Advertisement

ಬೆಳೆ ಸಂರಕ್ಷಣೆಗೆ ಇದೇ ಸಕಾಲ

09:20 PM May 06, 2020 | Sriram |

ಉಡುಪಿ: ತೆಂಗು, ಅಡಿಕೆ, ಗೇರುಬೀಜ ಮುಂತಾದ ಬೆಳೆ ಸಂರಕ್ಷಣೆಗೆ ಮಳೆಗಾಲಕ್ಕೂ ಮೊದಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೋಟಗಾರಿಕಾ ಇಲಾಖೆ ಸಾಂದರ್ಭಿಕ ಸಲಹೆಗಳನ್ನು ನೀಡಿದೆ.

Advertisement

ಮಳೆಗಾಲ ಬಂತೆಂದರೆ ಬೆಳೆಗಳನ್ನು ರೋಗ-ಕೀಟಗಳಿಂದ ಸಂರಕ್ಷಿಸುವುದು ಸವಾಲು. ಯಾವುದೇ ನಿಯಂತ್ರಣ ಕ್ರಮ ಕೈಗೊಂಡರೂ, ಅತಿಯಾದ ಮಳೆಯ ಕಾರಣದಿಂದ ಸಮಸ್ಯೆಯಾಗುತ್ತದೆ. ರೋಗ-ಕೀಟಗಳ ಹಾವಳಿ ಪ್ರಾರಂಭವಾದರೇ ಮತ್ತೆ ಅವುಗಳನ್ನು ನಿಯಂತ್ರಿಸುವುದು ಕಷ್ಟ. ಮುಂಜಾಗ್ರತೆ ವಹಿಸುವುದೊಂದೇ ಈಗಿರುವ ದಾರಿ.

ಮಳೆಯ ಆರಂಭಕ್ಕೆ ಕೆಲವೇ
ದಿನ ಬಾಕಿ
ಮುಂಗಾರು ಮಳೆ ಆರಂಭಕ್ಕೆ ಇನ್ನು ಕೆಲ ದಿನಗಳಷ್ಟೆ ಇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರ ಆಧಾರದಲ್ಲಿ ನಿಯಂತ್ರಣ ಕೈಗೊಳ್ಳಲು ಅವಕಾಶವಿದೆ. ಈ ಸಮ ಯದಲ್ಲಿ ಕೆಲವೊಂದು ರೋಗ, ಕೀಟದಿಂದಾಗಿ ಹಾನಿ ಲಕ್ಷಣಗಳು ಕಾಣಲು ಪ್ರಾರಂಭವಾಗುತ್ತವೆ.

ರೋಗ ನಿಯಂತ್ರಣಕ್ಕೆ ಕ್ರಮಗಳು
ತೆಂಗು, ಅಡಿಕೆ ಕೊಳೆರೋಗ ಮತ್ತು ಕೊಕ್ಕೋ ಕಾಯಿ ಕೊಳೆ ರೋಗ ನಿಯಂತ್ರ ಣಕ್ಕೆ ಮುಂಜಾಗ್ರತೆಯಾಗಿ ಶೇ.1ರ ಬೋಡೋ ದ್ರಾವಣ (100 ಲೀ.ನೀರಿಗೆ 1 ಕೆ.ಜಿ. ಮೈಲುತುತ್ತು ಮತ್ತು 1 ಕೆ.ಜಿ. ಸುಣ್ಣ ಸೇರಿಸಿದ ದ್ರಾವಣ) ಅಡಕೆ ಗೊನೆಗೆ ಸಿಂಪ ಡಿಸಬೇಕು. ಜಾಸ್ತಿ ಕೊಳೆ ರೋಗ ಕಂಡು ಬರುವ ಪ್ರದೇಶದಲ್ಲಿ ಔಷಧ ಸಿಂಪಡಣೆಯ ಅನಂತರ ಗೊನೆಗಳನ್ನು ಪ್ಲಾಸ್ಟಿಕ್‌ ಹಾಳೆ (200 ಗೇಜ್‌)ಯಿಂದ ಮುಚ್ಚಿ ನೀರು ಬೀಳದಂತೆ, ಗಾಳಿಯಾಡುವಂತೆ ಕಟ್ಟುವುದು ಉತ್ತಮ.

ರೋಗ ನಿಯಂತ್ರಣ ಅಗತ್ಯ
ಕಾಳುಮೆಣಸಿನ ಬಳ್ಳಿಯ ಸೊರಗು ರೋಗ ನಿಯಂತ್ರಣಕ್ಕೆ ಬುಡದ ಸುತ್ತಲೂ ಅರ್ಧ ಕೆ.ಜಿ. ಬೇವಿನ ಹಿಂಡಿಯನ್ನು ಟ್ರೈಕೋಡರ್ಮಾವನ್ನು ಕೊಟ್ಟಿಗೆ ಗೊಬ್ಬರದ ಜತೆ ಸೇರಿಸಿ ಹಾಕಬೇಕು. ಕಾಳುಮೆಣಸಿನ ಬಳ್ಳಿಯ ನೆಲದ ಮೇಲೆ ಹಬ್ಬಿರುವ ಭಾಗ ಕತ್ತರಿಸಿ ತೆಗೆಯಬೇಕು. ಶೇ.0.03ರ ಕಾಪರ್‌ ಆಕ್ಸಿಕ್ಲೋರೈಡ್‌ ದ್ರಾವಣವನ್ನು ಬಳ್ಳಿಯ ಬುಡಕ್ಕೆ ಕಾಂಡದ ವರೆಗೆ ಸುರಿಯಬೇಕು ಮತ್ತು ಶೇ.1ರ ಬೋರ್ಡೊ ದ್ರಾವಣವನ್ನು ಪೂರ್ತಿ ಬಳ್ಳಿಗೆ ಸಿಂಪಡಿಸಬೇಕು.

Advertisement

ಕೃಷಿ ಸಾಮಗ್ರಿ ಖರೀದಿಗೆ
ಆಧಾರ್‌ ಕಾರ್ಡ್‌ ಬಳಕೆ
ಮಳೆಗಾಲದಲ್ಲಿ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳಿಗೆ ಬಳಸುವ ಕೀಟ ನಾಶಕ ಮೈಲುತುತ್ತು. ಬೋರ್ಡೊ ದ್ರಾವಣ ಅಂಗಡಿಗಳಲ್ಲಿ ದೊರಕುತ್ತವೆ. ಲೈಸೆನ್ಸ್‌ ಪಡೆದ ಅಂಗಡಿ ಗಳಿಂದ ಕೊಂಡುಕೊಳ್ಳುವುದು ರೈತರಿಗೆ ಸೂಕ್ತ ಆಯ್ಕೆ. ಗುಣಮಟ್ಟದ ವಸ್ತುಗಳು ದೊರಕುತ್ತವೆ. ಲಾಕ್‌ಡೌನ್‌ ಇರುವುದರಿಂದ ಕೀಟನಾಶಕ, ಕಚ್ಚಾ ವಸ್ತು ಪಡೆಯಲು ಬಯೊಮೆಟ್ರಿಕ್‌ ಸಿಸ್ಟಮ್‌ ಬದಲಿ ಆಧಾರ್‌ ಕಾರ್ಡ್‌, ಗುರುತಿನ ಚೀಟಿ ತೋರಿಸಿ ಪಡೆದುಕೊಳ್ಳಬಹುದು.

ಕೃಷಿ ಚಟುವಟಿಕೆಗೆ ಸ್ಕೀಮ್‌ ಬಳಕೆ
ಮಳೆಗಾಲದ ಆರಂಭದ ಈ ಸಂದರ್ಭದಲ್ಲಿ ಲಾಕ್‌ಡೌನ್‌ ಇರುವುದರಿಂದ ಸರಕಾರ ತೋಟಗಾರಿಕೆಗೆ ಪೂರಕವಾಗಿ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸಂದರ್ಭ ಅಗತ್ಯವಿದ್ದಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರನ್ನು ಬಳಸಿಕೊಳ್ಳಲು ಅವಕಾಶವಿದೆ. ತೆಂಗು, ಅಡಿಕೆ ಕೃಷಿ ಜತೆ ಉಡುಪಿ ಮಲ್ಲಿಗೆ, ವಾಣಿಜ್ಯ ಗೇರು ಕೃಷಿಗೂ ಯೋಜನೆಯಲ್ಲಿ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದೆ.

ಗ್ರೀನ್‌ ಕಾರ್ಡ್‌ ಹೊಂದಿರಬೇಕಿಲ್ಲ
ಮಳೆಗಾಲದ ಪೂರ್ವಭಾವಿಯಾಗಿ ಕೃಷಿಯಲ್ಲಿ ತೊಡಗುವ ರೈತರು ಕಚ್ಚಾ ಸಾಮಗ್ರಿ ಹಾಗೂ ಬೆಳೆಗಳಿಗೆ ಸ‌ಂಬಂಧಿಸಿ ಯಂತ್ರೋಪಕರಣ ಖರೀದಿ ಇನ್ನಿತರ ಚಟುವಟಿಕೆ, ಸಾಗಾಟ ಮಾಡಲು ಗ್ರೀನ್‌ ಕಾರ್ಡ್‌ ಹೊಂದಿರಬೇಕಾದ ಆವಶ್ಯಕತೆಯಿಲ್ಲ. ಕೃಷಿಕ ರಿಗೆ ಸಂಬಂಧಿಸಿ ದಾಖಲೆ ಪತ್ರಗಳಿದ್ದಲ್ಲಿ ಸಾಕಾಗುತ್ತದೆ.

ಇವುಗಳನ್ನು ಪಾಲಿಸುವುದು ಅವಶ್ಯ
-ಕೃಷಿಕರು ಕೃಷಿ ಚಟುವಟಿಕೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
-ಮಾಸ್ಕ್ ಧರಿಸಿರಬೇಕು.
-ಸ್ಯಾನಿಟೈಸರ್‌, ಸಾಬೂನುಗಳಿಂದ ಆಗಾಗ ಕೈ ತೊಳೆಯುತ್ತಿರಬೇಕು.
-ಸುರಕ್ಷತೆಗೆ ಸಾಧನಗಳನ್ನು ಅಳವಡಿಸಿಕೊಳ್ಳಬೇಕು.
– ಕೈಗವಸು ಬಳಸಬೇಕು.

ಮಾಹಿತಿಗೆ
ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ ಉಡುಪಿ) : 0820-2531950
ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ: 0820-2520590
ಹಿ.ಸ. ತೋಟಗಾರಿಕೆ ನಿರ್ದೇಶಕರು ಉಡುಪಿ ತಾ| : 0820-2522837
ಹಿ.ಸ.ತೋಟಗಾರಿಕೆ ನಿರ್ದೇಶಕರು-ಕುಂದಾಪುರ : 08254-230813
ಹಿ.ಸ. ತೋಟಗಾರಿಕೆ ನಿರ್ದೇಶಕರು-ಕಾರ್ಕಳ : 08258-230288

ಮಳೆಗಾಲದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಇದರಿಂದ ರೋಗ ಬಾಧೆಯನ್ನು ತಡೆದು ಬೆಳೆಗಳನ್ನು ಸಂರಕ್ಷಿಸಿಕೊಳ್ಳಬಹುದು. ಸಂಶಯಗಳಿದ್ದಲ್ಲಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡಕೊಳ್ಳಬಹುದು.
– ಭುವನೇಶ್ವರಿ, ಉಪನಿರ್ದೇಶಕಿ
ತೋಟಗಾರಿಕೆ ಇಲಾಖೆ, ಉಡುಪಿ

ಪ್ರತಿ ಗುರುವಾರ ರೈತಸೇತು
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಉದಯವಾಣಿಯು ಆರಂಭಿಸಿದ ರೈತಸೇತುಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಇದನ್ನು ಮುಂದೆ ವಾರಕ್ಕೊಮ್ಮೆಯಾದರೂ ಪ್ರಕಟಿಸುವಂತೆ ರೈತರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ಗುರುವಾರ ರೈತಸೇತು ಪ್ರಕಟವಾಗಲಿದೆ. ಅಡಿಕೆ, ಕಾಳುಮೆಣಸು ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳನ್ನು ಹೊರತುಪಡಿಸಿದ ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳುಹಿಸಬೇಕು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ವಾಟ್ಸಪ್‌ ಸಂಖ್ಯೆ: 76187 74529

Advertisement

Udayavani is now on Telegram. Click here to join our channel and stay updated with the latest news.

Next