Advertisement

ನೀರಾವರಿ ಯೋಜನೆ ಅನುಷ್ಠಾನಗೊಳಿಸಿ, ಅಸಮಾನತೆ ಹೋಗಲಾಡಿಸಿ

12:39 PM Apr 14, 2022 | Team Udayavani |

ನರಗುಂದ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ಜೊತೆಗೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಜನರನ್ನು ವಲಸೆಯಿಂದ ತಪ್ಪಿಸಲು ಈ ಭಾಗದ ಪ್ರಮುಖ ಮೂರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ವಿಧಾನ ಪರಿಷತ್‌ ಮಾಜಿ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ ಒತ್ತಾಯಿಸಿದರು.

Advertisement

ಪಟ್ಟಣದಲ್ಲಿ ಬುಧವಾರ ಬೀಳಗಿಯ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಆಶ್ರಯದಲ್ಲಿ ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಹಾಗೂ ನವಲಿ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಸಂಕಲ್ಪ ಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನೀರಾವರಿ ಯೋಜನೆಗಳ ಪರವಾಗಿ ಸ್ವಾಭಿಮಾನದ ಗಟ್ಟಿ ಧ್ವನಿಗೆ ಎಲ್ಲ ಪೂಜ್ಯರು ಪ್ರೋತ್ಸಾಹ ನೀಡಿದ್ದಾರೆ. ಮಹದಾಯಿ, ಕೃಷ್ಣಾ, ನವಲಿ ಸೇರಿ ಮೂರು ಯೋಜನೆಗಳಿಗೆ ಪûಾತೀತ, ಜಾತ್ಯತೀತ ಮತ್ತು ಧರ್ಮಾತೀತವಾಗಿ ಟ್ರಾಕ್ಟ್ಯರ್‌ ರ್ಯಾಲಿ ಮೂಲಕ ಬಂಡಾಯ ನಾಡು ನರಗುಂದ ನೆಲದಿಂದ ಚಾಲನೆ ನೀಡುವುದು ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಬಹಳಷ್ಟು ಹಿಂದುಳಿದ ಪ್ರಾದೇಶಿಕ ಅಸಮಾನತೆ ತೊಲಗಿಸಿ ಸಮಗ್ರ ಉತ್ತರ ಕರ್ನಾಟಕ ನಿಲುವು ನಮ್ಮದಾಗಿದೆ. ಯಾವುದೇ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಅತ್ಯಂತ ಹಿಂದುಳಿದಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಕಾಲ ಪಕ್ವವಾಗಿದೆ ಎಂದು ಹೇಳಿದರು.

ಈ ಯೋಜನೆಗಳಿಗೆ ಒತ್ತಾಯಿಸಿ ಟ್ರ್ಯಾಕ್ಟರ್‌ ರ್ಯಾಲಿ, ಸಮಾವೇಶ ಬಳಿಕ ಸರಣಿ ಉಪವಾಸಕ್ಕೂ ಜಗ್ಗದಿದ್ದರೆ ನಂತರ ಆಮರಣ ಉಪವಾಸ ಕೈಗೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಎಸ್‌.ಆರ್‌. ಪಾಟೀಲ ಎಚ್ಚರಿಕೆ ನೀಡಿದರು.

Advertisement

ಸಸಿಗೆ ನೀರುಣಿಸಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶಿರಹಟ್ಟಿ ಜ|ಫಕೀರ ದಿಂಗಾಲೇಶ್ವರ ಸ್ವಾಮಿಗಳು, ಊಟ, ನೀರು, ನಿದ್ರೆ ಬಿಟ್ಟು ಛಲದಿಂದ ನಿಂತಾಗ ಮಾತ್ರ ಹೋರಾಟ ಯಶಸ್ಸು ಕಾಣುತ್ತದೆ. ದೇಶದ ಪ್ರಕೃತಿ ಸಂಪತ್ತು ಹೋರಾಟದಿಂದ ಉಳಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮಿಗಳು, ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು, ಪುಣ್ಯಾರಣ್ಯ ಪತ್ರಿವನಮಠದ ಸಿದ್ಧವೀರ ಶಿವಯೋಗಿಗಳು, ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಬೆಳ್ಳೇರಿ ಸಚ್ಚಿದಾನಂದ ಸ್ವಾಮಿಗಳು, ಕೊಣ್ಣೂರ ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು ಸೇರಿದಂತೆ 15ಕ್ಕೂ ಹೆಚ್ಚು ಮಠಾಧೀಶರು, ಫಾದ್ರಿಗಳು, ಮೌಲ್ವಿಗಳು ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕರಾದ ಬಿ.ಆರ್‌. ಯಾವಗಲ್ಲ, ಜಿ.ಎಸ್‌. ಪಾಟೀಲ, ರೈತ ಹೋರಾಟಗಾರ ವೀರೇಶ ಸೊಬರದಮಠ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಟಿ. ಪಾಟೀಲ, ಎಸ್‌.ಜಿ. ನಂಜಯ್ಯನಮಠ, ಕೆಪಿಸಿಸಿ ಸಂಯೋಜಕ ಡಾ| ಸಂಗಮೇಶ ಕೊಳ್ಳಿಯವರ, ದಶರಥ ಗಾಣಿಗೇರ, ರಾಜು ಕಲಾಲ, ಅಜಯಕುಮಾರ ಸರನಾಯಕ, ಬಸವರಾಜ ಸಾಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next