Advertisement

UV Fusion: “ದ್ವಿ’ ಪದದ ದ್ವೀಪದ ಒಳಗೆ..!

01:09 PM Dec 16, 2023 | Team Udayavani |

ದ್ವಿ , ದ್ವಿತೀಯ, ದ್ವಿಗುಣ, ದುಪ್ಪಟ್ಟು, ಜತೆ, ಜೋಡಿ ಇವುಗಳೆಲ್ಲವುಗಳಲ್ಲಿ ಸಾಮಾನ್ಯವಾಗಿರುವಂತಹದ್ದು “ದ್ವಿ’ ಅಥವಾ “ಎರಡು’ ಎಂಬ ಅರ್ಥ. “ಎರಡು’ ಎಂಬಂತದ್ದು ದಿನನಿತ್ಯದ ಬಳಕೆಯ ಪದವಾದರೂ ಇದರ ಮಹತ್ವ ಅದ್ಭುತವಾದದ್ದು, ಅದ್ವಿತೀಯವಾದದ್ದು.

Advertisement

ಒಂದೊಮ್ಮೆ ಯೋಚಿಸಿದರೆ ಇಡೀ ಜೀವಜಗತ್ತಿನ ಸಹಸ್ರಾರು ಜೀವರಾಶಿಗಳ ಉಗಮವು ಎರಡು ಅಣುಗಳ ಸಂಯೋಗದಿಂದಾಗಿದ್ದರೆ, ಅವುಗಳ ಜೀವನವು ಜನನ ಹಾಗೂ ಮರಣ ಎಂಬ “ಎರಡು’ ಸ್ಥಿತಿಗಳ ನಡುವೆ ನಡೆಯುತ್ತದೆ. ಪ್ರಾಣಿಗಳಲ್ಲಿಯೇ ಆಗಿರಲಿ, ಪಕ್ಷಿಗಳಲ್ಲಿಯೇ ಆಗಿರಲಿ ಅಥವಾ ಮನುಷ್ಯನಲ್ಲಿಯೇ ಆಗಿರಲಿ, ಹುಟ್ಟು-ಸಾವು ಎರಡೂ ಅನಿರೀಕ್ಷಿತವೇ. ಇದರ ನಡುವೆ ಇರುವ ಜೀವನವು ತನ್ನನ್ನೂ, ತನ್ನವರನ್ನೂ ಏಳಿಗೆಯತ್ತ ಕೊಂಡೊಯ್ಯಲು ನೀಡಿದ ಕಾಲಾವಕಾಶವಾಗಿದೆ.

ಪ್ರತೀ ಜೀವಿಯ ಜೀವನವು ಹುಟ್ಟು, ಬೆಳವಣಿಗೆ, ಸಂತಾನೋತ್ಪತ್ತಿ ಹಾಗೂ ಸಾವು ಎಂಬ ನಾಲ್ಕು ಹಂತಗಳಲ್ಲಿ ಸಾಗಿದರೂ ಒಂದಷ್ಟು ಜೀವಿಗಳು ಈ ನಡುವೆ ಭಾವನೆಗಳ ಮೂಲಕ ವ್ಯವಹರಿಸಿ ಪ್ರತಿ ಕ್ಷಣವನ್ನು ಅನುಭವಿಸಿ ಜೀವಿಸುತ್ತವೆ. ಅಂತಹವುಗಳಲ್ಲಿ ಮಾನವನೂ ಕೂಡ ಒಬ್ಬ.

ಮನುಷ್ಯನು ತನಗಾದ ಭಾವನೆಗಳನ್ನು ನವರಸಗಳಲ್ಲಿ ವ್ಯಕ್ತಪಡಿಸಿ “ಮಾತು’ ಎಂಬ ಸೇತುಬಂಧದ ಮೂಲಕ ತನ್ನವರಿಗೆ ಅರ್ಥೈಸುತ್ತಾನೆ. ಕೇಳುವ ಕಿವಿಗಳು ಹಿತವಚನಗಳನ್ನು ಬಯಸಿದರೆ, ಇಂಪಾದ ನುಡಿಗಳನ್ನಾಡುವ ರಸನ ಆಲಿಸುವ ಶ್ರವಣಗಳನ್ನು ಬಯಸುತ್ತದೆ.

ಸ್ನೇಹ ಎಂಬ ಅದ್ಭುತ ಲೋಕದ ಉಗಮವಾಗುವುದೇ ಎರಡು ಆತ್ಮಗಳ ಮಿಲನದಿಂದ. ಇದು ಸಾಧ್ಯವಾಗುವುದು ಇಬ್ಬರ ಅಭಿರುಚಿಗಳು, ಹವ್ಯಾಸಗಳು ಹೊಂದಾಣಿಕೆಯಾದಾಗ. ಈ ಅಭಿರುಚಿಗಳೇ ಮುಂದೆ ಸ್ನೇಹದ ಸೇತುವೆಗೆ ಭದ್ರ ಅಡಿಪಾಯವಾಗುತ್ತದೆ. ಜೀವನದಲ್ಲಿ ತಾನಂದುಕೊಂಡಿದ್ದನ್ನು ಸಾಧಿಸಲು ಜತೆಗಿರುವ ಜತೆ’ಯ ಸಕಾರಾತ್ಮಕ ನುಡಿಗಳೇ ಮೆಟ್ಟಿಲುಗಳಾಗುತ್ತವೆ. ಹೀಗಿಯೇ ಪ್ರತಿ ಸ್ನೇಹದ ಗುಂಪು ಎರಡರಿಂದ ಪ್ರಾರಂಭವಾಗಿ ಹನ್ನೆರಡಾಗುವುದು.

Advertisement

ಬಾಲ್ಯದಿಂದಲೇ ನಾವೆಲ್ಲರೂ ಅಂತಹ ಒಬ್ಬ ಸ್ನೇಹಬಂಧುವನ್ನು ನಿರೀಕ್ಷಿಸಿಯೇ ಇರುತ್ತೇವೆ. ತನಗಾದ ಸಂತಸ-ಬೇಸರ, ನಗು-ಅಳು ಎಲ್ಲವನ್ನು ಹಂಚಿಕೊಳ್ಳಲು ಆತ ಅಥವಾ ಆಕೆಯ ಉಪಸ್ಥಿತಿಯನ್ನು ಅಪೇಕ್ಷಿಸುತ್ತೇವೆ. ಒಂದೊಮ್ಮೆ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ “ಜೊತೆ’ಯ ಅನುಪಸ್ಥಿತಿ ಉಂಟಾದಲ್ಲಿ ಆ ಭಾವನೆಗಳು ಮನಸ್ಸೆಂಬ ಗೂಡಿನ ಮೂಲೆಯನ್ನು ಸೇರಿ ಅದೇನೊ ಕಳೆದುಕೊಂಡ ಭಾವನೆ ಉಂಟಾಗುತ್ತದೆ.

ಅಂತಹ ಭಾವನೆಗಳು ಕಂಬನಿಗಳಲ್ಲಿ ವ್ಯಕ್ತವಾದಾಗ ಮನಸ್ಸು ಹಾಗೂ ಹೃದಯ ಬಯಸುವುದು ಕಂಬನಿಗಳನ್ನೊರಿಸುವ ಕೈಗಳನ್ನು, ಅನುಭವವನ್ನು ಕೇಳಿಸಿಕೊಳ್ಳುವ ಕಿವಿಗಳನ್ನು, ಸಂತೈಸುವ ಹಿತವಚನಗಳನ್ನೇ ವಿನಃ ಭಾವನಾರಹಿತ ಉಪಕರಣಗಳನ್ನಲ್ಲ, ಕೈಗಳು ನೀಡುವ ಹಣವನ್ನಲ್ಲ.

ಅಹಂ, ಅಸೂಯೆ, ಅತಿಯಾಸೆಯನ್ನು ಬಿಟ್ಟು ಜೊತೆಗಿರುವ ‘ಜೊತೆ’ಯ ಮುಖದಲ್ಲಿ ಸಂತಸವನ್ನು ಬಯಸಿದರೆ ಅದೇ ನಾವು ಸ್ನೇಹಕ್ಕೆ ನೀಡುವ ಗೌರವ. ನಿಮಗಾಗಿ ಏನು ಮಾಡಲೂ ಸಿದ್ಧವಿರುವ ಸ್ನೇಹಬಂಧು ನಿಮ್ಮಿಂದ ನಿರೀಕ್ಷಿಸುವುದು ವಸ್ತುರೂಪದ ಪ್ರತಿಫ‌ಲನ್ನು ಅಲ್ಲ. ಬದಲಿಗೆ ಬೆಲೆ ಕಟ್ಟಲಾಗದ ನಿಮ್ಮ ಸಮಯವನ್ನು.

ಹೌದು, ಈ ಭೂಮಿಯಲ್ಲಿ ಎಲ್ಲಾ ವಸ್ತುಗಳಿಗೆ ಬೆಲೆ ಕಟ್ಟಬಹುದು. ಆದರೆ, ಬೆಲೆ ಕಟ್ಟಲಾಗದಿರುವುದು ಕಣ್ಣಿಗೆ ಕಾಣದ, ಹೃದಯ ಶ್ರೀಮಂತಿಕೆಗೆ ಮಾತ್ರ ಕಾಣುವ “ಭಾವನೆ’ ಗಳಿಗೆ! ನಿಮ್ಮ ಹಿತೈಷಿ ಭಾವನೆಗಳಿಗೆ ಬೆಲೆ ಕೊಡುತ್ತಾನೆಯೇ ಹೊರತು ಬೆಲೆ ಕಟ್ಟಲಾರನು. ಹೀಗಾಗಿ ಜತೆಯ ಆಯ್ಕೆ ಮಾಡುವಾಗ ಜೋಪಾನ, ಸಿಕ್ಕ ಜತೆಯನ್ನು ಸದಾ ಕಾಲ ಮಾಡಿ ಜೋಪಾನ!!!

-ಮಧುರ

ಕಾಂಚೋಡು

Advertisement

Udayavani is now on Telegram. Click here to join our channel and stay updated with the latest news.

Next