Advertisement

ಸೌದಿ ದೊರೆಯ ವಿರುದ್ಧ ಪೋಸ್ಟ್ ಪ್ರಕರಣ: ಆ.18ಕ್ಕೆ ಬೆಂಗಳೂರಿಗೆ ಬರಲಿರುವ ಹರೀಶ್ ಬಂಗೇರ

10:04 AM Aug 14, 2021 | Team Udayavani |

ಉಡುಪಿ: ತನ್ನ ಹೆಸರಲ್ಲಿ ಕಿಡಿಗೇಡಿಗಳು ಫೇಸ್‌ಬುಕ್‌ ನಕಲಿ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿತರಾಗಿರುವ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಅವರು ಆಗಸ್ಟ್ 18 ರಂದು ಬೆಂಗಳೂರು ತಲುಪಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಪೂರೈಸಬೇಕಾಗಿದ್ದ ವಿಧಿ- ವಿಧಾನಗಳೆಲ್ಲವೂ ಪೂರ್ಣಗೊಂಡಿದ್ದು ಆಗಸ್ಟ್ 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾಗೆ ಹೋಗಿ ದೋಹಾ ಮೂಲಕ ಆಗಸ್ಟ್ 18 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ಸೌದಿ ಅರೇಬಿಯಾ ದ ರಿಯಾದ್ ನಲ್ಲಿರುವ ಭಾರತೀಯ ದೂತವಾಸದಿಂದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಧಿಕೃತ ಮಾಹಿತಿ ಬಂದಿದೆ ತಿಳಿಸಿದ್ದಾರೆ.

ಹರೀಶ್‌ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ತೆರೆದ ಪ್ರಕರಣ ಸಂಬಂಧ ಉಡುಪಿ ಸೆನ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳಾದ ಮೂಡುಬಿದಿರೆಯ ಅಬ್ದುಲ್‌ ಹುಯೇಸ್‌ ಹಾಗೂ ತುವೇಸ್‌ ನನ್ನು ಬಂಧಿಸಿದ್ದರು. ಈ ಸಹೋದರರಿಬ್ಬರು ಹರೀಶ್‌ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದು, ಅನಂತರ ಅದರ ಸ್ಕ್ರೀನ್‌ ಶಾಟ್‌ ತೆಗೆದು ಖಾತೆಯನ್ನು ಡಿಲೀಟ್‌ ಮಾಡಿದ್ದರು. ಇದು ಹರೀಶ್‌ ಅವರೇ ಹಾಕಿದ ಪೋಸ್ಟ್‌ ಎಂದು ತಿಳಿದು ಸೌದಿ ಪೊಲೀಸರು 2019ರ ಡಿಸೆಂಬರ್‌ನಲ್ಲಿ ಬಂಧಿಸಿದ್ದರು.

ಆರೋಪಿಗಳಿಗೆ ಜಾಮೀನು: ಹರೀಶ್‌ ಬಂಗೇರ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಸಂದೇಶ ರವಾನಿಸಿದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಆಗಿನ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಮತ್ತು ಹಾಲಿ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ ನೇತೃತ್ವದ ಪೊಲೀಸರ ಪಾತ್ರ ಪ್ರಮುಖವಾಗಿತ್ತು. ಪ್ರಸ್ತುತ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next