Advertisement

ಮಲಪ್ರಭೆ ದಡದಲ್ಲಿ ಮರಳು ಅಕ್ರಮ ದಂಧೆ

06:11 PM Dec 10, 2022 | Team Udayavani |

ಬಾದಾಮಿ: ಜೀವಸಂಕುಲಗಳಿಗೆ ಆಸರೆಯಾಗಿರುವ ಜೀವನದಿ ಮಲಪ್ರಭೆ, ಅಕ್ರಮ ಮರಳು ದಂಧೆಕೋರರ ಕೈಯಲ್ಲಿ ಸಿಕ್ಕು ನಲುಗಿ ಹೋಗಿದೆ. ನದಿಯ ಒಡಲು ಬರಿದಾಗಿದ್ದು, ನೈಸರ್ಗಿಕ ಸಂಪತ್ತು ಕರಗುತ್ತಿದೆ. ಶಾಸಕರೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣವಿಲ್ಲವೇ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Advertisement

ಹಿಂದಿನ ಹಲವಾರು ವರ್ಷಗಳಿಂದಲೂ ಮರಳು ಆಕ್ರಮ ಸಾಗಾಣಿಕೆ ಅವಾಹ್ಯತವಾಗಿ ನಡೆಯುತ್ತ ಬಂದಿದೆ. ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಆದರೆ, ಈಗ ಮೌನ ವಹಿಸಿದ್ದಾರೆ.

ಎಲ್ಲೆಲ್ಲಿ ದಂಧೆ?: ತಾಲೂಕಿನಾದ್ಯಂತ ಅಕ್ರಮ ಮರಳು ದಂಧೆ ಅವಾಹ್ಯತವಾಗಿ ನಡೆಯುತ್ತಿದೆ. ತಾಲೂಕಿನ ಬೇಲೂರ, ಜಾಲಿಹಾಳ, ಹೆಬ್ಬಳ್ಳಿ, ಕಿತ್ತಲಿ ಸೇರಿದಂತೆ ಕಲ್ಲಾಪುರ(ಎಸ್‌ಕೆ), ಹಾಗನೂರು, ಎಸ್‌. ಕೆ.ಆಲೂರು, ಬೀರನೂರ, ಗೋವನಕೊಪ್ಪ, ಸುಳ್ಳ, ಜಕನೂರು, ನೀರಲಗಿ, ಕಾತರಕಿ, ತಮಿನಾಳ, ಖ್ಯಾಡ, ಚೊಳಚಗುಡ್ಡ, ಪಟ್ಟದಕಲ್ಲು ಗ್ರಾಮಗಳ ಮಲಪ್ರಭಾ ನದಿ ಪಾತ್ರದ ಎಲ್ಲ ಪಾಯಿಂಟ್‌ಗಳಲ್ಲಿ ಮರಳು ಅಕ್ರಮ ದಂಧೆ ನಿತ್ಯವೂ ನಿರಾತಂಕವಾಗಿ ನಡೆಯುತ್ತಿದೆ. ಮರಳು ಆಕ್ರಮ ಗಣಿಗಾರಿಕೆ ತಡೆಗಟ್ಟಲು ಸರ್ಕಾರ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಬೋಟ್‌ ಮಷಿನ್‌ ಮೂಲಕ ಅಕ್ರಮ ಮರಳು ಸಂಗ್ರಹ: ಮಲಪ್ರಭಾ ನದಿ ಪಾತ್ರದಲ್ಲಿಯೇ ಮರಳು ಬೋಟ್‌ ಮಿಷನ್‌ ಮೂಲಕ ಎತ್ತುವುದಲ್ಲದೆ, ಅಗೆದ ಮಣ್ಣು ಹಾಗೆಯೇ ಅಲ್ಲಿ ಬಿಡುವುದರಿಂದ ನದಿ ನೀರು ಹರಿಯುವಿಕೆಯಲ್ಲಿ ಬದಲಾವಣೆ ಆಗುತ್ತಿದೆ. ಮಣ್ಣನ್ನು ಅಲ್ಲಿಯೇ ಬಿಡುವುದರಿಂದ ಗ್ರಾಮ, ಜಮೀನುಗಳಿಗೆ ನೀರು ನುಗ್ಗುತ್ತದೆ. ಇದರಿಂದ ಬೆಳೆ ಹಾನಿ, ಪ್ರವಾಹ ಉಂಟಾಗುತ್ತದೆ ಇದು ಸಂಬಂಧಿ ಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಟಾಸ್ಕ್ಪೊಧೀರ್ಸ್‌ ಸಮಿತಿ ಅಧಿಕಾರಿಗಳಿಗೆ ಕಂಡಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಪ್ರಭಾವಿಗಳ ಕೈವಾಡ-ನಿಯಮ ಉಲ್ಲಂಘನೆ; ಅಧಿಕಾರಿಗಳ ಜಾಣ ಕುರುಡು: ನದಿ ನೀರು ನೈಸರ್ಗಿಕವಾಗಿ ಹರಿಯುತ್ತದೆ. ಆದರೆ, ಅನೇಕ ವರ್ಷಗಳಿಂದ ಮರಳು ದಂಧೆಕೋರರ ಆಕ್ರಮ ಚಟುವಟಿಕೆಯಿಂದಾಗಿ ನದಿ ಇಕ್ಕಟ್ಟಾಗಿದ್ದಲ್ಲದೆ, ನೀರು ಹರಿಯುವ ದಿಕ್ಕೂ ಬದಲಾಗಿ ಸದ್ಯ ಸಣ್ಣ ಕಾಲುವೆಯಂತೆ ಹರಿಯುತ್ತಿದೆ. ನದಿಗೆ ಹೊಂದಿರುವ ಪಟ್ಟಾ ಜಮೀನು ಮಾಲೀಕರು ಪರವಾನಗಿ ಪಡೆದು, ನಂತರ ನದಿಯಲ್ಲಿನ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದರೂ ಅಧಿಕಾರಿಗಳೂ ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇಲ್ಲಿಯವರೆಗೂ ಯಾವುದೇ ಪಟ್ಟಾ ಜಮೀನಿನಲ್ಲಿ ಮರಳು ಎತ್ತುವಳಿ ಮಾಡುವ ಲೀಜ್‌ ದಾರರು ನದಿ ದಂಡೆಯಿಂದ 50 ಮೀಟರ್‌ ಬಫರ್‌ ಬಿಡಬೇಕು ಎಂಬ ನಿಯಮ ಇದೆ.

Advertisement

ಆದರೆ, ಯಾರೂ ನಿಯಮಪಾಲಿಸದೆ ಗಾಳಿಗೆ ತೂರಿ, ನದಿ ಪಾತ್ರದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಒಂದು ಪಾಯಿಂಟ್‌ ನಿಂದ ಜಿಪಿಎಸ್‌ ಪಾಸ್‌ ಖರೀದಿಸಿ ಬೇರೆ ಪಾಯಿಂಟ್‌ ನಿಂದ ಮರಳು ಸಾಗಾಟ ಮಾಡುತ್ತಿದ್ದಾರೆ. ಜಿಪಿಎಸ್‌ ಆಗಿರುವ ಪಟ್ಟಾ ಜಮೀನು ಬಿಟ್ಟು ಪರವಾನಗಿ ಇಲ್ಲದೇ ಇರುವ ಜಮೀನಿನಿಂದ ಮರಳು ರಾತ್ರಿ ಎತ್ತುತ್ತಿದ್ದಾರೆ. ಸರಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಆಳವಾಗಿ ಭೂಮಿ ಕೊರೆದು ಮರಳು ತೆಗೆಯುತ್ತಿದ್ದಾರೆ. ವೇಬ್ರಿಡ್ಜ್ ಇದ್ದರೂ ನೋಡಲು ಮಾತ್ರ. ಬೋಟ್‌ ಮೂಲಕ ಹಾಡು ಹಗಲೆ ಮರಳು ಎತ್ತುತ್ತಿದ್ದಾರೆ.

ಇದು ತಿಳಿದೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಹೆಬ್ಬಳ್ಳಿ ಗ್ರಾಮದಲ್ಲಿ ಮಲಪ್ರಭಾ ನದಿಯಿಂದ 50 ಮೀಟರ್‌ ದೂರ ಇರಬೇಕು. ಆದರೆ, ನದಿ ದಡದಲ್ಲಿಯೇ ಅಕ್ರಮ ಮರಳು ದಂಧೆ ಮಾಡುತ್ತಿದ್ದಾರೆ. ಇನ್ನು ಋಣಭಾರ ಪ್ರಮಾಣಪತ್ರ (ಇ.ಸಿ) ಹಾಗೂ ಸರಕಾರದ ಪರವಾನಗಿಯನ್ನು ಗಾಳಿಗೆ ತೂರಿ ಬೋಟು ಮೂಲಕ ಮರಳು ತೆಗೆದು ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ.

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ತಮಗೇನೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಅಕ್ರಮ ಮರಳು ದಂಧೆ ಕೋರರಿಗೆ ಅಕ್ರಮ ಮಾಡಲು ಹೆಚ್ಚಿದಂತಾಗಿದೆ. ತಕ್ಷಣವೇ ಇಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು, ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಬಾದಾಮಿ ತಾಲೂಕಿನ ಮಲಪ್ರಭಾ ನದಿ ತೀರದಲ್ಲಿ ಮರಳು ಆಕ್ರಮ ಮರಳು ಸಂಗ್ರಹಿಸುತ್ತಿರುವುದನ್ನು ಮಲಪ್ರಭಾ ನದಿ ದಡದಲ್ಲಿರುವ ಮರಳು ಪಾಯಿಂಟ್‌ ಪರಿಶೀಲನೆ ಮಾಡಿ, ಗಡಿ ರೇಖೆ ಗುರುತಿಸಬೇಕು ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ.  –ಜೆ.ಬಿ.ಮಜ್ಜಗಿ, ತಹಶೀಲ್ದಾರ್‌ ಬಾದಾಮಿ.

ಬಾದಾಮಿ ತಾಲೂಕಿನ ವಿವಿಧೆಡೆ ಅಕ್ರಮ ಮರಳು ದಂಧೆ ಮಾಡುವವರಿಗೆ ಈಗಾಗಲೇ ದಂಡ ವಿಧಿಸಲಾಗಿದೆ. ಎಲ್ಲ ಪಾಯಿಂಟ್‌ಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಷಯವನ್ನು ಮೇಲಧಿ ಕಾರಿಗಳ ಗಮನಕ್ಕೆ ತರುವೆ.  –ಶಿವುಕುಮಾರ, ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ಬಾಗಲಕೋಟೆ.

ಶಶಿಧರ ವಸ್ತ್ರದ

Advertisement

Udayavani is now on Telegram. Click here to join our channel and stay updated with the latest news.

Next