Advertisement

ಅಭ್ಯಾಸಕ್ಕೆ ಅಣಿಯಾದ  ಭಾರತ “ಎ’-ಬಾಂಗ್ಲಾ

03:45 AM Feb 05, 2017 | Team Udayavani |

ಹೈದರಾಬಾದ್‌: ಟೆಸ್ಟ್‌ ಮಾನ್ಯತೆ ಪಡೆದು 17 ವರ್ಷಗಳಾದರೂ ಈವರೆಗೆ ಭಾರತದಲ್ಲಿ ಟೆಸ್ಟ್‌ ಆಡದ ಬಾಂಗ್ಲಾದೇಶಕ್ಕೆ ಅಪೂರ್ವ ಅವಕಾಶವೊಂದು ಕೂಡಿಬಂದಿದೆ. ಅದು ಏಕೈಕ ಟೆಸ್ಟ್‌ ಆಡಲು ಭಾರತಕ್ಕೆ ಬಂದಿಳಿದಿದೆ. ಫೆ. 9ರಿಂದ ಹೈದರಾಬಾದ್‌ನಲ್ಲಿ ಈ ಟೆಸ್ಟ್‌ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ರವಿವಾರದಿಂದ 2 ದಿನಗಳ ಅಭ್ಯಾಸ ಪಂದ್ಯವೊಂದು ಇಲ್ಲಿಯೇ ಸಾಗಲಿದೆ. ಇಲ್ಲಿ ಪ್ರವಾಸಿ ಬಾಂಗ್ಲಾದೇಶವನ್ನು ಎದುರಿಸುವ ತಂಡ ಭಾರತ “ಎ’.

Advertisement

ಭಾರತ-ಬಾಂಗ್ಲಾದೇಶ ಈವರೆಗೆ 8 ಟೆಸ್ಟ್‌ಗಳನ್ನಾಡಿದರೂ ಇವೆಲ್ಲವೂ ಬಾಂಗ್ಲಾ ನೆಲದಲ್ಲೇ ಸಾಗಿದ್ದವು. ಇದರಲ್ಲಿ 6 ಪಂದ್ಯ ಗಳನ್ನು ಭಾರತ ಜಯಿಸಿದೆ. ಉಳಿದೆರಡು ಡ್ರಾಗೊಂಡಿವೆ. ಹೀಗಾಗಿ ಭಾರತದಲ್ಲಿ ಮೊದಲ ಸಲ 5 ದಿನಗಳ ಪಂದ್ಯವಾಡಲಿರುವ ಬಾಂಗ್ಲಾ ಪಾಲಿಗೆ ಇದೊಂದು ಐತಿಹಾಸಿಕ ಗಳಿಗೆ. ಹೀಗಾಗಿ ಅದು ಅಭ್ಯಾಸ ಪಂದ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸುವುದರಲ್ಲಿ ಅನುಮಾನವಿಲ್ಲ.

ಅನುಭವಿ ಹಾಗೂ ಪ್ರತಿಭಾನ್ವಿತ ಆಟಗಾರ ರಿಂದ ಕೂಡಿರುವ ಬಾಂಗ್ಲಾ ಒಂದು ಸಶಕ್ತ ತಂಡವೇ ಆಗಿದೆ. ಆದರೆ ಪಂದ್ಯಕ್ಕೊಂದು ಫಿನಿಶಿಂಗ್‌ ಟಚ್‌ ನೀಡುವ ಕಲೆಗಾರಿಕೆ ಇನ್ನೂ ಸಿದ್ಧಿಸಿಲ್ಲ. ಎದುರಾಳಿಗೆ ಒಂದು ಹಂತದ ತನಕ ಭೀತಿಯೊಡ್ಡುವ ಬಾಂಗ್ಲಾ ಕೊನೆಗೊಮ್ಮೆ ಇಡೀ ಪಂದ್ಯವನ್ನೇ ಕೈಚೆಲ್ಲುತ್ತದೆ. ಇದಕ್ಕೆ ಕಳೆದ ನ್ಯೂಜಿಲ್ಯಾಂಡ್‌ ಪ್ರವಾಸವೇ ಸಾಕ್ಷಿ. ಅಲ್ಲಿನ ಟೆಸ್ಟ್‌ ಪಂದ್ಯವೊಂದರಲ್ಲಿ ಹತ್ತಿರ ಹತ್ತಿರ 600 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳಲು ಬಾಂಗ್ಲಾಕ್ಕೆ ಸಾಧ್ಯವಾಗಿರಲಿಲ್ಲ. ಇಂಥ ಸಾಕಷ್ಟು ದೃಷ್ಟಾಂತಗಳು ಬಾಂಗ್ಲಾದೇಶದ ಮುಂದಿವೆ. ಇದರಿಂದಾಗಿ ಭಾರತದಂಥ ಬಲಾಡ್ಯ ತಂಡದ ಎದುರು ಆಡುವ ಮುನ್ನ ಅಭ್ಯಾಸ ಪಂದ್ಯಕ್ಕೂ ರಹೀಂ ಪಡೆ ವಿಶೇಷ ಮಹತ್ವ ನೀಡಲಿದೆ.

ಮುಕುಂದ್‌ಗೆ ಸವಾಲು
ಈ ಅಭ್ಯಾಸ ಪಂದ್ಯ ಆತಿಥೇಯ ಭಾರತ ತಂಡಕ್ಕೂ ಒಂದು ಸವಾಲು. ಮುಖ್ಯವಾಗಿ ನಾಯಕ ಅಭಿನವ್‌ ಮುಕುಂದ್‌ ಅವರಿಗೆ ಸಣ್ಣ ಮಟ್ಟದ ಅಗ್ನಿಪರೀಕ್ಷೆ. ಎಂದೋ ಭಾರತ ತಂಡದಿಂದ ಬೇರ್ಪಟ್ಟಿದ್ದ ತಮಿಳುನಾಡಿನ ಈ ಆರಂಭಕಾರನನ್ನು ಬಾಂಗ್ಲಾ ವಿರುದ್ಧದ ಟೆಸ್ಟ್‌ ಪಂದ್ಯಕ್ಕಾಗಿ ಮರಳಿ ಕರೆಸಲಾಗಿದೆ. ಇದೊಂದು ಅಚ್ಚರಿಯಾಗಿ ಕಂಡಿದೆ. ಭಾರತ “ಎ’ ತಂಡದ ನೇತೃತ್ವದ ಜತೆಗೆ ಟೆಸ್ಟ್‌ ಪುನ ರಾಯ್ಕೆಗೆ ತಾನು ಅರ್ಹನೋ ಅಲ್ಲವೋ ಎಂಬುದನ್ನು ಅಭಿನವ್‌ ಬ್ಯಾಟಿಂಗ್‌ ಮೂಲಕವೂ ಸಾಬೀತುಪಡಿಸಬೇಕಿದೆ.

ಸದ್ಯ ಭಾರತ ತಂಡದಲ್ಲಿ ಕೆ.ಎಲ್‌. ರಾಹುಲ್‌ ಮತ್ತು ಮುರಳಿ ವಿಜಯ್‌ ಪ್ರಧಾನ ಆರಂಭಿಕರಾಗಿ ಗಟ್ಟಿಯಾಗಿದ್ದಾರೆ. ಅಕಸ್ಮಾತ್‌ ಇವರಲ್ಲೊಬ್ಬರು ಗಾಯಾಳಾದರಷ್ಟೇ ಅಭಿ ನವ್‌ಗೆ ಅವಕಾಶ ಸಿಗಲಿದೆ.

Advertisement

ಪ್ರಸಕ್ತ ರಣಜಿ ಋತುವಿನಲ್ಲಿ ಅಭಿನವ್‌ ಮುಕುಂದ್‌ಗಿಂತ ಹೆಚ್ಚಿನ ಬ್ಯಾಟಿಂಗ್‌ ಸದ್ದು ಹೊರಡಿಸಿದ ಗುಜರಾತ್‌ನ ಪ್ರಿಯಾಂಕ್‌ ಪಾಂಚಾಲ್‌ ಕೂಡ “ಎ’ ತಂಡದಲ್ಲಿದ್ದಾರೆ. ಇವರ ಮೇಲೂ ಆಯ್ಕೆಗಾರರು ಹೆಚ್ಚಿನ ನಿಗಾ ಇಡಲಿದ್ದಾರೆ. 
ಉಳಿದಂತೆ ಪ್ರತಿಭಾನ್ವಿತ ಕೀಪರ್‌ ಹಾಗೂ ಬೀಸು ಹೊಡೆತಗಾರ ರಿಷಬ್‌ ಪಂತ್‌, ಮತ್ತೂಬ್ಬ ಕೀಪರ್‌ ಇಶಾನ್‌ ಕಿಶನ್‌, ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಕೂಡ ಹದ್ದಿನಗಣ್ಣಿನಲ್ಲಿದ್ದಾರೆ. 

ತಂಡಗಳು
ಭಾರತ “ಎ’: ಅಭಿನವ್‌ ಮುಕುಂದ್‌ (ನಾಯಕ), ಪ್ರಿಯಾಂಕ್‌ ಪಾಂಚಾಲ್‌, ಶ್ರೇಯಸ್‌ ಅಯ್ಯರ್‌, ಇಶಾಂಕ್‌ ಜಗ್ಗಿ, ರಿಷಬ್‌ ಪಂತ್‌, ಇಶಾನ್‌ ಕಿಶನ್‌, ವಿಜಯ್‌ ಶಂಕರ್‌, ಹಾರ್ದಿಕ್‌ ಪಾಂಡ್ಯ, ಶಾಬಾಜ್‌ ನದೀಂ, ಜಯಂತ್‌ ಯಾದವ್‌, ಕುಲದೀಪ್‌ ಯಾದವ್‌, ಅನಿಕೇತ್‌ ಚೌಧರಿ, ಚಾಮ ಮಿಲಿಂದ್‌, ನಿತಿನ್‌ ಸೈನಿ.

ಬಾಂಗ್ಲಾದೇಶ: ಮುಶ್ಫಿಕರ್‌ ರಹೀಂ (ನಾಯಕ), ಇಮ್ರುಲ್‌ ಕಯೇಸ್‌, ತಮಿಮ್‌ ಇಕ್ಬಾಲ್‌, ಮೊಮಿನುಲ್‌ ಹಕ್‌, ಮಹಮದುಲ್ಲ ರಿಯಾದ್‌, ಶಬ್ಬೀರ್‌ ರೆಹಮಾನ್‌, ಶಕಿಬ್‌ ಅಲ್‌ ಹಸನ್‌, ಲಿಟನ್‌ ಕುಮಾರ್‌ ದಾಸ್‌, ತಸ್ಕಿನ್‌ ಅಹ್ಮದ್‌, ಸುಬಾಶಿಷ್‌ ರಾಯ್‌, ಕಮ್ರುಲ್‌ ಇಸ್ಲಾಂ ರಬ್ಬಿ, ಸೌಮ್ಯ ಸರ್ಕಾರ್‌, ತೈಜುಲ್‌ ಇಸ್ಲಾಂ, ಶಫಿಯುಲ್‌ ಇಸ್ಲಾಂ, ಮೆಹೆದಿ ಹಸನ್‌ ಮಿರಾಜ್‌.

ಹಾರ್ದಿಕ್‌ ಪಾಂಡ್ಯ, ಜಯಂತ್‌ ಯಾದವ್‌ ಫಿಟ್‌
ಗಾಯಾಳಾಗಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ನಡುವಲ್ಲೇ ಹೊರಬಿದ್ದ ಹಾರ್ದಿಕ್‌ ಪಾಂಡ್ಯ ಮತ್ತು ಜಯಂತ್‌ ಯಾದವ್‌ ಈಗ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ “ಎ’ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಪಾಂಡ್ಯ ಇಂಗ್ಲೆಂಡ್‌ ಎದುರಿನ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ತಮ್ಮ ಪರಾಕ್ರಮ ತೋರಿದ್ದಾರೆ. ಇವರಲ್ಲೊಬ್ಬರನ್ನು ಬಾಂಗ್ಲಾದೆದುರಿನ ಟೆಸ್ಟ್‌ ಪಂದ್ಯಕ್ಕೆ ಪರಿಗಣಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next