Advertisement

ನಿನ್ನ ನೆನಪುಗಳ ಜೊತೆ ಜೊತೆಗೇ ಹೇಗೋ ಬದುಕಿದ್ದೇನೆ!

06:00 AM Jul 10, 2018 | |

ನೀನಿಲ್ಲದೆ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಾರೆನೆಂಬ ಅಂದಿನ ಆ ನಂಬಿಕೆ ಇತ್ತಲ್ಲ, ಅದೊಂದು ಮಾತ್ರ ಬುಡಮೇಲಾಗಿದೆ. ಉಸಿರಾಡುತ್ತಿದ್ದೇನೆ, ನಗುತ್ತಿದ್ದೇನೆ, ಅಳುವೂ ಇದೆ. ಒಟ್ಟಿನಲ್ಲಿ ಬದುಕಿದ್ದೇನೆ.. ನೀನಿಲ್ಲವೆಂಬ ಕೊರಗು ಮಾತ್ರ ನನ್ನ ಜೊತೆಜೊತೆಗೇ ಹೆಜ್ಜೆಹಾಕುತ್ತಿದೆ.

Advertisement

ನೀನ್ಯಾವಾಗಲೂ ಇಷ್ಟಪಟ್ಟು ಒರಗಿ ಕೂತು ದಣಿವಾರಿಸಿಕೊಳ್ಳುತ್ತಿದ್ದೆಯಲ್ಲ? ಅದೇ, ನಿನ್ನ ಮನೆಯ ಹಿಂದಿನ ತೋಟದಲ್ಲಿದ್ದ ಆ ಹಳೆಯ ತೆಂಗಿನ ಮರದ ಮೇಲೆ ನಿನ್ನ ಹೆಸರನ್ನು ನಾನದೆಷ್ಟು ಪ್ರೀತಿಯಿಂದ ಕೆತ್ತಿದ್ದೆ ಗೊತ್ತಾ? ಆಗ ಶುರುವಾದ ಕೈ ನೋವನ್ನು ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕಾಗಿತ್ತು.

ಅದ್ಯಾವಾಗ ಅದು ನಿನ್ನ ಕಣ್ಣಿಗೆ ಬಿತ್ತೋ ಗೊತ್ತಿಲ್ಲ. ತಕ್ಷಣವೇ ಬಂದು ಕೆಂಡ ಕಾರುವ ಕಣ್ಣಲ್ಲೊಮ್ಮೆ ದುರುದುರನೆ ನೋಡಿ,  “ಮರ ಅಂದ್ರೆ ಮನುಷ್ಯರಿದ್ದ ಹಾಗೆ. ಒಂದು ಸಣ್ಣ ಗಾಯವಾದರೂ ನಮ್ಮಿಂದ ಸಹಿಸೋಕಾಗಲ್ಲ. ಅಂತಾದ್ರಲ್ಲಿ ಆ ಮರಕ್ಕೆ ಅಷ್ಟೆಲ್ಲಾ ಗಾಯ ಮಾಡಿದ್ಯಲ್ಲ? ಮನುಷ್ಯಳಾ ನೀನು? ನೀನು ಹೆಣ್ಣಲ್ಲ ರಾಕ್ಷಸಿ…’ ಅದು ಇದು ಎಂದು ಕೂಗಾಡಿ ನನ್ನ ಕಣ್ಣಲ್ಲಿ ನೀರು ಬರೋವರೆಗೂ ಬೈದಿದ್ದೂ ಅಲ್ಲದೆ ನನ್‌ ಕೈಯಿಂದ್ಲೆ ವಾರಾನುಗಟ್ಟಲೆ ಅದರ ಆರೈಕೆಯನ್ನೂ  ಮಾಡಿಸಿದ್ದೆ.

ನನ್ನ ದರಿದ್ರ ಕೈಗಳ ಆರೈಕೆಯಿಂದಲೋ ಏನೋ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಮರಗಳಿಗಿಂತ ಆರೋಗ್ಯವಾಗಿದ್ದ ಆ ಹಳೆಯ ಮರ ಮಾತ್ರ ಇದ್ದಕ್ಕಿದ್ದ ಹಾಗೆ ಒಣಗಿ, ಸೊರಗಿ ಬಿದ್ದೇ ಹೋಗಿತ್ತು. ಆ ಬಿದ್ದ ಮರದ ಬುಡದಲ್ಲಿ ನಿಂತು ನೀನದೆಷ್ಟು ಬಿಕ್ಕಳಿಸಿದ್ದೆ ಅನ್ನೋದು ಬಹುಶಃ ನನ್ನ ಬಿಟ್ಟು ಮತ್ಯಾರಿಗೂ ಗೊತ್ತಿಲ್ಲ. ನಿನ್ನನ್ನು ಆ ದುಃಖದಿಂದ ದೂರ ಮಾಡೋಕೆ ನಾನದೆಷ್ಟು ಸಾಹಸ ಮಾಡಿದ್ದೆ ಗೊತ್ತಾ? ಕೊನೆಗೆ ಆ ಮರವಿದ್ದ ಜಗದಲ್ಲಿ ಪುಟ್ಟ ತೆಂಗಿನ ಸಸಿಯೊಂದನ್ನು ತಂದು ನಿನ್ನ ಕೈಯ್ನಾರೆ ನೆಡಿಸಿ, ನಿನ್ನನ್ನು ಮೊದಲಿನಂತಾಗಿಸುವಲ್ಲಿ ಯಶಸ್ವಿಯಾಗಿದ್ದೆ.

ಅದೀಗ ಮೊದಲಿತ್ತಲ್ಲ; ಥೇಟ್‌ ಹಾಗೇ ಒಂದು ದೊಡ್ಡ ಮರವಾಗಿ ಬೆಳೆದು ನಿಂತಿದೆ. ಜೊತೆಗೆ ಫ‌ಲವನ್ನೂ ಕೊಡ್ತಿದೆ. ತುಂಬ ಆರೋಗ್ಯವಾಗಿಯೂ ಇದೆ. ಆದರೆ ಅದನ್ನು ಮಗುವಿನಂತೆ ಆರೈಕೆ ಮಾಡಿ ಅದರ ನೆರಳಿಗಾಗಿ ಹಾತೊರೆಯುತ್ತಿದ್ದ ನೀನು ಮಾತ್ರವೇ ಕಾಲನ ಕಾಲು¤ಳಿತಕ್ಕೆ ಸಿಲುಕಿ ಕಳೆದು ಹೋಗಿರುವೆ. 

Advertisement

ಇಂಥದ್ದೊಂದು ದಿನದ ಸಣ್ಣ ಊಹೆಯೂ ನನಗಿರಲಿಲ್ಲ. ನೀನಿಲ್ಲದೆ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಾರೆನೆಂಬ ಅಂದಿನ ಆ ನಂಬಿಕೆ ಇತ್ತಲ್ಲ, ಅದೊಂದು ಮಾತ್ರ ಬುಡಮೇಲಾಗಿದೆ. ಉಸಿರಾಡುತ್ತಿದ್ದೇನೆ, ನಗುತ್ತಿದ್ದೇನೆ, ಅಳುವೂ ಇದೆ. ಒಟ್ಟಿನಲ್ಲಿ ಬದುಕಿದ್ದೇನೆ.. ನೀನಿಲ್ಲವೆಂಬ ಕೊರಗು ಮಾತ್ರ ನನ್ನ ಜೊತೆಜೊತೆಗೇ ಹೆಜ್ಜೆಹಾಕುತ್ತಿದೆ.

ನೀ ಕೊಟ್ಟ ಪ್ರೀತಿಯೇ ಅಂಥದ್ದು ಸುರಹೊನ್ನೆಯಿಂದ ಹೊರ ಹೊಮ್ಮುವ ಘಮಲು!! ಪ್ರೀತಿ ಎಂದರೆ ಅದು ಕೇವಲ ವಾಂಛೆಯಲ್ಲ, ತಾಯಿಯೋರ್ವಳು ಗರ್ಭ ಧರಿಸಿದ ಮೊದಲ ದಿನದಿಂದಲೇ ತನ್ನ ಕೂಸಿಗಾಗಿ ಬಚ್ಚಿಟ್ಟುಕೊಳ್ಳುತ್ತಾಳಲ್ಲ; ಅಂಥದ್ದೊಂದು ಅಮೃತ ಸಮಾನ ಭಾವವದು. ಹೂಬಳ್ಳಿಯೊಂದರಲ್ಲಿ ಅರಳಿನಿಂತ ಮೊದಲ ಹೂವಿನಷ್ಟೇ ಕೋಮಲವದು.

ಅದೊಂದು ದಿನ ಸೂರ್ಯಾಸ್ತದ ಸಮಯದಲ್ಲಿ ಹೂವಿನ ತೋಟದ ಬದುವಿನಲ್ಲಿ ಕುಳಿತು; “ಬದುಕು ಹೇಗೇ ಇರಲಿ. ಅದೆಷ್ಟೇ ನೋವಿರಲಿ, ಅದೆಂಥದ್ದೇ ಕಡುಕಷ್ಟವಿರಲಿ. ಕೊನೆಗೆ ನಾನೇ ಇಲ್ಲದಿರಲಿ, ನಿನ್ನ ತುಟಿಯಂಚಲ್ಲಿರುವ ಈ ನಗುವೆಂಬ ಒಡವೆಯೊಂದನ್ನು ಮಾತ್ರ ಕಳಚಿಡದಿರು.. ನನ್ನಾಣೆ’ ಎಂದುಬಿಟ್ಟಿದ್ದೆ ನೀನು. ನಾನು ಯಾವುದೋ ಹುಮ್ಮಸ್ಸಿನಲ್ಲಿ ಹೂn ಎಂದು ಹೂಗುಟ್ಟಿದ್ದೆ.

ಆದರೂ ನೀನು ಆಣೆ ಮಾಡಿಸಿಕೊಂಡಷ್ಟು ಸಲೀಸಲ್ಲ ನಗುತ್ತಲೇ ಬದುಕುವುದು. ಅಳುವುದಕ್ಕಾದರೂ ಏನಿದೆ ಹೇಳು ನೀನಿಲ್ಲವೆಂಬ ಕೊರಗನ್ನು ಮೀರಿಸುವಂಥದ್ದು?! ಬದುಕಿದ್ದೂ ಸತ್ತಿರುವವರೇ ತುಂಬಿರುವ ಈ ಜಗತ್ತಿನಲ್ಲಿ. ಇಲ್ಲದೆಯೂ ಇದ್ದಂತಿರುವ ನಿನ್ನ ಆರಾಧನೆಯ ಮಹಾಕಾರಣವೊಂದಿದೆಯಲ್ಲ? ಹಾಗಾಗಿ ನಾನಿನ್ನೂ ಉಸಿರಾಡುತ್ತಿದ್ದೇನೆ..

ಸತ್ಯ ಗಿರೀಶ್‌

Advertisement

Udayavani is now on Telegram. Click here to join our channel and stay updated with the latest news.

Next