Advertisement

ಬಿಜೆಪಿಯೊಂದಿಗೆ ಜೆಡಿಎಸ್‌ ವಿಲೀನ ಸೂಕ್ತ

06:30 PM Oct 20, 2021 | Team Udayavani |

ದಾವಣಗೆರೆ: ಚುನಾವಣೆಗಳಲ್ಲಿ ಜಾತ್ಯತೀತ ಜನತಾದಳ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸುವ ಬದಲಿಗೆ ಪಕ್ಷವನ್ನೇ ಬಿಜೆಪಿಯೊಂದಿಗೆ ಅಧಿಕೃತವಾಗಿ ವಿಲೀನಗೊಳಿಸುವುದು ಸೂಕ್ತ. ಈ ಕಾರಣಕ್ಕಾಗಿ ಜೆಡಿಎಸ್‌ ಪಕ್ಷವನ್ನು ರಾಜ್ಯದಲ್ಲಿ ವಿಸರ್ಜಿಸುವುದೇ ಒಳ್ಳೆಯದು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್‌ ಟೀಕಿಸಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಂಗ್ರೆಸ್‌ನ್ನು ಸೋಲಿಸುವ ಒಂದೇ ಗುರಿಯಿಟ್ಟುಕೊಂಡು ಅನೇಕ ಚುನಾವಣೆಗಳಲ್ಲಿ ಜೆಡಿಎಸ್‌ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಗಳನ್ನು ಸೆಳೆದು ಸೋಲಿಸಲೆಂದೇ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸುತ್ತಿದೆ. ಈಗ ನಡೆಯುತ್ತಿರುವ ಹಾನಗಲ್ಲ, ಸಿಂದಗಿ ಉಪಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಕುಮಾರಸ್ವಾಮಿಯವರಿಗೆ ನಿಜವಾಗಿಯೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಲಿ ಎಂದು ಸವಾಲು ಹಾಕಿದರು.

ಹಾನಗಲ್‌ ಮತ್ತು ಸಿಂಧಗಿ ಉಪಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಕೊಟ್ಟ ಪುಟಗೋಸಿ ಅಧಿಕಾರದಿಂದಲೇ ಇವತ್ತಿಗೂ ಜೆಡಿಎಸ್‌ ಜೀವಂತವಾಗಿದೆ. ಜತೆಗೆ ಆ ಪುಟಗೋಸಿಯೇ ಜೆಡಿಎಸ್‌ ಮಾನ ಕಾಪಾಡಿದೆ. ಇಲ್ಲದಿದ್ದರೆ ಇಷ್ಟೋತ್ತಿಗಾಗಲೇ ಜೆಡಿಎಸ್‌ ಬೆತ್ತಲಾಗಿ ನಾಮಾವಶೇಷ ವಾಗುತ್ತಿತ್ತು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕುಟುಂಬದ ರಾಜಕಾರಣ, ದುರಂಹಕಾರ ಹಾಗೂ ದುರಾಡಳಿತ ಮಾಡಿದ ಪರಿಣಾಮ ಶಾಸಕರು ಬೇಸತ್ತು ಆಪರೇಷನ್‌ ಕಮಲಕ್ಕೆ ಒಳಗಾದರು. ಅವರು ಸರಿಯಾಗಿ ಆಡಳಿತ ಮಾಡಿದ್ದರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು ಎಂದರು.

ಸಿಎಂ ಕ್ಷಮೆಯಾಚಿಸಲಿ: ಅನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಸಮರ್ಥನೆ ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ. ರಾಜ್ಯದ ಪೊಲೀಸ್‌ ವ್ಯವಸ್ಥೆಗೆ ತನ್ನದೇ ಆದ ಗೌರವ ಹೊಂದಿದ್ದು ಬಿಜೆಪಿ ಆಡಳಿತದಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಹೇಳಿಕೆ ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ವ್ಯಕ್ತಿಗಳಿಗೆ ಕುಮ್ಮಕ್ಕು ನೀಡಿದಂತಿದೆ. ಅನೈತಿಕ ಪೊಲೀಸ್‌ಗಿರಿ
ವಿಚಾರದಲ್ಲಿ ಮುಖ್ಯಮಂತ್ರಿಗಳ ಮೃಧುಧೋರಣೆ ಅಪಾಯಕಾರಿಯಾಗಿದೆ. ಮುಖ್ಯಮಂತ್ರಿಯವರು ಈ ವಿಚಾರವಾಗಿ ಕೂಡಲೇ ಕ್ಷಮೆಯಾಚಿಸಿ, ಹೇಳಿಕೆ ವಾಪಸ್‌ ಪಡೆಯಬೇಕು ಎಂದರು.

Advertisement

ಜಿಲ್ಲಾ ಕಾಂಗ್ರೆಸ್‌ ಇನ್‌ಟೆಕ್‌ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್‌, ಕಾಂಗ್ರೆಸ್‌ ಪ್ರಮುಖರಾದ ಎಂ.ಕೆ. ಲಿಯಾಖತ್‌ ಅಲಿ, ಡಿ. ಶಿವಕುಮಾರ್‌, ಮಹ್ಮದ್‌ ಜಿಕ್ರಿಯಾ, ಆರ್‌.ಬಿ.ಝಡ್‌, ಬಾಷಾ, ಮಹ್ಮದ್‌ ಜುಬೇರ್‌ ಸುದ್ದಿಗೋಷ್ಠಿಯಲ್ಲಿದ್ದರು.

ಮೋದಿ ಆಡಳಿತ ವೈಫಲ್ಯ
ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯದಿಂದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ಪ್ರಜೆಗಳ ಹಸಿವು ನೀಗಿಸುವಲ್ಲಿ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳಕ್ಕಿಂತಲೂ ಕಳಪೆ ಸಾಧನೆ ಮಾಡಿದೆ. ವಯಸ್ಸಿಗೆ ತಕ್ಕ ದೇಹದ ತೂಕವಿಲ್ಲದ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಅವರ ಹಿಂಬಾಲಕರು ಮೋದಿ ಆಡಳಿತ ವೈಫಲ್ಯವನ್ನು ಖಂಡಿಸದೇ ಮೋದಿಯನ್ನು ವಿಶ್ವಗುರು ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ಕೆ.
ಚಮನ್‌ಸಾಬ್‌ ಇದೇ ಸಂದರ್ಭದಲ್ಲಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next