Advertisement

ಉತ್ತಮ ಸಾರ್ವಜನಿಕ ಸೇವೆ,ಜನಸ್ನೇಹಿ ಆಡಳಿತ; ಜಾವಳಿ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ

03:25 PM Sep 29, 2023 | Team Udayavani |

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಜಾವಳಿ ಗ್ರಾ.ಪಂ.ಗೆ ಜನಸ್ನೇಹಿ ಆಡಳಿತ, ಸಮಗ್ರ ಗ್ರಾಮಾಭಿವೃದ್ದಿ, ನರೇಗಾ ಸಮರ್ಪಕ  ಬಳಕೆಯಿಂದ ಜಾವಳಿ ಗ್ರಾ.ಪಂ.ಗೆ ಗಾಂಧಿ ಗ್ರಾಮದ ಪುರಸ್ಕಾರದ ಗರಿ ಲಭಿಸಿದೆ.

Advertisement

ಜಾವಳಿ ಹೇಮಾವತಿ ನದಿಯ ಉಗಮಸ್ಥಾನ. ಹೆಮ್ಮೆಯ ಮಡಿಲಲ್ಲಿ ಈ ಗ್ರಾಮ ಶೋಭಿಸುತ್ತಿದೆ. ಸರ್ಕಾರದ ಅನುದಾನಗಳನ್ನು ಹಸಿರು ತಾಣದಲ್ಲಿ ಸಮರ್ಪಕವಾಗಿ ಬಳಸಿ ಸೌಲಭ್ಯದಿಂದ ಜನ ವಂಚಿತರಾಗಬಾರದೆಂಬ ಉತ್ತಮ ಉದ್ದೇಶದಿಂದ ಜಾವಳಿ ಗ್ರಾಮ ಸಂಪತ್ಬರಿತವಾಗಿ ಬೆಳೆಯಲು ಸಹಕಾರಿಯಾಗಿದೆ.

ಕಳೆದ ವರ್ಷ ನೆರೆಯ ಗ್ರಾಮ ಸುಂಕಸಾಲೆ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿತ್ತು.ಈ ಬಾರಿ ಜಾವಳಿ ಗ್ರಾಮ ಪಂಚಾಯತ್ ತಾವೇನು ಕಡಿಮೆ ಇಲ್ಲ ಎಂಬಂತೆ ಸಾಧನೆಯ ಮೆಟ್ಟಿಲೇರಿ ವಿವಿಧ ಯೋಜನೆ ಹಾಗೂ  ಸೇವೆಗಳನ್ನು ನೀಡುವಲ್ಲಿ ಹಂತಹಂತವಾಗಿ ಏರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮದ ಪುರಸ್ಕಾರದ ಕನಸು ನನಸು ಮಾಡಿದೆ. ‌

ಜಾವಳಿ ಗ್ರಾಮ ಪಂಚಾಯತ್ ಅನೇಕ ಮಾನದಂಡಗಳನ್ನು ಅನುಸರಿಸಿ ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಪಣತೊಟ್ಟಿತ್ತು.‌ ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ದಿ ನಿರ್ವಹಿಸುವಲ್ಲಿ ಸಫಲವಾಗಿದೆ.‌ ಅನುದಾನಗಳ ಸಮರ್ಪಕ ಬಳಕೆ, ನರೇಗಾದಿಂದ ಉತ್ತಮ ಕಾಮಗಾರಿಗಳು,ಬಂದ ಅನುದಾನಗಳ ಬಳಕೆ,15ನೇ ಹಣಕಾಸು ಯೋಜನೆಯ ಸದ್ಬಳಕೆ, ಸ್ವಸಹಾಯ ಗುಂಪುಗಳ ಉತ್ತಮ ಕಾರ್ಯ ಚಟುವಟಿಕೆಗಳು, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಮೆಸ್ಕಾಂ ಬಿಲ್ ಸಂಪೂರ್ಣ ಪಾವತಿ, ಸಕಾಲ ಸೇವೆಗಳ ಸಮರ್ಪಕ ಅನುಷ್ಠಾನ ತರುವಲ್ಲಿ ಯಶಸ್ವಿಯಾಗಿದೆ.

ಉತ್ತಮ ಕಚೇರಿ ಕಟ್ಟಡ ಹಾಗೂ ನಗುಮುಖದ ಸಾರ್ವಜನಿಕ ಸೇವೆ ಜೊತೆಗೆ ಜನರ ಆರೋಗ್ಯ ಸುಧಾರಿಸುವ ಕಾರ್ಯಕ್ರಮಗಳು, ಅಂಗನವಾಡಿ ಹಾಗೂ ಶಾಲೆಗಳ ಅಭಿವೃದ್ದಿ ಕಾರ್ಯಕ್ರಮಗಳು,ಕಚೇರಿಯಲ್ಲಿ ಕಡತಗಳ ನಿರ್ವಹಣೆ ಜೊತೆಗೆ ಸಾಮಾಜಿಕ ಲೆಕ್ಕ ಪರಿಶೋದನೆ, ಸಂಪನ್ಮೂಲ ಕ್ರೋಢಿಕರಣ, ಕರ ಸಂಗ್ರಹ ಸದ್ಬಳಕೆ ಮತ್ತಿತರ ಸೌಲಭ್ಯ ಹಾಗೂ ಯೋಜನೆಗಳ ಯಶಸ್ಸಿನ ಸಾಧನೆಗೆ  ಪುರಸ್ಕಾರ ಸಂದಿರುವುದು ಸಂತಸದ ವಿಷಯವಾಗಿದೆ ಎಂದು ಗ್ರಾ.ಪಂ. ಕಾರ್ಯದರ್ಶಿ ಜೋಕಿಂ ಕೊರ್ಡೇರೊ ಹೇಳುತ್ತಾರೆ.

Advertisement

ಮಲೆನಾಡಿನಲ್ಲಿ ಗ್ರಾಮ ಪಂಚಾಯತ್‌ ಗಳು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಸೇವೆ ನೀಡಿದ ಶೇಕಡಾವಾರು ಲೆಕ್ಕಾಚಾರದ ವಿಷಯದಲ್ಲಿ ಗಣನೀಯ ಅಂಕ ಪಡೆದು ಈ ಬಾರಿ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾ.ಪಂ. ಗಾಂಧಿ ಗ್ರಾಮದ ಪುರಸ್ಕಾರದ ಪುಕ್ಕ ತನ್ನ ಮಡಿಲಿಗೆ ಸೆಳೆದಿದೆ.

ಪುರಸ್ಕಾರದ ಸಾಧನೆಗೆ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ, ಗ್ರಾಮ ಪಂಚಾಯಿತಿ ಸದಸ್ಯರ ಶ್ರಮ, ಗ್ರಾಮಸ್ಥರ ಸರ್ವ ಸಹಕಾರದಿಂದ ಇವೆಲ್ಲ ಸಾಧ್ಯವಾಗಿದೆ.

ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಹೇಗೋ ಹಾಗೆ ಎಲ್ಲಾ ಕಾರ್ಯಗಳು ಒಬ್ಬರಿಂದ ನಿರ್ವಹಿಸಲು ಸಾಧ್ಯವಿಲ್ಲ. ಸಂಘಟಿತರಾಗಿ ಮಾಡಿದ ಕಾರ್ಯ ಈ ಭಾರಿ ಫಲಭರಿತವಾಗಿದೆ. ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. –  ಎಂ.ಪಿ. ಪ್ರದೀಪ್, ಗ್ರಾ.ಪಂ.ಅಧ್ಯಕ್ಷ

ನಮ್ಮ ಗ್ರಾಮ ಪಂಚಾಯಿತಿಗೆ ಪುರಸ್ಕಾರ ಬಂತೆಂದರೆ ಎಲ್ಲರ ಸಹಕಾರದ ಫಲ. ಪ್ರಶಸ್ತಿ ಬಂದರೆ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಿದೆ ಎಂದರ್ಥ. ಇನ್ನಷ್ಟು ಕಾರ್ಯ ಸಾಧನೆ ಮಾಡಲು ಹುಮ್ಮಸ್ಸು ಇಮ್ಮಡಿಯಾಗುತ್ತದೆ.ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. –ಬಿ.ಆರ್.ಯತೀಶ್ ಕುಮಾರ್, ಗ್ರಾ.ಪಂ. ಪಿಡಿಒ.

Advertisement

Udayavani is now on Telegram. Click here to join our channel and stay updated with the latest news.

Next