Advertisement

ಇಂಡಿಯನ್ 2 ಶೂಟಿಂಗ್ ಅವಘಡ: ಕಮಲ್ ಪತ್ರ ಬರೆದದ್ದು ಯಾರಿಗೆ?

11:08 AM Feb 27, 2020 | Hari Prasad |

ಚೆನ್ನೈ: ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನ ಮತ್ತು ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಫೆಬ್ರವರಿ 19ರಂದು ಸಂಭವಿಸಿದ ಕ್ರೇನ್ ದುರಂತದಲ್ಲಿ ಮೂವರು ಸಿಬ್ಬಂದಿಗಳು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಚಿತ್ರತಂಡವನ್ನು ಇನ್ನೂ ಕಾಡುತ್ತಿದೆ.

Advertisement

ಅದರಲ್ಲೂ ಈ ದುರಂತ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ನಾಯಕ ನಟ ಕಮಲ್ ಹಾಸನ್ ಅವರನ್ನು ಈ ಘಟನೆ ಬಹುವಾಗಿ ಕಾಡುತ್ತಿದೆಯಂತೆ. ಈ ಕುರಿತಾಗಿ ಕಮಲ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಪ್ರೊಡಕ್ಷನ್ ಸ್ಥಾಪಕಾಧ್ಯಕ್ಷರಾಗಿರುವ ಸುಭಾಸ್ಕರನ್ ಅವರಿಗೆ ಬರೆದಿರುವ ಪತ್ರವೊಂದು ಇದೀಗ ಟ್ವಿಟ್ಟರ್ ನಲ್ಲೂ ಹರಿದಾಡುತ್ತಿದೆ.

ಕಮಲ್ ಬರೆದಿರುವ ಪತ್ರದಲ್ಲೇನಿದೆ?
ಫೆಬ್ರವರಿ 19ರ ದುರಂತ ಘಟನೆಯ ಕುರಿತಾಗಿ ಲೈಕಾ ಪ್ರೊಡಕ್ಷನ್ ಮುಖ್ಯಸ್ಥರಿಗೆ ಕಮಲ್ ಬರೆದಿರುವ ಪತ್ರದಲ್ಲಿ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಬಹುದಾಗಿರುವ ಅವಘಡಗಳಿಗೆ ಸೂಕ್ತ ಮುಂಜಾಗರುಕತಾ ಕ್ರಮಗಳನ್ನು ವಹಿಸುವಂತೆ ಹಾಗೂ ಶೂಟಿಂಗ್ ಯೂನಿಟ್ ಸಿಬ್ಬಂದಿಗಳಿಗೆ ಸರಿಯಾದ ರೀತಿಯ ವಿಮೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಕುರಿತಾದಂತೆ ಕಮಲ್ ವಿವರವಾಗಿ ಬರೆದುಕೊಂಡಿದ್ದಾರೆ.

‘ಘಟನೆ ನಡೆದ ಸಂದರ್ಭದಲ್ಲಿ ನಾನು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದೆ, ಇಲ್ಲದಿದ್ದರೆ ಈ ದುರ್ಘಟನೆಯ ಸಂತ್ರಸ್ತರಲ್ಲಿ ನಾನೂ ಒಬ್ಬನಾಗಿರುತ್ತಿದ್ದೆ. ಈ ದುರ್ಘಟನೆ ಭೀಕರತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮತ್ತು ಈ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರವನ್ನು ನಿಡಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಕ್ತಾಯಗೊಳ್ಳಬಾರದು. ಒಂದು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹಲವರು ಕೆಲಸ ಮಾಡುತ್ತಾರೆ, ಅವರೆಲ್ಲರ ಭದ್ರತೆ ಮತ್ತು ಜೀವರಕ್ಷಣೆಗೆ ನಿರ್ಮಾಣ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ.’ ಎಂದು 65 ವರ್ಷ ಪ್ರಾಯದ ನಟ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

‘ಕಲಾವಿದರು, ಶೂಟಿಂಗ್ ಸಿಬ್ಬಂದಿಗಳು ಮತ್ತು ಇತರೇ ತಂತ್ರಜ್ಞರ ರಕ್ಷಣೆಗಾಗಿ ನಿರ್ಮಾಣ ಸಂಸ್ಥೆ ತೆಗೆದುಕೊಂಡಿರುವ ಕ್ರಮಗಳ ಕುರಿತಾಗಿ ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಮತ್ತು ಇವರಿಗೆಲ್ಲಾ ಒದಗಿಸಲಾಗಿರುವ ವಿಮಾ ಮಾಹಿತಿಗಳನ್ನೂ ನಾನು ತಿಳಿದುಕೊಳ್ಳಬೇಕಾಗಿದೆ. ಮತ್ತು ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯೂ ನಿರ್ಮಾಣ ಸಂಸ್ಥೆಯ ಮೇಲಿದೆ’ ಎಂದು ಕಮಲ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Advertisement


ಶೂಟಿಂಗ್ ಸಂದರ್ಭದಲ್ಲಿ ಲೈಟಿಂಗ್ ವ್ಯವಸ್ಥೆಗಾಗಿ ಅಳವಡಿಸಲಾಗಿದ್ದ ಬೃಹತ್ ಕ್ರೇನೊಂದು ಉರುಳಿಬಿದ್ದು ಮೂವರು ಶೂಟಿಂಗ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದರು ಹಾಗೂ ಒಂಭತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಕಮಲ್ ಹಾಸನ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಸಿದ್ದಾರ್ಥ್ ಮತ್ತು ಪ್ರಿಯಾ ಭವಾನಿ ಶಂಕರ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ‘ಇಂಡಿಯನ್-2’ ಚಿತ್ರವನ್ನು ಎಸ್. ಶಂಕರ್ ಅವರು ನಿರ್ದೇಶಿಸುತ್ತಿದ್ದು, 1996ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಈ ಚಿತ್ರ 2021ರಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next