Advertisement

Delhi ಸರಕಾರದ ಅಧಿಕಾರ ಹೋಯಿತಾ?

01:32 AM Aug 09, 2023 | Team Udayavani |

ದಿಲ್ಲಿ ಅಧಿಕಾರ ಮೊಟಕುಗೊಳಿಸುವ ಅಧ್ಯಾದೇಶ ತಂದಿದ್ದ ಕೇಂದ್ರ ಸರಕಾರ ಈಗ ಅದನ್ನು ಸಂಸತ್‌ನ ಉಭಯ ಸದನಗಳಲ್ಲೂ ಮಂಡಿಸಿ ಅನುಮೋದನೆ ಪಡೆದುಕೊಂಡಿದೆ. ಹೀಗಾಗಿ ದಿಲ್ಲಿ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನೀಡಿದ್ದ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ನೇಮಕ, ವರ್ಗಾವಣೆ ಅಧಿಕಾರಗಳೆಲ್ಲವೂ ಮತ್ತೆ ಕೇಂದ್ರ ಗೃಹ ಸಚಿವಾಲಯದ ಅಧೀನಕ್ಕೇ ಬಂದಿವೆ. ಹಾಗಾದರೆಇನ್ನು ಮುಂದೆ ದಿಲ್ಲಿ ಸರಕಾರದ ಬಳಿ ಉಳಿಯುವ ಅಧಿಕಾರಗಳೇನು? ಕೇಂದ್ರದ ಸಂಸತ್‌ ನಡೆ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘನೆ ಮಾಡಿದಂತಾಗಿದೆಯೇ?ಈ ಕುರಿತ ಒಂದು ನೋಟ ಇಲ್ಲಿದೆ…

Advertisement

ಏನಿದು ಕಾಯ್ದೆ?
ಕೇಂದ್ರ ಸರಕಾರವು ರಾಷ್ಟ್ರೀಯ ರಾಜಧಾನಿ ದಿಲ್ಲಿ ಪ್ರದೇಶ (ತಿದ್ದುಪಡಿ) ಮಸೂದೆ, 2023 ಅನ್ನು ಇತ್ತೀಚೆಗಷ್ಟೇ ಸಂಸತ್‌ನ ಉಭಯ ಸದನಗಳಲ್ಲೂ ಮಂಡಿಸಿತ್ತು. ಇದಕ್ಕೆ ಮೊದಲಿಗೆ ಲೋಕಸಭೆಯಲ್ಲಿ, ಸೋಮವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ತಿದ್ದುಪಡಿ ಕಾಯ್ದೆ ತರಲು ಕಾರಣವೂ ಇದೆ. ಮೇ 11ರಂದು ಸುಪ್ರೀಂ ಕೋರ್ಟ್‌ ತೀರ್ಪೊಂದನ್ನು ನೀಡಿದ್ದು, ಈ ಪ್ರಕಾರವಾಗಿ ನಾಗರಿಕ ಸೇವೆಗಳ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವನ್ನು ದಿಲ್ಲಿ ಸರಕಾರಕ್ಕೇ ನೀಡಲಾಗಿತ್ತು. ಅದಕ್ಕೂ ಮುನ್ನ ಈ ಅಧಿಕಾರವು ಕೇಂದ್ರ ಗೃಹ ಇಲಾಖೆ ಬಳಿ ಇದ್ದು, ಇದನ್ನು ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ಚಲಾವಣೆ ಮಾಡುತ್ತಿದ್ದರು. ಮೇ 19ರಂದು ಅಧ್ಯಾದೇಶವೊಂದನ್ನು ತಂದ ಕೇಂದ್ರ ಗೃಹ ಇಲಾಖೆ, ನಾಗರಿಕ ಸೇವೆಗಳ ಅಧಿಕಾರವನ್ನು ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

ಸುಪ್ರೀಂ ತೀರ್ಪು ಏನಾಗಿತ್ತು?
ಕಳೆದ ಮೇ 11ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಈ ಅಂಶಗಳ ಬಗ್ಗೆ ಪ್ರಸ್ತಾವಿಸಲಾಗಿತ್ತು: ರಾಜಧಾನಿಯ ಬಹುತೇಕ ಅಧಿಕಾರಗಳು ದಿಲ್ಲಿಯ ಚುನಾಯಿತ ಸರಕಾರದ ಅಡಿಗೆ ಬಂದಿದ್ದವು. ಆದರೆ ಸಾರ್ವಜನಿಕ ಆದೇಶ, ಭೂಮಿ ಮತ್ತು ಪೊಲೀಸ್‌ ಮಾತ್ರ ಲೆ| ಜನರಲ್‌ ಬಳಿ ಉಳಿದುಕೊಂಡಿತ್ತು.

ನಾಗರಿಕ ಸೇವೆಯಲ್ಲಿನ ಬದಲಾವಣೆಗಳು

1 ನಾಗರಿಕ ಸೇವೆಗಳ ಬಗ್ಗೆ ನಿಯಮಗಳನ್ನು ತರುವ ಅಧಿಕಾರವನ್ನು ದಿಲ್ಲಿ ವಿಧಾನಸಭೆಗೆ ನೀಡಲಾಗಿದೆ.

Advertisement

2ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವು ದಿಲ್ಲಿ ವಿಧಾನಸಭೆಗೆ ಅಥವಾ ಲೋಕಸಭೆಗೆ ವಾರ್ಷಿಕ ವರದಿ ನೀಡುವ ಅಗತ್ಯವಿಲ್ಲ.

3ವಿವಿಧ ಪ್ರಾಧಿಕಾರಗಳು, ಮಂಡಳಿಗಳು, ಆಯೋಗಗಳು ಮತ್ತು ಕಾನೂನು ಮಂಡಳಿಗಳ ಮುಖ್ಯಸ್ಥರ ನೇಮಕ ವಿಧಾನದಲ್ಲಿ ಬದಲಾವಣೆ ತರಲಾಗಿದೆ. ಅಂದರೆ ಇದುವರೆಗೆ ಸಚಿವರ ಆದೇಶ ಮತ್ತು ನಿರ್ದೇಶನದ ಮೇರೆಗೆ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಮುಖ್ಯಮಂತ್ರಿಗೆ ಕಳುಹಿಸುವ  ಮುನ್ನ ಕೇಂದ್ರ ಸರಕಾರಕ್ಕೆ  ಶಿಫಾರಸು ಮಾಡುವ ವಿಧಾನವನ್ನು ತೆಗೆಯಲಾಗಿದೆ.

4ನೇಮಕದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅವರ ಅಧಿಕಾರವನ್ನು ಹೆಚ್ಚಳ ಮಾಡಲಾಗಿದೆ. ದಿಲ್ಲಿ ಮುಖ್ಯಮಂತ್ರಿ ಮತ್ತು ಎನ್‌ಸಿಸಿಎಸ್‌ಎ ಶಿಫಾರಸುಗಳಂತೆ ದಿಲ್ಲಿ ಸರಕಾರದ ಮಂಡಳಿಗಳು ಮತ್ತು ಆಯೋಗಗಳ‌ ಸದಸ್ಯರನ್ನು ಲೆಫ್ಟಿನೆಂಟ್‌ ಗವರ್ನರ್‌ ನೇಮಕ ಮಾಡಬಹುದು. ಈ ಮಂಡಳಿಗಳು ಮತ್ತು ಆಯೋಗಗಳನ್ನು ದಿಲ್ಲಿ ವಿಧಾನಸಭೆ ರಚಿಸಿರುತ್ತದೆ.

ಕಾಯ್ದೆ ಕುರಿತ ವಿವಾದಗಳೇನು?
1.ಈ ಕಾಯ್ದೆಯಿಂದಾಗಿ ಸಂಸದೀಯ ಪ್ರಜಾಪ್ರಭುತ್ವದ ಮೂಲಾಶಯಗಳಿಗೆ ಭಂಗ ತಂದಂತಾಗುತ್ತದೆ ಎಂದು ಆರೋಪಿಸಲಾಗಿದೆ. ಅಂದರೆ ದಿಲ್ಲಿಯ ನಾಗರಿಕ ಸೇವೆ ಕುರಿತ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಈ ಮೂಲಕ ನಾಗರಿಕ ಸೇವೆಯಲ್ಲಿರುವವರು, ಸಚಿವರು ಮತ್ತು ಮತದಾರರ ಹೊಣೆದಾಯಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಆಪಾದನೆ ಇದೆ.

2.ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ ಕೊಡುತ್ತಿರುವುದು ತಪ್ಪು. ಇವರು ಸಚಿವ ಸಂಪುಟದ ನಿರ್ಧಾರಗಳನ್ನು ತಿರಸ್ಕರಿಸಬಹುದಾಗಿದೆ. ಈ  ಮೂಲಕ ಚುನಾಯಿತ ಸರಕಾರದ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ.

3.ನಿಯಮಗಳ ಕುರಿತಂತೆ ಕೆಲವೊಂದು ಗೊಂದಲಗಳಿವೆ. ಅಂದರೆ ಲೆಫ್ಟಿನೆಂಟ್‌ ಗವರ್ನರ್‌ ಅವರ “ಪರಮಾಧಿಕಾರ’ ಎಂಬ ಪದವೇ ಗೊಂದಲಕ್ಕೆಡೆ ಮಾಡಿಕೊಟ್ಟಿದೆ. ಕೆಲವೊಂದು ವಿಚಾರಗಳನ್ನು ಇವರ ಗಮನಕ್ಕೆ ತರಲೇಬೇಕು ಎಂಬ ವಿಚಾರವು ಸರಕಾರದ ನಿರ್ಧಾರಗಳನ್ನು ಜಾರಿ ಮಾಡುವಲ್ಲಿ ಕಷ್ಟವಾಗಬಹುದು.

ತಿದ್ದುಪಡಿ ಕಾಯ್ದೆಯ ಪ್ರಮುಖಾಂಶಗಳು1.
1.ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ

ಈ ತಿದ್ದುಪಡಿ ಕಾಯ್ದೆಯಂತೆ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ರಚನೆಗೆ ಅವಕಾಶ ಸಿಕ್ಕಿದೆ. ಇದು ಕೆಲವೊಂದು ಸೇವಾ ಸಂಬಂಧಿತ ವಿಷಯಗಳ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಶಿಫಾರಸು ಮಾಡುತ್ತದೆ. ಅಂದರೆ ಅಧಿಕಾರಿಗಳ ವರ್ಗಾವಣೆ, ವಿಚಕ್ಷಣೆ ಮತ್ತು ಶಿಸ್ತುಕ್ರಮಗಳು ಇದರಲ್ಲಿ ಸೇರಿವೆ.

2.ಲೆಫ್ಟಿನೆಂಟ್‌ ಗವರ್ನರ್‌ಗೆ ಅಧಿಕಾರ
ಈ ತಿದ್ದುಪಡಿ ಕಾಯ್ದೆಯಲ್ಲಿ ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅಷ್ಟೇ ಅಲ್ಲ ಕೆಲವೊಂದು ಪ್ರಕರಣಗಳಲ್ಲಿ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ನೀಡಿದ ಶಿಫಾರಸುಗಳನ್ನು ಬದಿಗಿರಿಸಿ, ತಾವೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು.

3.ಸಚಿವರಿಂದ ಆದೇಶ
ದಿಲ್ಲಿ ಸರಕಾರದ ಸಚಿವರಿಗೂ ಕೆಲವೊಂದು ಅಧಿಕಾರಗಳು ಪ್ರಾಪ್ತವಾಗಿವೆ. ಸಂಬಂಧಿತ ಇಲಾಖೆಯ ಕಾರ್ಯದರ್ಶಿ ಜತೆಗೆ ಚರ್ಚಿಸಿ, ವಿತರಣೆ ಸಹಿತ ಕೆಲವೊಂದು ವಿಚಾರಗಳ ಬಗ್ಗೆ ಸ್ಥಾಪಿತ ಆದೇಶ ನೀಡಬಹುದು. ಆದರೆ ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಅವರ ಗಮನಕ್ಕೆ ತಂದು, ಅಭಿಪ್ರಾಯ ಪಡೆದು ಆದೇಶ ಹೊರಡಿಸಬಹುದು.

4.ಕಾರ್ಯದರ್ಶಿಗಳ ಕೆಲಸಗಳು
ಸರಕಾರದ ಇಲಾಖೆಗಳ ಕಾರ್ಯದರ್ಶಿಗಳು ಕೆಲವೊಂದು ವಿಚಾರಗಳ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌, ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರಲೇಬೇಕು. ಅದರಲ್ಲೂ ಪ್ರಮುಖವಾಗಿ ಇತರ ರಾಜ್ಯ ಸರಕಾರಗಳು, ನ್ಯಾಯಾಲಯಗಳು ಮತ್ತು ಕೇಂದ್ರ ಸರಕಾರದ ಜತೆಗಿನ ಯಾವುದೇ ನಿರ್ಧಾರಗಳು, ವಿವಾದಿತ ಅಂಶಗಳ ಬಗ್ಗೆ ಇವರೆಲ್ಲರ ಗಮನಕ್ಕೆ ತರಲೇಬೇಕು.

ಕೇಂದ್ರದ ವಾದವೇನು?
ಈ ತಿದ್ದುಪಡಿ ಕಾಯ್ದೆ ಬಗ್ಗೆ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ನಾವು ದಿಲ್ಲಿ ಸರಕಾರದ ಯಾವುದೇ ಅಧಿಕಾರವನ್ನು ಕಿತ್ತುಕೊಳ್ಳುತ್ತಿಲ್ಲ ಎಂದೂ ಅದು ವಾದಿಸಿದೆ. ಜತೆಗೆ ಒಕ್ಕೂಟ ವ್ಯವಸ್ಥೆಗೆ ಭಂಗ ತಂದಿಲ್ಲ ಎಂದೂ ಹೇಳಿದೆ. ಅಂದರೆ ದಿಲ್ಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದು, ಇದಕ್ಕೆ ಸೀಮಿತ ಅಧಿಕಾರಗಳಿವೆ. ಇತರೆ ರಾಜ್ಯಗಳಂತೆ ತನಗೂ ಅಧಿಕಾರ ಬೇಕು ಎಂದು ಕೇಳುವಂತಿಲ್ಲ. ಜತೆಗೆ ಇದು ರಾಷ್ಟ್ರ ರಾಜಧಾನಿಯಾಗಿದ್ದು, ಇಲ್ಲಿ ಬೇರೆಯದ್ದೇ ಮಿತಿಗಳಿವೆ ಎಂದು ಹೇಳಿದೆ.

ಅಧಿಕಾರ ಬದಲಾವಣೆಯ ಪರ್ವ

1956 ಕೇಂದ್ರಾಡಳಿತ ಪ್ರದೇಶವಾಗಿ ದಿಲ್ಲಿ ಗುರುತು ಆದರೆ ವಿಧಾನಸಭೆ ಇಲ್ಲ.

1991-92- 69ನೇ ಸಾಂವಿಧಾನಿಕ ತಿದ್ದುಪಡಿ ತಂದು ದಿಲ್ಲಿಗೆ ಸಂಪೂರ್ಣ ಕೇಂದ್ರಾಡಳಿತ ಪ್ರದೇಶ ಪಟ್ಟ ನೀಡಲಾಯಿತು. ಜತೆಗೆ ವಿಧಾನಸಭೆಯ ಅವಕಾಶ ನೀಡಲಾಯಿತು. 70ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಕೆಲವೊಂದು ಅಧಿಕಾರಗಳನ್ನು ನೀಡಲಾಯಿತು.

2015 ದಿಲ್ಲಿ ವಿಧಾನಸಭೆ ಬಳಿಯಿದ್ದ ಸೇವಾಧಿಕಾರವನ್ನು ತನ್ನ ತೆಕ್ಕೆಗೆ ಪಡೆದಕೇಂದ್ರ ಗೃಹ ಇಲಾಖೆ. ಈ ಮೂಲಕ ಲೆ| ಗವರ್ನರ್‌ಗೆ ಹೆಚ್ಚಿನ ಅಧಿಕಾರ.

2016 ದಿಲ್ಲಿ ಹೈಕೋರ್ಟ್‌ನಿಂದ ತೀರ್ಪು – ದಿಲ್ಲಿ ಸೇವೆಗಳು ವಿಧಾನಸಭೆಯಿಂದ ಹೊರಗೆ ನಿರ್ಧಾರವಾಗಬಹುದು ಎಂದ ಕೋರ್ಟ್‌.

2018 ದಿಲ್ಲಿಯ ಸಚಿವ ಸಂಪುಟದ ಸಲಹೆ ಮತ್ತು ಸಹಾಯದ ಮೇರೆಗೆ ಕಾರ್ಯನಿರ್ವಹಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌ಗೆ ಸೂಚಿಸಿದ ಸುಪ್ರೀಂ ಕೋರ್ಟ್‌.

2019 ನಾಗರಿಕ ಸೇವೆಗಳ ಬಗ್ಗೆ ವಿಭಜಿತ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

2021 ಕೇಂದ್ರ ಸರಕಾರದಿಂದ ಜಿಎನ್‌ಸಿಟಿಡಿ ಕಾಯ್ದೆಗೆ ತಿದ್ದುಪಡಿ. ಕೆಲವೊಂದು ವಿಚಾರಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ ಪ್ರಾಪ್ತಿ.

2023 ಸುಪ್ರೀಂ ಕೋರ್ಟ್‌ನಿಂದ ತೀರ್ಪು- ದಿಲ್ಲಿ ನಾಗರಿಕ ಸೇವೆಗಳು ಸ್ಥಳೀಯ ಸರಕಾರದ ವ್ಯಾಪ್ತಿಗೆ ಬರಬೇಕು ಎಂದ ಕೋರ್ಟ್‌. ಇದಾದ ಬಳಿಕ ಅಧ್ಯಾದೇಶ ತಂದ ಕೇಂದ್ರ ಸರಕಾರ. ಈ ಎಲ್ಲಅಧಿಕಾರಗಳು ಮತ್ತೆ ಎಲ್‌ಜಿಗೆ ಪ್ರಾಪ್ತಿ.

-ಸೋಮಶೇಖರ ಸಿ.ಜೆ

Advertisement

Udayavani is now on Telegram. Click here to join our channel and stay updated with the latest news.

Next