Advertisement

MP ಚುನಾವಣೆಯಲ್ಲಿ BJPಗೆ ಹ್ಯಾಟ್ರಿಕ್‌ ಗ್ಯಾರಂಟಿ: ನಡ್ಡಾ

10:48 PM Feb 17, 2024 | Team Udayavani |

ನವದೆಹಲಿ: “ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರ ಹ್ಯಾಟ್ರಿಕ್‌ ಸಾಧನೆ ಮಾಡಲಿದ್ದು, ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

Advertisement

ನವದೆಹಲಿಯ ಭಾರತ್‌ ಮಂಟಪಂನಲ್ಲಿ ಶನಿವಾರ ಆರಂಭವಾಗಿರುವ 2 ದಿನಗಳ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಉದ್ಘಾಟನಾ ಭಾಷಣ ನೆರವೇರಿಸಿ ಮಾತನಾಡಿದ ನಡ್ಡಾ ಅವರು, ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವು(ಬಿಜೆಪಿ) ಈ ಬಾರಿ 370ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಬೇಕು. ಎನ್‌ಡಿಎ ಮೈತ್ರಿಕೂಟ 400 ದಾಟಬೇಕು. ಈ ಗುರಿ ಸಾಧಿಸಲು ಪಕ್ಷದ ಎಲ್ಲ ಸದಸ್ಯರೂ ಶ್ರಮ ಹಾಕಬೇಕು. ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ನಾವು ಹೊಸ ದಾಖಲೆ ಮಾಡಬೇಕು ಎಂದೂ ಅವರು ನೆರೆದಿದ್ದ 11,500 ಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ. ಈ ಸಭೆಯಲ್ಲಿ ಪಂಚಾಯತ್‌ ಮುಖ್ಯಸ್ಥರಿಂದ ಹಿಡಿದು, ಜಿಲ್ಲಾಧ್ಯಕ್ಷರು, ಕೇಂದ್ರ ಸಚಿವರವರೆಗೆ ದೇಶದ ಮೂಲೆ ಮೂಲೆಗಳ ನಾಯಕರು, ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.

ಮೋದಿ ನಾಯಕತ್ವಕ್ಕೆ ಶ್ಲಾಘನೆ:

ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹಾಡಿ ಹೊಗಳಿದ ನಡ್ಡಾ, “ಮೋದಿಯವರು 2014ರಲ್ಲಿ ಪ್ರಧಾನಿ ಹುದ್ದೆಗೇರುವ ಮುನ್ನ ಕೇವಲ 5 ರಾಜ್ಯಗಳಲ್ಲಷ್ಟೇ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಈಗ ಒಟ್ಟು 12 ರಾಜ್ಯಗಳು ಬಿಜೆಪಿ ತೆಕ್ಕೆಯಲ್ಲಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 17 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಇದಕ್ಕೆ ಮೋದಿಯವರು ಸಮರ್ಥ ನಾಯಕತ್ವವೇ ಕಾರಣ’ ಎಂದಿದ್ದಾರೆ. ಉತ್ತರಪ್ರದೇಶದಲ್ಲಿ ಸತತ 2ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿದೆ. ಇತ್ತೀಚೆಗೆ 3 ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಪಶ್ಚಿಮ ಬಂಗಾಳದಲ್ಲಿ ಶೇ.10ರಷ್ಟು ಮತಗಳು ಮತ್ತು 3 ಸೀಟುಗಳನ್ನಷ್ಟೇ ಹೊಂದಿದ್ದ ಬಿಜೆಪಿ, 2021ರ ಅಸೆಂಬ್ಲಿ ಚುನಾವಣೆಯಲ್ಲಿ ಶೇ.38.5 ಮತಗಳನ್ನು ಪಡೆದು, 77 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಬಂಗಾಳದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೇರುವುದು ಖಚಿತ.

Advertisement

ಕಮಲ ದಕ್ಷಿಣ ಭಾರತದಲ್ಲೂ ಇದೆ: ನಡ್ಡಾ

ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಚ್ಚಿನ ಬಲ ಹೊಂದಿಲ್ಲ ಎಂಬ ಆರೋಪಗಳಿಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿರುವ ನಡ್ಡಾ, “ತೆಲಂಗಾಣದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ತನ್ನ ಮತ ಹಂಚಿಕೆಯನ್ನು ದುಪ್ಪಟ್ಟಾಗಿಸಿಕೊಂಡಿದೆ. ಕಮಲದ ಚಿಹ್ನೆ ಎಲ್ಲೆಡೆಯೂ ಇದೆ. ಇದು ಪ್ಯಾನ್‌ಇಂಡಿಯಾ ಪಕ್ಷ. ಬಿಜೆಪಿಯಲ್ಲಿರುವ 29 ಲೋಕಸಭಾ ಸಂಸದರು, 8 ರಾಜ್ಯಸಭಾ ಸದಸ್ಯರು ದಕ್ಷಿಣ ಭಾರತದವರು. ಹಾಗೆ ನೋಡಿದರೆ, ಕಾಂಗ್ರೆಸ್‌ನಲ್ಲಿ ಈ ಸಂಖ್ಯೆ ಕ್ರಮವಾಗಿ 28 ಮತ್ತು 7 ಇದೆ ಅಷ್ಟೇ” ಎಂದಿದ್ದಾರೆ.

ರಾಮಮಂದಿರ ಪ್ರಸ್ತಾಪವಾಗುತ್ತಿದ್ದಂತೆ ಎದ್ದು ನಿಂತು ಕರತಾಡನ

ಪ್ರಧಾನಿ ಮೋದಿ ಅಧಿಕಾರಾವಧಿಯ ಸಾಧನೆಗಳನ್ನು ವಿವರಿಸುತ್ತಾ ನಡ್ಡಾ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣ ಮತ್ತು ಮಹಿಳಾ ಮೀಸಲಾತಿ ಕಾನೂನು ಬಗ್ಗೆ ಉಲ್ಲೇಖೀಸುತ್ತಿದ್ದಂತೆ, ನೆರೆದಿದ್ದ ಸಾವಿರಾರು ಬಿಜೆಪಿ ಪ್ರತಿನಿಧಿಗಳು ಎದ್ದು ನಿಂತು ಚಪ್ಪಾಳೆ ಹೊಡೆದಿದ್ದು ಕಂಡುಬಂತು.

 

Advertisement

Udayavani is now on Telegram. Click here to join our channel and stay updated with the latest news.

Next