Advertisement

ಉಡುಪಿ ಬಸ್‌ ನಿಲ್ದಾಣದಲ್ಲಿ ಹೊಂಡಗಳು: ಪ್ರಯಾಣಿಕರಿಗೆ ತೊಂದರೆ

02:40 AM Jun 20, 2018 | Team Udayavani |

ಉಡುಪಿ: ನಗರದ ಸರ್ವಿಸ್‌ ಬಸ್‌ ನಿಲ್ದಾಣ ಅಶುಚಿತ್ವದಿಂದ ಕೂಡಿದ್ದಲ್ಲದೆ ನಿಲ್ದಾಣದ ಒಳಭಾಗದಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿ ವ್ಯಾಪಾರಿಗಳು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

Advertisement

ಹೊಂಡಮಯ ನಿಲ್ದಾಣ!
ಬಸ್‌ ನಿಲ್ದಾಣ ಕಾಂಕ್ರೀಟ್‌ನಿಂದ ಕೂಡಿದ್ದು, ಇದಕ್ಕೆ ತಾಗಿಕೊಂಡು ಅಂಗಡಿ ಮುಂಗಟ್ಟುಗಳ ಎದುರಿನಲ್ಲಿ ಇಂಟರ್‌ ಲಾಕ್‌ ಅಳವಡಿಸಲಾಗಿದೆ. ಇಂಟರ್‌ಲಾಕ್‌ ಕುಸಿಯಲ್ಪಟ್ಟು ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿವೆ. ಹೊಂಡಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದೇ ಹೊಂಡಗಳಲ್ಲಿ ಕೆಲವೊಮ್ಮ ಡ್ರೈನೇಜ್‌ ಬ್ಲಾಕ್‌ ಆಗಿ ವಾಸನೆಯುಕ್ತ ನೀರು ನಿಲ್ಲುತ್ತದೆ. ಪ್ರಯಾಣಿಕರಿಗೆ ಬಸ್‌ ಏರಲೇಬೇಕಾದ ನೆಲೆಯಲ್ಲಿ ಮೂಗು ಮುಚ್ಚಿಕೊಂಡು ಏರಬೇಕು, ಜತೆಗೆ ಕೊಳಚೆ ನೀರಿನಲ್ಲಿ ಕಾಲಿಡಬೇಕಾದ ಪರಿಸ್ಥಿತಿ ಇದೆ. 

ರೋಗ ಹರಡುವ ಭೀತಿ


ನಗರಸಭೆಯಿಂದ ನಿರ್ಮಿಸಲ್ಪಟ್ಟ ಅಂಗಡಿಗಳ ಸ್ಲ್ಯಾಬ್‌ ನ ಮೇಲೆ ನೀರು ಸಂಗ್ರಹಗೊಂಡಿದ್ದು, ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ನಿಂತ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಸ್ಲ್ಯಾಬ್‌ ನಲ್ಲಿ ನಿಂತ ನೀರು ಹೊರಗೆ ಹೋಗಲು ಅಂಗಡಿಗಳ ಎದುರಿನಲ್ಲಿ ಪೈಪ್‌ ಗಳನ್ನು ಅಳವಡಿಸಿದ್ದರೂ, ಪೈಪ್‌ ಗಳಲ್ಲಿ ಪಾಚಿ ಕಟ್ಟಿಕೊಂಡು ಮುಚ್ಚಿಹೋಗಿದೆ. ಸ್ಲ್ಯಾಬ್‌ ನ ಮೇಲೆ ತುಂಡಾದ ಆಸನಗಳು, ಬಾಟಲಿಗಳು, ಗೋಣಿ ಚೀಲಗಳು, ಪ್ಲಾಸ್ಟಿಕ್‌ ಕವರ್‌ ಗಳು ಇತ್ಯಾದಿ ತ್ಯಾಜ್ಯಗಳು ಹರಡಿಕೊಂಡಿವೆ. 

ಸೋರುತಿಹುದು ಕಟ್ಟಡ
ನಗರಸಭೆಯಿಂದ ನಿರ್ಮಿಸಲ್ಪಟ್ಟ ಕಟ್ಟಡದಲ್ಲಿ ಸುಮಾರು 20ಕ್ಕೂ ಹೆಚ್ಚು ಹೊಟೇಲ್‌, ಅಂಗಡಿಗಳು ಕಾರ್ಯಾಚರಿಸುತ್ತಿವೆ. ಕೆಲವು ಅಂಗಡಿಗಳಲ್ಲಿ ನಿರಂತರ ಎರಡು  ದಿನ ಮಳೆ ಬಂದರೆ ಕಟ್ಟಡ ಸೋರಲಾರಂಬಿಸುತ್ತದೆ. ಈ ಬಗ್ಗೆ ಅಂಗಡಿ ಮಾಲಕರು ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕಟ್ಟಡದ ಗೋಡೆಗಳಲ್ಲಿ ಅಳವಡಿಸಲಾದ ವಿದ್ಯುತ್‌ ತಂತಿಗಳು ತೆರೆದುಕೊಂಡಿದ್ದು, ಆಕಸ್ಮಿಕವಾಗಿ ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹತ್ತು ವರ್ಷಗಳಲ್ಲಿ 2 ಬಾರಿ ಬಸ್‌ನಿಲ್ದಾಣಕ್ಕೆ ಬಣ್ಣ ಬಳಿಯಲಾಗಿದೆ ಹೊರತೂ ಇನ್ನಾವುದೇ ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲವೆಂದು ಅಂಗಡಿ ಮಾಲಕರು ದೂರುತ್ತಿದ್ದಾರೆ.

ಬಸ್‌ ಸಂಚಾರ – ಜನಸಂಚಾರಕ್ಕೂ ಒಂದೇ ಮಾರ್ಗ! 
ಪಾದಚಾರಿಗಳು, ಪ್ರಯಾಣಿಕರಿಗೆಂದೇ ಶೌಚಾಲಯದ ಬಳಿಯಲ್ಲಿ ಪ್ರತ್ಯೇಕವಾಗಿ ಮೆಟ್ಟಿಲುಗಳುಳ್ಳ ಮಾರ್ಗವಿದ್ದರೂ, ಬಸ್‌ಗಳು ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿಯೇ ಪ್ರಯಾಣಿಕರು ಸಂಚರಿಸುತ್ತಾರೆ. ಇದರಿಂದ ಬಸ್‌ ಚಾಲಕರು ಎದುರಿಗೆ ಬಂದವರನ್ನು ತಪ್ಪಿಸಲು ಹೋಗಿ ಬಸ್‌ ಹಿಂದಕ್ಕೆ ಚಲಿಸಿದ್ದೂ ಇದೆ. ನಿಲ್ದಾಣದೊಳಗೆ ಬಸ್‌ ಗಳು ಹಿಂದಕ್ಕೆ ಮುಂದಕ್ಕೆ ಚಲಿಸುವ ಸಂದರ್ಭ ಮೊಬೈಲ್‌ ನಲ್ಲಿ ಮಾತನಾಡುವವರಿಗೆ ಗೊತ್ತಾಗದೆ ಯಾರೋ ಬಂದು ಎಳೆದ ಬಳಿಕವೇ ಎಚ್ಚೆತ್ತುಕೊಂಡ ಘಟನೆಗಳೂ ನಡೆದಿವೆ.

Advertisement

ಅವೈಜ್ಞಾನಿಕ ಬಸ್‌ನಿಲ್ದಾಣ!
ನೆಲಮಟ್ಟದಿಂದ ಐದಾರು ಅಡಿ ಎತ್ತರದಲ್ಲಿರುವ ಬಸ್‌ನಿಲ್ದಾಣಕ್ಕೆ ಬರುವುದಕ್ಕೆ ಬಸ್‌ ಗಳು ವೇಗವಾಗಿ ಬರಬೇಕಾಗುತ್ತದೆ. ಬಸ್‌ಗಳು ವೇಗವಾಗಿ ಬರುವ ಸಂದರ್ಭ ಎದುರಿನಲ್ಲಿ (ನಿಲ್ದಾಣ ಒಳಗೆ) ಹಿರಿಯ ನಾಗರಿಕರು, ಮಕ್ಕಳು ಸಿಕ್ಕಿದರೆ ತಪ್ಪಿಸಿಕೊಳ್ಳುವುದು ಕಷ್ಟವಾಗಿದೆ. ಇದಕ್ಕೆ ಚಾಲಕರು ಹೊಣೆಗಾರರಲ್ಲದೇ ಇದ್ದರೂ ಅಪಾಯವಂತೂ ನಿಶ್ಚಿತ. ಈ ಹಿಂದೆ ಅದೆಷ್ಟೋ ಬಾರಿ ವೇಗವಾಗಿ ಬಂದ ಬಸ್‌ ನಿಂದ ಪ್ರಯಾ ಣಿಕರು ಕೆಳಗೆ ಬಿದ್ದ ಘಟನೆಗಳು ನಡೆದಿವೆ.

ಸುವ್ಯವಸ್ಥೆಗೆ ಶೀಘ್ರ ಕ್ರಮ
ಬಸ್‌ ನಿಲ್ದಾಣದ ಒಳಗಡೆ ಇಂಟರ್‌ಲಾಕ್‌ ಕುಸಿತದಿಂದಾದ ಹೊಂಡ ದುರಸ್ತಿ ಕಾರ್ಯ ಮತ್ತು ಡ್ರೈನೇಜ್‌ ನೀರು ನಿಲ್ಲುವುದಕ್ಕೆ ಶೀಘ್ರವಾಗಿ ಪರಿಹಾರ ಒದಗಿಸಲಾಗುವುದು. ಅಂಗಡಿಗಳ ಸ್ಲ್ಯಾಬ್‌ ನ ಮೇಲೆ ಸಂಗ್ರಹಗೊಂಡ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದಲ್ಲದೆ, ಸ್ಲ್ಯಾಬ್‌ ನ ಸಂಗ್ರಹಗೊಂಡ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುವುದು. ಕಟ್ಟಡ ಸೋರುತ್ತಿರುವ ಬಗ್ಗೆ ಪರಿಶೀಲಿಸಿ ಶೀಘ್ರವಾಗಿ ರಿಪೇರಿ ಕಾರ್ಯ ಕೈಗೊಳ್ಳಲಾಗುವುದು. ಬಸ್‌ ಮೇಲೇರಲು ಹರಸಾಹಸ ಪಡುತ್ತಿರುವ ಬಗ್ಗೆ ಮತ್ತು ಈ ಭಾಗ ಅಪಾಯದಿಂದ ಕೂಡಿದೆ ಎನ್ನುವ ಬಗ್ಗೆ ಈ ಹಿಂದೆ ದೂರುಗಳು ಬಂದಿವೆ. ಈ ಬಗ್ಗೆ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಲಾಗಿತ್ತು. ಆದರೆ ಬಸ್‌ ಗಳು ನಿಲ್ದಾಣದೊಳಗೆ ಬರಲು ಬದಲಿ ಮಾರ್ಗವಿಲ್ಲದ ನೆಲೆಯಲ್ಲಿ ಅದೇ ಮಾರ್ಗದಲ್ಲಿ ಬರುತ್ತಿವೆ. ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
– ಜಿ.ಸಿ. ಜನಾರ್ದನ, ಪೌರಾಯುಕ್ತರು, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next