Advertisement

ವಾಹನ ಖರೀದಿಗೆ ಬೇಡಿಕೆ ಹೆಚ್ಚಾಯ್ತು 

12:49 PM Oct 12, 2018 | |

ಈಗ ಹಬ್ಬಗಳ ಸೀಸನ್‌. ಸಹಜವಾಗಿಯೇ ಹೊಸ ವಸ್ತುಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಅಧಿಕವಾಗಿಯೇ ಇರುತ್ತದೆ. ಇದಕ್ಕೆ ವಾಹನಗಳೂ ಹೊರತಲ್ಲ. ಇಂತಹ ಸೀಸನ್‌ ಸಮಯದಲ್ಲೇ ವಾಹನ  ಕಂಪೆನಿಗಳು ವಿವಿಧ ಆಫ‌ರ್‌ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಗ್ರಾಹಕರಿಗೆ ಹೊಸ  ವಾಹನಕೊಂಡುಕೊಳ್ಳುವ ತವಕ. ಕಂಪೆನಿಗಳಿಗೆ ಗ್ರಾಹಕರನ್ನು ಸೆಳೆಯುವ ಆತುರ. ಒಟ್ಟಿನಲ್ಲಿ ಖರೀದಿ ಭರಾಟೆ ಜೋರಾಗಿಯೇ ಇದೆ.

Advertisement

ಹಬ್ಬ ಬಂತೆಂದರೆ ಸಾಕು, ಯಾವ ರೀತಿ ಮನೆ-ಮನಗಳಲ್ಲಿ ಸಂಭ್ರವಿರುತ್ತದೆಯೋ, ಅದೇ ರೀತಿ ಹೊಸ ಬಟ್ಟೆ, ಹೊಸ ವಾಹನಗಳ ಖರೀದಿ ಕೂಡ ಜೋರಾಗಿರುತ್ತದೆ. ಇನ್ನೇನು ಹಬ್ಬಗಳ ಸೀಸನ್‌ ಪ್ರಾರಂಭವಾಗಿದೆ. ಈಗಾಗಲೇ ನವರಾತ್ರಿ ಪ್ರಾರಂಭವಾಗಿದ್ದು, ಆಯುಧ ಪೂಜೆ ಕೂಡ ಆರಂಭವಾಗಲಿದೆ. ಹಬ್ಬದ ಪ್ರಯುಕ್ತ ನಗರದಲ್ಲಿ ವಾಹನಗಳ ಖರೀದಿ ಮಾಡಲು ಹೆಚ್ಚಿನ ಮಂದಿ ಮುಗಿ ಬೀಳುತ್ತಿದ್ದಾರೆ.

ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತವಾದ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ವಾಹನ ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಇದೀಗ ಕೆಲವು ತಿಂಗಳುಗಳ ಕಾಲ ಸಾಲು ಸಾಲು ಹಬ್ಬ ಇರುವುದರಿಂದ ಕಾರು, ಬೈಕ್‌ ಸೇರಿದಂತೆ ವಾಹನ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ಆಫರ್‌ಗಳನ್ನು ನೀಡುತ್ತಿದ್ದಾರೆ. ಹಬ್ಬದ ದಿನವಾದ ಶುಭಘಳಿಗೆಯಂದೇ ವಾಹನ ಖರೀದಿ ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆ ಹೆಚ್ಚಿನ ಮಂದಿಯಲ್ಲಿದೆ. ಇದರಿಂದ ನಗರ ಬಹುತೇಕ ವಾಹನಗಳ ಶೋರೂಂಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದಾರೆ. ನಗರದಲ್ಲಿ ಅನೇಕ ಶೋರೂಂಗಳಿದ್ದು, ಹಬ್ಬದ ದಿನಕ್ಕೆಂದು ಬೈಕ್‌ ಮತ್ತು ಕಾರುಗಳಿಗೆ ವಿವಿಧ ಆಫರ್‌ಗಳನ್ನು ನೀಡಲಾಗುತ್ತಿದೆ.

ವಿಶೇಷ ಆಫರ್‌
 ನಗರದಲ್ಲಿರುವ ವಿವಿಧ ಶೋರೂಂಗಳಲ್ಲಿ ಹಲವಾರು ಆಫರ್‌ ಗಳನ್ನು ನೀಡಲಾಗಿದ್ದು, ಅದರಲ್ಲೂ ಲಕ್ಕಿ ಡ್ರಾ ಆಪರ್‌ ಲಾಭವನ್ನು ಹೆಚ್ಚಿನ ಗ್ರಾಹಕರು ಪಡೆದುಕೊಂಡಿದ್ದಾರೆ. ಕೆಲವು ಶೋರೂಂಗಳಲ್ಲಿ ಕಡಿಮೆ ಬಡ್ಡಿದರದ ಕಂತುಗಳಿದ್ದು, ಕಡಿಮೆ ಸಮಯದಲ್ಲಿ ಗಾಡಿ ಡೆಲಿವರಿ ಆಫರ್‌, ಎಕ್ಸ್‌ ಚೇಂಜ್‌ ಬೋನಸ್‌ ಕೂಡ ಲಭ್ಯವಿದ್ದು, ಹಳೆಯ ವಾಹನಗಳಿಗೆ ಹೆಚ್ಚಿನ ಹಣ ನೀಡಲಾಗುತ್ತಿದೆ. ಹೆಚ್ಚಿನ ಬೆಲೆಯ ಕಾರುಗಳಿಗೆ ಹಲವು ಆಫರ್‌ ಗಳಿವೆ. ಅದರಲ್ಲೂ ಶೇ. 9.55 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಅಲ್ಲದೆ ಒಂದು ಲಕ್ಷ ರೂ.ಗೆ 1612 ಇಎಂಐ, 12,799 ಮುಂಗಡ ಪಾವತಿ ಸೇರಿದಂತೆ ಅನೇಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗಿದೆ.

ಈ ಬಗ್ಗೆ ನಗರದ ಖಾಸಗಿ ಶೋರೂಂನ ವ್ಯವಸ್ಥಾಪಕ ಕಿಶನ್‌ ಶೆಟ್ಟಿ ಅವರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ ನವರಾತ್ರಿ ಮತ್ತು ಆಯುಧಪೂಜೆ ಹಬ್ಬದ ಪ್ರಯುಕ್ತ ಶೋರೂಂನ 7ಬ್ರಾಂಚ್‌ಗಳಿಂದ ಸುಮಾರು 130ಕ್ಕೂ ಹೆಚ್ಚು ವಾಹನಗಳು ಡೆಲಿವರಿಯಾಗಿವೆ. ಅಲ್ಲದೆ ವಾಹನಗಳ ಬುಕ್ಕಿಂಗ್‌ಗೆ ಹೆಚ್ಚಿನ ಮಂದಿ ಗ್ರಾಹಕರು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಬೈಕ್‌ ಕ್ರೇಜ್‌ ಜಾಸ್ತಿ
ಕಾರುಗಳಿಗೆ ಹೋಲಿಸಿದರೆ ನಗರದಲ್ಲಿ ಬೈಕ್‌ ಕ್ರೇಜ್‌ ಹೆಚ್ಚಾಗಿದೆ. ಕಡಿಮೆ ಬೆಲೆಗೆ ಸಿಗುವ ಕಾರಣದಿಂದ ಬೈಕ್‌ಗಳನ್ನೇ ಹೆಚ್ಚಿನ ಮಂದಿ ಆಯ್ಕೆ ಮಾಡುತ್ತಾರೆ. ಅದೇ ಕಾರಣಕ್ಕೆ ಹೆಚ್ಚಿನ ಬೈಕ್‌ ಕಂಪೆನಿಗಳು ಹಬ್ಬಗಳ ಆಫರ್‌ ನೀಡುತ್ತಿದ್ದಾರೆ. ಹೀರೋ ಸಂಸ್ಥೆ ತನ್ನ ಕಂಪೆನಿಯ ಸ್ಕೂಟರ್‌ಗಳಿಗೆ ಹಬ್ಬಗಳ ಆಫರ್‌ ನೀಡುತ್ತಿದ್ದು, ಪ್ರತೀ ಸ್ಕೂಟರ್‌ ಖರೀದಿ ಮೇಲೆ 3,000 ರೂ.ನಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ ನೀಡುತ್ತಿದೆ. ಅಲ್ಲದೆ, ಪೇಟಿಎಂ ಕ್ಯಾಶ್‌ ಮಾಡಿದರೆ 5,000ದಷ್ಟು ರಿಯಾಯಿತಿ ದೊರೆಯಲಿದೆ. ಪೂರ್ಣ ಪ್ರಮಾಣದ ಹಣ ನೀಡಿ ಬೈಕ್‌, ಸ್ಕೂಟರ್‌ ಖರೀದಿ ಮಾಡಲು ಸಾಮಾನ್ಯ ಮಂದಿಗೆ ಕಷ್ಟವಾಗುತ್ತದೆ. ಇದೇ ಕಾರಣಕ್ಕೆಂದು ಡೌನ್‌ಪೇಮೆಂಟ್‌ ಸೌಲಭ್ಯವನ್ನು ನೀಡುತ್ತಿದ್ದು, ಶೇ.15ರಷ್ಟು ಡೌನ್‌ಪೇಮೆಂಟ್‌ ನೀಡಿದರೆ ಶೇ.6.99ರಷ್ಟು ಬಡ್ಡಿದರದಲ್ಲಿ ಉಳಿದ ಹಣವನ್ನು ನೀಡಬಹುದಾಗಿದೆ. ಕೆಲವು ದ್ವಿಚಕ್ರ ಕಂಪೆನಿಗಳು ಇನ್ಶೂರೆನ್ಸ್‌ ಆಫರ್‌ಗಳನ್ನು ಕೂಡ ನೀಡುತ್ತಿದ್ದಾರೆ.

ಕೆಲವೊಂದು ಆಯ್ದ ಬೈಕ್‌ ಖರೀದಿಗೆ ಉತ್ತಮ ಆಫರ್‌ಗಳನ್ನು ನೀಡುತ್ತಿದ್ದು, ಬೈಕ್‌ಗೆ ಯಾವುದೇ ರೀತಿಯ ಹಾನಿಯಾದರೆ ಐದು ವರ್ಷಗಳ ಕಾಲ ಉಚಿತ ವಿಮಾ ಸೌಲಭ್ಯ ನೀಡುತ್ತಿದೆ.ಜತೆಗೆ ಖರೀದಿಸುವ ಹಣದ ಮೇಲೆಯೂ ಡಿಸ್ಕೌಂಟ್‌ ನೀಡಲಾಗುತ್ತಿದೆ.

ಖರೀದಿ ಹೆಚ್ಚಳ
ಹಬ್ಬಗಳ ಸೀಸನ್‌ ಬಂದರೆ ವಾಹನಗಳ ಖರೀದಿ ಕೂಡ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕೆ ದ.ಕ. ಜಿಲ್ಲೆಯ ವಾಹನಗಳ ಶೋರೂಂಗಳಲ್ಲಿ ಈಗಾಗಲೇ ಹೆಚ್ಚಿನ ಕಾರುಗಳು ಮುಂಗಡ ಬುಕ್ಕಿಂಗ್‌ ಆಗಿವೆ. ಸಾಮಾನ್ಯವಾಗಿ ಆಯುಧಪೂಜೆ, ನವರಾತ್ರಿ ಸಮಯದಲ್ಲಿ ವಾಹನಗಳ ಖರೀದಿ ಹೆಚ್ಚಾಗಿರುತ್ತದೆ.
– ಕಿಶನ್‌ ಶೆಟ್ಟಿ
 ಶೋರೂಂ ವ್ಯವಸ್ಥಾಪಕರು

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next