Advertisement

ಐಎಸ್‌ಡಿ, ಗುಪ್ತಚರ ದಳ ನಿಷ್ಕ್ರಿಯ?

11:10 PM Oct 15, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ರಾಜ್ಯ ಗುಪ್ತಚರ ವಿಭಾಗ ಅಡಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ನಿಗ್ರಹ ವಿಭಾಗ ನಿಷ್ಕ್ರಿಯಗೊಂಡಿವೆಯೇ? ಅಥವಾ ಬೆಂಗಳೂರಿನಲ್ಲಿ ಈ ಹಿಂದೆಯೇ ರಚನೆಯಾಗಿದ್ದ ಎಟಿಸಿ ಅಥವಾ ರಾಜ್ಯ ವ್ಯಾಪ್ತಿಯ ಐಎಸ್‌ಡಿ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ಇಲ್ಲವೇ?

Advertisement

ಬೆಂಗಳೂರಿಗೆಂದೇ 2005-06ರಲ್ಲಿ ರಚನೆಯಾಗಿದ್ದ ಭಯೋತ್ಪಾದನಾ ನಿಗ್ರಹ ವಿಭಾಗ(ಎಟಿಸಿ) ಇದೀಗ ಸಂಪೂರ್ಣ ನಿಷ್ಕ್ರಿಯಗೊಂಡಿದೆ. 2015 ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಈ ತಂಡ ವಿಧ್ವಂಸಕ ಕೃತ್ಯ ಎಸಗಿದ್ದ ಹತ್ತಾರು ಮಂದಿ ಉಗ್ರರನ್ನು ಬಂಧಿಸಿತ್ತು. ಆದರೆ, ಇದೀಗ ಮತ್ತೆ ಬೆಂಗಳೂರಿಗಾಗಿ ಪ್ರತ್ಯೇಕ ಎಟಿಎಸ್‌ ರಚನೆ ಮಾಡುತ್ತಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮುಖ್ಯಸ್ಥರು ಬೆಂಗಳೂರು ಸುತ್ತಮುತ್ತಲ ಪ್ರದೇಶಗಳೇ ಜೆಎಂಬಿ ಉಗ್ರರ ಅಡಗುತಾಣಗಳಾಗಿದ್ದವು ಎಂಬ ಸ್ಫೋಟಕ ಹೇಳಿಕೆ ಬೆನ್ನಲ್ಲೇ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಪ್ರತ್ಯೇಕವಾಗಿ ಎಟಿಎಸ್‌(ಭಯೋತ್ಪಾದನೆ ನಿಗ್ರಹ ದಳ) ರಚನೆ ಮಾಡಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲದೆ, ಇದು ರಾಜ್ಯದಲ್ಲಿರುವ ಐಎಸ್‌ಡಿ ಮತ್ತು ಎಟಿಎಸ್‌ನ ಕಾರ್ಯವೈಖರಿ ಬಗ್ಗೆಯೇ ಪ್ರಶ್ನಿಸುವಂತಿದೆ.

ಹಾಗಾದರೆ, ಉಗ್ರ ಸಂಘಟನೆಗಳ ಮೇಲೆ ನಿಗಾವಹಿಸಲು ರಚನೆ ಮಾಡಲಾದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ), ರಾಜ್ಯ ಗುಪ್ತಚರ ವಿಭಾಗ ಮತ್ತು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ನಿಗ್ರಹ ವಿಭಾಗದ ಅಧಿಕಾರಿಗಳು ಶಂಕಿತ ವಕ್ತಿಗಳ ಪತ್ತೆ ಹಚ್ಚಲು ಸಂಪೂರ್ಣವಾಗಿ ವಿಫ‌ಲವಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಎರಡು ದಶಕಗಳ ಹಿಂದೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ನಡೆದ ಭಯೋತ್ಪಾದಕ ಕೃತ್ಯಗಳ ಸಂಬಂಧ ನಗರ ಪೊಲೀಸ್‌ ಆಯುಕ್ತರಾಗಿದ್ದ ಅಜಯ್‌ ಕುಮಾರ್‌ ಸಿಂಗ್‌ 2005-06ನೇ ಸಾಲಿನಲ್ಲಿ ಉಗ್ರರ ಹುಟ್ಟಡಗಿಸಲು ಭಯೋತ್ಪಾದನಾ ನಿಗ್ರಹ ವಿಭಾಗ(ಎಟಿಸಿ) ರಚನೆ ಮಾಡಿದ್ದರು. ಅದಕ್ಕೆ ಹಿರಿಯ ಪೊಲೀಸ್‌ ಅಧಿಕಾರಿ ಜಿತೇಂದ್ರನಾಥ್‌ ಸೇರಿ ಹಲವು ನುರಿತ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

Advertisement

2008-09ರಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಆರ್‌.ಶ್ರೀಕುಮಾರ್‌ ಅವರು ಆಂತರಿಕಾ ಭದ್ರತಾ ವಿಭಾಗ ರಚನೆ ಮಾಡಿದ್ದರು. ರಾಜ್ಯದ ಏಳು ವಲಯಗಳಲ್ಲಿರುವ ಐಜಿಪಿಗಳ ಅಡಿಯಲ್ಲಿಯೂ ಪ್ರತ್ಯೇಕ ತಂಡ ಇದ್ದು, ಪ್ರತಿ ಜಿಲ್ಲೆಯಲ್ಲಿಯೂ ಒಬ್ಬ ಐಎಸ್‌ಡಿ ಅಧಿಕಾರಿ ನೇಮಿಸಲಾಗಿತ್ತು. ಐಎಸ್‌ಡಿ ಅಧಿಕಾರಿಗಳು ರಾಜ್ಯ ಗುಪ್ತಚರ ವಿಭಾಗ, ಎನ್‌ಐಎ, ಕೇಂದ್ರ ಗುಪ್ತಚರ ದಳ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುವ ವ್ಯಕ್ತಿಗಳು ಅಥವಾ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ಸದಸ್ಯರ ಮೇಲೆ ನಿಗಾವಹಿಸಬೇಕು. ಜತೆಗೆ ರೆಡ್‌ಜೋನ್‌ (ಸರ್ಕಾರಿ ಸ್ವಾಮ್ಯದ ಕಟ್ಟಡಗಳು) ಮತ್ತು ಯಲ್ಲೋ ಜೋನ್‌(ಖಾಸಗಿ ಸ್ವಾಮ್ಯದ ಆಸ್ತಿ-ಪಾಸ್ತಿಗಳ)ಗಳ ಮೇಲೆ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಲಾಗಿತ್ತು.

ವಿಫ‌ಲವಾದ ತನಿಖಾ ತಂಡಗಳು: ಕಳೆದ ಐದಾರು ವರ್ಷದಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅವಿತಿದ್ದ ಸುಮಾರು 20ಕ್ಕೂ ಅಧಿಕ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ಮತ್ತು ಆಂಧ್ರಪ್ರದೇಶದ ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದರು. ಆದರೆ, ಅದುವರೆಗೂ ಉಗ್ರ ಸಂಘಟನೆಗಳ ಸದಸ್ಯರು ರಾಜ್ಯದಲ್ಲಿ ಸಕ್ರಿಯವಾಗಿದ್ದರು ಎಂಬ ಮಾಹಿತಿ ಐಎಸ್‌ಡಿ ಅಥವಾ ರಾಜ್ಯದ ಎಟಿಎಸ್‌ಗೆ ಇರಲಿಲ್ಲ. ಅಷ್ಟೇ ಅಲ್ಲದೆ, 2018 ಮತ್ತು 2019ರಲ್ಲಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಎನ್‌ಐಎ ಯಿಂದ ಬಂಧನಕ್ಕೊಳಗಾದ ಜೆಎಂಬಿ ಸಂಘಟನೆ ಉಗ್ರರ ಬಗ್ಗೆಯೂ ಮಾಹಿತಿ ಇರಲಿಲ್ಲ.

ಸಮನ್ವಯ ಕೊರತೆಯೇ ವೈಫ‌ಲ್ಯಕ್ಕೆ ಕಾರಣ: ಉಗ್ರರ ಮೇಲೆ ನಿಗಾವಹಿಸಬೇಕಾದ ಐಎಸ್‌ಡಿ ಮತ್ತು ರಾಜ್ಯ ಗುಪ್ತಚರ ದಳದಲ್ಲಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಕೇಂದ್ರದ ತನಿಖಾ ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿಲ್ಲದಿರುವುದು, ಅಲ್ಲದೆ, ಪರಸ್ಪರ ಸಮನ್ವಯ ಕೊರತೆಯೇ ಕಾರ್ಯವೈಖರಿಯಲ್ಲಿ ವಿಫ‌ಲವಾಗಲು ಕಾರಣ ಎನ್ನಲಾಗಿದೆ.

ಮೂಲಗಳ ಪ್ರಕಾರ ರಾಜ್ಯ ಗುಪ್ತಚರ ದಳದಲ್ಲಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು. ಐಎಸ್‌ಡಿ ಅಧಿಕಾರಿಗಳು ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಆದರೆ, ಇದ್ಯಾವುದನ್ನೂ ತನಿಖಾ ಸಂಸ್ಥೆಗಳು ಮಾಡುತ್ತಿಲ್ಲ ಎನ್ನಲಾಗಿದೆ. ಅಷ್ಟಲ್ಲದೆ, ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ವಿಧ್ವಂಸಕ ಕೃತ್ಯಗಳಲ್ಲಿ ಬಂಧನಕ್ಕೊಳಗಾದ ಶಂಕಿತರ ಪ್ರಸ್ತುತ ಚಟುವಟಿಕೆಗಳೇನು? ಅವರ ಸಂಘಟನೆ ಸದಸ್ಯರು ಎಲ್ಲಿದ್ದಾರೆ ಎಂಬ ಮಾಹಿತಿಯೂ ಐಎಸ್‌ಡಿ ಬಳಿ ಇದ್ದಂತಿಲ್ಲ ಎಂದು ಮೂಲಗಳು ತಿಳಿಸಿವೆ.

ನನ್ನ ಅವಧಿಯಲ್ಲಿ ಐಎಸ್‌ಡಿ ರಚನೆ ಮಾಡಲಾಗಿತ್ತು. ಕೇಂದ್ರ ತನಿಖಾ ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿದ್ದರೆ ರಾಜ್ಯದಲ್ಲಿರುವ ಶಂಕಿತರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ, ತಾಂತ್ರಿಕವಾಗಿಯೂ ಸದೃಢವಾಗಬೇಕು.
-ಆರ್‌.ಶ್ರೀಕುಮಾರ್‌, ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು

ಹೆಚ್ಚಾಗುತ್ತಿರುವ ಉಗ್ರರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಎಟಿಎಸ್‌ ರಚನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮರ್ಪಕವಾಗಿ ಕೆಲಸ ಮಾಡಿದರೆ ನಗರದಲ್ಲಿ ಉಗ್ರರ ಅಕ್ರಮ ಚಟುವಟಿಕೆ ಮಟ್ಟ ಹಾಕಬಹುದು.
-ಜಿತೇಂದ್ರನಾಥ್‌, ಎಟಿಸಿ ನಿವೃತ್ತ ಅಧಿಕಾರಿ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next