Advertisement

ಮಂದಿರ ನಿರ್ಮಾಣಕ್ಕೆ ಮಸೂದೆಯೇ ಮಾರ್ಗ

12:57 PM Dec 03, 2018 | Karthik A |

ಉಡುಪಿ: ರಾಮಮಂದಿರದ ಬಗ್ಗೆ ನ್ಯಾಯಾಲಯ ಈಗಲಾದರೂ ತೀರ್ಪು ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹಾಗಾಗಿ ಸದ್ಯ ಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸುವ ಮಾರ್ಗ ಮಾತ್ರ ಉಳಿದಿದೆ ಎಂದು ವಿಹಿಂಪದ ಅಖಿಲ ಭಾರತ ಸಹಕಾರ್ಯದರ್ಶಿ ರಾಘವಲು ಹೇಳಿದರು. ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ರವಿವಾರ ವಿಹಿಂಪ ಮತ್ತು ಬಜರಂಗದಳ ನೇತೃತ್ವದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಆವರಣದಲ್ಲಿ ಜರಗಿದ ಬೃಹತ್‌ ಜನಾಗ್ರಹ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

Advertisement

ರಾಮಮಂದಿರ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿ 2010ರಲ್ಲೇ ಅಲಹಾಬಾದ್‌ ಪೀಠ ಆದೇಶ ನೀಡಿದೆ. ಈಗ ಸುಪ್ರೀಂಕೋರ್ಟ್‌ ಕೂಡ ವಿಚಾರಣೆಯನ್ನು ಮುಂದಕ್ಕೆ ಹಾಕುತ್ತಿದೆ. ಜನರ ಸಹನೆ ಮೀರುತ್ತಿದೆ. ಹಾಗಾಗಿ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸುವುದು ಅನಿವಾರ್ಯ. ಡಿ.11ರಂದು ಆರಂಭಗೊಳ್ಳುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದ್ದು, ಎಲ್ಲ ಸಂಸದರು ಪಕ್ಷಭೇದ ಮರೆತು ಒಪ್ಪಿಗೆ ನೀಡಬೇಕು. ವಿರೋಧಿಸಿದರೆ ಅದಕ್ಕೆ ಸಮರ್ಥನೆ ನೀಡಬೇಕು. ಆಗ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಅಧಿವೇಶನವನ್ನು ಜನತೆ ಕಾತರದಿಂದ ಕಾಯುತ್ತಿದ್ದಾರೆ ಎಂದರು.

ಚಂಡಮಾರುತ ಎದುರಿಸಲಾಗದು
ಆಶೀರ್ವಚನ ನೀಡಿದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ದೇಶದಲ್ಲಿ ಶ್ರೀರಾಮ ಮಂದಿರಕ್ಕಾಗಿ ಚಂಡಮಾರುತವೇ ಎದ್ದಿದೆ. ಮಂದಿರ ವಿರೋಧಿಗಳನ್ನು ನಿರ್ನಾಮ ಮಾಡುವ ಚಂಡಮಾರುತ ಇದು. ರಾಮಮಂದಿರ ನಿರ್ಮಾಣವನ್ನು ಯಾರೂ ವಿರೋಧ ಮಾಡಬಾರದು. ರಾಮ್‌ – ರಹೀಂ ಎಲ್ಲರೂ ಸೇರಿ ಪ್ರೀತಿಯಿಂದ ಮಂದಿರ ಕಟ್ಟೋಣ. ಅಂದು ಶ್ರೀರಾಮ ಕಟ್ಟಿದ ರಾಮಸೇತುವೆಯಂತೆ ಇಂದು ಕರ್ನಾಟಕದಿಂದ ಅಯೋಧ್ಯೆಯ ವರೆಗೆ ಪ್ರೀತಿಯ ಸೇತುವೆ ಕಟ್ಟೋಣ. ಸಂಸತ್ತಿನಲ್ಲಿ ನಮ್ಮ ಧ್ವನಿ ಮೊಳಗಬೇಕು. ನಮ್ಮ ಪರ್ಯಾಯ ಕಾಲದಲ್ಲಿಯೇ ರಾಮಮಂದಿರ ನಿರ್ಮಾಣವಾಗಲಿ ಎಂಬ ಆಶಯ ನಮ್ಮದು ಎಂದರು.


ಸ್ವಾಭಿಮಾನದ ರಾಷ್ಟ್ರಮಂದಿರ

ವಿಹಿಂಪ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್‌ ಮಂಜುನಾಥ ಸ್ವಾಮಿ ಮಾತನಾಡಿ, ರಾಮಮಂದಿರ ಸ್ವಾಭಿಮಾನದ ರಾಷ್ಟ್ರ ಮಂದಿರವಾಗಬೇಕು. ರಾಮಮಂದಿರ ಇತ್ತೆನ್ನುವುದಕ್ಕೆ ವೈಜ್ಞಾನಿಕ, ಪೌರಾಣಿಕ ದಾಖಲೆಗಳು ಸಾಕಷ್ಟಿವೆ. ಕೆನಡಾದ ಸಂಸ್ಥೆಗಳು, ಭಾರತೀಯ ಪುರಾತತ್ವ ಇಲಾಖೆಗಳು ಕೂಡ ದೃಢಪಡಿಸಿವೆ. 1528ರಲ್ಲಿ ಬಾಬರ್‌ ತನ್ನ ಸೇನಾಧಿಕಾರಿ ಮೀರ್‌ ಸಾದಿಕ್‌ ಮೂಲಕ ಧ್ವಂಸ ಮಾಡಿದ ಮಂದಿರ ಮತ್ತೆ ನಿರ್ಮಾಣವಾಗಲೇಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ. 2019ರ ಚುನಾವಣೆ ಆದ ಮೇಲೆ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಕಪಿಲ್‌ ಸಿಬಲ್‌ ನೇತೃತ್ವದ ವಕೀಲರು ಮನವಿ ಮಾಡಿದ್ದಾರೆ. ಹಾಗಾಗಿ ಜನತೆ ಅಧ್ಯಾದೇಶ ಹೊರಡಿಸಬೇಕೆಂಬ ಮನವಿ ಸಲ್ಲಿಸುತ್ತಿದ್ದೀರಿ. ಇದನ್ನು ಪ್ರಧಾನಿ ಮೋದಿಯವರಿಗೆ ಮುಟ್ಟಿಸುತ್ತೇನೆ. ನಾವು ಮೊದಲು ರಾಮಭಕ್ತರು, ಅನಂತರ ಜನಪ್ರತಿನಿಧಿಗಳು ಎಂದರು.

Advertisement

ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಬಾಳೆ ಕುದ್ರು ಶ್ರೀ ನರಸಿಂಹಾಶ್ರಮ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನಿಲ್‌ ಕೆ.ಆರ್‌., ಮಠ ಮಂದಿರ ಸಂಪರ್ಕ ಪ್ರಮುಖ್‌ ಪ್ರೇಮಾನಂದ ಶೆಟ್ಟಿ, ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಆರೆಸ್ಸೆಸ್‌ ಉಡುಪಿ ಜಿಲ್ಲಾ ಕಾರ್ಯವಾಹ ಯೋಗೀಶ್‌ ನಾಯಕ್‌, ದುರ್ಗಾವಾಹಿನಿ ಉಡುಪಿ ಜಿಲ್ಲಾ ಸಂಚಾಲಕಿ ರಮಾ ಜೆ. ರಾವ್‌ ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ ಮಂದಾರ್ತಿ ಸ್ವಾಗತಿಸಿದರು. ದುರ್ಗಾವಾಹಿನಿ ಉಡುಪಿ ಜಿಲ್ಲಾ ಸಹಸಂಚಾಲಕಿ ಭಾಗ್ಯಶ್ರೀ ಐತಾಳ್‌ ಕಾರ್ಯಕ್ರಮ ನಿರ್ವಹಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌ ಮನವಿ ವಾಚಿಸಿದರು. ಜಿಲ್ಲಾ ಸಂವಹನ ಪ್ರಮುಖ್‌ ಸುರೇಂದ್ರ ಕೋಟೇಶ್ವರ ವಂದಿಸಿದರು.

ಮುಸ್ಲಿಂ ಬಾಂಧವರಿಂದ ತಂಪು ಪಾನೀಯ: ಶ್ಲಾಘನೆ
ಜನಾಗ್ರಹ ಸಭೆಯ ಪೂರ್ವದಲ್ಲಿ ನಗರದಲ್ಲಿ ನಡೆದ ಭವ್ಯ ಮೆರವಣಿಗೆ ಸಂದರ್ಭ ಪೇಜಾವರ ಶ್ರೀಗಳ ಮುಸ್ಲಿಂ ಅಭಿಮಾನಿಗಳ ಬಳಗದಿಂದ ತಂಪುಪಾನೀಯ ನೀಡಿರುವುದನ್ನು ಪರ್ಯಾಯ ಶ್ರೀಗಳು ಸಭೆಯಲ್ಲಿ ಉಲ್ಲೇಖೀಸಿ ಶ್ಲಾಘಿಸಿದರು. 

ಹರಿದುಬಂದ ಜನಸಾಗರ
ಜನಾಗ್ರಹ ಸಭೆಗೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಾಸಕರಾದ ಸುನಿಲ್‌ ಕುಮಾರ್‌, ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌ ಮತ್ತಿತರರು ಸಭೆಯಲ್ಲಿದ್ದರು. ಸಭೆಗೂ ಮೊದಲು ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದ ವರೆಗೆ ಭವ್ಯ ಮೆರವಣಿಗೆ ನಡೆಯಿತು. 

ಧರ್ಮಸಂಸದ್‌ ನಿರ್ಣಯದಂತೆ ಹೆಜ್ಜೆ 
ಯುಗಯುಗಗಳಿಂದಲೂ ನಡೆದು ಬಂದಿರುವ ಧರ್ಮ-ಅಧರ್ಮಗಳ ನಡುವಿನ ಸಂಘರ್ಷ ಮುಂದುವರಿದಿದೆ. ಇದು ಹಿಂದೂ ಬಾಂಧವರು ಜಾಗೃತರಾಗಲು, ಸಂಘಟಿತರಾಗಲು ದೇವರೇ ನೀಡಿದ ಅವಕಾಶ. ಸಂಘಟಿತವಾಗದಿದ್ದರೆ ಅವಮಾನ ಆಗುತ್ತಲೇ ಇರುತ್ತದೆ. ಮಂದಿರ ಸಮಾಜವನ್ನು ಒಗ್ಗೂಡಿಸುತ್ತದೆ, ಸಂಸ್ಕಾರ ನೀಡುತ್ತದೆ. ಹಿಂದೂ ಧರ್ಮ, ರಾಮಮಂದಿರಕ್ಕಾಗಿ ಅನೇಕ ಮಹಾಪುರುಷರು ತ್ಯಾಗ, ಬಲಿದಾನ ಮಾಡಿದ್ದು, ಅವರ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯ. ಪ್ರಯಾಗದಲ್ಲಿ ಜ.31 ಮತ್ತು ಫೆ.1ರಂದು ಜರಗಲಿರುವ ಧರ್ಮಸಂಸದ್‌ನಲ್ಲಿ 20,000 ಮಂದಿ ಸಂತರು ಪಾಲ್ಗೊಂಡು ನೀಡುವ ನಿರ್ಣಯ ಹಿಂದೂ ಸಮಾಜಕ್ಕೆ ಪ್ರಮುಖ. ಅವರ ಆದೇಶದಂತೆ ನಡೆದುಕೊಳ್ಳಲು ಹಿಂದೂ ಸಮಾಜ ಸಿದ್ಧವಾಗಿದೆ. 
– ರಾಘವಲು, ವಿಹಿಂಪದ ಅಖಿ​​​​​​​ಲ ಭಾರತ ಸಹಕಾರ್ಯದರ್ಶಿ 

ರಾಮಮಂದಿರ ಭಿಕ್ಷೆಯಲ್ಲ
ರಾಮಮಂದಿರವನ್ನು ಪಾಕಿಸ್ಥಾನ, ಚೀನದಲ್ಲಿ ನಿರ್ಮಿಸಬೇಕೆಂದು ಕೇಳುತ್ತಿಲ್ಲ. ರಾಮನ ದೇಶ ಭಾರತದಲ್ಲೇ, ಅಯೋಧ್ಯೆಯಲ್ಲೇ ನಿರ್ಮಿ ಸಬೇಕೆಂದು ಕೇಳುತ್ತಿದ್ದೇವೆ. ಇದು ಭಿಕ್ಷೆಯಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿಯೇ ಕೇಳುತ್ತಿದ್ದೇವೆ. ಪ್ರಭುಗಳ ಸಂಹಿತೆಯನ್ನು ಮಾನ್ಯ ಮಾಡಬೇಕು.
-ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀಗಳು

ಮಂದಿರವೂ ಬೇಕು ಮೋದಿಯೂ ಬೇಕು
ನರೇಂದ್ರ ಮೋದಿಯವರ ನೇತೃತ್ವದಲ್ಲಿಯೇ ರಾಮಮಂದಿರ ನಿರ್ಮಾಣವಾಗಬೇಕು. ಆದರೆ ಅವರನ್ನು ಕೆಳಗಿಳಿಸಲು ಕೆಲವು ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಇದರ ಬಗ್ಗೆಯೂ ಜಾಗೃತರಾಗಬೇಕು. ನಮಗೆ ರಾಮಮಂದಿರವೂ ಬೇಕು, ನರೇಂದ್ರ ಮೋದಿಯೂ ಬೇಕು.
-ಮಂಜುನಾಥ ಸ್ವಾಮಿ, ವಿಶ್ವಹಿಂದೂ ಪರಿಷತ್‌ ವಿಶೇಷ ಸಂಪರ್ಕ ಪ್ರಮುಖ್‌ 

Advertisement

Udayavani is now on Telegram. Click here to join our channel and stay updated with the latest news.

Next