಲ. ಆದರೆ, ಮಾಧ್ಯಮದವರು ಇದನ್ನು ಕೆಟ್ಟದ್ದಾಗಿ ಬಿಂಬಿಸಿದರು. ಬೇರೆಯವರು ಕಣ್ಣೀರಿಟ್ಟಾಗ ಸುಮ್ಮನಿರುತ್ತಾರೆ ಎಂದು ದೂರಿದರು.

ಆನೆ ಕಾರಿಡಾರ್‌: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಹಾಸನ -ಮೈಸೂರು, ಹಾಸನ -ಬೆಂಗಳೂರು ರೈಲು ಮಾರ್ಗವನ್ನು ಮಾಡಿದವರು ಗೌಡರು. ಈ ಮಾರ್ಗದಲ್ಲಿ ಅನೇಕ ರೈಲುಗಳು ಓಡಾಡುತ್ತಿದೆ. ಹಾಸನದಲ್ಲಿ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಲಾಗಿದೆ. ತಾಲೂಕಿಗೆ ಅತಿ ಶೀಘ್ರವಾಗಿ ಆನೆ ಕಾರಿಡಾರ್‌ ಮಾಡಲಾಗುವುದು ಹಾಗೂ ಮಲೆನಾಡು ಅಭಿವೃದ್ಧಿ ಬೋರ್ಡ್‌ ಸಹ ರಚನೆ ಮಾಡಲಾಗುವುದು ಎಂದು ಹೇಳಿದರು.

650 ಕೋಟಿ ರೂ.: ಜಿಲ್ಲೆಗೆ 10 ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಸಕಲೇಶಪುರ ತಾಲೂಕಿಗೆ ಕಳೆದ ಆರು ತಿಂಗಳಿನಲ್ಲಿ 650 ಕೋಟಿ ರೂ. ಅನುದಾನ ನೀಡಲಾಗಿದೆ. ಇದಲ್ಲದೆ ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದನೆ, ವಿದ್ಯುತ್‌ ಸಮಸ್ಯೆಗೆ ಪರಿಹಾರದಂತಹ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಎತ್ತಿನಹೊಳೆ ಯೋಜನೆಯಲ್ಲಿ 150ಕ್ಕೂ ಹೆಚ್ಚು ಕೋಟಿ ರೂ. ಅನುದಾನದಲ್ಲಿ ಹಲವು ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

Advertisement

ಸೌಲ ಸೌಲಭ್ಯ: ರಾಜ್ಯ ಸಮ್ಮಿಶ್ರ ಸರ್ಕಾರ ರಚನೆಯಾಗಿ ಕೇವಲ ವಾರದಲ್ಲೆ 44 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು, ಇದರ ಅಂಗವಾಗಿ ಜಿಲ್ಲೆಯ 1.19 ಲಕ್ಷ ಕುಟುಂಬಗಳಿಗೆ ಮೊದಲ ಹಂತದಲ್ಲೆ 535 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ 2 ಲಕ್ಷ ಕುಟುಂಬಗಳು ಸಾಲ ಸೌಲಭ್ಯದ ಲಾಭ ಪಡೆಯಲಿದ್ದಾರೆ ಎಂದರು.

ರೈತರಿಗೆ ಕಳೆದ  5 ವರ್ಷದಲ್ಲಿ ಏನನ್ನು ಮಾಡದ ಕೇಂದ್ರ ಸರ್ಕಾರ ಮನೆಗೆ ಹೋಗುವ ಹಂತದಲ್ಲಿ 6000 ಸಾವಿರ ರೂ. ನೀಡಲು ಮುಂದಾಗಿದೆ. ರಾಜ್ಯದಲ್ಲಿ ಬಿಜೆಪಿ ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್‌ನೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ. ಇದರಂತೆ ಕೇಂದ್ರದಲ್ಲೂ ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕಾಗಿದ್ದು ಜಿಲ್ಲೆಗೆ ಬಿಜೆಪಿ ಕೊಡುಗೆ ಶೂನ್ಯ ಇವರು ಯಾವ ಮುಖವಿಟ್ಟುಕೊಂಡು ಮತ ಕೇಳುತ್ತಾರೆ ಎಂದು ಹೇಳಿದರು. 

ಕಾಂಗ್ರೆಸ್‌ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ: ಲೋಕಸಭಾ ಕ್ಷೇತ್ರ ಜೆಡಿಎಸ್‌ ಘೋಷಿತ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮಾತನಾಡಿ, ರಾಜ್ಯ ಸಮ್ಮಿಶ್ರ ಸರ್ಕಾರ ಬಲಿಷ್ಠವಾಗಿದೆ. ಉತ್ತಮ ಕೆಲಸ ಮಾಡುತ್ತಿದ್ದು ರಾಜ್ಯ ಸರ್ಕಾರದ ಈ ಯೋಜನೆಗಳನ್ನು ಮತದಾರರಿಗೆ ವಿವರಿಸಬೇಕು. ಕಾಂಗ್ರೆಸ್‌ನ ಮುಖಂಡರೊಂದಿಗೆ ಮಾತನಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಪ್ರಚಾರ ಮಾಡುತ್ತೇನೆ ಎಂದು ವಿವರಿಸಿದರು.

ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ತಾಲೂಕಿನ ಅಭಿವೃದ್ಧಿಗಾಗಿ 150ಕ್ಕೂ ಹೆಚ್ಚು ಕೋಟಿ ರೂ. ಹಣ ಸಮ್ಮಿಶ್ರ ಸರ್ಕಾರದಿಂದ ನೀಡಲಾಗಿದೆ. ಮಂಡ್ಯದಲ್ಲಿ ನಿಖೀಲ್‌, ಹಾಸನದಲ್ಲಿ ಪ್ರಜ್ವಲ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟ ಜೆಡಿಎಸ್‌ ವರಿಷ್ಠರು. ಯುವ ಸಮೂಹಕ್ಕೆ ಗೌರವ ನೀಡಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ನೀಡಿದೆ.

ಈ ನಿಟ್ಟಿನಲ್ಲಿ ತಾಲೂಕಿನ ಜನ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಬಲಿಸಲೇಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಕೆ.ಎಲ್‌.ಸೋಮಶೇಖರ್‌, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಜಿಪಂ ಸದಸ್ಯರಾದ ಚಂಚಲಾ ಕುಮಾರಸ್ವಾಮಿ, ಸುಪ್ರದೀಪ್ತ ಯಜಮಾನ್‌, ಉಜ್ಮರುಜ್ವಿ, ಮುಖಂಡರಾದ ಬಾಳ್ಳು ಜಗನ್ನಾಥ್‌, ಜಾನೆಕೆರೆ ಮೋಹನ್‌, ಸಚಿನ್‌ ಪ್ರಸಾದ್‌, ಭಾಸ್ಕರ್‌, ಕವನ್‌, ಪ್ರಜ್ವಲ್‌, ಅಸ್ಲಂ, ಇಬ್ರಾಹಿಂ, ಜಾತಹಳ್ಳಿ ಪುಟ್ಟಸ್ವಾಮಿ, ಬೆಕ್ಕನಹಳ್ಳಿ ನಾಗರಾಜ್‌, ಜೈಭೀಮ್‌ ಮಂಜು, ರಘು ಹೆತ್ತೂರು ಮುಂತಾದವರಿದ್ದರು.

ಕಾರ್ಯಕರ್ತರೇ ನನ್ನ ದೇವರು. ಅವರಿಗೆ ನೋವಾಗಲು ನಾನು ಬಿಡುವುದಿಲ್ಲ. ಎಲ್ಲರನ್ನು ಒಗ್ಗೂಡಿಸಿ ಸಂಘಟನೆ ಮಾಡುತ್ತೇನೆ. ನನ್ನನ್ನು ಎತ್ತಿ ಆಡಿಸಿದ ಹಲವು ಹಿರಿಯರು ಈ ಸಭೆಯಲ್ಲಿ ಉಪಸ್ಥಿತರಿದ್ದೀರಿ. ನನ್ನನ್ನು ನಿಮ್ಮ ಮಗನೆಂದು ತಿಳಿದು ಚುನಾವಣೆಯಲ್ಲಿ ಹಗಲಿರುಳು ಕೆಲಸ ಮಾಡುವ ಮೂಲಕ ಗೆಲ್ಲಿಸಬೇಕು. ತಾಲೂಕಿನ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಲೋಕಸಭಾ ಸದಸ್ಯನಾದ ಬಳಿಕ ದೇವೇಗೌಡರ ಸಲಹೆ ಸಹಕಾರದೊಂದಿಗೆ ನಿಮ್ಮ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಲಿದ್ದೇನೆ.
-ಪ್ರಜ್ವಲ್‌ ರೇವಣ್ಣ, ಲೋಕಸಭಾ ಕ್ಷೇತ್ರದ ಜೆಡಿಎಸ್‌ ಘೋಷಿತ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next