Advertisement

ಇಂದಿರಾ ಕ್ಯಾಂಟೀನ್‌ ಕಾಮಗಾರಿ ನಿಲುಗಡೆ 

12:24 PM Apr 29, 2018 | Team Udayavani |

ಬಂಟ್ವಾಳ:ಆಡಳಿತ ವ್ಯವಸ್ಥೆಯ ದುರುಪಯೋಗ ದೂರಿನಂತೆ ಬಿ.ಸಿ. ರೋಡ್‌ನ‌ಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿಯನ್ನು ಚುನಾವಣಾಧಿಕಾರಿ ನಿಲುಗಡೆ ಮಾಡಿದ್ದಾರೆ. ಬಂಟ್ವಾಳ ಪುರಸಭೆಯ ಜೆಸಿಬಿ ಬಳಸಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದುದನ್ನು ಆಕ್ಷೇಪಿಸಿ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ನೀಡಿದ ದೂರಿನ ಬಳಿಕ ನೀತಿ ಸಂಹಿತೆ ಉಲ್ಲಂಘನೆ ಆರೋಪದಂತೆ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

Advertisement

ಕ್ಯಾಂಟೀನ್‌ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ವಹಿಸಿದ ವ್ಯಕ್ತಿ ಬಳಕೆ ಮಾಡಿದ ಯಂತ್ರ ಕೆಎ 19 ಜಿ 0735 ಪುರಸಭೆಯದ್ದಾಗಿದ್ದು, ಇಲ್ಲಿ ಯಾಕೆ ಬಳಸಿದ್ದು ಎಂಬುದಾಗಿ ಪ್ರಶ್ನಿಸಲಾಗಿತ್ತು. ತ್ವರಿತ ಕಾಮಗಾರಿ ಉದ್ದೇಶದಿಂದ ಚುನಾವಣೆ ಸಂದರ್ಭ ಕಾಮಗಾರಿ ಮಾಡಿದ್ದನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರಲಾಗಿತ್ತು. ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಕಳೆದ ಒಂದು ತಿಂಗಳಿಂದ ನಡೆಯುತ್ತಿತ್ತು

ಮುಖ್ಯಾಧಿಕಾರಿ ವರ್ಗಾವಣೆ 
ಸಹಾಯಕ ಚುನಾವಣಾಧಿಕಾರಿ ವೈ. ರವಿ ಮಾಹಿತಿ ನೀಡಿ, ಗುತ್ತಿಗೆಯ ಶರ್ತದಂತೆ ಬಂಟ್ವಾಳ ಪುರಸಭೆಯು ಇಂದಿರಾ ಕ್ಯಾಂಟೀನ್‌ಗೆ ನೀರಿನ ವ್ಯವಸ್ಥೆ ಮಾಡಬೇಕಾಗಿತ್ತು. ಅದರ ಕಾಮಗಾರಿ ನಿರ್ವಹಿಸಲು ಸೂಚಿಸಿದಂತೆ ಪುರಸಭೆಯ ಜೆಸಿಬಿ ಬಳಸಿ ಕೆಲಸ ಮಾಡುತ್ತಿದ್ದರು. ದೂರು ಬಂದ ಬಳಿಕ ಕಾಮಗಾರಿ ನಿಲುಗಡೆ ಮಾಡಿದ್ದು, ಸಂಬಂಧಪಟ್ಟವರಿಗೆ ನೋಟಿಸು ನೀಡಿದ್ದಾಗಿ ತಿಳಿಸಿದ್ದಾರೆ. ಇದರ ಅನಂತರದ ಬೆಳವಣಿಗೆಯಲ್ಲಿ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರನ್ನು ಮೂಡಬಿದಿರೆಗೆ ಸ್ಥಳಾಂತರ ಮಾಡಿದ್ದು, ಅಲ್ಲಿನ ಮುಖ್ಯಾಧಿಕಾರಿ ರಾಜಪ್ಪ ಅವರನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ನಿಯುಕ್ತಿ ಕ್ರಮಗಳು ಆಗಲಿವೆ ಎಂದು ತಿಳಿಸಿದ್ದಾರೆ.

ಉಲ್ಲಂಘನೆ
ಚುನಾವಣೆ ಘೋಷಣೆ ಬಳಿಕ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರಕಾರಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆಸುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಕ್ಯಾಂಟೀನ್‌ ನಿರ್ಮಾಣಕ್ಕೆ ಪುರಸಭೆ ಜೆಸಿಬಿ ನೀಡುವ ಅಗತ್ಯವಿಲ್ಲ. ಅದಕ್ಕೆ ನೀರು ಒದಗಿಸುವ ಕೆಲಸದ ಕಾಮಗಾರಿ ಕೂಡಾ ಪುರಸಭೆ ಮಾಡುವುದಕ್ಕಿಲ್ಲ.
-ಎ. ಗೋವಿಂದ ಪ್ರಭು
ಪುರಸಭೆ ಬಿಜೆಪಿ ವಿಪಕ್ಷ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next