Advertisement

ಭಾರತಕ್ಕೆ ನೇರ ಕ್ವಾರ್ಟರ್‌ ಫೈನಲ್‌

09:00 AM Dec 09, 2018 | |

ಭುವನೇಶ್ವರ: ಆತಿಥೇಯ ಭಾರತ “ಸಿ’ ವಿಭಾಗದ ಅಗ್ರಸ್ಥಾನ ಅಲಂಕರಿಸಿ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಕೆನಡಾವನ್ನು 5-1 ಗೋಲುಗಳಿಂದ ಮಣಿಸುವ ಮೂಲಕ ಮನ್‌ಪ್ರೀತ್‌ ಪಡೆ ಈ ಗೌರವಕ್ಕೆ ಪಾತ್ರವಾಯಿತು.

Advertisement

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಬೆಲ್ಜಿಯಂ ಕೂಡ 5-1 ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಇದರಿಂದ ಭಾರತ ಹಾಗೂ ಬೆಲ್ಜಿಯಂ ತಂಡಗಳೆರಡೂ 7 ಅಂಕ ಸಂಪಾದಿಸಿದವು. ಆದರೆ ಗೋಲು ವ್ಯತ್ಯಾಸದಲ್ಲಿ ಮುಂದಿದ್ದ ಭಾರತಕ್ಕೆ ಅಗ್ರಸ್ಥಾನ ಒಲಿಯಿತು (ಗೋಲು ಅಂತರ: ಭಾರತ-9, ಬೆಲ್ಜಿಯಂ-5). ಬೆಲ್ಜಿಯಂ ಕ್ರಾಸ್‌ ಓವರ್‌ ಪಂದ್ಯದಲ್ಲಿ ನಾಕೌಟ್‌ ಅದೃಷ್ಟಪರೀಕ್ಷೆಗೆ ಇಳಿಯಬೇಕಿದೆ.

4ನೇ ಕ್ವಾರ್ಟರ್‌ನಲ್ಲಿ ಮೇಲುಗೈ
ಭಾರತ-ಕೆನಡಾ ಪಂದ್ಯ ಆರಂಭದಲ್ಲಿ ತೀವ್ರ ಪೈಪೋಟಿಯಿಂದ ಕೂಡಿತ್ತು. 3ನೇ ಕ್ವಾರ್ಟರ್‌ ತನಕ 1-1 ಸಮಬಲದ ಹೋರಾಟ ಜಾರಿಯಲ್ಲಿತ್ತು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಭಾರತ ಕೆನಡಾದ ಮೇಲೆರಗಿ ಸತತವಾಗಿ ಗೋಲು ಸಿಡಿಸುತ್ತ ಹೋಯಿತು. 46ನೇ ನಿಮಿಷದಲ್ಲಿ ಚಿಂಗ್ಲೆನ್ಸಾನ, 47ನೇ ನಿಮಿಷದಲ್ಲಿ ಲಲಿತ್‌ ಉಪಾಧ್ಯಾಯ, 51ನೇ ನಿಮಿಷದಲ್ಲಿ ಅಮಿತ್‌ ರೋಹಿದಾಸ್‌ ಹಾಗೂ 57ನೇ ನಿಮಿಷದಲ್ಲಿ ಪುನಃ ಲಲಿತ್‌ ಉಪಾಧ್ಯಾಯ ಗೋಲು ಬಾರಿಸಿದರು. ಭಾರತದ ಮೊದಲ ಗೋಲು 12ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಅವರಿಂದ ದಾಖಲಾಯಿತು.

ಕೆನಡಾಕ್ಕೆ ಕ್ರಾಸ್‌ ಓವರ್‌ ಟಿಕೆಟ್‌
ಕೆನಡಾದ ಏಕೈಕ ಗೋಲನ್ನು 39ನೇ ನಿಮಿಷದಲ್ಲಿ ಫ್ಲೋರಿಸ್‌ ಸನ್‌ ವಾನ್‌ ಹೊಡೆದರು. ಲೀಗ್‌ ಹಂತದಲ್ಲಿ ದಕ್ಷಿಣ ಆಫ್ರಿಕಾ, ಕೆನಡಾ ತಲಾ ಒಂದು ಅಂಕದೊಂದಿಗೆ ಸಮಬಲ ಸಾಧಿಸಿದರೂ, ಗೋಲು ವ್ಯತ್ಯಾಸದಲ್ಲಿ ಮುಂದಿದ್ದ ಕೆನಡಾಕ್ಕೆ ಕ್ರಾಸ್‌ ಓವರ್‌ ಟಿಕೆಟ್‌ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next