Advertisement

ಐಟಿ ದಾಳಿಗೆ ಖಂಡನೆ, ವಿವಿಧೆಡೆ ಪ್ರತಿಭಟನೆ

10:04 AM Oct 13, 2019 | Lakshmi GovindaRaju |

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ , ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌.ಎಲ್‌.ಜಾಲಪ್ಪ ಹಾಗೂ ಅವರ ಕುಟುಂಬ ಸದಸ್ಯರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎರಡನೇ ದಿನವಾದ ಶುಕ್ರವಾರವೂ ಮುಂದುವರಿದಿದ್ದು, ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ತಮ್ಮ ಎದುರಾಳಿಗಳನ್ನು ಮಣಿಸಲು ಮೋದಿ ಸರ್ಕಾರ ಎಲ್ಲಾ ತನಿಖಾ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಿಡಿಕಾರಿದ್ದರೆ, ಸೀಟ್‌ ಬ್ಲಾಕಿಂಗ್‌ ನಡೆದಿರುವುದು ತಿಳಿದು ಬಂದರೆ ಅದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಆ ಮೂಲಕ ಐಟಿ ದಾಳಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಮಧ್ಯೆ, ಐಟಿ ದಾಳಿ ಖಂಡಿಸಿ ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಟೀಕಾಪ್ರಹಾರ ಮುಂದುವರಿದಿದೆ. ಇದೇ ವೇಳೆ, ಮಂಡ್ಯ, ತುಮಕೂರು ಸೇರಿ ರಾಜ್ಯದ ಕೆಲವೆಡೆ ದಾಳಿ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Advertisement

ಮೆಡಿಕಲ್‌ ಸೀಟ್‌ ಬ್ಲಾಕಿಂಗ್‌ ಕಂಡು ಬಂದರೆ ಕಠಿಣ ಕ್ರಮ
ಬೆಂಗಳೂರು: ರಾಜಕಾರಣಿಗಳ ಮನೆ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೂ, ವೈದ್ಯಕೀಯ ಸೀಟ್‌ ಬ್ಲಾಕಿಂಗ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ, ಸೀಟ್‌ ಬ್ಲಾಕಿಂಗ್‌ ನಡೆದಿರುವುದು ತಿಳಿದು ಬಂದರೆ ಅದಕ್ಕೆ ಕಾರಣರಾದವರು ಯಾರೇ ಆದರೂ ಕಾನೂನು ಕ್ರಮ ಜರುಗಿಸುವುದಾಗಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದರು. ಕಾಂಗ್ರೆಸ್‌ ನಾಯಕರ ಶಿಕ್ಷಣ ಸಂಸ್ಥೆಗಳ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಆದಾಯ ಪಡೆದುಕೊಂಡು ತೆರಿಗೆ ವಂಚಿಸುತ್ತಿದ್ದರೆ ಆ ವೇಳೆ ದಾಳಿ ನಡೆಯುತ್ತದೆ. ಆದರೆ, ಸೀಟ್‌ ಬ್ಲಾಕಿಂಗ್‌ಗೂ, ಆದಾಯ ತೆರಿಗೆ ದಾಳಿಗೂ ಯಾವುದೇ ಸಂಬಂಧವಿಲ್ಲ.

ಕಾನೂನಿನ ವ್ಯಾಪ್ತಿಯಲ್ಲಿ ಸೀಟ್‌ ಬ್ಲಾಕಿಂಗ್‌ ಮಾಡಲಿಕ್ಕೆ ಬರುವುದಿಲ್ಲ. ಒಂದು ವೇಳೆ ಮಾಡಿದ್ದೇ ಆದಲ್ಲಿ ಮತ್ತೂಮ್ಮೆ ಪರಿಶೀಲನೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು. ಈಗಾಗಲೇ ಸೀಟ್‌ ಬ್ಲಾಕ್‌ ಕುರಿತು ತಜ್ಞರ ಸಮಿತಿ ಮೂಲಕ ವರದಿ ರೂಪಿಸಲಾಗಿದೆ ಎಂಬುದು ತಿಳಿದು ಬಂದಿದ್ದು, ಒಂದು ವೇಳೆ ವರದಿ ಸಿದ್ದವಾಗಿದ್ದರೆ ಆ ವರದಿಯನ್ನೇ ಮರಳಿ ಪಡೆದು ಪರಿಶೀಲಿಸುತ್ತೇನೆ. ಕಾನೂನಿನ ರೀತಿಯಲ್ಲಿ ಸೀಟ್‌ಗಳ ಬ್ಲಾಕ್‌ ಮಾಡುವುದಕ್ಕೆ ಬರುವುದಿಲ್ಲ. ಉಳಿದಿರುವ ಸೀಟುಗಳನ್ನು ಹಂತ, ಹಂತವಾಗಿ ತುಂಬಿಕೊಳ್ಳಲು ಕ್ರಮ ವಹಿಸುವುದಾಗಿ ತಿಳಿಸಿದರು.

ಬಿಜೆಪಿಯಿಂದ ಪ್ರತಿಪಕ್ಷ ನಾಯಕರ ಟಾರ್ಗೆಟ್‌
ಮೈಸೂರು: ಡಾ.ಜಿ.ಪರಮೇಶ್ವರ್‌ ಅವರ ನಿವಾಸ ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಮಾಜಿ ಸಂಸದ ಆರ್‌.ಧ್ರುವ ನಾರಾಯಣ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಪ್ರತಿಪಕ್ಷದ ನಾಯಕರನ್ನು ಗುರಿ ಯಾಗಿ ಸಿಕೊಂಡು ಐಟಿ ದಾಳಿ ನಡೆಸುತ್ತಿ ರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.

ಪರಮೇಶ್ವರ್‌ ಅವರ ತಂದೆ ಗಂಗಾಧರಯ್ಯ ಅವರು, 50 ವರ್ಷಗಳ ಹಿಂದೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಶ್ರಮಿಸಿದ್ದಾರೆ. ಲಾಭದ ಉದ್ದೇಶ ದಿಂದ ಅವರು ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಖರೀದಿಸಲು ಕೋಟ್ಯಂತರ ರೂ.ಬಳಕೆ ಮಾಡಲಾಗಿದೆ. ಜನಾರ್ದನ ರೆಡ್ಡಿ ಮಗಳ ಮದುವೆಗೆ ಕೋಟ್ಯಂತರ ರೂ.ಖರ್ಚು ಮಾಡಿದರೂ ಇವರ ಮೇಲೆ ಐಟಿ ಇಲಾಖೆ ದಾಳಿ ಮಾಡಲಿಲ್ಲ. ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿ ಮಾಡಿದ್ದು ಬಿಟ್ಟರೆ ಬಿಜೆಪಿ ನಾಯಕರ ಮನೆಯ ಮೇಲೇಕೆ ದಾಳಿ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಐಟಿ ದಾಳಿ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌.ಎಲ್‌.ಜಾಲಪ್ಪ ಹಾಗೂ ಅವರ ಕುಟುಂಬ ಸದಸ್ಯರ ಮನೆಗಳ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿ ಖಂಡಿಸಿ ಎರಡನೇ ದಿನವಾದ ಶುಕ್ರವಾರವೂ ರಾಜ್ಯದ ಕೆಲವೆಡೆ ಪ್ರತಿಭಟನೆಗಳು ನಡೆದವು. ಮಂಡ್ಯದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ತಮ್ಮ ರಾಜಕೀಯ ದ್ವೇಷಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ಐಟಿ ದಾಳಿ ನಡೆಸುತ್ತಿದೆ. ಇದು ಖಂಡನೀಯ. ಈಗಾಗಲೇ ದೇಶದ ಜನರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು. ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಿ, ದಾಳಿಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ವೇಳೆ ಕುಣಿಗಲ್‌, ನೆಲಮಂಗಲ ಸೇರಿದಂತೆ ಇತರೆಡೆಯೂ ಪ್ರತಿಭಟನೆಗಳು ನಡೆದವು.

ಇಂದು ತುರುವೆಕೆರೆ ಬಂದ್‌ಗೆ ಕರೆ: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿನಾಕಾರಣ ಐಟಿ ದಾಳಿ ನಡೆಸಿದ್ದು, ಇದನ್ನು ಖಂಡಿಸಿ ಶನಿವಾರ ತುರುವೆಕೆರೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು, ಪಟ್ಟಣದಲ್ಲಿ ರಸ್ತೆ ಬಂದ್‌ ನಡೆಸಲಾಗುವುದು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥ ನಾರಾಯಣ್‌ ಮತ್ತು ಅರಕೆರೆ ಶಂಕರ್‌ ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ವತಿಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಅಲ್ಲದೆ, ತುರುವೆಕೆರೆ ಬಂದ್‌ಗೆ ಕರೆ ನೀಡಲಾಗಿದೆ ಎಂದರು.

ಡಾ.ಜಿ.ಪರಮೇಶ್ವರ್‌ ಅವರ ಮನೆ ಮೇಲೆ ಐಟಿ ದಾಳಿ ನಡೆಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಪರಮೇಶ್ವರ್‌ ಅವರ ರಾಜಕೀಯ ಜೀವನವು ಶುದ್ಧ ಹಸ್ತದಿಂದ ಕೂಡಿದೆ. ಆದರೆ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸಲಾರದ ಕೇಂದ್ರ ಬಿಜೆಪಿಯ ನಾಯಕರು ಐಟಿ ದಾಳಿ ನಡೆಸಿ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ.
-ನಗುತಾ ರಂಗನಾಥ್‌, ರಾಜ್ಯಾಧ್ಯಕ್ಷ, ಅಖೀಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ ಯುವಸೈನ್ಯ

ಪರಂ ಏಕಾಏಕಿ ಐದು ಸಾವಿರ ಕೋಟಿ ಒಡೆಯರಾಗಿಲ್ಲ
ಮೈಸೂರು: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿ ಎಲ್ಲಾ ತನಿಖಾ ಸಂಸ್ಥೆಗಳನ್ನೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ. ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅವರು, ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದರು. ಬಳಿಕ ಡಾ.ಜಿ.ಪರಮೇಶ್ವರ್‌ ಮನೆ ಮೇಲೆ ನಡೆದ ಆದಾಯ ತೆರಿಗೆ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಪರಮೇಶ್ವರ್‌ ದಿಢೀರೆಂದು ನಿನ್ನೆ ಮೊನ್ನೆ 5 ಸಾವಿರ ಕೋಟಿ ರೂ.ಆಸ್ತಿಗೆ ಒಡೆಯರಾಗಿಲ್ಲ.

ಅವರ ತಂದೆ ಮೆಡಿಕಲ್‌ ಕಾಲೇಜು ಸ್ಥಾಪಿಸಿ ಬೆಳೆಸಿದ್ದಾರೆ. 50 ವರ್ಷದ ಹಿಂದೆಯೇ ಈ ಎಲ್ಲಾ ಆಸ್ತಿಗಳನ್ನೂ ಅವರು ಮಾಡಿದ್ದರು. ಹೊಸ ಪ್ರವೇಶಾತಿಯಲ್ಲಿ ಒಂದಷ್ಟು ವ್ಯತ್ಯಾಸಗಳಾಗಿರಬ ಹುದೇನೋ, ಹಾಗೆಂದು ಐಟಿ ದಾಳಿ ಮಾಡುವುದಾದರೆ ಬಿಜೆಪಿಯಲ್ಲಿ ಇರುವವರೆಲ್ಲ ಪ್ರಾಮಾಣಿಕರಾ? ಅವರಲ್ಲಿ ತಪ್ಪು ಮಾಡಿದವರೇ ಇಲ್ಲವೇ ಎಂದು ಪ್ರಶ್ನಿಸಿದರು. ತಮ್ಮ ಎದುರಾಳಿಗಳನ್ನು ಮಣಿಸಲು ಮೋದಿ ಸರ್ಕಾರ ಎಲ್ಲಾ ತನಿಖಾ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ವಿಧಾನಮಂಡಲ ಅಧಿವೇಶನಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧಿಸಿರುವುದು ಈ ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರ. ಈ ಬಗ್ಗೆ ಮಾಧ್ಯಮಗಳ ಪರವಾಗಿ ಸ್ಪೀಕರ್‌ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಕುಮಾರಸ್ವಾಮಿ ಸಿಎಂ ಆಗಲೆಂದು ಕಾಂಗ್ರೆಸ್‌ನವರೇ ಬೇಡಿಕೊಂಡಿದ್ರು
ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್‌ನವರೇ ಬೇಡಿಕೊಂಡಿದ್ರು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಕೊಡಿ ಎಂದು ನಾನೇನು ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರೇ ನನ್ನ ಮನೆಗೆ ಬಂದು ಕೈಹಿಡಿದು ಸರ್ಕಾರ ರಚನೆ ಮಾಡೋಣ ಎಂದು ಬೇಡಿಕೊಂಡರು. ಆಗಲೂ ನಾನು ನಮಗೆ ಅಧಿಕಾರ ಬೇಡ, ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಆದರೂ ನನ್ನ ಕೈಹಿಡಿದುಕೊಂಡು ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕೆಂದು ಒಪ್ಪಿಸಿದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next