Advertisement

ಆರೋಗ್ಯ ಮತ್ತು ಸುರಕ್ಷೆ

02:32 PM Jul 19, 2020 | Suhan S |

ಭೌಗೋಳಿಕವಾಗಿ ಬಹಳ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡು ಹಾಹಾಕಾರ ಉಂಟು ಮಾಡುವ ಸಾಂಕ್ರಾಮಿಕ ರೋಗ ಹಾವಳಿಯನ್ನು ಸರ್ವವ್ಯಾಪಿ ವ್ಯಾಧಿ (ಪ್ಯಾಂಡೆಮಿಕ್‌) ಎಂಬುದಾಗಿ ಕರೆಯಲಾಗುತ್ತದೆ. ಇದರಿಂದ ಮನುಷ್ಯರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸಾವುನೋವು, ವಿವಿಧ ದೇಶಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಸ್ತಿರತೆ ಉಂಟಾಗುತ್ತದೆ. ಜಾಗತಿಕ ಪ್ರಯಾಣ, ಜನಸಮುದಾಯಗಳು ಒಗ್ಗೂಡುವುದು, ನಗರೀಕರಣ, ಭೂಮಿ ಬಳಕೆಯ ಸ್ವರೂಪದಲ್ಲಿ ಬದಲಾವಣೆ ಮತ್ತು ಸಹಜ ಪರಿಸರದ ಹೆಚ್ಚು ಶೋಷಣೆಯಿಂದಾಗಿ ಸರ್ವವ್ಯಾಪಿ ಸಾಂಕ್ರಾಮಿಕಗಳು ಕಾಣಿಸಿಕೊಳ್ಳುವ ಸಂಭಾವ್ಯತೆ ಕಳೆದ ಶತಮಾನದಲ್ಲಿ ಹೆಚ್ಚಿದೆ ಎಂಬುದಾಗಿ ಕೆಲವು ಅಧ್ಯಯನಗಳು ಹೇಳಿವೆ.

Advertisement

ಈ ಹಿಂದಣ ಸರ್ವವ್ಯಾಪಿ ಸಾಂಕ್ರಾಮಿಕಗಳು :  ವೈಬ್ರಿಯೊ ಕೊಲೆರೇ ಬ್ಯಾಕ್ಟೀರಿಯಾ ಸೋಂಕಿನಿಂದ ಕಾಲರಾ ಉಂಟಾಗುತ್ತದೆ. 1817ರಿಂದೀಚೆಗೆ ಕಾಲರಾ ಸರ್ವವ್ಯಾಪಿ ಸೋಂಕಾಗಿ ಏಳು ಬಾರಿ ಏಶ್ಯಾ ಮತ್ತು ಇತರ ಖಂಡಗಳಲ್ಲಿ ಹಾವಳಿ ಉಂಟು ಮಾಡಿದೆ. ಏಳನೆಯ ಕಾಲರಾ ಹಾವಳಿ 1961ರಲ್ಲಿ ಆರಂಭವಾಗಿ ಪ್ರತೀ ವರ್ಷ ಸುಮಾರು 30ರಿಂದ 50 ಲಕ್ಷ ಮಂದಿಯನ್ನು ಬಾಧಿಸಿತು, ಒಟ್ಟಾರೆಯಾಗಿ ಸುಮಾರು 1,20,000 ಮಂದಿ ಮೃತಪಟ್ಟರು. 1991ರಲ್ಲಿ ದಕ್ಷಿಣ ಅಮೆರಿಕದಲ್ಲಿ ಮತ್ತೂಮ್ಮೆ ಕಾಲರಾ ತೀವ್ರವಾಗಿ ವ್ಯಾಪಿಸಲಾರಂಭಿಸಿತು ಹಾಗೂ ಅದು 1992ರಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿಯೂ ಕಂಡುಬಂತು. ಕಾಲರಾಕ್ಕೆ ಒಳಗಾದ ರೋಗಿಗಳ ನಿರ್ವಹಣೆಯು ದೇಹಕ್ಕೆ ತೀವ್ರವಾಗಿ ದ್ರವಾಂಶ ಪುನರ್‌ಸ್ಥಾಪನೆಯನ್ನು ಒಳಗೊಂಡಿರುತ್ತದೆ,

ಪರಿಣಾಮಕಾರಿ ಚಿಕಿತ್ಸೆಯಿಂದ ಮರಣ ಪ್ರಮಾಣವನ್ನು ಶೇ.50ರಿಂದ ಶೇ.0.2ರಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬಹುದು. ಭೇದಿಯ ಪ್ರಮಾಣ ಮತ್ತು ಅವಧಿಯನ್ನು ಆ್ಯಂಟಿಬಯಾಟಿಕ್‌ ಬಳಕೆಯಿಂದ ಶೇ.50ರಷ್ಟು ಕಡಿಮೆ ಮಾಡಬಹುದಾಗಿದ್ದು, ಇದನ್ನು ಮಧ್ಯಮ ಪ್ರಮಾಣದಿಂದ ತೀವ್ರ ಪ್ರಮಾಣದ ನಿರ್ಜಲೀಕರಣ ಹೊಂದಿರುವ ರೋಗಿಗಳಿಗೆ ಉಪಯೋಗಿಸಲಾಗುತ್ತದೆ. ಕಾಲರಾ ತಡೆಯು ಸುರಕ್ಷಿತ ನೀರು ಮತ್ತು ನೈರ್ಮಲ್ಯಗಳ ಲಭ್ಯತೆಯನ್ನು ಅವಲಂಬಿಸಿದೆ. ಪ್ರಸ್ತುತ ಕಾಲರಾ ವಿರುದ್ಧ ಬಾಯಿಯ ಮೂಲಕ ತೆಗೆದುಕೊಳ್ಳುವ ಎರಡು ಲಸಿಕೆಗಳು ಲಭ್ಯವಿದ್ದು, ಸಮಗ್ರ ಕಾಲರಾ ತಡೆ ಕಾರ್ಯಕ್ರಮಗಳಲ್ಲಿ ಈ ಲಸಿಕೆಗಳ ಪರಿಣಾಮಕಾರಿ ಬಳಕೆಯನ್ನು ಸಕ್ರಿಯವಾಗಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ.

ಐರೋಪ್ಯ ಖಂಡದಲ್ಲಿ ಪ್ಲೇಗ್‌ ಕರಾಳ ಇತಿಹಾಸವನ್ನು ಹೊಂದಿದೆ. ಮೊದಲ ಮತ್ತು ದ್ವಿತೀಯ ಸರ್ವವ್ಯಾಪಿ ಸಾಂಕ್ರಾಮಿಕವಾಗಿ ಅದು ವ್ಯಾಪಿಸಿ “ಬ್ಲ್ಯಾಕ್‌ ಡೆತ್‌’ ಎಂಬ ಕುಖ್ಯಾತಿ ಪಡೆದಿದ್ದಾಗ ಭಾರೀ ಪ್ರಮಾಣದಲ್ಲಿ ಸಾವುನೋವು ಹಾಗೂ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರಿತ್ತು. “ಬ್ಲ್ಯಾಕ್‌ಡೆತ್‌’ 75ರಿಂದ 200 ಮಿಲಿಯ ಜನರ ಸಾವಿಗೆ ಕಾರಣವಾಗಿತ್ತು. ಪ್ಲೇಗ್‌ ತೃತೀಯ ಬಾರಿಗೆ ಸರ್ವವ್ಯಾಪಿ ಸಾಂಕ್ರಾಮಿಕವಾಗಿ ಚೀನದಲ್ಲಿ ಆರಂಭವಾಗಿ ಹಾಂಕಾಂಗ್‌, ಜಪಾನ್‌, ಸಿಂಗಾಪುರ, ತೈವಾನ್‌ ಮತ್ತು ಭಾರತೀಯ ಉಪಖಂಡದ ದೇಶಗಳಿಗೆ ವ್ಯಾಪಕವಾಗಿ ಹಬ್ಬಿತು. ಹಡಗುಗಳ ಮೂಲಕ ಅದು ಮುಂಬಯಿ, ಸಿಂಗಾಪುರ, ಅಲೆಕ್ಸಾಂಡ್ರಿಯಾ, ಬ್ಯೂನಸ್‌ಐರಿಸ್‌, ರಿಯೋ ಡಿ ಜನೇರೋ, ಹೊನಲುಲು, ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಸಿಡ್ನಿಯಂತಹ ನಗರಗಳಿಗೆ ಹರಡಿತು. ತೃತೀಯ

ಬಾರಿಗೆ ಪ್ಲೇಗ್‌ ಸರ್ವವ್ಯಾಪಿ ಹಾವಳಿಗೆ ಕಾರಣವಾದ ಸೂಕ್ಷ್ಮಜೀವಿಯ ಸೂಕ್ಷ್ಮಾಣು ಶಾಸ್ತ್ರೀಯ ಹೆಸರು ಯೆಸೀನಿಯಾ ಪೆಸ್ಟಿಸ್‌. ಹಾಂಕಾಂಗ್‌ ಫ್ಲ್ಯೂ ಎಂದು ಕರೆಯಲ್ಪಡುವ ಫ್ಲ್ಯೂ ಸರ್ವವ್ಯಾಪಿ ವ್ಯಾಧಿ ಇನ್‌ಫ್ಲುಯೆಂಜಾ ಎ ವೈರಸ್‌ನ ಎಚ್‌3ಎನ್‌2 ತಳಿಯಿಂದ 1968ರಲ್ಲಿ ಆರಂಭವಾಯಿತು. ಹಾಂಕಾಂಗ್‌ನಲ್ಲಿ ಇದರ ಮೊದಲ ಪ್ರಕರಣ 1968ರಲ್ಲಿ ಪತ್ತೆಯಾದ 17 ದಿನಗಳಲ್ಲಿ ಅದು ಸಿಂಗಾಪುರ , ವಿಯೆಟ್ನಾಂಗೂ ಹಬ್ಬಿತು.

Advertisement

ಮೂರು ತಿಂಗಳುಗಳ ಒಳಗೆ ಫಿಲಿಪ್ಪೀನ್ಸ್‌, ಭಾರತ, ಆಸ್ಟ್ರೇಲಿಯಾ, ಯುರೋಪ್‌ ಮತ್ತು ಅಮೆರಿಕಗಳಿಗೂ ಹರಡಿತು. ಆದರೆ ಈ ಸರ್ವವ್ಯಾಪಿ ಸಾಂಕ್ರಾಮಿಕವು ತೌಲನಿಕವಾಗಿ ಕಡಿಮೆ ಮರಣ ಪ್ರಮಾಣ (ಶೇ.5) ಹೊಂದಿತ್ತಾದರೂ ಒಂದು ಮಿಲಿಯಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಇದರಲ್ಲಿ ಹಾಂಕಾಂಗ್‌ನ 5 ಲಕ್ಷ ಜನರು ಸೇರಿದ್ದು, ಇದು ಅಲ್ಲಿನ ಆಗಿನ ಜನಸಂಖ್ಯೆಯ ಶೇ.15 ಆಗಿತ್ತು. ಪ್ಲೇಗ್‌ ಮತ್ತು ಕಾಲರಾ: ತಡೆಗಾಗಿ ಸಾರ್ವಜನಿಕ ಕ್ರಮಗಳು ಐರೋಪ್ಯ ನಗರಗಳು ಜನದಟ್ಟಣೆ ಇರುವ ಕಡೆಗಳಲ್ಲಿ ನೈರ್ಮಲ್ಯ ಸ್ಥಿತಿಗತಿಗಳನ್ನು ಉತ್ತಮಪಡಿಸುವುದಕ್ಕಾಗಿ ಕ್ರಮಗಳನ್ನು ಕೈಗೊಂಡವು. ಕೊಳೆಗೇರಿಗಳ ನಿರ್ಮೂಲನೆ, ಒಳಚರಂಡಿ ವ್ಯವಸ್ಥೆಯ ದುರಸ್ತಿ ಮತ್ತು ಪುನಾರಚನೆ, ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಒದಗಣೆ ಇವುಗಳಲ್ಲಿ ಸೇರಿತ್ತು. 1897ರಲ್ಲಿ ವೆನಿಸ್‌ ನಗರವು ಸೋಂಕುಪೀಡಿತ ಪ್ರದೇಶಗಳಿಂದ ಹಡಗುಗಳಲ್ಲಿ ಆಗಮಿಸುವವರ ಕ್ವಾರಂಟೈನ್‌, ಸೋಂಕುಪೀಡಿತ ಪ್ರದೇಶಗಳಿಂದ ಹಡಗುಗಳ ಸಂಚಾರ ನಿಯಂತ್ರಣದಂತಹ ಕ್ರಮಗಳನ್ನು ವ್ಯಾಪಾರ ವ್ಯವಹಾರಗಳಿಗೆ ಅಡ್ಡಿಯಾಗದಂತೆ ಕೈಗೊಂಡಿತ್ತು. ಜತೆಗೆ ಯುರೋಪನ್ನು ಪ್ರವೇಶಿಸುವ ಹಡಗುಗಳು, ಪ್ರವಾಸಿಗರು, ಹಡಗು ಸಿಬಂದಿ ಮತ್ತು ಸರಕು ಸಾಮಗ್ರಿಗಳ ನೈರ್ಮಲ್ಯ ಸ್ಥಿತಿಯನ್ನು ಉತ್ತಮಪಡಿಸಲಾಯಿತು. ಹಡಗುಗಳ ನೈರ್ಮಲ್ಯ ಸ್ಥಿತಿಗತಿಯು ಅವುಗಳು ಯುರೋಪಿಗೆ ಆಗಮಿಸಿದಾಗ ಒಳಗಾಗುವ ನೈರ್ಮಲ್ಯ ವಿಧಿವಿಧಾನಗಳಿಗೆ ಸಮಾನವಾಗಿರಬೇಕು ಎಂದು ಸೂಚಿಸಲಾಯಿತು. ಸಮಾನವಾದ ಆಧುನಿಕ ಅಂತಾರಾಷ್ಟ್ರೀಯ ಪ್ರೊಫಿಲ್ಯಾಕ್ಸಿಸ್‌ ಕ್ರಮಗಳನ್ನು ರಚಿಸಿ ವಿವಿಧ ದೇಶಗಳ ಸರಕಾರಗಳಿಗೆ ಒದಗಿಸಿದ್ದರಿಂದ ರಸ್ತೆ ಮಾರ್ಗ ಮತ್ತು ಜಲಮಾರ್ಗದ ಮೂಲಕ ಆಗಮಿಸುವ ರೋಗವಾಹಕಗಳ ನಿಯಂತ್ರಣಕ್ಕೆ ನೂತನ ಕಾನೂನುಗಳನ್ನು ರೂಪಿಸಲು ಸಾಧ್ಯವಾಯಿತು.

ಕಾಲರಾ ತಡೆಯ ಗಮನಾರ್ಹ ಕ್ರಮಗಳಲ್ಲಿ ಜನಸಮುದಾಯದಲ್ಲಿ ನೈರ್ಮಲ್ಯ ಕ್ರಮಗಳನ್ನು ಉತ್ತಮಪಡಿಸುವುದು ಮತ್ತು ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುವಂತೆ ಮಾಡುವುದು ಸೇರಿದೆ. ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ವರ್ಧನೆಯು ಸಮುದಾಯಗಳಲ್ಲಿ ಈ ಬಗ್ಗೆ ಅರಿವು ಉಂಟು ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆಹಾರ ಸೇವನೆಗೆ ಮುನ್ನ ಅಥವಾ ಮಲವಿಸರ್ಜನೆಯ ಬಳಿಕ, ಅಡುಗೆ ಮಾಡುವುದಕ್ಕೆ ತೊಡಗುವ ಮುನ್ನ ಸಾಬೂನು ಬಳಸಿ ಕೈತೊಳೆದುಕೊಳ್ಳುವುದರಂತಹ ಮೂಲ ಮತ್ತು ಅತ್ಯಗತ್ಯವಾದ ನೈರ್ಮಲ್ಯ ಕ್ರಮಗಳಿಗೆ ಒತ್ತು ನೀಡುವುದು ಬಹಳ ಮುಖ್ಯ.

( ಮುಂದಿನ ವಾರಕ್ಕೆ)

 

– ಡಾ| ಸಬಾಹ್‌ ಶರಾಫ್ ಆಲಂ

ರಿಸರ್ಚ್‌ ಅಸಿಸ್ಟೆಂಟ್‌, ಕೆಎಂಸಿ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next