Advertisement

ಹೃದಯವಂತ ವಿಷ್ಣು ಜನ್ಮದಿನ: ಅವರ ಜೀವನಚರಿತ್ರೆ ಹಾಗೂ ನೋಡಲೇಬೇಕಾದ ಚಿತ್ರಗಳು ಇಲ್ಲಿವೆ !

12:45 PM Sep 18, 2020 | Mithun PG |

ಬೆಂಗಳೂರು: ಅಭಿನವ ಭಾರ್ಗವ, ಸಾಹಸಸಿಂಹ, ಹೃದಯವಂತ ಎಂದೇ ಖ್ಯಾತಿವೆತ್ತ ವಿಷ್ಣುವರ್ಧನ್ ಅವರ 70ನೇ ಜನ್ಮದಿನವಿಂದು. ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟ್ಯಾಂತರ ಜನರ ಮನಗೆದ್ದ “ದಾದಾ’ ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರು. ಮಗು ಮನಸ್ಸಿನ ಹೃದಯ, ಎಲ್ಲಾ ವಯಸ್ಸಿನವರನ್ನೂ ಸಮಾನಾಗಿ ಕಾಣುವ ಅವರ ವ್ಯಕ್ತಿತ್ವವೇ ಅವರನ್ನು ಕನ್ನಡಿಗರ ಕಣ್ಮಣಿಯನ್ನಾಗಿಸಿತ್ತು.

Advertisement

ಡಾ. ವಿಷ್ಣುವರ್ಧನ್ ಅವರ ಮೂಲ ಹೆಸರು ಸಂಪತ್ ಕುಮಾರ್. 1950ರ ಸೆಪ್ಟೆಂಬರ್ 18 ರಂದು ಹೆಚ್.ಎಲ್ ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಗಳ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದ್ದರು. ನಾರಾಯಣರಾವ್ ಕೂಡ ಕಲಾವಿದರಾಗಿದ್ದರು. ಸಂಪತ್ ಕುಮಾರ್ ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು.

ಸಂಪತ್ ಕುಮಾರ್ 1955ರಲ್ಲಿ ಮೊದಲ ಬಾರಿಗೆ ‘ಶಿವಶರಣ ನಂಬೆಯಕ್ಕ’ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಗಮನಾರ್ಹ ಸಂಗತಿಯೆಂದರೇ ಈ ಚಿತ್ರ ಕೇವಲ 28 ದಿನಗಳಲ್ಲಿ ಚಿತ್ರಿಕರಣಗೊಂಡ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಯಿತು. ನಂತರ 1956ರಲ್ಲಿ ಕೋಕಿಲವಾಣಿ, ಎಸ್ ಎಲ್ ಬೈರಪ್ಪನವರ ಕಾದಂಬರಿಯಾಧರಿತ ವಂಶವೃಕ್ಷದಲ್ಲೂ ಸಣ್ಣಪಾತ್ರವೊಂದರಲ್ಲಿ ನಟಿಸಿದ್ದರು.

1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಷ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಶ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು. ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ ‘ಸಾಹಸಸಿಂಹ’ ಎಂಬ ಬಿರುದು ಬಂದಿತ್ತು. 1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್”ಎಂಬ ಕಿರುತೆರೆಯಲ್ಲಿ ನಟಿಸಿದರು

Advertisement

ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ, ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

220 ಚಿತ್ರಗಳ ಮೂಲಕ ಕನ್ನಡ ಕಲಾದೇವಿಯ ಸೇವೆಗೈದ ವಿಷ್ಣು, ಆಪ್ತರಕ್ಷಕ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು. ಕನ್ನಡ ಚಿತ್ರರಂಗದ ಮೇರು ನಟರಾಗಿ ತನ್ನ ಸ್ಮರಣೀಯ ಪಾತ್ರಗಳ ಮೂಲಕ ಅಭಿಮಾನಿಗಳ ಚಿತ್ತಗಳಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009ರಲ್ಲಿ ವಿಧಿವಶರಾದರು.

ಡಾ. ವಿಷ್ಣುವರ್ಧನ್  ಅವರ ನೋಡಲೇಬೇಕಾದ ಸಿನಿಮಾ: ನಾಗರಹಾವು, ಸಾಹಸಸಿಂಹ, ಬಂಧನ, ನೀ ಬರೆದ ಕಾದಂಬರಿ, ಮಲಯ ಮಾರುತ, ಜಯಸಿಂಹ, ಮುತ್ತಿನಹಾರ, ಲಯನ್ ಜಗಪತಿರಾವ್, ಅಪ್ಪಾಜಿ, ವೀರಪ್ಪ ನಾಯಕ, ಯಜಮಾನ, ಸೂರಪ್ಪ, ಸೂರ್ಯವಂಶ, ದಿಗ್ಗಜರು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಸಿರಿವಂತ, ಈ ಬಂಧನ, ಆಪ್ತರಕ್ಷಕ,

Advertisement

Udayavani is now on Telegram. Click here to join our channel and stay updated with the latest news.

Next