Advertisement

ಜೆಡಿಎಸ್‌ ಉಚ್ಛಾಟಿಸಿದೆ, ಕಾಂಗ್ರೆಸ್‌ ಸೇರುತ್ತೇನೆ

03:53 PM Sep 19, 2021 | Team Udayavani |

ಕೋಲಾರ: ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಅವರ ಮಕ್ಕಳು ಬಹಳ ದೊಡ್ಡವರು, ನನ್ನನ್ನು ಬುಧವಾರ ಜೆಡಿಎಸ್‌ ಪಕ್ಷದಿಂದ ಉಚ್ಛಾಟಿಸಿದ್ದಾರೆ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುತ್ತೇನೆ ಎಂದು ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡ ಘೋಷಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕವಚನದಲ್ಲೇಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು. ಕೆ.ಸಿ.ವ್ಯಾಲಿ ಯೋಜನೆಯ ಬಗ್ಗೆ ನಾನು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಕೃಷ್ಣೇಭೈರೇಗೌಡ ಅವರನ್ನು ಹೊಗಳಿದಕ್ಕೆ ಅವರಿಗೆ ಬಾಧೆಯಾಗಿದೆ. ಕೊಚ್ಚೆ ನೀರು ಅಂತ ಕುಮಾರಸ್ವಾಮಿ ಹೇಳ್ತಾರೆ, ಅದೇ ಕೊಚ್ಚೆ ನೀರು ನಾನು ಕುಡಿದಿಲ್ವಾ? ಸತ್ತೋಗಿದಿನಾ ನಾನು ಎಂದು ಪ್ರಶ್ನಿಸಿದರು.

ರಮೇಶ್‌ ಕುಮಾರ್‌ ಹಾಗೂ ಕೃಷ್ಣಭೈರೇಗೌಡ ಇಬ್ಬರು ಮಹಾನುಭಾವರು, ನಮ್ಮ ಭಾಗಕ್ಕೆ ನೀರು ತಂದಿದ್ದಾರೆ. ದೇವೇಗೌಡರ ಕುಟುಂಬವೇ ರೈತರ ಕುಟುಂಬ, ಆದರೆ, ಏಕೆ ಲಘುವಾಗಿ ಮಾತನಾಡಬೇಕು. ನಾನು ಒಬ್ಬ ಶಾಸಕ ಅನ್ನೋದಕ್ಕಿಂತ ಮೊದಲು ರೈತನ ಮಗ ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್‌ ಸಂದರ್ಭದಲ್ಲಿ ಗೋವಾ ಜನತೆ ಸಹಕಾರ ಅಪಾರ: ಪ್ರಧಾನಿ ಮೋದಿ

ಒಳ್ಳೆ ನೀರು ಕೊಡಬಹುದಿತ್ತಲ್ವಾ?:
ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೆ ಅಧಿಕಾರವೇಬೇಕು, ಜೆಡಿಎಸ್‌ ಅನ್ನೋದು ಇವರ ಕುಟುಂಬಕ್ಕೆ ಮಾತ್ರ ಸೀಮಿತನಾ ಎಂದ ಅವರು, ಕಾಂಗ್ರೆಸ್‌ ಬಿಟ್ಟು ಬಂದು ನಾನು ಜೆಡಿಎಸ್‌ ಸೇರಿದ್ದೆ. ಆದ್ರೆ ನನ್ನನ್ನು ಲಗಾಮು ಹಾಕಿ ಎಳೆದುಕೊಂಡು ಹೋದ್ರೆ ಏನು ಮಾಡಬೇಕು. ಕುಮಾರಸ್ವಾಮಿಗೆ ಬೇರೆ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇಲ್ಲ, ಅವರ ಜಿಲ್ಲೆ ಮಾತ್ರ ಅವರಿಗೆ ಸೀಮಿತ. ಮಾತ್ತೆತ್ತಿದರೆ ನಮ್ಮದು ರೈತರ ಕುಟುಂಬ ಅಂತ ಹೇಳಿಕೊಳ್ತಾರೆ. ಎರಡು ಬಾರಿ ಸಿಎಂ ಆದಾಗ ಕೊಚ್ಚೆ ನೀರು ಬದಲು ಒಳ್ಳೆ ನೀರು ಕೊಡಬಹುದಿತ್ತಲ್ವಾ ಎಂದು ವ್ಯಂಗ್ಯವಾಡಿದರು.

ಉಚ್ಛಾಟನೆ ಮಾಡಿರೋದು ಸಂತೋಷ, ನಾನು ನಾಲ್ಕು ಪಕ್ಷದಲ್ಲಿ ನಾಲ್ಕು ಬಾರಿ ಶಾಸಕ ಆಗಿದ್ದೇನೆ. ನನ್ನ ಮಗ ರಮೇಶ್‌ ಕುಮಾರ್‌ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಳ್ಳೋರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಎಂದು ವಿವರಿಸಿದರು.

Advertisement

ಗ್ರೀನ್‌ ಸಿಗ್ನಲ್‌ ಸಿಕ್ಕಿದೆ: ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಳಿ ಚರ್ಚಿಸಿದೇನೆ, ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ನನ್ನನ್ನು ಕಾಂಗ್ರೆಸ್‌ನ ಒಬ್ಬ ಮಹಾನುಭಾವ ಪಕ್ಷದಿಂದ ಉಚ್ಛಾಟನೆ ಮಾಡಿಸಿದ್ದರು. ಹೀಗಾಗಿ ಜೆಡಿಎಸ್‌ ಪಕ್ಷಕ್ಕೆ ಹೋದೆ ಎಂದು ಡಿಕೆಶಿ ಬಳಿ ಹೇಳಿದ್ದೇನೆ. ಈಗ ಆ ಮಹಾನುಭಾವ ಹೆಸರಿಗೆ ಇಲ್ಲದಂಗೆ ಹೋಗಿದ್ದಾನೆ, ಜನರು ಮರೆತಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರನ್ನು ಮಹಾನುಭಾವ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next