Advertisement

ದೊಡ್ಡಗೌಡರ ಮಧ್ಯಪ್ರವೇಶ; ಇಂದಿನ ಸಭೆ ರದ್ದು

10:13 PM Feb 25, 2023 | Team Udayavani |

ಬೆಂಗಳೂರು:ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್‌ ವಿಚಾರ ಕಗ್ಗಂಟಾಗಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಬೇಕಾಗಿದ್ದ ಜೆಡಿಎಸ್‌ ಸಭೆಯೇ ರದ್ದಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

Advertisement

ಎಚ್‌.ಡಿ.ರೇವಣ್ಣ ಅವರು ದೇವೇಗೌಡರ ಮೇಲೆ ಒತ್ತಡ ಹಾಕಿ ಸಭೆಯನ್ನು ಮುಂದೂಡುವಂತೆ ಮಾಡಿದ್ದು, ಈ ತಿಕ್ಕಾಟದಲ್ಲಿ ಎಚ್‌.ಡಿ ರೇವಣ್ಣ ಅವರೇ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗಿದೆ.

ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿ ಶನಿವಾರ ಶೃಂಗೇರಿಯಲ್ಲಿ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, “ಬಿಜೆಪಿ ಅಭ್ಯರ್ಥಿ ಏನೇ ಹೇಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆಂದು ಹೇಳಿದ್ದೆ. ಆ ಮಾತಿಗೆ ಬದ್ಧನಾಗಿದ್ದೇನೆ’ ಎಂದಿದ್ದರು. ಈ ಮೂಲಕ ಎಚ್‌ಡಿಕೆ ಅವರು ಪರೋಕ್ಷವಾಗಿ, ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಲ್ಲ ಎಂದು ಸ್ಪಷ್ಟಪಡಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗಿತ್ತು.

ದೇವೇಗೌಡರ ಮಧ್ಯಪ್ರವೇಶ:
ಇದಾದ ಬೆನ್ನಲ್ಲೇ, ಟಿಕೆಟ್‌ಗೆ ಸಂಬಂಧಿಸಿದಂತೆ ಭಾನುವಾರ ಪಕ್ಷದ ಕಚೇರಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಸಭೆ ಮುಂದೂಡಲ್ಪಟ್ಟಿದೆ. ಸಭೆಯಲ್ಲಿ 50 ಪ್ರಮುಖ ನಾಯಕರಿಗೆ ಮಾತ್ರ ಆಹ್ವಾನ ನೀಡಿ ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ, ಹಾಸನ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಯಾರಿಗೂ ಸಭೆಗೆ ಆಹ್ವಾನ ಕೊಟ್ಟಿರಲಿಲ್ಲ. ಪ್ರಮುಖ ನಾಯಕರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ಅದರಂತೆ ಟಿಕೆಟ್‌ ಅಂತಿಮಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ದೇವೇಗೌಡರು ಮಧ್ಯಪ್ರವೇಶ ಮಾಡಿ ಸಭೆ ಮುಂದೂಡುವಂತೆ ಸೂಚನೆ ನೀಡಿದ್ದು, ಅದರಂತೆ ಸಭೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next