Advertisement

ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಫಾರಿ

04:10 PM May 03, 2023 | Team Udayavani |

ಸಕಲೇಶಪುರ: ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಸಫಾರಿ ಮಾಡುತಿದ್ದ ವಾಹನ ವಶಕ್ಕೆ ಪಡೆದು ರೆಸಾರ್ಟ್‌ ಮಾಲಿಕನೋರ್ವನ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನ ಹಾನುಬಾಳ್‌ ಹೋಬಳಿ ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಸೆಕ್ಷನ್‌ 4 ಅರಣ್ಯ ಪ್ರದೇಶದ ಅಚ್ಚನಹಳ್ಳಿ ಗ್ರಾಮದ ಸರ್ವೆ ನಂ.93ರಲ್ಲಿ ಸ್ಟೋನ್‌ವ್ಯಾಲಿ ಎಂಬ ರೆಸಾರ್ಟ್‌ನ ವಾಹನದಲ್ಲಿ ಪ್ರವಾಸಿಗರು ಅಕ್ರಮವಾಗಿ ರಕ್ಷಿತಾರಣ್ಯ ಪ್ರವೇಶಿಸಿ ಮೋಜು ಮಸ್ತಿ ಮಾಡುತಿದ್ದರೆಂಬ ಖಚಿತ ಮಾಹಿತಿ ಪಡೆದು, ವಲಯ ಅರಣ್ಯಾಧಿಕಾರಿ ಶಿಲ್ಪ ಅವರು ಅರಣ್ಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ತಕ್ಷಣ ಜೀಪ್‌ ಚಾಲಕ ಜೀಪನ್ನು ಬಿಟ್ಟು ಪರಾರಿಯಾಗಿದ್ದು, ನಂತರ ಅರಣ್ಯ ಪ್ರದೇಶದೊಳಗಿದ್ದ ಜೀಪನ್ನು ವಶ ಪಡಿಸಿ ಕೊಳ್ಳಲಾಗಿದೆ.

ವಾಣಿಜ್ಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾ ಅರಣ್ಯ ಪ್ರದೇಶದೊಳಗೆ ವಾಹನದಲ್ಲಿ ಸಫಾರಿ ಕರೆದುಕೊಂಡು ಹೋ ಗುತ್ತಿರುವುದು ಕಂಡು ಬಂದ ಹಿನ್ನೆಲೆ ಸ್ಟೋನ್‌ವ್ಯಾಲಿ ರೆಸಾರ್ಟ್‌ ಮಾಲಿಕ ಸುಭಾಷ್‌ ಸ್ಟೀಫ‌ನ್‌ ಹಾಗೂ ಚಾಲಕನ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ 1960 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ 24,62,104 ಇನ್ನಿತರ ಪ್ರಕರಣ ದಾಖಲಿಸಲಾಗಿದೆ.

ಪದೇ ಪದೇ ರೆಸಾರ್ಟ್‌ ಮಾಲಿಕರು ರಜೆ ಸಂದರ್ಭದಲ್ಲಿ ವಾಣಿಜ್ಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾರಣ್ಯ ಪ್ರದೇಶ ದೊಳಗೆ ಸಫಾರಿಗೆ ಕರೆದುಕೊಂಡು ಹೋಗುವುದು ಹೆಚ್ಚಿದ್ದರಿಂದ ಎಸಿಎಫ್ ಸುರೇಶ್‌ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಸಂಧರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಶಿಲ್ಪ, ಅರಣ್ಯ ಸಿಬ್ಬಂದಿಗಳಾದ ಮಹದೇವ್‌, ಹನುಮಂತು, ಲೋಕೇ ಶ್‌, ಯೋಗೇಶ್‌, ರಮೇಶ್‌, ಸುನೀಲ್‌ ಹಾಗೂ ಚಾಲಕ ಚಿದಾನಂದ ಮುಂತಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next