Advertisement

ಧಾರಾಕಾರ ಮಳೆ: ಕೃಷಿ ಚಟುವಟಿಕೆ ಸ್ಥಗಿತ; ಉಕ್ಕಿ ಹರಿಯುತ್ತಿರುವ ನದಿಗಳು

06:50 AM Jun 15, 2018 | Team Udayavani |

ಅಜೆಕಾರು: ಪಶ್ಚಿಮ ಘಟ್ಟ ಭಾಗದಲ್ಲಿ ಜೂ.13ರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ ಹಳ್ಳಕೊಳ್ಳಗಳು ತುಂಬಿ ಮಳೆಯ ನೀರು ಕೃಷಿ ಭೂಮಿಗೆ ನುಗ್ಗಿದೆ.

Advertisement

ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಾದ ಮಾಳ, ಕೆರ್ವಾಶೆ, ಶಿರ್ಲಾಲು, ಅಂಡಾರು, ಮುಟ್ಲುಪಾಡಿ ಗ್ರಾಮಗಳ ರೈತರ ಕೃಷಿ ಭೂಮಿ ನೆರೆಯಿಂದ ಆವೃತವಾಗಿದೆ.

ಮನೆಗೆ ನುಗ್ಗಿದ ನೀರು
ಗ್ರಾಮೀಣ ಭಾಗದಲ್ಲಿ ಭಾರೀ ಮಳೆಗೆ ಕೃಷಿ ಭೂಮಿಗೆ ನೀರು ನುಗ್ಗಿದರೆ ಪಟ್ಟಣ ಪ್ರದೇಶಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆಗೆ ನುಗ್ಗಿದೆ.

ಮರ್ಣೆ ಪಂ. ವ್ಯಾಪ್ತಿಯ ಅಜೆಕಾರು ಪೇಟೆಯ ಲತಾ ಟೆಲ್ಲಿಸ್‌ರವರ ಮನೆಗೆ ಚರಂಡಿಯ ನೀರು ನುಗ್ಗಿ ಆತಂಕ ಸೃಷ್ಟಿಯಾಗಿತ್ತು. ಚರಂಡಿಯಲ್ಲಿ ಕಸ ತ್ಯಾಜ್ಯ ತುಂಬಿರುವುದರಿಂದ ಭಾರೀ ಮಳೆಗೆ ನೀರು ಚರಂಡಿಯ ಮೇಲೆ ಬಂದು ಮನೆಯೊಳಗೆ ನುಗ್ಗಿದೆ.

ವಿಷಯ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್‌ ಅಧ್ಯಕ್ಷ ದಿನೇಶ್‌ ಕುಮಾರ್‌ ಅಧಿಕಾರಿಗಳ ಗಮನಕ್ಕೆ ತಂದು ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಿ ಮನೆಗೆ ನೀರು ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.

Advertisement

ತುಂಬಿ ಹರಿದ ಸುವರ್ಣಾ ನದಿ
ಎಣ್ಣೆಹೊಳೆ ಮೂಲಕ ಹಾದು ಹೋಗುವ ಸುವರ್ಣಾ ನದಿಯು ತುಂಬಿ ಹರಿದಿದ್ದು ನದಿ ಪಾತ್ರದ ಕೃಷಿ ಭೂಮಿ, ತೋಟ ಜಲಾವೃತಗೊಂಡಿದೆ. ಎಣ್ಣೆಹೊಳೆ ಪೇಟೆಯ ಬಸ್‌ ನಿಲ್ದಾಣದವರೆಗೂ ನೀರು ತುಂಬಿ ಅಪಾಯಕಾರಿಯಾಗಿ ನದಿಯಲ್ಲಿ ನೀರು ಹರಿದಿದೆ.

ಗದ್ದೆಗಳಿಗೆ, ಅಡಿಕೆ, ಬಾಳೆ ತೋಟಗಳಿಗೆ ನೀರು ನುಗ್ಗಿ ಹಾನಿ
ನದಿಗಳು ತುಂಬಿ ಹರಿಯುತ್ತಿದ್ದು, ಈ ನದಿಗಳ ನೀರು ಅಕ್ಕಪಕ್ಕದ ಗದ್ದೆಗಳಿಗೆ ಹಾಗೂ ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿ ಹಾನಿ ಉಂಟಾಗಿದೆ. ಮಳೆಯ ನೀರಿನ ಸೆಳೆತಕ್ಕೆ ಭತ್ತದ ಗದ್ದೆಗಳ ಅಂಚು ಕೊಚ್ಚಿಕೊಂಡು ಹೋಗಿದ್ದರೆ ಅಡಿಕೆ ತೋಟಕ್ಕೆ ಹಾಕಿದ ಹಸಿರೆಲೆ ಗೊಬ್ಬರ ನೀರು ಪಾಲಾಗಿದೆ. ಭತ್ತದ ಗದ್ದೆಗಳಲ್ಲಿ ನೀರು ತುಂಬಿ ಬೃಹತ್‌ ನದಿಯಂತೆ ಭಾಸವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next