Advertisement

ಸಂಜೆ ಕಾಲೇಜು ಓದಿದ ಜಯರಾಜ್‌ ಸೇರಿದ್ದು ಸೇನಾ ಶಿಬಿರ

10:00 AM Feb 24, 2018 | Team Udayavani |

ಮಹಾನಗರ: ‘ದೇಶ ಸೇವೆ ಮಾಡಬೇಕೆಂಬ ಹಂಬಲವಿದ್ದರೆ ಮಿಕ್ಕೆಲ್ಲ ಕಷ್ಟಗಳು ಮಂಜಿನಂತೆ ಕರಗುತ್ತವೆ’ ಎಂದು ಮಾತು ಆರಂಭಿಸುತ್ತಾರೆ ಸೇನಾನಿ ಜಯರಾಜ್‌. ಉರ್ವ ಬೋಳೂರು ನಿವಾಸಿ ದಿ| ವಸಂತ ಕೋಟ್ಯಾನ್‌ ಹಾಗೂ ಸುನಂದಾ ಅವರ ಮೂರು ಮಕ್ಕಳ ಪೈಕಿ ಕೊನೆಯವರಾದ ಜಯರಾಜ್‌ ಜಮ್ಮುವಿನ ಕಾರ್ಗಿಲ್‌ ಬಳಿಯ ದಾರಕಾ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಕುಟುಂಬ ಸದಸ್ಯರ ಜತೆ ಜಯರಾಜ್‌

Advertisement

ಬದುಕು ದೊಡ್ಡದೋ ಅಥವಾ ಬದುಕಿನಲ್ಲಿ ಆಸಕ್ತಿ ದೊಡ್ಡದೋ ಎಂದು ತೂಕ ಮಾಡಿದರೆ ಎರಡನೆಯದೇ ಮಹತ್ವದ್ದು ಎಂಬುದಕ್ಕೆ ಜಯರಾಜ್‌ ಸಾಕ್ಷಿ. ಹಗಲಿನಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಾ, ಸಂಜೆ ಕಾಲೇಜಿನಲ್ಲಿ ತಮ್ಮ ಕನಸಿಗೆ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದ ಜತೆಗೆ ಶ್ರಮ ಪಡಲು ಹಿಂಜರಿಕೆ ಇಲ್ಲದಿದ್ದುದು ಇವರನ್ನು ಈ ಹಂತಕ್ಕೆ ಬೆಳೆಸಿದೆ. ಹಾಗಾಗಿಯೇ ಉಳಿ ಹಿಡಿದ ಕೈಗಳೀಗ ಕೋವಿ ಹಿಡಿದು ನಿಂತಿವೆ. 

ಬೆಸೆಂಟ್‌ ಸಂಜೆ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಜಯರಾಜ್‌, ರಜೆ ದಿನಗಳಲ್ಲಿ ಹೋಗುತ್ತಿದ್ದುದು ಹೈದರಾಬಾದ್‌ನಲ್ಲಿದ್ದ ಅಕ್ಕನ ಮನೆಗೆ. ಸಮೀಪವೇ ಇದ್ದ ಆರ್ಮಿಕ್ಯಾಂಪ್‌ ಆಕರ್ಷಿಸುತ್ತಿತ್ತು. ಅಲ್ಲಿನ ಚಟುವಟಿಕೆಗಳು, ಆ ಸೈನಿಕರಲ್ಲಿನ ಶಿಸ್ತು ಸೇನೆಗೆ ಸೇರುವಂತೆ ಪ್ರೇರೇಪಿಸಿತು. ಪ್ರಸ್ತುತ ಮಕ್ಕಳ ಬಯಕೆಗೆ ತಮ್ಮ ಇಷ್ಟದ ಬಣ್ಣಗಳನ್ನು ಬಳಿಯುವ ಪೋಷಕರೇ ಹೆಚ್ಚು. ಆದರೆ ಜಯರಾಜರ ಸೇನೆಗೆ ಸೇರುವ ಆಸೆಯನ್ನು ಕೇಳಿ ಮನೆಯವರೆಲ್ಲಾ ಸಂಭ್ರಮಿಸಿದರು.

ಕಾರ್ಗಿಲ್‌ ಯುದ್ಧದ ಸಮಯ
ಹಾಗೆ ನೋಡಿದರೆ ಜಯರಾಜ ರದ್ದು ವೃತ್ತಿ ಜೀವನವೂ ಅದೃಷ್ಟದ್ದೇ. ಯುವಕನೊಬ್ಬ ಉದ್ಯೋಗಕ್ಕೆ ಸೇರಿದಾಗ ಸಿಗಬೇಕಾದ ಪ್ರೇರಣೆ ಹೇಗಿರಬೇಕು? ಇವರು ಸೇನೆಗೆ ಸೇರಿದಾಗ ಕಾರ್ಗಿಲ್‌ ಯುದ್ಧದ ಸಮಯ. ಎಲ್ಲೆಲ್ಲೂ ವೀರೋಚಿತ ವಾತಾವರಣ ತುಂಬಿಕೊಂಡಿತ್ತು. ತನ್ನ ಹಿರಿಯ ಸಹೋದ್ಯೋಗಿಗಳ ಪರಿಶ್ರಮ, ಸಾಹಸವೆಲ್ಲವೂ ಅವರ ಗುರಿಯನ್ನು ಮತ್ತಷ್ಟು ಸ್ಪಷ್ಟಪಡಿಸಿತು.

ಅಣ್ಣನ ಬೆಂಬಲ
ಜಯರಾಜ್‌ ತಮ್ಮ ಬಯಕೆಯನ್ನು ಮನೆಯಲ್ಲಿ ಪ್ರಸ್ತಾವಿಸುತ್ತಿದ್ದಂತೆ ಪೂರ್ಣ ಸಹಕಾರ ನೀಡಿ ಸೇನೆಗೆ ಸೇರುವವರೆಗೆ ಬೆನ್ನೆಲುಬಾಗಿ ನಿಂತದ್ದು ಅಣ್ಣ ಶ್ರೀರಾಜ್‌. ಸೆಂಟ್ರಿಂಗ್‌ ಕೆಲಸ ಮಾಡುತ್ತಿರುವ ಶ್ರೀರಾಜ್‌, ನನ್ನ ತಮ್ಮ ದೇಶ ಸೇವೆ ಮಾಡಲಿ ಎಂದು ಎಲ್ಲ ರೀತಿಯಲ್ಲೂ ಸಹಕರಿಸಿದರು. ಸೇನಾ ರ್ಯಾಲಿಯಲ್ಲಿ ಭಾಗವಹಿಸಲು ಬೇಕಾದ ಸಿದ್ಧತೆ, ದಾಖಲೆಗಳ ಸಂಗ್ರಹ ಎಲ್ಲ ಮಾಡಿದ್ದೂ ಅವರೇ. ನಾನು ಸೇನೆ ಸೇರಬೇಕೆಂದಿದ್ದೆ. ಆದರೆ ನಿಜವಾಗಲೂ ಸೇರಲು ಸಾಧ್ಯವಾಗಿಸಿದ್ದು ಅಣ್ಣನ ಉತ್ಸಾಹ ಎನ್ನುತ್ತಾರೆ ಜಯರಾಜ್‌.

Advertisement

ದೇಶಕ್ಕಾಗಿ ಬದುಕಿ ಧರ್ಮದ ಹೆಸರಿನಲ್ಲಿ ಕಲಹಗಳು ಹೆಚ್ಚಾಗುತ್ತಿವೆ. ಇದು ದೇಶ ಕಾಯುವ ನಮ್ಮಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದೇ ನೆಪದಲ್ಲಿ ಅನೇಕ ಬಿಸಿರಕ್ತದ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಿಂತ ಸೇನೆ ಸೇರುವ ಬಗ್ಗೆ ಯೋಚನೆ ಮಾಡಿ.ಅಲ್ಲಿ ನಡೆಯುವ ಯುದ್ಧದಲ್ಲಿ ಪ್ರಾಣ ಹೋದರೆ ದೇಶವೇ ಹೆಮ್ಮೆ ಪಡುತ್ತದೆ.
ಜಯರಾಜ್‌, ಯೋಧ 

ಮನದಾಳದ ಮಾತು
ನಾವು ಕಾರ್ಯ ನಿರ್ವಹಿಸುತ್ತಿರುವ ವಾತಾವರಣದ ಬಗ್ಗೆ ನಿರ್ದಿಷ್ಟತೆಯಿಲ್ಲ. ಎಷ್ಟು ಸೆಕೆ ಇರುತ್ತದೆಯೋ ಅದರ ದುಪ್ಪಟ್ಟು ಚಳಿ ಅಲ್ಲಿ ಇರುತ್ತದೆ. ಹಿಮ ಬೀಳುತ್ತಲೇ ಇರುತ್ತದೆ. ಆದರೆ ದೇಶ ಸೇವೆಯ ಎದುರು ಅವೆಲ್ಲವೂ ದೊಡ್ಡ ಸಂಗತಿಯಲ್ಲ.ಯಾವುದೇ ವಾತಾವರಣ, ಸ್ಥಳ ಕೊಟ್ಟರೂ ಅದು ನಮ್ಮ ದೇಶದ ನೆಲ. ಅದನ್ನು ಕಾಯಬೇಕೆಂಬುದಷ್ಟೇ ಗುರಿ. ಇದು ಪ್ರತಿಯೊಬ್ಬ ಯೋಧನ ಮನದಾಳದ ಮಾತು ಎಂದು ನುಡಿಯುತ್ತಾರೆ ಜಯರಾಜ್‌.

ಜಾಗೃತಿ ಮೂಡಲಿ
ಜಿಲ್ಲೆಯಿಂದ ಸೇನೆ ಸೇರುವವರ ಸಂಖ್ಯೆ ಕಡಿಮೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಆಸಕ್ತಿಯುಳ್ಳ ಯುವಕರು ಮಾಜಿ ಸೈನಿಕರ ಸಂಘ ಅಥವಾ ಕುಳೂರಿನಲ್ಲಿರುವ ಸೇನಾ ಕಚೇರಿಯನ್ನು ಸಂಪರ್ಕಿಸಬೇಕು. ಜಿಲ್ಲೆಯ ಯುವಜನರು ಸೇನೆಯಲ್ಲಿ ಹೆಚ್ಚಾಗಬೇಕು.
-ಜಯರಾಜ್‌

ತಮ್ಮನ ಬಗ್ಗೆ ಹೆಮ್ಮೆ ಇದೆ
‘ಸೇನಾ ಶಿಬಿರ ನೋಡಿ ಸೇನೆ ಸೇರಬೇಕು ಎಂದು ಜಯರಾಜ್‌ ಬಯಸಿದ. ಇದು ನನಗೆ ಬಹಳ ಖುಷಿ ನೀಡಿತು. ಕೆಲವು ದಿನಗಳ ಬಳಿಕ ಮಂಗಳಾ ಸ್ಟೇಡಿಯಂನಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಲು ಬೇಕಾದ ಸಿದ್ಧತೆ ಮಾಡಿದೆ. ಅವನ ಪರಿಶ್ರಮದಿಂದ ಸೇನೆ ಸೇರಿದ. ನನಗೆ ನನ್ನ ಮನೆಯವರಿಗೆ ಜಯರಾಜ್‌ ಬಗ್ಗೆ ಹೆಮ್ಮೆ ಇದೆ.’ 
-ಶ್ರೀರಾಜ್‌, ಜಯರಾಜ್‌ ಅಣ್ಣ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next