Advertisement

ಕರಾವಳಿಗರಿಗೆ ಆತಂಕ; ಆರ್ಥಿಕತೆಗೂ ಹೊಡೆತ ಭೀತಿ; ಶಿರಾಡಿ ಘಾಟಿ ಆರು ತಿಂಗಳು ಬಂದ್‌ ಪ್ರಸ್ತಾವ

08:05 AM Jan 16, 2022 | Team Udayavani |

ಮಂಗಳೂರು: ಸಕಲೇಶಪುರ ಹೊರ ವಲಯದ ದೋಣಿಗಲ್‌ನಿಂದ ಮಾರನಹಳ್ಳಿ (ಕಿ.ಮೀ. 220ರಿಂದ 230) ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸಲು ಶಿರಾಡಿ ಘಾಟಿ ರಸ್ತೆಯನ್ನು 6 ತಿಂಗಳು ಸಂಪೂರ್ಣ ಮುಚ್ಚ ಬೇಕು ಎಂಬ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವ ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿ ಕರಾವಳಿಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ.

Advertisement

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಮನವಿ ಪುರಸ್ಕೃತಗೊಂಡರೆ ಮಂಗಳೂರು – ಬೆಂಗಳೂರು ನಡುವಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.

ಇದೇ ಆತಂಕವನ್ನು ಹಾಸನ ಜಿಲ್ಲಾಡಳಿತವೂ ವ್ಯಕ್ತಪಡಿಸಿದೆ. “ರಾ.ಹೆ. 75 ಒಂದು ಪ್ರಮುಖ ಹೆದ್ದಾರಿಯಾಗಿದ್ದು 6 ತಿಂಗಳು ಬಂದ್‌ ಮಾಡುವುದು ಕಷ್ಟ. ಬೇಗನೇ ಕಾಮಗಾರಿ ಮುಗಿಸಲು ಸಾಧ್ಯವಿದೆಯೇ ಅಥವಾ ಪರ್ಯಾಯ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ ವರದಿ ನೀಡಿ’ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ರಾ.ಹೆ. ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.

ಆತಂಕಗಳೇನು
ನವಮಂಗಳೂರು ಬಂದರು ಸೇರಿದಂತೆ ಕರಾವಳಿಯ ಎಲ್ಲ ಪ್ರಮುಖ ವ್ಯವಹಾರಗಳಿಗೂ ರಾಜಧಾನಿಯೊಂದಿಗೆ ಸಂಪರ್ಕ ಬೆಸೆಯುವ ಪ್ರಮುಖ ಸಂಪರ್ಕ ರಸ್ತೆ ಶಿರಾಡಿ ಘಾಟಿ. ದಿನಕ್ಕೆ ಸಾವಿರಾರು ಬಸ್‌, ಟ್ರಕ್‌, ಕಂಟೈನರ್‌, ಕಾರು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳು ಆ ದಾರಿಯಾಗಿ ಚಲಿಸುತ್ತವೆ. ಸುದೀರ್ಘ‌ ಅವಧಿಗೆ ರಸ್ತೆ ಮುಚ್ಚಿದರೆ ಇವೆಲ್ಲವೂ ಅಸ್ತವ್ಯಸ್ತವಾಗಲಿವೆ. ಎರಡು ವರ್ಷಗಳಿಂದ ಕೊರೊನಾ ಸಂಕಷ್ಟದಿಂದ ಕರಾವಳಿಯ ಆರ್ಥಿಕತೆ ಮತ್ತು ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಘಾಟಿ ರಸ್ತೆ ಮುಚ್ಚಿದರೆ ಇನ್ನಷ್ಟು ಹೊಡೆತ ಬೀಳಲಿದೆ ಎಂಬ ಆತಂಕ ತಲೆದೋರಿದೆ.

ಸಂಕಷ್ಟ ಖಚಿತ
6 ತಿಂಗಳು ಮುಚ್ಚುವ ತೀರ್ಮಾನ ಕರಾವಳಿಯ ಎಲ್ಲ ವರ್ಗದ ಜನರಿಗೆ ಸಂಕಷ್ಟವನ್ನು ತಂದೊಡ್ಡಲಿದೆ. ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ, ಸಂಸದರು, ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕೆಸಿಸಿಐ ಅಧ್ಯಕ್ಷ ಶಶಿಧರ ಪೈ ಮಾರೂರು ಹೇಳಿದ್ದಾರೆ.

Advertisement

ಸಂಪೂರ್ಣ ಬಂದ್‌ ಮಾಡಿದರೆ ಕೈಗಾರಿಕೆಗಳು, ಸಾರಿಗೆ ಕ್ಷೇತ್ರ ಹಾಗೂ ಕರಾವಳಿಯ ಅರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳಲಿದೆ. ಕಾಮಗಾರಿಯ ಸಂದರ್ಭ ರಸ್ತೆಯ ಅರ್ಧಭಾಗವನ್ನು ಸಂಚಾರಕ್ಕೆ ಮೀಸಲಿಡಬೇಕು ಎಂದು ಕೈಗಾರಿಕೆಗಳ ಒಕ್ಕೂಟದ ಮಂಗಳೂರು ಘಟಕದ ಅಧ್ಯಕ್ಷ – ಜೀವನ್‌ ಸಲ್ದಾನ ಮತ್ತು ಕರ್ನಾಟಕ ಟೂರಿಸ್ಟ್‌ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಚಾಲಕನಿಗೆ ಪೀಡ್ಸ್‌ ; ಬರೋಬ್ಬರಿ 10ಕಿ.ಮೀ. ಬಸ್ ಚಲಾಯಿಸಿದ ಪ್ರಯಾಣಿಕ ಮಹಿಳೆ! ವಿಡಿಯೋ ವೈರಲ್‌

10 ಕಿ.ಮೀ. ರಸ್ತೆಗೆ
6 ತಿಂಗಳು ಬೇಕೇ?
ಅತ್ಯಾಧುನಿಕ ತಂತ್ರಜ್ಞಾನಗಳಿರುವ ಈ ಕಾಲಘಟ್ಟದಲ್ಲೂ ಕೇವಲ 10 ಕಿ.ಮೀ. ರಸ್ತೆ ವಿಸ್ತರಣೆಗೆ 6 ತಿಂಗಳು ಬೇಕೇ ಎಂಬ ಜಿಜ್ಞಾಸೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕಡಿದಾದ ತಿರುವುಗಳಿವೆ, ದೊಡ್ಡಪ್ರಮಾಣದ ತಡೆಗೋಡೆಗಳ ನಿರ್ಮಾಣವಾಗಬೇಕಾಗಿದೆ. ಅದ್ದರಿಂದ 6 ತಿಂಗಳು ಅಗತ್ಯ ಎನ್ನುವುದು ಹೆದ್ದಾರಿ ಪ್ರಾಧಿಕಾರದ ಅಭಿಪ್ರಾಯ. ಇನ್ನೊಂದು ಪ್ರಮುಖ ಅಂಶವೆಂದರೆ ಶಿರಾಡಿ ಘಾಟಿಯಲ್ಲಿ ಈ ಹಿಂದೆ ಕೈಗೊಂಡಿದ್ದ ಯಾವುದೇ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಹಾಗಿರುವಾಗ ಇದು ಕೂಡ 6 ತಿಂಗಳಲ್ಲಿ ಪೂರ್ಣಗೊಳ್ಳಬಹುದೆ ಎಂಬ ಸಂದೇಹ ಸಹಜವಾಗಿ ಇದೆ.

ಪರ್ಯಾಯ ರಸ್ತೆಗಳು ಶಕ್ತವೇ?
ಶಿರಾಡಿ ರಸ್ತೆಯನ್ನು ಮುಚ್ಚಿದರೆ ಆ ರಸ್ತೆಯ ವಾಹನ ದಟ್ಟಣೆ, ಧಾರಣ ಸಾಮರ್ಥ್ಯವನ್ನು ಭರಿಸಲು ಪ್ರಸ್ತುತ ಇರುವ ಪರ್ಯಾಯ ರಸ್ತೆಗಳು ಸಮರ್ಥವಾಗಿಲ್ಲ ಎಂಬುದನ್ನು ಹಿಂದಿನ ಅನುಭವಗಳು ತೋರಿಸಿವೆ.
– ಹಾಸನ-ಆಲೂರು ಮೂಲಕ ಬಿಸಿಲೆ ಘಾಟಿಯಾಗಿ ಗುಂಡ್ಯಕ್ಕೆ ಬರುವ ಮಾರ್ಗದಲ್ಲಿ ಸಾಮಾನ್ಯ ವಾಹನಗಳಷ್ಟೇ ಸೀಮಿತವಾಗಿ ಸಂಚರಿಸಬಹುದು.
– ಸಂಪಾಜೆ ಘಾಟಿ ರಸ್ತೆ 3 ವರ್ಷಗಳಿಂದ ಮಳೆಗಾಲದಲ್ಲಿ ಸತತ ಭೂಕುಸಿತ ಸಮಸ್ಯೆ ಎದುರಿಸುತ್ತಿದೆ.
– ಚಾರ್ಮಾಡಿಯಲ್ಲೂ ಕುಸಿತ ಸಮಸ್ಯೆ ಇದೆ.
– ಈ ರಸ್ತೆಗಳನ್ನು ಪರ್ಯಾಯವಾಗಿ ಸೂಚಿಸುವ ಮೊದಲು ಅವುಗಳ ಧಾರಣ ಸಾಮರ್ಥ್ಯದ ಅಧ್ಯಯನ ಸೂಕ್ತ.

ಪರ್ಯಾಯ ಸಲಹೆಗಳು
-ಘಾಟಿ ರಸ್ತೆಯ ಅಭಿವೃದ್ಧಿ ಅನಿವಾರ್ಯ. ಆದರೆ ಕರಾವಳಿಯ ಜನತೆಗೆ ಇದರಿಂದಾಗುವ ಸಮಸ್ಯೆಗಳನ್ನು ಕನಿಷ್ಠಗೊಳಿಸಿ ಕಾಮಗಾರಿ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು.
– ರಸ್ತೆಯ ಒಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಕಾಮಗಾರಿ ನಡೆಸುವುದು ಅಥವಾ 6 ತಿಂಗಳ ಬದಲಿಗೆ ಕಾಮಗಾರಿಗೆ ಬೇಕಿರುವ ನಿರ್ದಿಷ್ಟ ಅವಧಿ ಮತ್ತು ಕಾಮಗಾರಿ ವಿಧಾನದ ಪರಿಶೀಲನೆಗೆ ತಜ್ಞರ ಸಮಿತಿ ರಚಿಸುವುದು, ಲೋಪ ವಾದರೆ ಗುತ್ತಿಗೆದಾರರನ್ನೇ ಉತ್ತರದಾಯಿತ್ವಕ್ಕೆ ಒಳಪಡಿಸಬೇಕು.
– ವಿದೇಶಗಳಲ್ಲಿರುವಂತೆ ರಾತ್ರಿ ವೇಳೆ ಕಾಮಗಾರಿ ನಡೆಸಿ ಒಂದು ಬದಿಯಲ್ಲಿ ಹಗಲು ಸಂಚಾರಕ್ಕೆ ಅನುಮತಿ ನೀಡಬಹುದು.
-ವಿಸ್ತರಣೆಯ ಜಾಗವನ್ನು ಮಣ್ಣು ತುಂಬಿಸಿ ಗಟ್ಟಿಗೊಳಿಸುವ ಸಂದರ್ಭದಲ್ಲಿ ಈಗ ಇರುವ ರಸ್ತೆಯಲ್ಲಿ ಹಾಗೂ ಈಗ ಇರುವ ರಸ್ತೆಯ ಕಾಮಗಾರಿಯ ಸಮಯದಲ್ಲಿ ಮಣ್ಣು ತುಂಬಿಸಿ ಗಟ್ಟಿ ಮಾಡಿದ ಜಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ.

ಶಿರಾಡಿ ಘಾಟಿಯು ಕರಾವಳಿ ಪಾಲಿಗೆ ಅತ್ಯಂತ ಪ್ರಮುಖ ರಸ್ತೆ. 6 ತಿಂಗಳು ಮುಚ್ಚುವ ಪ್ರಸ್ತಾವದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಂಚಾರಕ್ಕೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next