Advertisement
ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸ್ಪಷ್ಟ ನಿರ್ಣಯಕ್ಕೆ ಬರಲಾಗಿದ್ದು, ಬಿಜೆಪಿ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಶಿಫಾರಸು ಮಾಡಿದ್ದ ಮೀಸಲಾತಿ ವರ್ಗೀಕರಣವನ್ನೇ ಅನುಷ್ಠಾನಕ್ಕೆ ತರುವಂತೆ ಸಿಎಂಗೆ ಆಗ್ರಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಮುಖವಾಗಿ ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೊಟ್ಟಿರುವ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ಬಿಜೆಪಿ ವಿರೋಧವಿಲ್ಲ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಲು ನಿರ್ಣಯ ಕೈಗೊಂಡಿದೆ. ವರದಿ ಮಂಡನೆಗೆ ಬಿಜೆಪಿ ವಿರೋಧವಿದೆ ಎನ್ನುವುದರ ಮೂಲಕ ಮೀಸಲಾತಿ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ ಎಂಬುದೂ ಸಭೆಯಲ್ಲಿ ಚರ್ಚೆಯಾಗಿದೆ.
Related Articles
Advertisement
ಗುರುವಾರ ಅಥವಾ ದಸರಾ ಬಳಿಕ ಸಿಎಂ ಭೇಟಿಒಳಮೀಸಲಾತಿ ಜಾರಿಗಾಗಿ ಸಂವಿಧಾನದ ತಿದ್ದುಪಡಿ, ಕೇಂದ್ರ ಸರಕಾರದ ಮೊರೆ ಹೋಗುವ ಆವಶ್ಯಕತೆ ಇಲ್ಲ. ಆಯಾ ರಾಜ್ಯ ಸರಕಾರಗಳಿಗೇ ನಿರ್ಧರಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ಮನವಿ ಕೊಟ್ಟು ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸುವ 2ನೇ ನಿರ್ಣಯವನ್ನು ಸಭೆಯಲ್ಲಿ ಕೈಗೊಂಡಿದೆ. ಇದಕ್ಕಾಗಿ ವಿಪಕ್ಷ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಇದಕ್ಕಾಗಿ ನಿಯೋಗ ರಚಿಸಿದ್ದು, ಅ.10ರ ಗುರುವಾರ ಅಥವಾ ದಸರಾ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರಕಾರ ತಿರಸ್ಕರಿಸಿದ್ದು, ಆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಸರಕಾರ ಕೈಗೊಂಡ ನಿರ್ಣಯ ಸೂಕ್ತವಾಗಿದ್ದು, ಅದನ್ನೇ ಜಾರಿಗೊಳಿಸುವಂತೆ ಒತ್ತಾಯಿಸಲು ನಿರ್ಣಯಿಸಿದೆ. ಒಳಮೀಸಲಿನ ಒಳಹೂರಣ
ಈ ಹಿಂದೆ ನ್ಯಾ| ಸದಾಶಿವ ಆಯೋಗ ನೀಡಿದ್ದ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಲು ಗೋವಿಂದ ಕಾರಜೋಳ, ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ಕೆಲ ಶಿಫಾರಸುಗಳನ್ನು ಸಂಪುಟ ಸಭೆಯ ಮುಂದಿಟ್ಟಿತ್ತು. ಸದಾಶಿವ ಆಯೋಗದ ಮೂಲ ವರದಿಯಲ್ಲಿ ಶೇ. 3ರಷ್ಟು ಮೀಸಲಾತಿ ಪಡೆಯುತ್ತಿದ್ದ ಸ್ಪೃಶ್ಯರನ್ನು (ಲಂಬಾಣಿ, ಬೋವಿ, ಕೊರಚ, ಕೊರಮ ಇತ್ಯಾದಿ) ಮೀಸಲಾತಿಯಿಂದಲೇ ಹೊರಗಿಡುವ ಶಿಫಾರಸು ಇತ್ತು. ಆದರೆ ಈ ವರದಿಯಲ್ಲಿದ್ದ ಉಪವರ್ಗವಾರು ದತ್ತಾಂಶವನ್ನು ಆಧಾರವಾಗಿ ಇಟ್ಟುಕೊಂಡು ಸ್ಪೃಶ್ಯರಿಗಿದ್ದ ಶೇ. 3ರಷ್ಟು ಒಳಮೀಸಲನ್ನು ಶೇ. 4.5ಕ್ಕೆ ಏರಿಸಲು ಉಪಸಮಿತಿ ಶಿಫಾರಸು ಮಾಡಿತ್ತು. ಅದೇ ರೀತಿ ಶೇ.5ರಷ್ಟಿದ್ದ ಬಲಗೈ ಸಮುದಾಯದ ಮೀಸಲನ್ನು ಶೇ. 5.5, ಎಡಗೈ ಸಮುದಾಯಕ್ಕೆ ಶೇ.6 ಹಾಗೂ ಇತರೆ (ಅಲೆಮಾರಿ, ಅರೆಅಲೆಮಾರಿ ಇತ್ಯಾದಿ) ಸಮುದಾಯಕ್ಕೆ ಶೇ.1ರಷ್ಟು ಸೇರಿ ಒಟ್ಟು ಶೇ. 15ರಿಂದ ಶೇ. 17ಕ್ಕೆ ಮೀಸಲಾತಿ ಹೆಚ್ಚಿಸಲು ಬಸವರಾಜ ಬೊಮ್ಮಾಯಿ ಸರಕಾರ ನಿರ್ಣಯ ಕೈಗೊಂಡಿತ್ತು. ಸ್ಪೃಶ್ಯರಿಗೆ ಮೀಸಲು ಹೆಚ್ಚಿಸಿದ್ದರಿಂದ ಕೆಲವರು ಅಸಮಾಧಾನಗೊಂಡರೆ, ಎಡಗೈ ಸಮುದಾಯಕ್ಕೆ ಹೆಚ್ಚಿಗೆ ಮೀಸಲಾತಿ ಕೊಟ್ಟಿದ್ದರಿಂದ ಬಲಗೈ ಸಮುದಾಯದ ಕಣ್ಣು ಕೆಂಪಾಗಿತ್ತು. ಇದರಿಂದ ಕೆಲ ದಲಿತ ಸಂಘಟನೆಗಳು ಈ ನಿರ್ಣಯದ ವಿರುದ್ಧ ತಿರುಗಿಬಿದ್ದರೆ, ಕೆಲ ಸಂಘಟನೆಗಳು ಪರ ನಿಂತವು. ಇನ್ನೂ ಹಲವು ಸಂಘಟನೆಗಳು ತಟಸ್ಥ ನೀತಿ ಅನುಸರಿಸಿದ್ದವು.
ಹಿಂದಿನ ಬೊಮ್ಮಾಯಿ ಸರಕಾರ ಕೇಂದ್ರಕ್ಕೆ ಮಾಡಿದ ಶಿಫಾರಸನ್ನು ರಾಜ್ಯದ ಕಾಂಗ್ರೆಸ್ ಸರಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ಶೀಘ್ರವೇ ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಒತ್ತಾಯಿಸಲಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ