Advertisement

ಗುರುವಿನ ದ್ವಾರಕೆ ಶರಣು!

07:50 PM Nov 08, 2019 | Lakshmi GovindaRaju |

“ಕರ್ನಾಟಕದ ಕಿರೀಟ’ ಎಂದೇ ಕರೆಯಲ್ಪಡುವ ಬೀದರ್‌, ಸರ್ವಧರ್ಮಗಳ ಶಾಂತಿಯ ಬೀಡು, ಶರಣರ ನಾಡು. ಬೀದರ್‌ಗೆ ಕ್ರಿ.ಶ. 1512ರಲ್ಲಿ ಗುರುನಾನಕರು ಭೇಟಿ ನೀಡಿದ್ದರು. ಆಗಿನಿಂದ ಸಿಖ್ಖ್ ಧರ್ಮವು ಈ ನಗರಕ್ಕೆ ಪರಿಚಿತ. ಗುರುನಾನಕರು ಕಾವ್ಯಾತ್ಮಕವಾದ 974 ಸ್ತೋತ್ರಗಳನ್ನು ರಚಿಸಿದ್ದಾರೆ. ಈ ಸ್ತೋತ್ರಗಳ ಸಮಗ್ರ ಗುತ್ಛವನ್ನು “ಗುರು ಗ್ರಂಥ ಸಾಹೀಬ್‌’ ಎನ್ನುತ್ತಾರೆ. ನಾನಕರು ವಿಶ್ವಶಾಂತಿ ಹಾಗೂ ಸಹೋದರತೆ­ಗಳನ್ನು ಬೆಳೆಸಲು ಲೋಕಸಂಚಾರ ಕೈಗೊಂಡರು.

Advertisement

ಕ್ರಿ.ಶ.1510 ರಿಂದ 1515 ನಡುವೆ ಕನ್ನಡ ನಾಡನ್ನು ಹಾದು ಹೋಗಿದ್ದರು. ಈ ಸಮಯ­ದಲ್ಲಿ ಬೀದರ್‌ಗೆ ಕೊಟ್ಟ ಭೇಟಿ, ನಮ್ಮ ನಾಡಿಗೆ ಹಾಗೂ ಸಿಖ್‌ ಧರ್ಮಿಯರಿಗೆ ಅತ್ಯಂತ ಮಹತ್ವದ, ಐತಿಹಾಸಿಕ ಘಟನೆಯಾಗಿದೆ. ಗುರು ನಾನಕರು ಬೀದರ್‌ನ ಗುಡ್ಡವೊಂದರಲ್ಲಿ ತಂಗಿದ್ದಾಗ ಸ್ಥಳೀಯ ಸೂಫಿ ಸಂತರಾದ ಫ‌ಕೀರ್‌ ಜಲಾಲುದ್ದೀನ ಹಾಗೂ ಯಾಕುಬ್‌ ಅಲಿ ಅವರನ್ನು ಆದರಿಸಿ, ಸತ್ಕರಿಸಿದರು. ಅವರ ಸಮ್ಮುಖದಲ್ಲಿ ಸತ್ಸಂಗವನ್ನು ಏರ್ಪಡಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ತೋಡಿಕೊಂಡರು. ಅಲ್ಲದೆ ಅವರು ಗುರುಗಳಲ್ಲಿ, ಜಲಮೂಲವನ್ನು ಶೋಧಿಸಿ ಕೊಡುವಂತೆ ಮನವಿ ಸಲ್ಲಿಸಿದರು. ಆಗ ಬೀದರ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಜನರ ಸಂಕಷ್ಟವನ್ನು ಕಂಡು ಮರುಗಿದ ನಾನಕರು ಜನರಿಗೆ ಸಹಾಯ ಮಾಡಲು ನಿರ್ಧರಿಸಿದರು. ಗುಡ್ಡವೊಂದರ ಬಳಿ ತೆರಳಿ ಅಲ್ಲಿದ್ದ ಒಂದು ಕಲ್ಲನ್ನು ತಮ್ಮ ಪಾದಗಳಿಂದ ಸರಿಸಿದರು.

ಆಶ್ಚರ್ಯವೆಂಬಂತೆ ಅಲ್ಲಿ ಸಿಹಿನೀರಿನ ಕಾರಂಜಿ ಚಿಮ್ಮಿತಂತೆ. ಈ ಕಾರಂಜಿಯನ್ನೇ ‘ನಾನಕ ಝೀರಾ ಸಾಹೀಬ್‌’ ಎಂದು ಕರೆಯಲಾಗುತ್ತದೆ. ಬಿಸಿಲಿನ ನಾಡು ಎಂಬ ಅಪಖ್ಯಾತಿಗೆ ಒಳಗಾಗಿದ್ದ ಬೀದರ್‌ನಲ್ಲಿ ತಿಳಿ ನೀರಿನ ಚೆಲುಮೆ ಇಂದಿಗೂ ಅಮೃತದಂತೆ ಜಿನುಗುತ್ತಿದೆ. ಇಂದಿಗೂ ಸಿಖ್‌ ಧರ್ಮದ ಭಕ್ತಾದಿಗಳು ಆ ಕುಂಡದಲ್ಲಿನ ನೀರನ್ನು “ಅಮೃತ ಜಲ’ ಎಂದು ಭಾವಿಸಿ, ಮನೆಗೆ ಕೊಂಡೊಯ್ಯುತ್ತಾರೆ. ಇದು ಸಿಖ್‌ ಧರ್ಮೀಯರ ಪಾಲಿಗೆ ಪುಣ್ಯಕ್ಷೇತ್ರವಾಗಿದೆ.

ಗುರುದ್ವಾರ ನಿರ್ಮಾಣ: ನಾನಕ್‌ ಝಿರಾ ಸಾಹೀಬ್‌ ಸುತ್ತಲೂ ವಿಶಾಲವಾದ ಗುರುದ್ವಾರವನ್ನು ನಿರ್ಮಿಸಲಾಗಿದೆ. ಅಮೃತಕುಂಡವೆಂದೂ ಕರೆಯಲಾಗುವ ಈ ತಿಳಿ ನೀರಿನ ಬುಗ್ಗೆಯ ಪಕ್ಕದಲ್ಲಿ ನಾನಕರು ತಂಗಿದ್ದರು. ಅಲ್ಲೀಗ ಅತ್ಯಾಕರ್ಷಕ ದರ್ಬಾರ ಸಾಹೀಬ್‌ ಪ್ರಾರ್ಥನಾ ಗೃಹವಿದೆ. ಇಲ್ಲಿ ಪ್ರತಿನಿತ್ಯ ಗುರು ಗ್ರಂಥ ಸಾಹೀಬ್‌ ಪಠಣ ಮಾಡಲಾಗುತ್ತದೆ. ಇಲ್ಲಿ ಯಾತ್ರಿಗಳಿಗಾಗಿ ವಸತಿ ಸೌಲಭ್ಯವಿದೆ. ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸಿಖ್‌ ಧರ್ಮಕ್ಕೆ ಸಂಬಂಧಿಸಿದ ಅಮೂಲ್ಯ ವಸ್ತುಗಳನ್ನು ನೋಡಬಹುದಾಗಿದೆ.

Advertisement

ಎಡಬಿಡದೆ ನಡೆಯುವ ಲಂಗರ್‌(ಅನ್ನ ದಾಸೋಹ) ಸೇವೆಯಲ್ಲಿ ಸಾಧಕರು ಮತ್ತು ಯಾತ್ರಿಗಳು ಪ್ರಸಾದ ಸ್ವೀಕರಿಸಬಹುದು. ದಿನವೂ ನೂರಾರು ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಪ್ರದೇಶ ಇಂದು ಪ್ರವಾಸಿತಾಣವಾಗಿ ಜನರನ್ನು ಆಕರ್ಷಿಸುತ್ತಿದೆ. ಪ್ರತಿವರ್ಷ ಗುರು ನಾನಕ ಜಯಂತಿಯನ್ನು ಸಿಖ್ಖರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ.

ದರುಶನಕೆ ದಾರಿ…: ಬೀದರ್‌ ಕೇಂದ್ರ ಬಸ್‌ ನಿಲ್ದಾಣದಿಂದ ಬಲಕ್ಕೆ ಬಂದರೆ ಗುರುದ್ವಾರ ಗೇಟ್‌ ಸಿಗುತ್ತೆ ಅಲ್ಲಿಂದ 2 ಕಿ.ಮೀ. ದೂರದಲ್ಲಿ ಮಂದಿರವಿದೆ.

* ರವಿಕುಮಾರ ಮಠಪತಿ

Advertisement

Udayavani is now on Telegram. Click here to join our channel and stay updated with the latest news.

Next