Advertisement

Illegal mining; ತ್ವರಿತಗತಿ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

12:36 AM Nov 18, 2023 | Team Udayavani |

ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟ ಎಲ್ಲ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅವಧಿಯನ್ನು ಮುಂದಿನ ಜೂನ್‌ 30ರವರೆಗೆ ವಿಸ್ತರಿಸಲು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಆದರೆ ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ಲೋಕಾಯುಕ್ತ­ದಲ್ಲಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದಿಂದ ಕಳೆದ 5 ವರ್ಷಗಳ ಅವಧಿಯಲ್ಲಿ ತನಿಖೆ ಏನೇನೂ ಪ್ರಗತಿ ಕಂಡಿಲ್ಲ ಎಂಬುದು ಗಮ­ನಾರ್ಹ ಸಂಗತಿ. ಒಟ್ಟು 172 ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯೂ ಆಗಿಲ್ಲ. 10 ಕ್ರಿಮಿನಲ್‌ ಪ್ರಕರಣಗಳು ಬಾಕಿ ಉಳಿದಿವೆ. 8 ವರ್ಷಗಳಾದರೂ ತನಿಖಾ ಪ್ರಗತಿ ಶೂನ್ಯ. ಅದಿರು ಮೌಲ್ಯಮಾಪನ ವರದಿಯನ್ನೂ ಕೂಡ ಸಲ್ಲಿಸಿಲ್ಲ ಹಾಗೂ ದೋಷರೋಪ ಪಟ್ಟಿ ಹಾಕಿಲ್ಲ ಎಂಬುದರ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆದು ಎಸ್‌ಐಟಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತ ಪಡಿಸಲಾಗಿದೆ. ಇಷ್ಟು ವರ್ಷಗಳ ಸಮಯ ನೀಡಿದ್ದರೂ ತನಿಖೆಯಲ್ಲಿ ಏನೇನೂ ಪ್ರಗತಿ ಸಾಧಿಸದ ಎಸ್‌ಐಟಿ ಇನ್ನು 8 ತಿಂಗಳಲ್ಲಿ ಸಾವಿರಾರು ಕೋಟಿ ರೂ.ಗಳ ಗಣಿಗಾರಿಕೆ ಅಕ್ರಮವನ್ನು ಬಯಲಿಗೆ ಎಳೆಯುವುದೇ ಎಂಬ ಅನುಮಾನ ಕೂಡ ಮೂಡುತ್ತದೆ.

Advertisement

ತನಿಖೆ ಮಂದಗತಿ ಸಾಗಲು ಹಿಂದಿನ 5 ವರ್ಷದಲ್ಲಿ ಆಡಳಿತಾತ್ಮಕ ಇಚ್ಛಾಶಕ್ತಿ ಇರಲಿಲ್ಲ ಎಂದು ಹೇಳುವ ಮೂಲಕ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಬೆಟ್ಟು ಮಾಡಿ ತೋರಿಸುವ ಮೂಲಕ ರಾಜಕೀಯ ಬಣ್ಣದ ಲೇಪನ ಮಾಡಿದೆ. ರಾಜ್ಯದ ಬೊಕ್ಕಸಕ್ಕೆ ಅಂದಾಜು 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ಗಣಿ ಅಕ್ರಮದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ ಹಗರಣದ ಮಹತ್ವ ಅರಿಯದೆ ಕಾಲದೂಡುವ ಕೆಲಸ ಮಾಡಿರುವುದು ಸರಿಯಲ್ಲ. ತನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಸ್‌ಐಟಿ ವಿಫ‌ಲವಾಗಿದೆಯೆಂದೇ ಹೇಳಬಹುದು. ತನಿಖೆ ತ್ವರಿತಗತಿಯಲ್ಲಿ ಸಾಗದೇ ಇರಲು ಇರುವ ಕಾರಣಗಳನ್ನು ಸರಕಾರದ ಗಮನಕ್ಕೆ ತಂದು ಅದಕ್ಕೆ ಬೇಕಾದ ಪರಿಹಾರ ಪಡೆಯುವಲ್ಲಿ ಎಸ್‌ಐಟಿ ನಿರ್ಲಕ್ಷ್ಯ ಮಾಡಿದೆ ಎಂದು ನೇರವಾಗಿ ಹೇಳಬಹುದು. ತನಿಖೆ ವಿಳಂಬಕ್ಕೆ ಸರಕಾರದ ಮಟ್ಟದಲ್ಲಿ ಒತ್ತಡವಿತ್ತೇ, ಅಧಿಕಾರಿಗಳ ವಲಯದಲ್ಲೂ ಅಡ್ಡಿ ಇತ್ತೇ ಎಂಬುದು ಗೊತ್ತಾಗಬೇಕಿದೆ.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು 2007 ರಲ್ಲಿ ಅಧಿಕಾರದಲ್ಲಿದ್ದಾಗ ನಿಯಮಗಳನ್ನು ಉಲ್ಲಂ ಸಿ ಖಾಸಗಿ ಕಂಪೆನಿಯೊಂದಕ್ಕೆ ಗಣಿಗಾರಿಕೆ ಗುತ್ತಿಗೆ ನೀಡಿದ್ದರೆನ್ನಲಾದ ಪ್ರಕರಣವೂ ಸೇರಿದಂತೆ ಹಳೆ ಪ್ರಕರಣಗಳ ತನಿಖೆಗೆ ಮರು ಜೀವ ಕೊಡಲು ರಾಜ್ಯ ಸರಕಾರ ಮುಂದಾಗಿದೆ. ಆದರೆ, ಇದರ ಹಿಂದೆ ಯಾವುದೇ ರೀತಿಯ ರಾಜಕೀಯ ದ್ವೇಷ ಅಥವಾ ಒತ್ತಡಗಳು ಇರಬಾರದು. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಅವರಿಂದ ವಸೂಲಿ ಮಾಡುವ ಕೆಲಸ ಆಗಬೇಕಾದರೆ ಎಸ್‌ಐಟಿ ಕೂಡ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೇ ಕಾಲಮಿತಿಯಲ್ಲಿ ತನಿಖೆ ನಡೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next