Advertisement

ಸಮಸ್ಯೆ ಬಗೆಹರಿಯದಿದ್ದರೆ ಬಿಜೆಪಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

12:35 PM Apr 26, 2017 | |

ಕಾಸರಗೋಡು: ಕೇರಳದ ಎಡರಂಗ ಸರಕಾರವು ಇತ್ತೀಚೆಗೆ ಹೊರಡಿಸಿದ ಮಲಯಾಳ ಕಡ್ಡಾಯ ಆದೇಶದಿಂದ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶದ ಶಾಲೆಗಳನ್ನು  ಸಂಪೂರ್ಣ ಹೊರತುಪಡಿಸಲೇಬೇಕು. ಇಲ್ಲದಿದ್ದಲ್ಲಿ  ಉಗ್ರ ಹೋರಾಟಕ್ಕಿಳಿಯಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಸ್ಪಷ್ಟ  ಮುನ್ನೆಚ್ಚರಿಕೆ ನೀಡಿದ್ದಾರೆ.

Advertisement

ಕಾಸರಗೋಡು ಪ್ರಸ್‌ ಕ್ಲಬ್‌ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ  ಮಾತನಾ ಡಿದ ಅವರು, ಭಾಷಾ ಅಲ್ಪಸಂಖ್ಯಾಕರಿಗೆ ತಮ್ಮ  ಭಾಷೆಯಲ್ಲಿಯೇ ಕಲಿಯುವ ಹಕ್ಕು ಮತ್ತು  ಸ್ವಾತಂತ್ರÂವನ್ನು ನಮ್ಮ  ಸಂವಿಧಾನ ಒದಗಿಸಿದೆ. ಆದರೆ ರಾಜ್ಯದ ಎಲ್‌ಡಿಎಫ್‌ ಸರಕಾರಕ್ಕೆ ಇದು ಗೊತ್ತಿಲ್ಲದಿರುವುದು ವಿಪರ್ಯಾಸ ಎಂದು ಮಾರ್ಮಿಕವಾಗಿ ಹೇಳಿದರು. ಸರಕಾರ ಹೊರಡಿಸಿದ ಈ ನೂತನ ಮಲಯಾಳೀಕರಣ ಆದೇಶ ಕನ್ನಡ ಮತ್ತು  ಕನ್ನಡಿಗರ  ಕತ್ತು ಹಿಸುಕು ವಂತೆ ಮಾಡಿದೆ. ಮಾತ್ರವಲ್ಲದೆ ಇದು ಸಂವಿಧಾನದ ಸ್ಪಷ್ಟ  ಉಲ್ಲಂಘನೆ ಯಾಗಿದೆ. ಆದುದರಿಂದ ಈ ಅಧ್ಯಾದೇಶ ತಿದ್ದುಪಡಿ ಮಾಡಿ ಕನ್ನಡಿಗರನ್ನು  ಹೊರತು ಪಡಿಸಬೇಕು. ಒಂದು ವೇಳೆ ಸರಕಾರವು ಇದಕ್ಕೆ ಮುಂದಾಗದಿದ್ದಲ್ಲಿ  ಮುಂದಿನ ದಿನಗಳಲ್ಲಿ  ಬಿಜೆಪಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಕಾಸರಗೋಡು ಕನ್ನಡಿಗರ ಶಕ್ತಿ ಪ್ರದರ್ಶಿಸಲಾಗುವುದು ಎಂದರು.

ನೂತನ ಅಧ್ಯಾದೇಶದಲ್ಲಿ  ಒಂದರಿಂದ ಹತ್ತನೇ ತರಗತಿ ವರೆಗೆ 2017ರಿಂದ ಮಲಯಾಳವನ್ನು  ಕಡ್ಡಾಯವಾಗಿ ಕಲಿಸಬೇಕೆಂದು ತಿಳಿಸಲಾಗಿದೆ. ಇಷ್ಟೆಲ್ಲ ಅವಾಂತರ ಸಂಭವಿಸಿದ್ದರೂ ಜಿಲ್ಲೆಯ ನಾಲ್ಕು ಮಂದಿ ಶಾಸಕರಾಗಲಿ, ಜಿಲ್ಲೆಯ ಉಸ್ತುವಾರಿ ಹೊಂದಿರುವ ಸಚಿವರಾಗಲಿ ಇದುವರೆಗೆ ಈ ಬಗ್ಗೆ  ಯಾವುದೇ ಚಕಾರವೆತ್ತದೆ ಮೌನವ್ರತದಲ್ಲಿದ್ದಾರೆ. ಈ ಹಿಂದೆ ಕನ್ನಡಿಗರ ಬಗ್ಗೆ  ಮೊಸಳೆ ಕಣ್ಣೀರು ಸುರಿಸಿದ್ದ  ಜಿಲ್ಲೆಯ ಶಾಸಕರು, ಸಚಿವರು ಇದೀಗ ಮೋಸದ ಆಟ ಆಡುತ್ತಿದ್ದಾರೆ. ಇವರೆಲ್ಲರೂ ಜಿಲ್ಲೆಯ ಅಲ್ಪಸಂಖ್ಯಾಕ ಕನ್ನಡಿಗರನ್ನು  ನಿರಂತರವಾಗಿ ಅವಗಣಿ ಸುತ್ತಿದ್ದಾರೆ ಎಂದು ಕೆ. ಶ್ರೀಕಾಂತ್‌ ಆರೋಪಿಸಿದರು.

ಜಿಲ್ಲೆಯ ಸಚಿವರು, ಶಾಸಕರು ಈ ವಿಚಾರದಲ್ಲಿ  ತಮ್ಮ  ನಿಲುವನ್ನು  ಕೂಡಲೇ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು. ಇದಲ್ಲದೆ ಈ ವಿಷಯದಲ್ಲಿ  ಜಿಲ್ಲೆಯ ಇತರ ರಾಜಕೀಯ ಪಕ್ಷಗಳು ಇದುವರೆಗೆ ತಮ್ಮ  ನಿಲುವನ್ನು  ಬಹಿರಂಗಪಡಿಸಿಲ್ಲ. ಇದು ಕನ್ನಡಿಗರ ಸಂಶಯಕ್ಕೆ ಕಾರಣವಾಗಿದೆ. ಆದಕಾರಣ ಎಲ್ಲ  ರಾಜಕೀಯ ಪಕ್ಷ ಗಳು ತಮ್ಮ  ಧೋರಣೆಯನ್ನು  ಸ್ಪಷ್ಟಪಡಿಸ ಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಆಗ್ರಹಿಸಿದರು.

ಇದೇ ರೀತಿ ಯುಡಿಎಫ್‌ ಸರಕಾರವು ಅಧಿಕಾರದಲ್ಲಿದ್ದಾಗ ಹೊರತಂದ ಮಲಯಾಳ ಕಡ್ಡಾಯದ ವಿಚಾರವಾಗಿ 2015ನೇ ಡಿಸೆಂಬರ್‌ 17ರಂದು ವಿಧಾನಸಭಾ ಅಧಿವೇಶನದಲ್ಲಿ  ಸ್ಪಷ್ಟೀಕರಣ ನೀಡಿ ಭಾಷಾ ಅಲ್ಪಸಂಖ್ಯಾಕ ರನ್ನು  ಹೊರತುಪಡಿಸಲಾಗಿತ್ತು. ಆದರೆ ಬಳಿಕ ರಾಜ್ಯಪಾಲರ ಅಂಕಿತ ಹೊಂದಿದ ಅಧ್ಯಾದೇಶವು ಹೊರಬಂದಾಗ ವಿಧಾನ ಸಭಾ ಅಧಿವೇಶನದಲ್ಲಿ  ತಿದ್ದುಪಡಿ ಮಾಡಿದ ವಿಷಯವು ಅದರಿಂದ ಕಣ್ಮರೆ ಯಾಗಿತ್ತು. ಅನಂತರ ವಿಧಾನಸಭಾ ಅಧಿವೇಶನದಲ್ಲಿ  ಈ ಕುರಿತು ಸಮಗ್ರವಾಗಿ ಚರ್ಚಿಸಿ ಭಾಷಾ ಅಲ್ಪಸಂಖ್ಯಾಕ‌ರನ್ನು  ಮಲಯಾಳ ಕಡ್ಡಾಯದಿಂದ ಮತ್ತೆ  ಹೊರತುಪಡಿಸಲಾಗಿತ್ತು. ಆದುದರಿಂದ ಈ ವಿಷಯದಲ್ಲಿ  ವಿಧಾನಸಭಾ ಸ್ಪೀಕರ್‌ ಮಧ್ಯೆ ಪ್ರವೇಶಿಸಿ ಕಣ್ಮರೆಯಾದ ವಿಚಾರವನ್ನು  ಸರಿಪಡಿಸಿ ಅದಕ್ಕೆ ಕಾರಣಕರ್ತರಾದವರ ವಿರುದ್ಧ  ಕಠಿನ ಕ್ರಮ ಕೈಗೊಳ್ಳಬೇಕೆಂದು ಶ್ರೀಕಾಂತ್‌ ಒತ್ತಾಯಿಸಿದರು. ಈಗಿನ ಹೊಸ ಆದೇಶದಲ್ಲಿ  ಇಂಗ್ಲಿಷ್‌ ಭಾಷೆ ಕಲಿಯು ವವರಿಗೆ ಸವಲತ್ತುಗಳನ್ನು  ಒದಗಿಸಿದರೂ ಇಲ್ಲಿನ ಮೂಲ ನಿವಾಸಿಗಳಾದ ಭಾಷಾ ಅಲ್ಪಸಂಖ್ಯಾಕರಿಗೆ ಯಾವುದೇ ಪರಿಗಣನೆ ನೀಡದಿರುವುದು ಖಂಡನಾರ್ಹ. ಈ ನಡುವೆ ನೂತನ ಆದೇಶದ ಪ್ರಕಾರ ಅನುದಾನಿತ ಶಾಲೆಗಳಲ್ಲಿ  ಕೂಡ ಮಲಯಾಳವನ್ನು  ಕಲಿಸಬೇಕೆಂದು ಹೇಳಲಾಗುತ್ತಿದೆಯೇ ಹೊರತು ಶಾಲೆಯ ಭೌತಿಕ ಸೌಕರ್ಯದ ಬಗ್ಗೆ  ಏನನ್ನೂ  ಹೇಳುತಿಲ್ಲ. ಇದು ಕೇವಲ ಪ್ರಚಾರಕ್ಕಾಗಿ ಮಾತ್ರ ಮಾಡಿದ ಆದೇಶವಾಗಿದೆ ಎಂದು ಅವರು ಆರೋಪಿಸಿದರು.

Advertisement

ಉಪ್ಪುನೀರು ಕುಡಿಸುತ್ತಿರುವ ಆಡಳಿತ 
ಕಾಸರಗೋಡು ನಗರದ ಜನರು ಎದುರಿಸುತ್ತಿರುವ ಉಪ್ಪುನೀರು ಸಮಸ್ಯೆ ಯನ್ನು  ಪರಿಹರಿಸಲು ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಬೇಕು ಹಾಗೂ ನಗರದ ಉಪ್ಪುನೀರಿನ ಸಮಸ್ಯೆಯನ್ನು  ಕೂಡಲೇ ಸರಿಪಡಿಸಬೇಕು. ಈ ನಿಟ್ಟಿನಲ್ಲಿ  ಸಂಬಂಧಪಟ್ಟ  ಆಡಳಿತ ಅಥವಾ ಇಲಾಖೆಯು ಅಗತ್ಯದ ವ್ಯವಸ್ಥೆ  ಜಾರಿಗೊಳಿಸಬೇಕು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿ ಸುತ್ತ  ಕೆ. ಶ್ರೀಕಾಂತ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ  ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ  ಮುಂತಾದವರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next