Advertisement

ಸಿಕ್ಸರ್‌ ಸಿಡಿಸುವುದು ನನಗಿಷ್ಟ: ಹಾರ್ದಿಕ್‌ ಪಾಂಡ್ಯ

09:04 AM Sep 26, 2017 | |

ಇಂದೋರ್‌: ಹಾರ್ದಿಕ್‌ ಪಾಂಡ್ಯ! ಈ ಹೆಸರೀಗ ಭಾರತೀಯ ಕ್ರಿಕೆಟ್‌ನಲ್ಲಷ್ಟೇ ಅಲ್ಲ, ವಿಶ್ವ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಇದಕ್ಕೆ ಕಾರಣ ಹಲವು. ಹಾರ್ಡ್‌ ಹಿಟ್ಟಿಂಗ್‌ ಪವರ್‌, ಆಲ್‌ರೌಂಡ್‌ ಶೋ, ಎಷ್ಟೇ ಕಠಿನ ಸನ್ನಿ ವೇಶದಲ್ಲೂ ಕುಂದದ ಆತ್ಮ ವಿಶ್ವಾಸ, ಮ್ಯಾಚ್‌ ವಿನ್ನಿಂಗ್‌ ಪರಾಕ್ರಮ… ಇತ್ಯಾದಿ. 

Advertisement

ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಭಾರತದ ಎರಡು ಗೆಲುವುಗಳಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಿದ್ದೇ ಪಾಂಡ್ಯ ಎಂಬುದನ್ನು ಮರೆಯುವಂತಿಲ್ಲ. ಚೆನ್ನೈಯ ಮೊದಲ ಪಂದ್ಯದಲ್ಲಿ 83 ರನ್‌ ಹಾಗೂ 2 ವಿಕೆಟ್‌, ಇಂದೋರ್‌ನಲ್ಲಿ ಒಂದು ವಿಕೆಟ್‌ ಜತೆಗೆ 78 ರನ್‌. ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿ. ಸ್ಪಿನ್ನರ್‌ಗಳನ್ನು ಅಟ್ಟಾಡಿಸುವುದರಲ್ಲಿ ಪಾಂಡ್ಯ ಅವರದು ಎತ್ತಿದ ಕೈ!

“ನೀವು ಹೇಗೂ ತಿಳಿದುಕೊಳ್ಳಿ’
ಇಂದೋರ್‌ ಪಂದ್ಯದ ಬಳಿಕ ಮಾತಾ ಡಿದ ಹಾರ್ದಿಕ್‌ ಪಾಂಡ್ಯ ತಮ್ಮ ಸಿಕ್ಸರ್‌ ಸಾಮರ್ಥ್ಯದ ಬಗ್ಗೆ ಹೇಳಿಕೊಂಡರು. ಪಾಕಿಸ್ಥಾನ ವಿರುದ್ಧದ ಐಸಿಸಿ ಚಾಂಪಿ ಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪ್ರದರ್ಶಿ ಸಿದ ಸಿಡಿಲಬ್ಬರದ ಬ್ಯಾಟಿಂಗೇ ತಮಗೆ ಸ್ಫೂರ್ತಿ ಆಗಿರಬಹುದೇ ಎಂಬುದು ಮುಖ್ಯ ಪ್ರಶ್ನೆಯಾಗಿತ್ತು. “ನೀವು ಹೇಗೂ ತಿಳಿದುಕೊಳ್ಳಬಹುದು. ನನಗೇನೂ ಸಮಸ್ಯೆ ಇಲ್ಲ. ಆದರೆ ಇದಕ್ಕೂ ಮೊದಲು ನಾನು ಐಪಿಎಲ್‌ನಲ್ಲಿ ಗಮ ನಾರ್ಹ ಬ್ಯಾಟಿಂಗ್‌ ನಡೆಸಿದ್ದೆ. ಕಳೆದ ವರ್ಷದ ಐಪಿಎಲ್‌ ನನ್ನ ಪಾಲಿಗೆ ಅಷ್ಟೊಂದು ಯಶಸ್ಸು ತಂದು ಕೊಡಲಿಲ್ಲ. ಹೀಗಾಗಿ ಕಠಿನ ಅಭ್ಯಾಸ ನಡೆಸಿ ಫಾರ್ಮ್ಗೆ ಮರಳಿದೆ…’ ಎಂದರು.

ಪಾಕ್‌ ವಿರುದ್ಧದ ಆ ಫೈನಲ್‌ನಲ್ಲಿ ಪಾಂಡ್ಯ ಅವರದು ಏಕಾಂಗಿ ಹೋರಾಟವಾಗಿತ್ತು. ಭಾರತದ ಸರದಿಯಲ್ಲಿ ದಾಖಲಾದ ಆರೂ ಸಿಕ್ಸರ್‌ಗಳು ಪಾಂಡ್ಯ ಬ್ಯಾಟಿನಿಂದಲೇ ಸಿಡಿದಿದ್ದವು. ಪಾಂಡ್ಯ 43 ಎಸೆತಗಳಿಂದ 76 ರನ್‌ ಬಾರಿಸಿ ರನೌಟಾಗಿದ್ದರು.

ಸಿಕ್ಸರ್‌ ಬಾರಿಸುವುದೇ ಆಟವಲ್ಲ
“ಸಿಕ್ಸರ್‌ ಬಾರಿಸುವುದೆಂದರೆ ನನಗೆ ಬಹಳ ಇಷ್ಟ. ಬಾಲ್ಯದಿಂದಲೇ ನಾನು ಸಿಕ್ಸರ್‌ ಹೊಡೆಯು ವತ್ತ ಹೆಚ್ಚಿನ ಗಮನ ನೀಡುತ್ತಿದ್ದೆ. ಇದರಲ್ಲಿ ಯಶಸ್ವಿಯೂ ಆಗಿದ್ದೆ. ಈಗ ಇದರಲ್ಲಿ ಹೆಚ್ಚಿನ ಸುಧಾರಣೆಯಾಗಿದೆ…’ ಎಂದರು.

Advertisement

“ಅಂದಮಾತ್ರಕ್ಕೆ ಸಿಕ್ಸರ್‌ ಬಾರಿಸುವುದೇ ನನ್ನ ಆಟವಲ್ಲ. ಬ್ಯಾಟಿಂಗಿಗೂ ಮುನ್ನ ಪಂದ್ಯವನ್ನು ಅರಿತುಕೊಳ್ಳುವುದು ಅಗತ್ಯ. ನಾನು ಈ ಕೆಲಸ ವನ್ನು ಮೊದಲು ಮಾಡುತ್ತೇನೆ. ಚೆನ್ನೈಯಲ್ಲಿ ಝಂಪ ಬೌಲಿಂಗಿಗೆ ಇಳಿಯುತ್ತಾರೆ, ಇವರ ಎಸೆತ ಗಳಿಗೆ ಯಾವಾಗ ಬೇಕಾದರೂ ಸಿಕ್ಸರ್‌ ಹೊಡೆಯ ಬಲ್ಲೆ ಎಂಬ ಲೆಕ್ಕಾಚಾರ ನನ್ನದಾಗಿತ್ತು. ಇದಕ್ಕಾಗಿ ಏಳನೇ ಕ್ರಮಾಂಕದ ತನಕ ಕಾದಿದ್ದೆ. ಎಲ್ಲವೂ ನನ್ನ ಯೋಜನೆಗೆ ತಕ್ಕಂತೆ ನಡೆಯಿತು. ಪಂದ್ಯದ ರಭಸವನ್ನು ಬದಲಿಸಲು ಸಾಧ್ಯವಾಯಿತು. ಇಂಥ ಸಂದರ್ಭದಲ್ಲಿ ನಮಗೆ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮುಖ್ಯವೆನಿಸುತ್ತದೆ’ ಎಂದರು.

ವ್ಯತ್ಯಾಸವೇನೂ ತಿಳಿಯಲಿಲ್ಲ
ಇಂದೋರ್‌ನಲ್ಲಿ ಏಳರ ಬದಲು 4ನೇ ಕ್ರಮಾಂಕಕ್ಕೆ ಭಡ್ತಿಗೊಳಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಂಡ್ಯ, “ನನಗೇನೂ ವ್ಯತ್ಯಾಸ ಗೊತ್ತಾಗಲಿಲ್ಲ. ಆದರೆ ಇದೊಂದು ಸವಾಲು ಎಂದು ಭಾವಿಸುವ ಬದಲು ಈ ಹಂತ
ದಲ್ಲಿ ತಂಡಕ್ಕೆ ನನ್ನಿಂದ ಏನೋ ಬೇಕಾಗಿದೆ, ಅದಕ್ಕಾಗಿ ಇಂಥ ಅವಕಾಶ ನೀಡಿದ್ದಾರೆ ಎಂದು ಭಾವಿಸಿದೆ. ಮುಂದಿನ ಬ್ಯಾಟಿಂಗ್‌ ಸರದಿ ನಿನ್ನದು ಎಂದು ಹೇಳಿದಾಗ ಖುಷಿಯಾಯಿತು. ಇಷ್ಟೊಂದು ಎಸೆತ ಆಡಲು ಸಿಕ್ಕಿದ್ದು ಇದೇ ಮೊದಲು. ಹೀಗಾಗಿ ನನ್ನ ಪಾಲಿಗೆ ಇದೊಂದು ವಿಶೇಷ ಅನುಭವ. ಎಲ್ಲೇ ಆಡಲಿ, ನಿಮ್ಮ ಆಟ ವನ್ನು ನೀವು ಆಡಬೇಕು, ಅಷ್ಟೇ…’ ಎಂದರು.

ಇಂಥ ಸ್ಥಿರ ಪ್ರದರ್ಶನದಿಂದ ನಿಮ್ಮ ಮೇಲಿನ ನಿರೀಕ್ಷೆಗಳು ಹೆಚ್ಚುತ್ತ ಹೋಗಬಹುದಲ್ಲವೇ?

 “ಆ ಬಗ್ಗೆ ನಾನು ಹೆಚ್ಚು ಆಲೋಚನೆ 
ಮಾಡಿಲ್ಲ. ನಾನೇನು, ನನ್ನ ಆಟವೇನು ಎಂಬುದರತ್ತ ಮಾತ್ರ ಗಮನ ಕೇಂದ್ರೀಕರಿಸು ತ್ತೇನೆ. ನನ್ನ ಸದ್ಯದ ಗಮನವೆಲ್ಲ “ನನ್ನ ಗೇಮ್‌’ ಆಡುವುದಾಗಿದೆ. ಆದರೆ ಒಂದು ವಿಷಯ ನೆನಪಿನಲ್ಲಿರಲಿ, ಎಲ್ಲ ದಿನವೂ ನಿಮ್ಮಿಂದ ಸ್ಕೋರ್‌ ಮಾಡಲಾಗದು.

ಎಕ್ಸ್‌ಟ್ರಾ ಇನ್ನಿಂಗ್ಸ್‌
    ಆಸ್ಟ್ರೇಲಿಯ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಪ್ರಥಮ ಬಾರಿಗೆ ಮೊದಲ 3 ಪಂದ್ಯಗಳಲ್ಲಿ ಜಯ ಸಾಧಿಸಿತು. 

     ಆಸ್ಟ್ರೇಲಿಯ ವಿರುದ್ಧ ಭಾರತ 2ನೇ ಸಲ ಸತತ 4 ಏಕದಿನ ಪಂದ್ಯಗಳಲ್ಲಿ ಜಯ ಕಂಡಿತು. ಕಳೆದ ವರ್ಷ ಆಸ್ಟ್ರೇಲಿಯ ಪ್ರವಾಸದ ವೇಳೆ ಸಿಡ್ನಿಯಲ್ಲಿ ಆಡಲಾದ ಕೊನೆಯ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು. 1996-98ರ ಅವಧಿಯಲ್ಲೂ ಭಾರತ ಸತತ 4 ಪಂದ್ಯವನ್ನು ಜಯಿಸಿತ್ತು.

     ಭಾರತ ಸತತ 6 ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಗೆದ್ದಿತು. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ 5-0, ವೆಸ್ಟ್‌ ಇಂಡೀಸ್‌ ವಿರುದ್ಧ 3-1, ಇಂಗ್ಲೆಂಡ್‌ ವಿರುದ್ಧ 2-1, ನ್ಯೂಜಿಲ್ಯಾಂಡ್‌ ವಿರುದ್ಧ 3-2, ಜಿಂಬಾಬ್ವೆ ವಿರುದ್ಧ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು.

     ಹಾರ್ದಿಕ್‌ ಪಾಂಡ್ಯ ತಮ್ಮ ಏಕದಿನ ಬಾಳ್ವೆಯಲ್ಲಿ ಈವರೆಗೆ ಸ್ಪಿನ್ನರ್‌ಗಳ ಎಸೆತದಲ್ಲಿ 20 ಸಿಕ್ಸರ್‌ ಬಾರಿಸಿದರು. ವೇಗಿಗಳ ದಾಳಿಗೆ ಹೊಡೆದದ್ದು 5 ಸಿಕ್ಸರ್‌ ಮಾತ್ರ. ಈ ಪಂದ್ಯದಲ್ಲಿ ಅವರ ಎಲ್ಲ 4 ಸಿಕ್ಸರ್‌ಗಳು ಎಡಗೈ ಸ್ಪಿನ್ನರ್‌ ಅಶrನ್‌ ಅಗರ್‌ ಎಸೆತದಲ್ಲೇ ಬಂದವು.

     ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಭಾರತ ಎಲ್ಲ 5 ಏಕದಿನ ಪಂದ್ಯಗಳನ್ನು ಗೆದ್ದಿತು. ಇಲ್ಲಿ ಆಡಲಾದ ಏಕೈಕ ಟೆಸ್ಟ್‌ ಪಂದ್ಯದಲ್ಲೂ ಟೀಮ್‌ ಇಂಡಿಯಾ ಜಯಭೇರಿ ಮೊಳಗಿಸಿತ್ತು.

     2014ರ ಶ್ರೀಲಂಕಾ ವಿರುದ್ಧದ ಕಟಕ್‌ ಪಂದ್ಯದ ಬಳಿಕ ಭಾರತ ತವರಿನಲ್ಲಿ ಮೊದಲ ವಿಕೆಟಿಗೆ ಶತಕದ ಜತೆಯಾಟ ದಾಖಲಿಸಿತು (ರೋಹಿತ್‌-ರಹಾನೆ 139 ರನ್‌). ಅಂದು ಧವನ್‌-ರಹಾನೆ 231 ರನ್‌ ಸೂರೆಗೈದಿದ್ದರು. ಈ ಅವಧಿಯಲ್ಲಿ ಭಾರತ ತವರಿನಲ್ಲಿ 20 ಏಕದಿನ ಪಂದ್ಯಗಳನ್ನಾಡಿದ್ದು, ಒಮ್ಮೆ ಮಾತ್ರ ಮೊದಲ ವಿಕೆಟಿಗೆ 50 ಪ್ಲಸ್‌ ರನ್‌ ಗಳಿಸಿತ್ತು.

     ರೋಹಿತ್‌ ಶರ್ಮ ಆಸ್ಟ್ರೇಲಿಯ ವಿರುದ್ಧ 1,403 ರನ್‌ ಬಾರಿಸಿದರು. ಇದು ಆಸೀಸ್‌ ಎದುರು ಭಾರತೀಯ ಆಟಗಾರನ 2ನೇ ಸರ್ವಾಧಿಕ ಗಳಿಕೆಯಾಗಿದೆ. ತೆಂಡುಲ್ಕರ್‌ 3,077 ರನ್‌ ಹೊಡೆದದ್ದು ದಾಖಲೆ. ಧೋನಿಗೆ 3ನೇ ಸ್ಥಾನ (1,342 ರನ್‌). 

     ಆರನ್‌ ಫಿಂಚ್‌ ಭಾರತದೆದುರಿನ ಪರಾಜಿತ ಪಂದ್ಯದಲ್ಲಿ 2ನೇ ಅತ್ಯಧಿಕ ರನ್‌ ಹೊಡೆದ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ ಎನಿಸಿದರು (124). 2013ರ ನಾಗ್ಪುರ ಪಂದ್ಯದಲ್ಲಿ ಜಾರ್ಜ್‌ ಬೈಲಿ 156 ರನ್‌ ಬಾರಿಸಿದ್ದರು. ಈ ಪಂದ್ಯವನ್ನು ಕಾಂಗರೂ ಪಡೆ 6 ವಿಕೆಟ್‌ಗಳಿಂದ ಸೋತಿತ್ತು.

    ಮಹೇಂದ್ರ ಸಿಂಗ್‌ ಧೋನಿ ಒಂದೇ ರಾಷ್ಟ್ರದ ಪರ 100 ಸ್ಟಂಪಿಂಗ್‌ ನಡೆಸಿದ ವಿಶ್ವದ ಮೊದಲ ಕೀಪರ್‌ ಎನಿಸಿದರು. ಅವರ ಉಳಿದ 3 ಸ್ಟಂಪಿಂಗ್‌ ಏಶ್ಯ ಇಲೆವೆನ್‌ ಪರ ಬಂದಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next