Advertisement

ನಾನು ಮೂಲ್ಕಿ- ಮೂಡಬಿದಿರೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ !

02:50 PM Nov 16, 2017 | Team Udayavani |

ಮೂಲ್ಕಿ-ಮೂಡಬಿದಿರೆ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಯಾರು? ಟಿಕೆಟ್‌ ಯಾರಿಗೆ ಎಂಬದು
ಸದ್ಯದ ಕುತೂಹಲದ ಪ್ರಶ್ನೆ. ಕಾರಣ ಹಾಲಿ ಶಾಸಕ ಕೆ.ಅಭಯಚಂದ್ರ ಜೈನ್‌ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಡಲು ಸಿದ್ಧ ಎನ್ನುವ ಇಂಗಿತ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನಿಂದ ಹಲವರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇವರಲ್ಲಿ ಪ್ರಮುಖ ಹೆಸರು ವಿಧಾನಪರಿಷತ್‌ ಸಚೇತಕ ಐವನ್‌ ಡಿ’ಸೋಜಾ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರದ್ದು. ಯುವ ಕಾಂಗ್ರೆಸ್‌ಗೆ ಅವಕಾಶ ನೀಡಿದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಅಭಯಚಂದ್ರ ಜೈನ್‌ ಹೇಳಿದ್ದು ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕುತೂಹಲ ಕೆರಳಿಸಿದೆ. ಈ ಬೆಳವಣಿಗಳ ಮಧ್ಯೆ ಐವನ್‌ ಡಿಸೋಜ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ. 

Advertisement

ನೀವು ಮೂಡಬಿದಿರೆಯಿಂದ ಟಿಕೆಟ್‌ ಆಕಾಂಕ್ಷಿಯೇ ? 
ಹೌದು. ಇದಕ್ಕೆ ಕಾರಣಗಳೂ ಇವೆ. ನಾನು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದೆ. 2004ರಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಕೊಟ್ಟಿರಲಿಲ್ಲ. 2008ರಲ್ಲಿ ಪಕ್ಷವೇ ಕರೆದು ಟಿಕೆಟ್‌ ಕೊಟ್ಟಿತ್ತು. ಆದರೆ ಚುನಾವಣೆಯಲ್ಲಿ ಸೋತಿದ್ದೆ. ಅಲ್ಲಿಂದ 2013ರ ವರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. 2013ರಲ್ಲಿ ಟಿಕೆಟ್‌ ಸಿಗುವ ನಿರೀಕ್ಷೆ ಇದ್ದರೂ ಸಿಗಲಿಲ್ಲ. ಶಾಸಕ ಅಭಯಚಂದ್ರ ಜೈನ್‌ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿದ್ದರು. ಹೀಗಾಗಿ, ಅಲ್ಲಿ ಅವಕಾಶ ಸೃಷ್ಟಿ ಯಾಗಿದ್ದು, ಅದಕ್ಕೆ ನಾನು ಆಕಾಂಕ್ಷಿ.

ಯುವ ಕಾಂಗ್ರೆಸ್ಸಿಗರಿಗೆ ಟಿಕೆಟ್‌ ಕೊಟ್ಟರೆ ಮಾತ್ರ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದಲ್ಲವೇ? 
ನನ್ನ ತಿಳಿವಳಿಕೆ ಪ್ರಕಾರ, ಒಬ್ಬರು ನಾನು ಚುನಾವಣೆಗೆ ನಿಲ್ಲಲ್ಲ ಎಂದು ಮಾತ್ರ ಹೇಳ ಬಹುದು. ಅವರಿಗೆ ಟಿಕೆಟ್‌ ಕೊಡಬೇಕು ಎಂದೆಲ್ಲ ಹೇಳಲು ಅವಕಾಶವಿಲ್ಲ. ಇದು ಪಕ್ಷದ ಸಿದ್ಧಾಂತ ಕೂಡ. ಯಾರು ನಿಲ್ಲಬೇಕು, ಯಾರು ನಿಲ್ಲಬಾರದು ಎಂದು ನಿರ್ಧರಿಸುವುದು ಪಕ್ಷದ ಹೈಕಮಾಂಡ್‌. ಪಕ್ಷದ ಕಾರ್ಯಕರ್ತರಾಗಿ ಎಲ್ಲರಿಗೂ ಟಿಕೆಟ್‌ ಕೇಳುವ ಅವಕಾಶವಿದ್ದು, ಆ ಪ್ರಕಾರ ನಾನೂ ಕೇಳುತ್ತಿದ್ದೇನೆ. 

ಮಿಥುನ್‌ ರೈಗೆ ಕ್ಷೇತ್ರ ಬಿಟ್ಟು ಕೊಡಲು ಅಭಯರು ಒಲವು ತೋರಿದ್ದಾರಲ್ಲವೇ? 
ಮೂಡಬಿದಿರೆಯಿಂದ ಸ್ಪರ್ಧಿಸುವ ತೀರ್ಮಾನ ತೆಗೆದುಕೊಳ್ಳುವ ಮೊದಲು ಅಭಯಚಂದ್ರ ಅವರನ್ನು ಭೇಟಿ ಮಾಡಿದ್ದೆ. ಯಾರು ನಿಂತರೆ ಗೆಲ್ಲಬಹುದು, ಯಾರಿಗೆ ಹೆಚ್ಚು ಅವಕಾಶವಿದೆ ಎಂಬ ಬಗ್ಗೆ ಸುಮಾರು ಅರ್ಧ ತಾಸು ಚರ್ಚೆಯಾಗಿತ್ತು. ಅಭಯಚಂದ್ರ ಅವರು ನಾನು ಅಭ್ಯರ್ಥಿಯಾದರೆ ಉತ್ತಮ. ಮಿಥುನ್‌ ರೈಗೆ ನಾನು ಹೇಳುತ್ತೇನೆ ಎಂದು ಕೂಡ ಭರವಸೆ ಕೊಟ್ಟಿದ್ದರು. ಆದರೆ ಈಗ ಅವರ ನಿಲುವು ಯಾಕೆ ಬದಲಾಯಿತೋ ಗೊತ್ತಿಲ್ಲ. ಇನ್ನು ಮಿಥುನ್‌ ರೈ ಕೂಡ ಟಿಕೆಟ್‌ ಕೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ.

ಪರಿಷತ್‌ ಸದಸ್ಯರಾಗಿದ್ದು, ಮತ್ತೆ ಟಿಕೆಟ್‌ ಕೇಳುವುದು ಅತಿಯಾಸೆಯಲ್ಲವೇ? 
ವಿಧಾನಸಭೆಗೆ ಆಯ್ಕೆಯಾಗ ಬೇಕೆನ್ನುವುದು ಆಸೆ. ಇದಕ್ಕಾಗಿ 1994ರಿಂದಲೂ ಪ್ರಯತ್ನ ನಡೆಸುತ್ತಾ ಬಂದಿದ್ದೇನೆ. ವಿಧಾನಸಭೆ ಸದಸ್ಯನಾದರೆ ಜನರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ. ಮೂಡಬಿದಿರೆ ಸ್ಥಾನ ಖಾಲಿಯಾಗುತ್ತಿದೆ. ಅಲ್ಲಿಂದ ಸ್ಪರ್ಧೆಗೆ ಅವಕಾಶ ನೀಡಿ ಎಂದು ಹೈಕಮಾಂಡ್‌ ಅನ್ನು ಕೇಳಿದ್ದೇನೆ ಅಷ್ಟೇ.

Advertisement

ಮೂಡಬಿದಿರೆ ಮೇಲೆಯೇ ನಿಮ್ಮ ಕಣ್ಣು ಯಾಕೆ?
ಅತ್ಯಂತ ಪರಿಚಿತ ಕ್ಷೇತ್ರ. ಹಿಂದೆ ನಾನು ಕಾಪು ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಈ ಕ್ಷೇತ್ರದ ಹಲವು ಭಾಗಗಳು ಅದರಲ್ಲಿ ಸೇರಿತ್ತು. ಅಲ್ಲಿ ನನ್ನ ಅಭಿಮಾನಿಗಳು, ಬೆಂಬಲಿಗರು, ಕಾರ್ಮಿಕರು, ರೈತರು, ನನ್ನ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ವಿವಿಧ 5 ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ವೀಕ್ಷಕನಾಗಿ ಉಸ್ತುವಾರಿ ವಹಿಸಿಕೊಂಡಿದ್ದೆ. ಕಾರ್ಯಕರ್ತರೊಂದಿಗೆ ನಿಕಟ ಸಂಭವವಿದೆ. 

ಟಿಕೆಟ್‌ ಹಂಚಿಕೆ ಮೊದಲೇ ಪ್ರಚಾರ ಶುರುಮಾಡಿದ್ದೀರಿ. ಕೊಡುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ? 
ನಾನು ಎಂಎಲ್‌ಸಿ ಆಗುವ ಮೊದಲು ಮತ್ತು ಬಳಿಕ ಜನಪರ ಕೆಲಸ ಮಾಡುತ್ತಿದ್ದೇನೆ. ಇದನ್ನು ಚುನಾವಣಾ ಪ್ರಚಾರ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಮೂಲ್ಕಿ- ಮೂಡಬಿದಿರೆ ಕ್ಷೇತ್ರದಲ್ಲಿ ಎಲ್ಲಾ ಜಿ.ಪಂ.ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ತಾ.ಪಂ.
ನಲ್ಲೂ ಕೆಲವೇ ಸೀಟು ಬಂದಿವೆ. ಪಕ್ಷವನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ. 

ಐವನ್‌ ಓರ್ವ ಪ್ರಚಾರ ಪ್ರಿಯರು ಎಂಬ ಮಾತಿದೆ; ಇದು ನಿಜವೇ? 
ನಾನು ಮಾಡುವ ಕೆಲಸವೇ ಪ್ರಚಾರ ಕೊಡುತ್ತಿದೆ. ಕಳೆದ ಮೂರುವರೆ ವರ್ಷ ಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೇನೆ. ನನ್ನ ಕಚೇರಿಗಳಲ್ಲಿ ದಿನವೊಂದಕ್ಕೆ ಸುಮಾರು 500 ಮಂದಿಯನ್ನು ಭೇಟಿಯಾಗುತ್ತೇನೆ. ಟಿವಿಗಳಲ್ಲಿ ಚರ್ಚೆಗಳಲ್ಲಿ ಪಕ್ಷವನ್ನು ಸಮರ್ಥಿಸಲು ಒಂದು ತಾಸಿನ ಚರ್ಚೆಗೆ ಬೆಂಗಳೂರಿಗೆ ಹೋಗಿದ್ದೂ ಇದೆ. 

ಐವನ್‌ ಡಿಸೋಜ ಮುಖ್ಯಮಂತ್ರಿಗೆ ಬಹಳ ಆಪ್ತರಾಗಿದ್ದು, ಕೇಳಿದೆಲ್ಲ ಸಿಗುತ್ತಿದೆ?
ಮುಖ್ಯಮಂತ್ರಿಯವರಿಗೆ ಎಲ್ಲರೂ ಅಪ್ತರೇ. ಅದರಲಿ ನಾನೂ ಒಬ್ಬ. ಮುಖ್ಯಮಂತ್ರಿಯವರು ನನ್ನ ಕಾರ್ಯವೈಖರಿಯನ್ನು ಗುರುತಿಸಿದ್ದಾರೆ. ನನ್ನ ಪಕ್ಷ ನಿಷ್ಠೆ ,ಬದ್ಧತೆ, ಪ್ರಾಮಾಣಿಕತೆ, ಜನಪರ ಕಾಳಜಿಯನ್ನು ಮುಖ್ಯಮಂತ್ರಿಯವರು ಗಮನಿಸಿದ್ದಾರೆ. 

ಮೂಡಬಿದಿರೆಯಲ್ಲಿ ನೀವು ಕಚೇರಿ ಪ್ರಾರಂಭಿಸಿದ್ದೀರಿ ಎಂಬುದಾಗಿ ಹೈಕಮಾಂಡ್‌ಗೆ ದೂರು ಕೊಟ್ಟಿದ್ದಾರಲ್ಲವೇ?
ಯಾರೂ ದೂರು ಕೊಟ್ಟಿಲ್ಲ. ಇನ್ನು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಮನವಿ ಸ್ವೀಕರಿಸಲೂ ಇಲ್ಲ ಮೂಡಬಿದಿರೆಯಲ್ಲಿರು
ವುದು ಜನಸ್ಪಂದನ ಕಚೇರಿ. ಅದು ಕಾಂಗ್ರೆಸ್‌ಗೆ ಪರ್ಯಾಯವಲ್ಲ.ಅದೊಂದು ಸೇವಾ ಕೇಂದ್ರ ವಾಗಿರುತ್ತದೆ. ಅದು ಮುಚ್ಚಿಸಬೇಕು ಎಂದು ಯಾರೂ ಹೇಳಲು ಆಗುವುದಿಲ್ಲ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next