ಹುಬ್ಬಳ್ಳಿ: ತುರ್ತು ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಅಂಬ್ಯುಲೆನ್ಸ್ ಗಾಗಿ ಕರೆ ಮಾಡಲು ತುರ್ತು ಸ್ಪಂದನೆ ವ್ಯವಸ್ಥೆ ಸಂಖ್ಯೆ112 ಕ್ಕೆ ಚಾಲನೆ ನೀಡಲಾಗಿದೆ. ಕರೆ ಮಾಡಿದ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, ಹತ್ತು ನಿಮಿಷದ ಒಳಗಾಗಿ ಅಗತ್ಯ ಪೊಲೀಸ್ ನೆರವು ದೊರೆಯಲಿದೆ ಎಂದು ಹು.ಧಾ. ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್ ಹೇಳಿದರು.
ಇಲ್ಲಿನ ಚನ್ನಮ್ಮ ವೃತ್ತದ ಬಳಿ ತುರ್ತು ಸ್ಪಂದನ ವ್ಯವಸ್ಥೆ ಸಂಖ್ಯೆ112 ಕ್ಕೆ ನಿಯೋಜಿಸಲಾಗಿರುವ ಹೊಯ್ಸಳ ಗಸ್ತು ವಾಹನಗಳಿಗೆ ಚಾಲನೆ ನೀಡಿ, ನಂತರ ಉಪನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ತುರ್ತು ಸ್ಪಂದನ ವ್ಯವಸ್ಥೆ ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸುವ ಪೊಲೀಸ್ ತಂಡ ಅಗತ್ಯ ಸಹಾಯ ಒದಗಿಸುವುದು. ಸಾರ್ವಜನಿಕರು ಪೊಲೀಸ್ ದೂರುಗಳಿಗೆ ಸಂಬಂಧಿಸಿದಂತೆ ನೇರವಾಗಿ 112 ಗೆ ಕರೆ ಮಾಡಬಹುದು. ತುರ್ತು ಸ್ಪಂದನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಅ್ಯಪ್ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ 112 India mobile app ಡೌನ್ ಲೋಡ್ ಮಾಡಿಕೊಳ್ಳಬಹುದು. 112hubdwd@gmail.com ಗೆ ಮೇಲ್ ಮಾಡಿ ಸಹ ದೂರು ಸಲ್ಲಿಸಬಹುದಾಗಿದೆ ಎಂದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್. ಡಿ. ಬಸರಗಿ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು