Advertisement

ಸರ್ಕಾರಕ್ಕೆ ಸವಾಲಾಗಲಿದೆಯೇ ಮಹಾವಲಸೆ?

06:57 AM May 13, 2020 | Lakshmi GovindaRaj |

ಬೆಂಗಳೂರು: ಕಾರ್ಮಿಕರ ತವರಿನ ಪಯಣ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ; ಆ ಕಾರ್ಮಿಕರನ್ನು ಸ್ವಾಗತಿಸಲಿರುವ “ವಲಸೆ ನಾಡು’ಗಳಿಗೂ ದೊಡ್ಡ ತಲೆನೋವಾಗಲಿದೆ. ವಲಸೆ ಕಾರ್ಮಿಕರು ತವರಿನತ್ತ ಮುಖಮಾಡಿರುವುದು ರಾಜ್ಯದ  ವಿವಿಧ ನಿರ್ಮಾಣ ಕಾಮಗಾರಿಗಳ ಮೇಲೆ ಪರಿಣಾಮ ಬೀರು ವುದರಲ್ಲಿ ಎರಡು ಮಾತಿಲ್ಲ. ಆದರೆ, ಇದೇ ಇಕ್ಕಟ್ಟಿನ ಪರಿಸ್ಥಿತಿ ಈ ಕಾರ್ಮಿಕರನ್ನು ಬರಮಾಡಿ ಕೊಳ್ಳುವ ರಾಜ್ಯ ಗಳಿಗೂ ಎದುರಾಗುವ ಸಾಧ್ಯತೆ ಇದೆ.

Advertisement

ಯಾಕೆಂದರೆ,  ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಕಾರ್ಮಿಕರಿಗೆ ಪುನರ್‌ವಸತಿ ಕಲ್ಪಿಸುವುದು, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಜವಾಬ್ದಾರಿಗಳು ಈಗ ಆಯಾ ರಾಜ್ಯ ಸರ್ಕಾರಗಳ ಮೇಲಿದೆ. ಹಾಗೊಂದು ವೇಳೆ ತವರಿನಲ್ಲಿಯೇ ಇರಲು ಆ ಕಾರ್ಮಿಕರು ನಿರ್ಧರಿಸಿದರೆ ಮತ್ತು ಅದನ್ನು ನಿಭಾಯಿಸುವಲ್ಲಿ ಸರ್ಕಾರಗಳು ವಿಫ‌ಲವಾದರೆ, ಮುಂಬರುವ ದಿನಗಳಲ್ಲಿ ಸ್ಥಳೀಯಮಟ್ಟದಲ್ಲಿ ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಲಿದೆ.

ಬಿಹಾರ, ಉತ್ತರ ಪ್ರದೇಶ,  ಒರಿಸ್ಸಾ, ಪಶ್ಚಿಮ ಬಂಗಾಳ ಒಳಗೊಂಡಂತೆ ಉತ್ತರ ಭಾರತದ ವಲಸಿಗರಿಗೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ಕೇಂದ್ರ ಸ್ಥಾನ. ತುಸು ಮುಂದುವರಿದ ರಾಜ್ಯವಾಗಿದ್ದು, ಅತಿಹೆಚ್ಚು ಅಭಿವೃದಿ ಕಾಮಗಾರಿಗಳು ಇಲ್ಲಿ ನಡೆಯುತ್ತವೆ.  ಜತೆಗೆ ಕೇರಳ ಹೊರತುಪಡಿಸಿದರೆ, ಕನಿಷ್ಠ ವೇತನ ಮತ್ತಿತರ ಸೌಲಭ್ಯಗಳು ತಕ್ಕಮಟ್ಟಿಗೆ ಉತ್ತಮವಾಗಿರುವುದು ಇಲ್ಲಿಯೇ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುವುದು ಸಹಜ. ಈ ಕಾರ್ಮಿಕರ ಸಂಖ್ಯೆ ನಿಖರವಾಗಿ ಎಷ್ಟಿದೆ ಎಂದು  ಸ್ವತಃ ಕಾರ್ಮಿಕ ಇಲಾಖೆಗೂ ಗೊತ್ತಿಲ್ಲ. ಆಾಜು 6-7 ಲಕ್ಷ ಕಾರ್ಮಿಕರು ಹೊರರಾಜ್ಯದಿಂದ ಬಂದು ಇಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಹೀಗೆ ವಲಸೆ ಬಂದವರಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದವರು ಅಧಿಕ. ಈಗಾಗಲೇ  ಆ ರಾಜ್ಯಗಳು ನಿರುದ್ಯೋಗ ಸಮಸ್ಯೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರಮಾಣ ಹೆಚ್ಚಿದ್ದು, ಈ ಮಧ್ಯೆ ಲಕ್ಷಾಂತರ ಜನ ವಾಪಸ್‌ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಅವರೆಲ್ಲರಿಗೂ ಇದು ಪುನರ್‌ವಸತಿ ಕಲ್ಪಿಸುವುದು ಸವಾಲಾಗಿದೆ. ಸದ್ಯಕ್ಕೆ ಒಂದೂವರೆ ತಿಂಗಳ ವೇತನ ನೀಡಿದ್ದರಿಂದ ಕುಟುಂಬ ನಿರ್ವಹಣೆಯಲ್ಲಿ ಸಮಸ್ಯೆ ಆಗದಿರಬಹುದು. ಆದರೆ, ಆ ಹಣ ಖಾಲಿಯಾದ ನಂತರ ಕೆಲಸದ ಹುಡುಕಾಟ ಆರಂಭವಾಗಲಿದೆ. ಸಕಾಲದಲ್ಲಿ ಸಿಗದಿದ್ದರೆ, ಅದು  ಅಪರಾಧ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

21.70 ಲಕ್ಷ ನೋಂದಾಯಿತರು: “ರಾಜ್ಯದಲ್ಲಿ ಒಟ್ಟಾರೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರ ಸಂಖ್ಯೆ 21.70 ಲಕ್ಷ. ಹೆಚ್ಚು-ಕಡಿಮೆ ಇಷ್ಟೇ ಪ್ರಮಾಣದಲ್ಲಿ ನೋಂದಾಯಿತವಲ್ಲದ  ಕಾರ್ಮಿಕರೂ ಇದ್ದಾರೆ. ಈ ಪೈಕಿ ಉತ್ತರ ಭಾರತ ದ ವಲಸೆ ಕಾರ್ಮಿಕರು 6-7 ಲಕ್ಷ ಜನ ಇರಬಹುದು. ಅದರಲ್ಲಿ ಸಿಂಹಪಾಲು ಬೆಂಗಳೂರಿನಲ್ಲೇ ಇದ್ದಾರೆ. ಹಲವು ಸಮಸ್ಯೆಗಳ ನಡುವೆಯೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಅವರೆಲ್ಲಾ  ಕರ್ನಾಟಕದಲ್ಲಿ ತುಸು ನೆಮ್ಮದಿ ಯಿಂದ ಇದ್ದಾರೆ ಎಂದೇ ಹೇಳಬಹುದು.

Advertisement

ಇಷ್ಟೊಂದು ಪ್ರಮಾಣದಲ್ಲಿರುವ ಕಾರ್ಮಿಕರು ವಾಪಸ್‌ ಹೋದಾಗ, ಸಹಜವಾಗಿ ಆಯಾ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಸಿ ಸೌಲಭ್ಯಗಳನ್ನು ಕಲ್ಪಿಸುವುದು ಸವಾಲಾಗಲಿದೆ’ ಎಂದು ಎಐಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌. ಶಿವಣ್ಣ ತಿಳಿಸುತ್ತಾರೆ. ಈ ಮೊದಲೇ  ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಇತ್ತು. ಇಂತಹದ್ದರಲ್ಲಿ ಲಾಕ್‌ಡೌನ್‌ನಿಂದ ಆರ್ಥಿಕತೆ ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಇದ್ದವರಿಗೇ ಉದ್ಯೋಗ ಸಿಗುತ್ತಿಲ್ಲ. ಹೀಗಿರುವಾಗ ವಲಸಿಗರಿಗೆ ಉದ್ಯೋಗ ಸೃಷ್ಟಿ  ಸವಾಲಿನ ಕೆಲಸ ಎಂದೂ ಅವರು ತಿಳಿಸುತ್ತಾರೆ.

ಪ್ಯಾಕೇಜ್‌ ಕೊಟ್ಟರೂ ನಿಲ್ಲದ ವಲಸೆ: ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದರೂ, ಸಾವಿರಾರು ಕಾರ್ಮಿಕರ ವಲಸೆ ಮುಂದುವರಿದಿದೆ. ಪ್ರತಿ ದಿನ ಶ್ರಮಿಕ್‌ ರೈಲಿನಲ್ಲಿ ಕಾರ್ಮಿಕರು ಸರದಿಯಲ್ಲಿ ನಿಂತು ತವರಿಗೆ ತೆರಳುತ್ತಿದ್ದಾರೆ.  ರಿಯಲ್‌ ಎಸ್ಟೇಟ್‌, ನಮ್ಮ ಮೆಟ್ರೋ ಯೋಜನೆ, ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಹತ್ತುಹಲವು ಪ್ರಮುಖ ಯೋಜನೆಗಳು ಶೇ. 60ರಿಂದ 70ರಷ್ಟು ಹೊರರಾಜ್ಯದ ಕೌಶಲ್ಯಯುತ ಕಾರ್ಮಿಕರನ್ನು ಅವಲಂಬಿಸಿದೆ.  ಅವರೆಲ್ಲರ ವಲಸೆ ರಾಜ್ಯದಲ್ಲಿನ ಅಭಿವೃದಿ ಚಟುವಟಿಕೆಗಳ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮೂಲಸೌಕರ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾರ್ಮಿಕರ ಕರೆ ತರುವುದು ಹೀಗೆ.. ಯಾವೊಂದು ಅಭಿವೃದಿ ಯೋಜನೆಗಳ ನಿರ್ಮಾಣದ ಗುತ್ತಿಗೆ ಪಡೆದವರ ಕೆಳಗೆ ಕೆಲವರು ಕಾರ್ಮಿಕ ಗುತ್ತಿಗೆದಾರರು ಇರುತ್ತಾರೆ. ಇವರಿಂದಲೇ ಕಾರ್ಮಿಕರ ಪೂರೈಕೆ ಆಗುತ್ತದೆ. ಈ ಉಪ ಗುತ್ತಿಗೆದಾರರು ಉತ್ತರ ಭಾರತದ ಕೆಲವು  ಊರುಗಳಿಗೆ ತೆರಳಿ (ಕಾರ್ಮಿಕರ ಲಭ್ಯತೆ ಬಗ್ಗೆ ಮೊದಲೇ ಮಾಹಿತಿ ಇರುತ್ತದೆ), ಅಲ್ಲಿ ಮುಖಂಡರು ಮತ್ತು ಪೋಷಕರೊಂದಿಗೆ ಮಾತುಕತೆ ನಡೆಸಿ ತಲಾ ಊರುಗಳಿಂದ 20-30 ಕಾರ್ಮಿಕರನ್ನು ಕರೆತರುತ್ತಾರೆ. ಇದರಲ್ಲಿ ಮುಂಗಡವಾಗಿ  ಒಂದೆರಡು ತಿಂಗಳ ವೇತನ ಪಾವತಿಸಿ ಕರೆತರುವ ಪ್ರಕರಣಗಳು ಹೆಚ್ಚಿರುತ್ತವೆ. ಹೀಗೆ ಕರೆತಂದವರಿಗೆ ಶಿಬಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಅಲ್ಲಿ ದಿನಗೂಲಿ ಅಲ್ಲ; ಗುತ್ತಿಗೆ ಆಧಾರದಲ್ಲಿ ವೇತನ ಪಾವತಿಸಲಾಗುತ್ತದೆ. ಉದಾಹರಣೆಗೆ ಇಂತಿಷ್ಟು ಕಾಂಕ್ರೀಟ್‌ ಹಾಕಿದರೆ, ಅದಕ್ಕೆ ತಕ್ಕಂತೆ ವೇತನ ಪಾವತಿ ಆಗುತ್ತದೆ. ಸಾಮಾನ್ಯವಾಗಿ ಒಂದೆರಡು ತಿಂಗಳ ವೇತನ ತಮ್ಮಲ್ಲಿಯೇ ಇರುವಂತೆ ಗುತ್ತಿಗೆದಾರರು ನೋಡಿ  ಕೊಳ್ಳುತ್ತಾರೆ. ಊರಿಗೆ ಹಬ್ಬ-ಹರಿದಿನಗಳಲ್ಲಿ  ಹೋಗುವಾಗ ಕೊಟ್ಟುಕಳುಹಿಸುತ್ತಾರೆ. ಉತ್ತರ ಭಾರತ ಅಥವಾ ನೆರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಿಂದ ವಲಸೆ ಹೋಗುವವರ ಸಂಖ್ಯೆ ತುಂಬಾ ಕಡಿಮೆ. ಹೆಚ್ಚೆಂದರೆ ಗೋವಾ ಮತ್ತು ಮಂಗಳೂರು, ಕೆಲವರು ಮುಂಬೈಗೆ  ಹೋಗುತ್ತಾರೆ. ಆರ್ಥಿಕವಾಗಿ ತುಸು ಸದೃಢವಾಗಿರುವವರು ದುಬೈಗೆ ತೆರಳುವುದೂ ಉಂಟು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸುತ್ತಾರೆ.

ಕಡಿತಗೊಳಿಸುವ ಬೆದರಿಕೆ: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ, ಸಂಬಳವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕೆಲ ಕಾರ್ಮಿಕರಿಗೆ ಒಂದೂವರೆ ತಿಂಗಳ ವೇತನ ನೀಡಲಾಗಿದೆ. ಆದರೆ, ಬೆನ್ನಲ್ಲೇ ಗುತ್ತಿಗೆದಾರರು, ಮುಂದಿನ ದಿನಗಳಲ್ಲಿ ಈಗ  ನೀಡಿರುವ ಮುಂಗಡ ವೇತನವನ್ನು ಮುಂದಿನ ದಿನಗಳಲ್ಲಿ ತಾವು ಕೆಲಸ ಮಾಡಿದ್ದರಲ್ಲಿ ಕಡಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದು ಕಾರ್ಮಿಕರಿಗೆ ಆತಂಕ ಉಂಟುಮಾಡಿದ್ದು, ವಲಸೆಗೆ ಉತ್ತೇಜನ ನೀಡಿದಂತಾಗಿದೆ ಎನ್ನಲಾಗಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next