Advertisement

ಕೈಗೆ ಅನುಕಂಪ; ಕಮಲದಲ್ಲಿ ಟಿಕೆಟ್‌ ಫೈಟ್‌!

06:00 AM Oct 07, 2018 | Team Udayavani |

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ವಿಧಾನಸಭೆ ಉಪಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೆ ಕಾಂಗ್ರೆಸ್‌, ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ.

Advertisement

ಬ್ಯಾರೇಜ್‌ ಸಿದ್ದು ಎಂದೇ ಖ್ಯಾತಿ ಪಡೆದಿದ್ದ ಸಿದ್ದು ನ್ಯಾಮಗೌಡ ಮೇ 28ರಂದು ಅಪಘಾತದಲ್ಲಿ ನಿಧನರಾದ ಬಳಿಕ ಉಪಚುನಾವಣೆ ಎದುರಾಗಿದ್ದು, ಈ ಉಪಕದನಕ್ಕೆ ಕಾಂಗ್ರೆಸ್‌ನಿಂದ ಸಿದ್ದು ನ್ಯಾಮಗೌಡ ಅವರ ಹಿರಿಯ ಪುತ್ರ ಆನಂದ ನ್ಯಾಮಗೌಡ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. 

ಕಾಂಗ್ರೆಸ್‌ನಿಂದ ತಯಾರಿ ಜೋರಾಗಿದ್ದು, ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯನವರು, ಸೆ.27ರಂದು ಜಮಖಂಡಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಉಪ ಚುನಾವಣೆ ವೇಳೆ ನಾನು ಒಂದು ವಾರ ಇಲ್ಲೇ ಇರುತ್ತೇನೆ. ಸಿದ್ದು ನ್ಯಾಮಗೌಡರ ಪುತ್ರ ಗೆಲ್ಲಬೇಕು. ನೀವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಿ. ಕ್ಷೇತ್ರಕ್ಕೆ ಏನು ಅಭಿವೃದ್ಧಿ ಆಗಬೇಕೋ ಅದಕ್ಕೆ ಅನುದಾನ ಕೊಡಿಸಲು ನಾನೂ ಪ್ರಯತ್ನಿಸುತ್ತೇನೆಂಬ ಭರವಸೆ ಕೊಟ್ಟು ಹೋಗಿದ್ದಾರೆ.

ಅಲ್ಲದೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿದ್ದ ಹಾಲುಮತ ಸಮಾಜದ ಶ್ರೀಶೈಲ ದಳವಾಯಿ ಕೂಡ ಉಪ ಚುನಾವಣೆಯಲ್ಲಿ ಆನಂದ ನ್ಯಾಮಗೌಡ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇದೆಲ್ಲದರ ಜತೆಗೆ ಕಾಂಗ್ರೆಸ್‌ಗೆ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದ ಅನುಕಂಪವಿದೆ.

ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಗೊಂದಲ:
ಬಿಜೆಪಿಯಿಂದ ನಾಲ್ವರು ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಕಳೆದ ಬಾರಿಯ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಸಕ್ಕರೆ ಉದ್ಯಮಿ ಜಗದೀಶ ಗುಡಗುಂಟಿ, ಬಂಡಾಯ ಅಭ್ಯರ್ಥಿಯಾಗಿ ಗಮನಾರ್ಹ ಮತ ಪಡೆದಿದ್ದ ಉದ್ಯಮಿ ಸಂಗಮೇಶ ನಿರಾಣಿ (ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ), ಅರ್ಬನ್‌ ಬ್ಯಾಂಕ್‌ ನಿರ್ದೇಶಕ ಡಾ.ಉಮೇಶ ಮಹಾಬಳಶೆಟ್ಟಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಇವರೊಂದಿಗೆ ಬಿ.ಎಸ್‌. ಸಿಂದೂರ ಕೂಡ ಪ್ರಯತ್ನದಲ್ಲಿದ್ದಾರೆ.

Advertisement

ಹಿಂದಿನ ಕದನ ಹೇಗಿತ್ತು?:
ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದರು. ಆಗ ಸಿದ್ದು ನ್ಯಾಮಗೌಡ 49,245 ಮತ ಪಡೆದು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರುದ್ಧ 2,795 ಮತಗಳ ಅಂತರದಿಂದ ಗೆದ್ದಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳಲ್ಲಿ ಬಂಡಾಯವಿತ್ತು. ಕಾಂಗ್ರೆಸ್‌ಗೆ ಶ್ರೀಶೈಲ ದಳವಾಯಿ (19,753 ಮತ) ಬಂಡಾಯವಾಗಿದ್ದರೆ, ಬಿಜೆಪಿಗೆ ಸಂಗಮೇಶ ನಿರಾಣಿ (24,461 ಮತ ) ಬಂಡಾಯ ಎದ್ದಿದ್ದರು. ನ್ಯಾಮಗೌಡರ ಸ್ವಸಮಾಜದ ಜಿಪಂ ಉಪಾಧ್ಯಕ್ಷರಾಗಿರುವ ಮುತ್ತಪ್ಪ ಕೋಮಾರ ಕೂಡ ಕಣಕ್ಕಿಳಿದು 1524 ಮತ ಪಡೆದಿದ್ದರು. ಜೆಡಿಎಸ್‌ನಿಂದ ಸದಾಶಿವ ಕಲಾಲ ಸ್ಪರ್ಧಿಸಿ ಕೇವಲ 849 ಮತ ಪಡೆದಿದ್ದರು. ಜೆಡಿಎಸ್‌ಗೆ ಬಂಡಾಯವಾಗಿ ತೌಫಿಕ ಪಾರತನಹಳ್ಳಿ (1200 ಮತ) ಕಣಕ್ಕಿಳಿದ್ದರು.

ವ್ಯಾಪ್ತಿ ಎಷ್ಟು?
ಜಮಖಂಡಿ ನಗರಸಭೆ, ಸಾವಳಗಿ ಮತ್ತು ಜಮಖಂಡಿ ಹೋಬಳಿ ಸೇರಿ ಒಟ್ಟು 47 ಗ್ರಾಮಗಳು ಕ್ಷೇತ್ರ ವ್ಯಾಪ್ತಿಯಲ್ಲಿವೆ. ಈಚೆಗೆ ನಡೆದ ಜಮಖಂಡಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-22 (ಇಬ್ಬರು ಪಕ್ಷೇತರು ಸೇರಿದ್ದಾರೆ), ಬಿಜೆಪಿ-7, ಪಕ್ಷೇತರ-2 ಸದಸ್ಯರಿದ್ದಾರೆ. ಜೆಡಿಎಸ್‌ ಪ್ರಾಬಲ್ಯವಿಲ್ಲ. ಆದರೂ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿ ಇಲ್ಲಿ ಜೆಡಿಎಸ್‌ ಕೂಡ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ.

ಜಮಖಂಡಿ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡುವ ಕನಸನ್ನು ನಮ್ಮ ತಂದೆ ಕಂಡಿದ್ದರು. ಆದರೆ, ವಿಧಿ ಅವರನ್ನು ಕನಸು ಸಾಕಾರಗೊಳಿಸುವ ಮೊದಲೇ ಕರೆದುಕೊಂಡಿತು. ಅವರ ಕನಸು ಈಡೇರಿಸಲು ನಾವೆಲ್ಲ ಸಜ್ಜಾಗಿದ್ದೇವೆ. ಪಕ್ಷದಿಂದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ತಂದೆಯ ಹಾಗೂ ಕ್ಷೇತ್ರದ ಜನರ ಆಶೀರ್ವಾದದೊಂದಿಗೆ ನಾನು ಕೆಲಸ ಮಾಡುತ್ತಿದ್ದೇವೆ. ಗೆಲುವು ನಿಶ್ಚಿತ ಎಂಬ ವಿಶ್ವಾಸವಿದೆ.
– ಆನಂದ ನ್ಯಾಮಗೌಡ, ಕಾಂಗ್ರೆಸ್‌ ಅಭ್ಯರ್ಥಿ.

ಅಧಿಕಾರ ಇಲ್ಲದಿದ್ದರೂ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಕಳೆದ ಬಾರಿಯೇ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದೆ. ಉಪಚುನಾವಣೆಯಲ್ಲಿ ಟಿಕೆಟ್‌ ಸಿಗುವ ವಿಶ್ವಾಸವಿದೆ.
– ಸಂಗಮೇಶ ನಿರಾಣಿ, ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಟಿಕೆಟ್‌ ನನಗೆ ದೊರೆಯಲಿದೆ ಎಂಬ ಬಲವಾದ ನಿರೀಕ್ಷೆಯಲ್ಲಿದ್ದೇನೆ. ಕಾರ್ಯಕರ್ತರು ಈ ಚುನಾವಣೆ ಸವಾಲಾಗಿ ಸ್ವೀಕರಿಸಲು ಸಜ್ಜಾಗಿದ್ದಾರೆ. ಮತದಾರರೂ ನಮ್ಮ ಪರವಾಗಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಜನ ತಿರಸ್ಕರಿಸುತ್ತಿದ್ದಾರೆ. ಮೋದಿ ಅವರ ಪ್ರಭಾವವೂ ಇದೆ. ಕ್ಷೇತ್ರದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ.
– ಶ್ರೀಕಾಂತ ಕುಲಕರ್ಣಿ, ಮಾಜಿ ಶಾಸಕ, ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಆಯ್ಕೆ ಮಾಡಲಾಗುವುದು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ.
– ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮುಧೋಳ ಶಾಸಕ

ಉಪ ಚುನಾವಣೆಯಲ್ಲಿ ಗೆಲುವು ನಮ್ಮದೆ. ನಾವು ಈಗಾಗಲೇ ಆನಂದ ನ್ಯಾಮಗೌಡ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇವೆ. ಟಿಕೆಟ್‌ ಹಂಚಿಕೆ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.
– ಎಂ.ಬಿ. ಸೌದಾಗರ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next