Advertisement

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

12:58 AM Jul 05, 2024 | Team Udayavani |

ಮಂಗಳೂರು: ಕರಾವಳಿಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ನೆರೆ ಬಂದು ಹಾನಿಯಾಗಿದ್ದರೆ, ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ ಮತ್ತು ಕಾರ್ಕಳ ತಾಲೂಕಿನಲ್ಲಿ ನೆರೆ ಏರಿ ಸಮಸ್ಯೆಯಾಗಿದೆ. ಕೊಲ್ಲೂರಿನಲ್ಲಿ ಗುಡ್ಡ ಕುಸಿದು ಮಹಿಳೆಯೋರ್ವರು ಸಾವಿಗೀಡಾಗಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಳೆ ಬಿರುಸು ಪಡೆದುಕೊಂಡಿದ್ದು, ಕೆಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಗ್ರಾಮಾಂತರ ಪ್ರದೇಶದ ವಿವಿಧೆಡೆ ಕೃಷಿ ಪ್ರದೇಶಗಳಿಗೆ ಮತ್ತು ಕೆಲವು ಮನೆಗಳಿಗೆ ನೆರೆ ನೀರು ನುಗ್ಗಿದೆ. ಹಲವು ಮನೆಗಳ ಮೇಲೆ ಗಾಳಿಯಿಂದ ಮರ ಬಿದ್ದು ಹಾನಿ ಸಂಭವಿಸಿದೆ.

ಮುನ್ನೆಚ್ಚರಿಕೆ ದೃಷ್ಟಿಯಿಂದ ಗುರುವಾರ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಸುಳ್ಯದ ಜಯನಗರದಲ್ಲಿ ಮನೆಗೆ ಮರಬಿದ್ದು ಹಾನಿಯಾಗಿದೆ. ಗೂನಡ್ಕದಲ್ಲಿ ಬರೆ ಕುಸಿತ ಸಂಭವಿಸಿದೆ. ಗುತ್ತಿಗಾರು ಸಮೀಪ ಹೆದ್ದಾರಿ ಬದಿ ದರೆ ಕುಸಿದಿದೆ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಆವರಣದ ತಡೆಗೋಡೆ ಕುಸಿತಗೊಂಡಿದೆ.

ನೇತ್ರಾವತಿ-ಮೃತ್ಯುಂಜಯ, ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಉಳ್ಳಾಲ ಸಮೀಪದ ಚೆಂಬುಗುಡ್ಡೆಯಲ್ಲಿ ಮನೆ ಕುಸಿತಗೊಂಡಿದೆ. ಉಳ್ಳಾಲದಲ್ಲಿ ರಸ್ತೆಗೆ ಮರ ಬಿದ್ದಿದೆ.
ಮಂಗಳೂರಿನ ದೇರೆಬೈಲ್‌ ಬಳಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಮಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ. ನಗರದ ಹೊರವಲಯದ ಅಡ್ಯಾರ್‌ ಬಳಿ ಒಳ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಮನೆಯೊಂದಕ್ಕೆ ನೀರು ನುಗ್ಗಿದೆ.

Advertisement

ಮೂರು ದಿನ “ಆರೆಂಜ್‌ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜು. 5 ರಿಂದ 7ರವರೆಗೆ “ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಹಿನ್ನಲೆಯಲ್ಲಿ ಗರಿಷ್ಠ ಉಷ್ಣಾಂಶ ಕಡಿಮೆಯಾಗಿದ್ದು, 25.3 ಡಿ.ಸೆ. ದಾಖಲಾಗಿ ವಾಡಿಕೆಗಿಂತ 3.8 ಡಿ.ಸೆ. ಕಡಿಮೆ ಮತ್ತು 22.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.5 ಡಿ.ಸೆ. ಕಡಿಮೆ ಇತ್ತು.

ಉಡುಪಿ ಜಿಲ್ಲೆ: 53 ಮನೆಗಳಿಗೆ ಹಾನಿ
ಉಡುಪಿ: ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗಿದ್ದು, ಗಾಳಿ ಮಳೆಗೆ 53 ಮನೆಗಳಿಗೆ ಮತ್ತು ಕೃಷಿ ಭೂಮಿಗೆ ಹಾನಿ ಸಂಭವಿಸಿದೆ. ಜಿಲ್ಲೆಯ ಸೌಪರ್ಣಿಕಾ, ಎಡಮಾವಿನ ಹೊಳೆ, ಚಕ್ರ, ಕುಬj ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಸೃಷ್ಟಿಸಿವೆ.

ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕಿನ ವಿವಿಧೆಡೆ ನೆರೆ ನೀರು ಮನೆಗಳಿಗೆ ನುಗ್ಗಿದೆ. ಕೆಲವು ಕಡೆ ರಸ್ತೆ ಮೇಲೆ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್‌ ಕಂಬಗಳ ಮೇಲೆ ಮರ ಬಿದ್ದುದರಿಂದ ಹಲವು ಸಮಯ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತು.

ಅಂಗನವಾಡಿ ಮೇಲೆ ಮರ ಬಿದ್ದು ಹಾನಿ
ಕಾರ್ಕಳ ತಾಲೂಕಿನ ಕುಕ್ಕುಂದೂರು ಅಯ್ಯಪ್ಪ ನಗರ ಅಂಗನವಾಡಿ ಕೇಂದ್ರದ ಮೇಲೆ ಜು.3ರಂದು ಸಂಜೆ 4.45ರ ವೇಳೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಮಕ್ಕಳು ಮನೆಗೆ ಹೋಗಿಯಾಗಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ. ಕಟ್ಟಡಕ್ಕೆ ಹಾನಿಯಾಗಿದೆ.
ಗುರುವಾರ ಮಣಿಪಾಲ, ಮಲ್ಪೆ, ಉಡುಪಿ, ಕಾಪು ಸುತ್ತಮುತ್ತ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಬ್ರಹ್ಮಾವರ ಅಧಿಕ ಮಳೆಯಾಗಿ ಹೆಚ್ಚು ಹಾನಿ ಸಂಭವಿಸಿದೆ. ಗಾಳಿ ಮಳೆಗೆ 130 ವಿದ್ಯುತ್‌ ಕಂಬ, 10 ವಿದ್ಯುತ್‌ ಪರಿವರ್ತಕ, 2.08 ಕಿ. ಮೀ. ವಿದ್ಯುತ್‌ ತಂತಿಗೆ ಹಾನಿ ಸಂಭವಿಸಿದ್ದು, ಮೆಸ್ಕಾಂಗೆ 21.72 ಲಕ್ಷ ರೂ. ಹಾನಿಯಾಗಿದೆ. ಕಾರ್ಕಳ 111.4, ಕುಂದಾಪುರ 191.0, ಉಡುಪಿ 87.2, ಬೈಂದೂರು 135.1, ಬ್ರಹ್ಮಾವರ 113.9, ಕಾಪು 38.5 ಮಿ. ಮೀ. ಹೆಬ್ರಿ 140.5 ಮಿ. ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ 132.5 ಮಿ. ಮೀ. ಸರಾಸರಿ ಮಳೆಯಾಗಿದೆ.

ಉಡುಪಿ: 3 ತಾಲೂಕುಗಳಲ್ಲಿ
ಶಾಲೆ, ಕಾಲೇಜುಗಳಿಗೆ ರಜೆ
ಕುಂದಾಪುರ: ಮಳೆ ಹಿನ್ನೆಲೆಯಲ್ಲಿ ಕುಂದಾಪುರ, ಬ್ರಹ್ಮಾವರ, ಬೈಂದೂರು ತಾಲೂಕಿನ ಅಂಗನವಾಡಿಯಿಂದ ಪಿಯುಸಿ ವರೆಗಿನ ಕಾಲೇಜುಗಳಿಗೆ ಜು.5 ಶುಕ್ರವಾರ ರಜೆ ಘೋಷಿಸಿ ಸಹಾಯಕ ಕಮಿಷನರ್‌ ಆದೇಶ ಹೊರಡಿಸಿದ್ದಾರೆ. ಪದವಿ, ಸ್ನಾತಕೋತ್ತರ, ಐಟಿಐಗಳಿಗೆ ರಜೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next