Advertisement

ಎಂದೆಂದಿಗೂ ಇಂದಿರಾ 

03:50 AM Apr 02, 2017 | |

‘ಇಂದಿರಾ ಗಾಂಧಿ’ ಎಂಬ ಹೆಸರು ಮಾತ್ರ ಒಂದೇ ಕ್ಷಣದಲ್ಲಿ ಬೆರಗು, ಸಂತೋಷ ಕುತೂಹಲ, ಗರ್ವ, ಹೆಮ್ಮೆ, ಬೇಸರವನ್ನೆಲ್ಲ ಏಕಕಾಲದಲ್ಲಿ ಹುಟ್ಟಿಸಿಬಿಡುತ್ತದೆ. ಪತಿಯ ಸಾವು, ತಂದೆಯೊಂದಿಗಿನ ಒಡನಾಟ, ಅನಿರೀಕ್ಷಿತವಾಗಿ ಹೆಗಲೇರಿದ ಪ್ರಧಾನಿ ಹುದ್ದೆ, ತುರ್ತುಪರಿಸ್ಥಿತಿಯೆಂಬ ಕರಾಳ ಅಧ್ಯಾಯ, ಸಿಕ್ಖರೊಂದಿಗಿನ ಸಂಘರ್ಷ, ಪುತ್ರ ಸಂಜಯ್‌ ಗಾಂಧಿಯ ಮರಣ, ಒಂದೆಡೆ ಸರ್ವಾಧಿಕಾರಿ ಎಂಬ ದೂಷಣೆಯಾದರೆ ಇನ್ನೊಂದೆಡೆ ಮಾತೃಸ್ವರೂಪಿಯೆಂಬ ಶ್ಲಾಘನೆ… ಹೀಗೆ  ಬದುಕಿದ್ದಾಗಲೂ, ಮರಣಾನಂತರವೂ ಸಾಕಷ್ಟು ಆರೋಪವನ್ನು, ವಿವಾದವನ್ನು, ದುರಂತವನ್ನು ಎದುರಿಸಿ ‘ಭಾರತದ ಪ್ರಧಾನಮಂತ್ರಿಗಳು’ ಎಂಬ ಪಟ್ಟಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವುದಕ್ಕೆ ಅವರ ಸ್ವಭಾವವೂ, ಅನೇಕ ನಿರ್ಧಾರಗಳೂ ಕಾರಣವೆನ್ನಬಹುದು. ಸರಿಯಾಗಿ ಶತಮಾನದ ಹಿಂದೆ ಸತಿಸಹಗಮನ ಪದ್ಧತಿಯಂಥ ವಿಚಿತ್ರಗಳು ಇದ್ದ ನೆಲದಲ್ಲಿ ಹೆಣ್ಣೊಬ್ಬಳು ಇಡೀ ದೇಶವನ್ನು ಸಂಭಾಳಿಸುವ ಮಟ್ಟಕ್ಕೆ ಬೆಳೆದದ್ದು ಸಾಧಾರಣ ಕಾರ್ಯವೇನಲ್ಲ. ಆದರೆ ಇಷ್ಟೆಲ್ಲ ದುರಂತ ಕಂಡವರ ಅಂತ್ಯವೂ ದುರಂತವಾಗಿದ್ದು ವಿಧಿಲಿಖೀತ. ಆ ಕಾಲಘಟ್ಟದಲ್ಲಾದ ರಾಜಕೀಯ ಪಲ್ಲಟಗಳು, ಸಾಮಾಜಿಕ ಆಗುಹೋಗುಗಳು, ಇಂದಿರಾರ ಸಂಪೂರ್ಣ ಬದುಕಿನ ಚಿತ್ರಣವನ್ನೂ ಕಣ್ತುಂಬಿಕೊಳ್ಳ ಬೇಕೆಂದರೆ ನವದೆಹಲಿಯ ಸಫ‌ªರ್‌ಜಂಗ್‌ ರಸ್ತೆಯ ಇಂದಿರಾ ಗಾಂಧಿಯವರು ನೆಲೆಸಿದ್ದ ಆ ಮನೆಗೆ ತೆರಳಲೇಬೇಕು.ಇಂದಿರಾ ಅವರ ಮನೆ ಕೇವಲ ವೈಭವದ ಪ್ರದರ್ಶನಕ್ಕೆ ಸೀಮಿತವಾಗಿರದೇ ಅನೇಕ ಭಾವುಕ, ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಆ ಕಾಲದ ಪ್ರತಿಷ್ಠಿತ, ಅನುಕೂಲಸ್ಥ ಕುಟುಂಬದ ವ್ಯಕ್ತಿಗಳು ತಂಗಿದ್ದ ಕೋಣೆಗಳು ಕಣ್ಣಿಗೆ ಕಟ್ಟುವಂತೆ ಕತೆ ಹೇಳತೊಡಗುತ್ತವೆ. 1964ರಿಂದ 1966ರವರೆಗೆ ಮಾಹಿತಿ ಮತ್ತು ಪ್ರಸಾರಾಂಗ ಖಾತೆಯ ಮಂತ್ರಿಯಾಗಿದ್ದಾಗ, 1966ರಿಂದ 1977ರವರೆಗೆ ಮತ್ತು 1980ರಿಂದ 1984ರವರೆಗೆ ಪ್ರಧಾನಿಯಾಗಿದ್ದಾಗಲೂ ಮತ್ತು ಅವರ ನಿಧನಾನಂತರ ರಾಜೀವ್‌ ಗಾಂಧಿ ಮಾರ್ಚ್‌ 1985ರವರೆಗೂ ಆ ಮನೆಯಲ್ಲಿ ತಂಗಿದ್ದರು. 

Advertisement

    ಇಡೀ ದೇಶವನ್ನು ನಲುಗಿಸಿದ ತುರ್ತುಪರಿಸ್ಥಿತಿಯ ಹೇರಿಕೆಗೆ, ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ, ಬಾಂಗ್ಲಾದೇಶ ವಿಮೋಚನೆಯೂ, ಅನೇಕ ರಾಜಕೀಯ ನಿರ್ಧಾರಗಳೂ ಸೇರಿದಂತೆ ಇನ್ನಿತರ ಐತಿಹಾಸಿಕ ಘಟನೆಗಳಿಗೆ ಚಿಂತನೆ ಮೊಳೆತಿದ್ದು ಇದೇ ಮನೆಯಲ್ಲಿ ಎಂಬುದು ವಿಶೇಷ ಸಂಗತಿ. ಮನೆಯ ಒಳಹೊಕ್ಕರೆ ಸಾಕಷ್ಟು ಪತ್ರಿಕಾ ವರದಿಗಳೂ, ಲೇಖನಗಳೂ ಕಾಣಸಿಗುತ್ತವೆ. 1948ರ ಗಾಂಧಿ ಹತ್ಯೆಯಿಂದ ಹಿಡಿದು ರಾಜೀವ್‌ ಗಾಂಧಿ ಅಂತ್ಯದವರೆಗೂ ಜರುಗಿದ ಪ್ರಮುಖ ಘಟನಾವಳಿಗಳನ್ನು ಅವು ಜ್ಞಾಪಿಸುತ್ತವೆ. ಇಂದಿರಾಜಿ ನೆಹರೂರಿಗೆ ಬರೆದ ಪತ್ರ, ಇಂದಿರಾರ ಭಾರತರತ್ನ ಪದಕ ಪ್ರಮಾಣಪತ್ರ, ತಂತ್ರಜ್ಞಾನದ ಬಗೆಗೆ ಅಪಾರ ಆಸಕ್ತಿಯಿದ್ದ ರಾಜೀವ್‌ ಉಪಯೋಗಿಸುತ್ತಿದ್ದ ಗಣಕಯಂತ್ರ, ರಾಹುಲ್‌ ಮತ್ತು ಪ್ರಿಯಾಂಕಾ ಅವರು ತಂದೆಗೆ ಬರೆಯುತ್ತಿದ್ದ ಪತ್ರಗಳೂ, ಬಿಡಿಸಿದ್ದ ಅಂಕುಡೊಂಕು ಚಿತ್ರಗಳನ್ನೂ ಇಲ್ಲಿ ಕಾಪಿಡಲಾಗಿದೆ.

    ಇನ್ನು ಇಲ್ಲಿ ಕಾಣುವ ಭಾವುಕ ವಿಚಾರಗಳು ಸಣ್ಣಗೆ ಮೈನಡುಕ ಹುಟ್ಟಿಸುತ್ತವೆ. ದೇಶಾದ್ಯಂತ ಸಿಖVರ ವಿರೋಧ ಕಟ್ಟಿಕೊಂಡಿದ್ದ ಇಂದಿರಾರು 1984ರ ಅಕ್ಟೋಬರ್‌ 31ರ ಬೆಳಗ್ಗೆ ಮನೆಯ ತೋಟದಲ್ಲಿ ನಡೆದು ಬರುತ್ತಿದ್ದಾಗ ಅಂಗರಕ್ಷಕರಿಂದಲೇ ಕೊಲೆಯಾದುದಕ್ಕೆ ಅಂದು ಅವರು ನಡೆದ ಕೊನೆಯ ಹೆಜ್ಜೆಗಳನ್ನು, ಗುಂಡೇಟಿನಿಂದ ಬಿದ್ದ ಜಾಗವೂ ಮನೆಯ ಹೊರಭಾಗದಲ್ಲಿ ಕಾಣಬಹುದು. ಅವುಗಳನ್ನು ಗಾಜಿನ ಹೊದಿಕೆಯಿಂದ ವಿಶೇಷವಾಗಿ ಗುರುತಿಸಲಾಗಿದೆ. ಅಂದು ಇಂದಿರಾಜಿ ಧರಿಸಿದ್ದ ಸೀರೆ, ಚಪ್ಪಲಿ ಮತ್ತು ಕೈಚೀಲವನ್ನೂ ಮನೆಯ ಕೋಣೆಯಲ್ಲಿ ಸಂರಕ್ಷಿಸಲಾಗಿದೆ. ಅವರ ಓದುಕೋಣೆ, ಪುಸ್ತಕಗಳ ಕಪಾಟು, ಕುಳಿತುಕೊಳ್ಳುತ್ತಿದ್ದ ಕುರ್ಚಿಗಳನ್ನೂ ನೋಡಬಹುದು. ಇನ್ನು ರಾಜೀವ್‌ ಮರಣಾದಿನ ಧರಿಸಿದ್ದ ಪೈಜಾಮ, ಶೂ ಮತ್ತು ಸಾಕ್ಸ್‌ಗಳೂ ಆಯಾವಸ್ಥೆಯಲ್ಲಿಯೇ ಕಾಣಿಸುತ್ತವೆ. ಇವಲ್ಲದೇ ಅಂದಿನ ಸರ್ಕಾರದ ಕೆಲ ನಡೆ-ನಿರ್ಧಾರಗಳು, ಅಂತಾರಾಷ್ಟ್ರೀಯ ಬಾಂಧವ್ಯವನ್ನೂ ಭಿತ್ತಿಪತ್ರಗಳಲ್ಲಿ ವಿಶ್ಲೇಷಿಸಲಾಗಿದೆ. 

ದೇಶದ ರಾಜಕೀಯ ಇತಿಹಾಸದ ಬಗೆಗೆ ಸಾಕಷ್ಟು ಮಾಹಿತಿ, ಸಾಕ್ಷಿ ಮತ್ತು ನಿದರ್ಶನಗಳು ಇಲ್ಲಿ ಕಾಣಸಿಗುವುದು ಅಪರೂಪವೇ! ಏತನ್ಮಧ್ಯೆ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೂರನೆಯ ಮತ್ತು ಮೊದಲ ಮಹಿಳಾ ಪ್ರಧಾನಿಯಾಗಿ ಯಾರನ್ನೂ ನಂಬದೇ ಸ್ವಂತ ಖಡಕ್‌ ನಿರ್ಧಾರ ಕೈಗೊಳ್ಳುತ್ತಿದ್ದ ಇಂದಿರಾಜಿಯ ದೇಹಾಂತ್ಯಕ್ಕೂ ಈ ಮನೆ ಮೂಕಸಾಕ್ಷಿಯಾಗಿದ್ದು ವಿಚಿತ್ರ ಸತ್ಯವೇ ಹೌದು. ಮನೆಯಿಂದ ನಿರ್ಗಮಿಸುತ್ತಿದ್ದಂತೆ ಕೊನೆಯಲ್ಲಿ ಸಿಗುವ ಮಳಿಗೆಯೊಂದರಲ್ಲಿ ಇಂದಿರಾ ಅವರ I cannot understand how anyone can be an Indian and not be proud ಎಂಬ ಹೇಳಿಕೆಯೊಂದು ಗಮನ ಸೆಳೆಯುತ್ತದೆ.

ದೆಹಲಿಗೆ ತೆರಳಿದಲ್ಲಿ ಇಂದಿರಾಜೀಯವರ ಮನೆಹೊಕ್ಕರೆ ಇತಿಹಾಸದ ಕೆಲಮಗ್ಗುಲುಗಳನ್ನಾದರೂ ಸಾಕ್ಷ್ಯಚಿತ್ರದಂತೆ ವೀಕ್ಷಿಸಬಹುದು ಎಂದರೆ ತಪ್ಪಾಗಲಾರದು.

Advertisement

ಆರ್ಜುನ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next