Advertisement

SAF ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೆಲುವು ಅಭಿನಂದನೀಯ

11:05 PM Jul 05, 2023 | Team Udayavani |

ಮಂಗಳವಾರವಷ್ಟೇ ಮುಗಿದ ಸ್ಯಾಫ್ ಫ‌ುಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಕುವೈಟ್‌ ಅನ್ನು ಮಣಿಸಿ, 9ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಇಡೀ ದೇಶವೇ ಸಂಭ್ರಮಿಸುತ್ತಿದೆ. ಕುವೈಟ್‌ ವಿರುದ್ಧ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಗೆದ್ದ ಭಾರತ, ಪ್ರಶಸ್ತಿ ಗೆದ್ದುಕೊಂಡಿತು. ಸ್ಯಾಫ್ ಫ‌ುಟ್‌ಬಾಲ್‌ವಿಚಾರದಲ್ಲಿ ಭಾರತದ ಸಾಧನೆ ನಿಸ್ಸಂಶಯವಾಗಿಯೂ ಉತ್ತಮ ಸಾಧನೆ ಮಾಡಿದೆ. ಒಂಬತ್ತು ಬಾರಿ ಗೆಲುವು ಸಾಧಿಸುವುದು ಅಸಾಧಾರಣವೇನಲ್ಲ. 1993, 1997, 1999, 2005, 2009, 2011, 2015, 2021 ಮತ್ತು 2023ರಲ್ಲಿ ಭಾರತ ಕಪ್‌ ತನ್ನದಾಗಿಸಿಕೊಂಡಿದೆ.

Advertisement

ಪ್ರತೀ ಎರಡು ವರ್ಷಕ್ಕೊಮ್ಮೆ ಈ ಸ್ಯಾಫ್ ಚಾಂಪಿಯನ್‌ಶಿಪ್‌ ಕ್ರೀಡಾಕೂಟ ನಡೆಯುತ್ತದೆ. ಇದರಲ್ಲಿ ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್‌, ಮಾಲ್ದೀವ್ಸ್‌, ನೇಪಾಲ ಸದಸ್ಯ ದೇಶಗಳಾಗಿವೆ. ಈ ಬಾರಿ ಕುವೈಟ್‌ ಮತ್ತು ಲೆಬೆನಾನ್‌ ಕೂಡ ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದವು. ಆರಂಭದಲ್ಲಿ ಸಾರ್ಕ್‌ ಪಂದ್ಯಾವಳಿ ಎಂದು ಇದನ್ನು ಕರೆಯಲಾಗಿದ್ದು, ಬಳಿಕ ಸೌತ್‌ ಏಷ್ಯನ್‌ ಫ‌ುಟ್‌ಬಾಲ್‌ ಫೆಡರೇಶನ್‌ ಚಾಂಪಿಯನ್‌ಶಿಪ್‌ ಹೆಸರಿನಲ್ಲಿ ನಡೆಸಲಾಗುತ್ತಿದೆ. 2015ರ ವರೆಗೆ ಅಫ್ಘಾನಿಸ್ಥಾನ ಕೂಡ ಇದರಲ್ಲಿ ಭಾಗಿಯಾಗಿದ್ದು, ಬಳಿಕ ಕ್ರೀಡಾಕೂಟವನ್ನು ತ್ಯಜಿಸಿತು.

ಭಾರತ ಬಿಟ್ಟರೆ, ಮಾಲ್ದೀವ್ಸ್‌ 2 ಬಾರಿ, ಬಾಂಗ್ಲಾದೇಶ, ಅಫ್ಘಾನಿಸ್ಥಾನ, ಶ್ರೀಲಂಕಾ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ. ಆದರೆ ನೇಪಾಲ, ಪಾಕಿಸ್ಥಾನ ಮತ್ತು ಭೂತಾನ್‌ಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲಾಗಿಲ್ಲ. ಈ ಸ್ಯಾಫ್ ಅನ್ನು ಆರಂಭಿಸಿದ ಉದ್ದೇಶವೇ ದಕ್ಷಿಣ ಏಷ್ಯಾದ ದೇಶಗಳ ನಡುವೆ ಉತ್ತಮ ಕ್ರೀಡಾ ಬಾಂಧವ್ಯವಿರಲಿ ಎಂಬುದಾಗಿದೆ. ಹೀಗಾಗಿ ಪ್ರತೀ ಎರಡು ವರ್ಷಕ್ಕೊಮ್ಮೆ ಎಲ್ಲ ರಾಜಕೀಯ ಮರೆತು ಈ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ.

2023ರಲ್ಲಿಯೂ ಭಾರತ ಸ್ಯಾಫ್ ಪ್ರಶಸ್ತಿ ಗೆಲ್ಲಲು ಆಟಗಾರರ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಲೇ ಬೇಕು. ಅದರಲ್ಲೂ ನಾಯಕ ಸುನಿಲ್‌ ಚೆಟ್ರಿ ಅವರಂತೂ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಕ್ರೀಡಾಕೂಟದಲ್ಲಿ ಒಟ್ಟಾರೆಯಾಗಿ 5 ಗೋಲು ಬಾರಿಸಿದ್ದಾರೆ. ಅಲ್ಲದೆ ಫ‌ುಟ್‌ಬಾಲ್‌ನಲ್ಲಿನ ಈ ಪ್ರದರ್ಶನ ಭಾರತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲೂ ಕಾರಣವಾಗಬೇಕು.  ಆದರೆ ಭಾರತದಲ್ಲಿ ಕ್ರಿಕೆಟ್‌ಗಷ್ಟೇ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.  ಫ‌ುಟ್‌ಬಾಲ್‌, ಹಾಕಿ, ಟೆನ್ನಿಸ್‌, ಕಬಡ್ಡಿ ಸೇರಿದಂತೆ ಇತರ ಆಟಗಳ ಬಗ್ಗೆ ಅಪಾರವಾದ ನಿರ್ಲಕ್ಷ್ಯವಿದೆ ಎಂಬ ಆರೋಪವಿದೆ. ಇದು ಈಗಿನದ್ದೇನಲ್ಲ.

ತುಂಬಾ ಹಿಂದಿನಿಂದಲೂ ಇಂಥದ್ದೊಂದು ಅಪವಾದ ಕೇಳಿಸಿಕೊಂಡೇ ಕಳೆದ ಮೂರು ದಶಕಗಳ ಮಂದಿ ಕ್ರಿಕೆಟ್‌ ಜತೆ ಜತೆಗೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಗರಿಮೆ ಹೆಚ್ಚಾದಾಗ, ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸ್ಪರ್ಧಿಗಳು ಗೆದ್ದಾಗ, ಹಾಕಿಯಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬೇರೆ ಕ್ರೀಡೆಗಳ ಕುರಿತಂತೆ ಚರ್ಚೆ ನಡೆಯುತ್ತದೆ.

Advertisement

ಆದರೆ ಈ ವಿಚಾರಗಳು ಚರ್ಚೆಗಷ್ಟೇ ಸೀಮಿತವಾಗಬಾರದು. ಕ್ರಿಕೆಟ್‌ನಂತೆಯೇ ಉಳಿದ ಕ್ರೀಡೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ, ಅವುಗಳ ಬೆಳವಣಿಗೆಗೆ ಸರಕಾರಗಳು ಉತ್ತಮ ಹಣಕಾಸಿನ ನೆರವು ನೀಡಬೇಕು. ಹಾಗೆಯೇ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ನೀಡಬೇಕು. ಆಗ ಭಾರತ ಫಿಫಾ ಫ‌ುಟ್‌ಬಾಲ್‌ನಂಥ ಕ್ರೀಡಾಕೂಟದಲ್ಲಿಯೂ ಪ್ರದರ್ಶನ ನೀಡುವ ದಿನಗಳು ಹತ್ತಿರವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next