Advertisement

ಆಲಸ್ಯದಲ್ಲಿ ಭಾರತಕ್ಕೆ 117ನೇ ಸ್ಥಾನ: ಅಸ್ವಸ್ಥ ಭಾರತ ಆಗಬೇಕೇ?

06:00 AM Sep 08, 2018 | Team Udayavani |

ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ವಿವಿಧ ದೇಶವಾಸಿಗಳ ದೈಹಿಕ ಸಕ್ರಿಯತೆಯ ಕುರಿತ ಸಮೀಕ್ಷಾ ವರದಿ ಬಿಡುಗಡೆ ಮಾಡಿದ್ದು, ಭಾರತವನ್ನು ಚಿಂತೆಗೀಡುಮಾಡುವಂತೆ ಇದೆ ಈ ವರದಿ. 168 ರಾಷ್ಟ್ರಗಳನ್ನೊಳಗೊಂಡ ಈ ಸಮೀಕ್ಷೆಯಲ್ಲಿ ಯಾವ ದೇಶಗಳು ದೈಹಿಕವಾಗಿ ಅತಿ ಸಕ್ರಿಯವಾಗಿವೆ/ಚಟುವಟಿಕೆಯಿಂದಿವೆ ಮತ್ತು ಯಾವ ದೇಶಗಳು ಅತ್ಯಂತ ಆಲಸಿಯಾಗಿವೆ ಎನ್ನುವ ಪಟ್ಟಿಯಿದ್ದು ಭಾರತ 117ನೇ ಸ್ಥಾನದಲ್ಲಿದೆ! 

Advertisement

ದಿನಕ್ಕೆ ಕನಿಷ್ಠ 75 ನಿಮಿಷವಾದರೂ ದೈಹಿಕ ಶ್ರಮಕ್ಕೆ ಮೀಸಲಿಡುವ ಅಥವಾ ವಾರಕ್ಕೆ 150 ನಿಮಿಷ ವ್ಯಾಯಾಮವನ್ನಾದರೂ ಮಾಡುವವರ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಮೊದಲನೇ ಸ್ಥಾನದಲ್ಲಿರುವ ಪೂರ್ವ ಆಫ್ರಿಕನ್‌ ರಾಷ್ಟ್ರ  “ಉಗಾಂಡಾ’ ಇದ್ದು,  ಅತ್ಯಂತ ಸಕ್ರಿಯ ರಾಷ್ಟ್ರವೆನಿಸಿಕೊಂಡಿದೆ. 168ನೇ ಸ್ಥಾನದಲ್ಲಿರುವ ಕುವೈತ್‌ ಅತಿ ಸೋಮಾರಿ ರಾಷ್ಟ್ರವೆಂದು ಘೋಷಿತವಾಗಿದೆ! 

ಒಟ್ಟಾರೆ ಅಗತ್ಯ ದೈಹಿಕ ಚಟುವಟಿಕೆಯಿಲ್ಲದೇ ಜಗತ್ತಿನ 140 ಕೋಟಿ ಜನರು ಅನಾರೋಗ್ಯದ ಅಪಾಯಕ್ಕೆ ಸಿಲುಕಿದ್ದಾರೆ ಎನ್ನುವುದು ಈ ವರದಿಯ ತಾತ್ಪರ್ಯ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅತ್ಯಂತ ಬಡ ರಾಷ್ಟ್ರಗಳು ದೈಹಿಕವಾಗಿ ಅತಿಹೆಚ್ಚು ಸಕ್ರಿಯವಾಗಿವೆ ಎನ್ನುವುದು. ಆದಾಗ್ಯೂ ದೈಹಿಕ ಚಟುವಟಿಕೆ ಉತ್ತಮವಾಗಿದ್ದರಷ್ಟೇ ಸಾಲದು, ಅದಕ್ಕೆ ಪೂರಕವಾಗುವಂಥ ಪೌಷ್ಟಿಕ ಆಹಾರದ ಸೇವನೆ, ಉತ್ತಮ ವೈದ್ಯಕೀಯ ವ್ಯವಸ್ಥೆಯೂ ಅಗತ್ಯವಿರುತ್ತದೆ. ಹೀಗಾಗಿ ಉಗಾಂಡಾದ ಜನರು ಕುವೈತ್‌ ಜನರಿಗಿಂತ ಆರೋಗ್ಯವಂತರಾಗಿದ್ದಾರೆ ಎನ್ನುವಂತಿಲ್ಲ. 

ಈ ವಿಷಯವನ್ನು ದೃಷ್ಟಿಯಲ್ಲಿಟ್ಟುಕೊಂಡಾಗ ಭಾರತವನ್ನು “ಆಲಸ್ಯ’ದ ಅಂಕಪಟ್ಟಿಯಲ್ಲಿ ಹೇಗೆ ಅಳೆಯುವುದು ಎನ್ನುವ ಪ್ರಶ್ನೆಯೂ ಮೂಡುತ್ತದೆ. ಭಾರತದಲ್ಲಿ 35 ಪ್ರತಿಶತಕ್ಕಿಂತಲೂ ಹೆಚ್ಚು ಜನರು ಆಲಸಿಗಳಾಗಿದ್ದಾರಂತೆ. ಇವರಲ್ಲಿ 24.7 ಪ್ರತಿಶತ ಪುರುಷರು ಮತ್ತು 43.3 ಪ್ರತಿಶತ ಮಹಿಳೆಯರ ದೈಹಿಕ ಚಟುವಟಿಕೆ ತುಂಬಾ ಕಡಿಮೆಯಿದೆ ಎನ್ನುತ್ತದೆ ಈ ವರದಿ. ಗಮನಕೊಡಲೇ ಬೇಕಾದ ಅಂಶವೆಂದರೆ ಅನೇಕ ರಾಷ್ಟ್ರಗಳಲ್ಲಿ ಮಹಿಳೆಯರೇ ಹೆಚ್ಚು ಆಲಸಿಗಳು ಎನ್ನುವುದು. 

2017ರಲ್ಲೂ  ಈ ರೀತಿ “ಆಲಸ್ಯ ವರದಿ’ಯೊಂದನ್ನು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಈ ಸಮೀಕ್ಷೆಯಲ್ಲಿ 59 ರಾಷ್ಟ್ರಗಳಿದ್ದವು. ಆಗ ಭಾರತ 39ನೇ ಸ್ಥಾನ ಪಡೆದಿತ್ತು! ಒಬ್ಬ ವ್ಯಕ್ತಿ ದೈಹಿಕವಾಗಿ ಗಟ್ಟಿಮುಟ್ಟಾಗಿರ ಬೇಕಾದರೆ ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನಾದರೂ ಇಡಬೇಕು. ಆದರೆ ಭಾರತೀಯರು ಪ್ರತಿದಿನ 4,200 ಹೆಜ್ಜೆ ಇಡುತ್ತಾರೆ ಎನ್ನುವ ಕಳವಳಕಾರಿ ಅಂಶವನ್ನು ಬಹಿರಂಗಪಡಿಸಿತ್ತು ಸ್ಟಾನ್‌ಫೋರ್ಡ್‌ ವರದಿ. ಇಂಥ ವರದಿಗಳು ಸರಕಾರಗಳಿಗಿಂತಲೂ ಜನರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ದಿನಕ್ಕೆ ಹತ್ತು ಗಂಟೆ ಕಂಪ್ಯೂಟರ್‌ನ ಮುಂದೆ ಕುಳಿತು ಕೆಲಸ ಮಾಡುತ್ತೇವೆ, 2 ಗಂಟೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಕಚೇರಿ ತಲುಪುತ್ತೇವೆ ಎಂದಾಕ್ಷಣ ನಾವು ದೈಹಿಕವಾಗಿ ಚಟುವಟಿರೆಯಿಂದಿದ್ದೇವೆ ಎಂದರ್ಥವಲ್ಲ.  
ದೈಹಿಕ ಚಟುವಟಿಕೆಗಳು ಕಡಿಮೆಯಾದರೆ ಹೃದಯ ಸಂಬಂಧಿ ತೊಂದರೆಗಳ ಜೊತೆ ಜೊತೆಗೆ, ಕ್ಯಾನ್ಸರ್‌, ಮಧುಮೇಹ ಮತ್ತು ಖನ್ನತೆಯಂಥ ಮಾನಸಿಕ ಸಮಸ್ಯೆಗಳ ಅಪಾಯವೂ ಇರುತ್ತದೆ ಎಂದು ವರದಿ ಎಚ್ಚರಿಸುತ್ತದೆ. ಭಾರತದಲ್ಲಿ ಅರ್ಧದಷ್ಟು ಜನಸಂಖ್ಯೆ ಯುವಕರಿಂದಲೇ ಕೂಡಿದೆ. ಹೀಗಿದ್ದರೂ ನಮ್ಮ ದೇಶ 117ನೇ ಸ್ಥಾನ ಪಡೆದಿರುವುದು ಕಳವಳಕಾರಿ ಸಂಗತಿ ಅಲ್ಲವೇ? ಹೀಗಾಗಿ ಪ್ರತಿಯೊಂದು ಮನೆಯಲ್ಲೂ ದೈಹಿಕ ಶಿಸ್ತಿಗೆ ಪ್ರಾಮುಖ್ಯ ಕೊಡುವ ಮನಃಸ್ಥಿತಿ ಬೆಳೆಯಲೇಬೇಕಿದೆ. ಬೆಳಗ್ಗೆ ಎದ್ದು ವಾಕಿಂಗ್‌ ಹೋಗುವ, ವಾರಕ್ಕೆ “ಇಂತಿಷ್ಟು ಗಂಟೆ’ ಎಂದು ವ್ಯಾಯಾಮಕ್ಕೆ ಸಮಯ ಮೀಸಲಿಡುವ ಪರಿಪಾಠ ಬೆಳೆಯಲೇಬೇಕು. ಶಾಲೆಗಳಲ್ಲೂ ದೈಹಿಕ ಶಿಕ್ಷಣಕ್ಕೆ ಒತ್ತುಕೊಡಲೇಬೇಕಿದೆ.  ದಿನಕ್ಕೆ ಅರ್ಧಗಂಟೆಯನ್ನು ನಮ್ಮ ದೇಹಾರೋಗ್ಯಕ್ಕೆ ಮೀಸಲಿಡಲು ನಾವು ಸಿದ್ಧರಿಲ್ಲ ಎಂದರೆ, ನಂತರ ರೋಗ ಬಂದಾಗ ಗೋಳಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. 

Advertisement

ಜಗತ್ತಿನಲ್ಲೇ ಅತಿಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ನಮ್ಮದು, ಪ್ರಪಂಚಕ್ಕೆ “ಯೋಗ’ ವಿದ್ಯೆಯನ್ನು ಕೊಟ್ಟ ರಾಷ್ಟ್ರ  ನಮ್ಮದು ಎಂದು ಹೇಗೆ ತಲೆಯೆತ್ತಿ ಹೆಮ್ಮೆ ಪಡುತ್ತೀವೋ, ಹಾಗೆಯೇ, ಇಷ್ಟೆಲ್ಲಾ ಇದ್ದರೂ ಪ್ರಪಂಚದ ಅತಿ ಆಲಸಿ ರಾಷ್ಟ್ರಗಳಲ್ಲಿ ನಾವೂ ಒಬ್ಬರು ಎಂಬ ಸಂಗತಿ ನಮ್ಮನ್ನು ತಲೆತಗ್ಗಿಸುವಂತೆ ಮಾಡಲೇಬೇಕಿದೆ. ಸ್ವಸ್ಥ ಭಾರತ ನಿರ್ಮಾಣಕ್ಕೆ ಸಕ್ರಿಯ ಭಾರತವೇ ಬುನಾದಿ ಎನ್ನುವುದು ನೆನಪಿರಲಿ.

Advertisement

Udayavani is now on Telegram. Click here to join our channel and stay updated with the latest news.

Next