Advertisement

ತನಿಖಾ ಸಂಸ್ಥೆ ದುರ್ಬಳಕೆ: ಕಾಂಗ್ರೆಸ್‌ ನಾಯಕರ ಆರೋಪ

10:21 PM Sep 06, 2019 | Team Udayavani |

ಚಿಕ್ಕಬಳ್ಳಾಪುರ: ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಶೀಘ್ರ ಬಂಧನ ಮುಕ್ತರಾಗಬೇಕೆಂದು ಪ್ರಾರ್ಥಿಸಿ ಕಾಂಗ್ರೆಸ್‌ ನಾಯಕರು ಹಮ್ಮಿಕೊಂಡಿರುವ ಟೆಂಪಲ್‌ ರನ್‌ ಮುಂದುವರಿದಿದ್ದು, ದಿನಕ್ಕೊಂದು ದೇವಾಲಯ, ದರ್ಗಾಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

Advertisement

ಗುರುವಾರವಷ್ಟೇ ಹಾರೋಬಂಡೆಯ ಸಮೀಪ ಇರುವ ಶ್ರೀ ಶಿರಡಿ ಸಾಯಿಬಾಬಾರ ದೇವಾಲಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಎಂಜಿ ರಸ್ತೆಯಲ್ಲಿರುವ ಮಿಸ್ಕಿನ್‌ ಷಾ ಸೈಲಾನಿ ದರ್ಗಾದಲ್ಲಿ ಡಿ.ಕೆ.ಶಿವಕುಮಾರ್‌ ಪರವಾಗಿ ಕಾಂಗ್ರೆಸ್‌ ಮುಖಂಡರು ಮತ್ತು ಅಲ್ಪಸಂಖ್ಯಾತ ಮುಖಂಡರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌, ಡಿ.ಕೆ. ಶಿವಕುಮಾರ್‌ ಮೇಲೆ ಇ.ಡಿ. ವಿಚಾರಣೆ ಎಲ್ಲವೂ ಕೂಡ ರಾಜಕೀಯ ಪ್ರೇರಿತ. ರಾಜಕೀಯವಾಗಿ ವೇಗವಾಗಿ ಬೆಳೆಯುತ್ತಿದ್ದ ಅವರ ವರ್ಚಸ್ಸಿಗೆ ಧಕ್ಕೆ ತರಲು ದ್ವೇಷದ ಕ್ರಮಗಳು ಆಗಿವೆ ಎಂದು ಕಿಡಿಕಾರಿದರು.

ರಾಜಕೀಯ ಷಡ್ಯಂತ್ರ: ಡಿಕೆಶಿ ಅವರೇನು ದೇಶ ಬಿಟ್ಟು ಓಡಿ ಹೋಗಲು ತಯಾರಿ ನಡೆಸಿರಲಿಲ್ಲ. ಅವರೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ. ಯಾವುದೇ ಸಂದರ್ಭದಲ್ಲಿಯೂ ಪಲಾಯನ ಮಾಡಿದ ಇತಿಹಾಸವೇ ಇಲ್ಲ. ಸಮಸ್ಯೆಯ ವಿರುದ್ಧ ಸಂಘರ್ಷ ಮಾಡುವುದು ಗೊತ್ತೇ ಹೊರತು ಸವಾಲುಗಳೊಂದಿಗೆ ರಾಜಿಯಾದವರಲ್ಲ. ದಿಢೀರನೇ ತನಿಖೆಗೆ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪವೊಡ್ಡಿ ಅವರ ಬಂಧನ ಮಾಡಿರುವುದು ರಾಜಕೀಯ ಷಡ್ಯಂತ್ರ ಎಂದರು.

ಸರ್ವಾಧಿಕಾರಿ ಧೋರಣೆ: ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್‌ ಘಟಕದ ಕಾರ್ಯದರ್ಶಿ ಅಮಾನುಲ್ಲಾ ಮಾತನಾಡಿ, ಕಾನೂನುಗಳನ್ನು ದೇಶದ ಅಭ್ಯುದಯ ಹಾಗೂ ಪ್ರಗತಿಗಾಗಿ ಬಳಸುವುದನ್ನು ಬಿಟ್ಟು ವಿರೋಧಿಗಳನ್ನು ಬಂಧಿಸುವುದು, ಷಡ್ಯಂತ್ರದ ಮುಖಾಂತರ ತೇಜೋವಧೆ ಮಾಡುವುದು ಜನತಂತ್ರ ವ್ಯವಸ್ಥೆಯನ್ನೇ ದಿವಾಳಿಗೆ ತಂದು ಸರ್ವಾಧಿಕಾರವನ್ನು ಸ್ಥಾಪಿಸುವುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.

Advertisement

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್‌ ಕಾರ್ಯದರ್ಶಿ ನಾರಾಯಣಸ್ವಾಮಿ, ದರ್ಗಾ ಸಮಿತಿ ಅಧ್ಯಕ್ಷ ಇಕ್ಬಾಲ್‌, ಮುಖಂಡರಾದ ವಕೀಲ ಮಹಮ್ಮದ್‌ ದಾವೂದ್‌, ಮಂಚನಬಲೆ ಇಸ್ಮಾಯಿಲ್, ರಾಜಶೇಖರ್‌, ಜಯರಾಂ, ಲಕ್ಷ್ಮಣ್, ಮಿಥುನ್‌, ಕೃಷ್ಣಪ್ಪ, ಬಾಬಾಜಾನ್‌, ದೀಪು, ಮುದಾಸಿರ್‌, ಹಮೀಮ್, ಅನಿಲ್, ಷಾ ಸಾಬ್‌ ಉಪಸ್ಥಿತರಿದ್ದರು.

ಕೇಂದ್ರದ ಬಿಜೆಪಿ ಸರ್ಕಾರ ತನ್ನ ರಾಜಕೀಯ ಎದುರಾಳಿಗಳನ್ನು ನೇರವಾಗಿ ಎದುರಿಸಲಾಗದೇ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಾನೂನು ಪ್ರಕಾರ ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯಗಳು ಇವೆ. ಆದರೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಡಿ.ಕೆ.ಶಿವಕುಮಾರ್‌ರನ್ನು ವಿಚಾರಣೆ ನೆಪದಲ್ಲಿ ಬಂಧಿಸಿರುವುದು ಸರಿಯಾದ ಕ್ರಮವಲ್ಲ.
-ನಾರಾಯಣಸ್ವಾಮಿ, ಒಬಿಸಿ ಘಟಕದ ರಾಜ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next