Advertisement

ಇಂದಿನ ರಾಜಕಾರಣಿಗಳಿಗೆ ಅರಸು ಮಾದರಿ: ಸಚಿವ ಆರ್‌.ಬಿ. ತಿಮ್ಮಾಪುರ

05:34 PM Aug 21, 2024 | Team Udayavani |

■ ಉದಯವಾಣಿ ಸಮಾಚಾರ
ಬಾಗಲಕೋಟೆ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ದುರ್ಬಲ ವರ್ಗದ ಜನರ ಏಳ್ಗೆಗೆ ಶ್ರಮಿಸಿದ್ದ ಮಹಾನ್‌ ನಾಯಕ ಡಿ. ದೇವರಾಜ ಅರಸು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ನವನಗರದ ಕಲಾ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದವರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡು ದುರ್ಬಲ ವರ್ಗದ ಜನರ ಏಳ್ಗೆಗೆ ಶ್ರಮಿಸಿದ್ದಾರೆ. ದೇವರಾಜ ಅರಸು ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದವರು. ಅವರ ಕಾಲದಲ್ಲಿ ಕೂಲಿ
ಮಾಡುವವರು ಭೂ ಮಾಲೀಕರಾದರು.

ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಿದರು. ಸಣ್ಣ ಸಣ್ಣ ಸಮುದಾಯದವರನ್ನು ರಾಜಕೀಯದಲ್ಲಿ ಬರುವಂತೆ ಮಾಡಿದ ಫಲವಾಗಿ ಇಂದು ಅನೇಕರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಂತಾಗಿದೆ. ಅರಸು ಕಾರ್ಯ ಇಂದಿನ ರಾಜಕೀಯ ವ್ಯಕ್ತಿಗಳಿಗೆ ನೀತಿ ಪಾಠವಾಗಿದ್ದು, ಅವರ ಆಡಳಿತ ಎಲ್ಲರೂ ಅನುಸರಿಸುವಂತಾಗಿದೆ ಎಂದರು.

ಇಂತಹ ಮಹಾನ್‌ ನಾಯಕರ ಇತಿಹಾಸ ಇಂದಿನ ಯುವ ಪೀಳಿಗೆ ಅನುಸರಿಸುವ ಅಗತ್ಯವಿದೆ. ಈ ಹಿನ್ನೆಲೆ ಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಒಂದು ದಿನವಾದರೂ ಡಿ. ದೇವರಾಜ ಅರಸುರಂತಹ ಮಹಾನ್‌ ವ್ಯಕ್ತಿಗಳ ಇತಿಹಾಸ ಸಾರುವ ಪುಸ್ತಕ ಓದುವ ಕಾರ್ಯ ನಡೆಯಬೇಕಿದೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಮಾತನಾಡಿ, ದಿ. ದೇವರಾಜ ಅರಸು ರಾಷ್ಟ್ರಕಂಡ ಧೀಮಂತ ನಾಯಕ, ಮುತ್ಸದ್ಧಿ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತರೆ, ಸಾಲದು ದುರ್ಬಲರಿಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವೂ ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆತಂತಾಗುತ್ತದೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ದೇವರಾಜ ಅರಸು ಸಮಾಜದ ಮಾರ್ಗದರ್ಶಕರಾಗಿದ್ದು, ಸಣ್ಣ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶ್ರೀಮಂತರ ಮನೆಯಲ್ಲಿ ಹುಟ್ಟಿ ಬೆಳೆದರೂ ದುರ್ಬಲ ವರ್ಗಗಳ ಏಳ್ಗೆಗೆ ಆದ್ಯತೆ ನೀಡಿದ್ದಾರೆ. ಅಂತಹ ಮಹಾನ್‌ ವ್ಯಕ್ತಿಗಳ ಪ್ರತಿಮೆ ಪ್ರತಿ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಸರ್ಕಾರಕ್ಕೆ ಮನವಿ
ಮಾಡಿಕೊಳ್ಳುವುದಾಗಿ ತಿಳಿಸಿದರು. ಜಿಲ್ಲಾಧಿ ಕಾರಿ ಜಾನಕಿ ಕೆ.ಎಂ ಮಾತನಾಡಿ, ಶೋಷಿತರು ಹಾಗೂ ಅವಕಾಶ ವಂಚಿತರ ಪರವಾಗಿ ಇದ್ದವರು ದೇವರಾಜ ಅರಸು ಎಂದು ಹೇಳಿದರು.

ಧಾರವಾಡದ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ ನಿರ್ದೇಶಕ ಪ್ರೊ| ಎಂ. ಚಂದ್ರು ಪೂಜಾರ ಉಪನ್ಯಾಸ ನೀಡಿದರು. ಬಿಟಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಚ್‌.ವೈ. ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಎಂ. ತುಂಬರಮಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಇತರರಿದ್ದರು.

ಭಾವಚಿತ್ರ ಮೆರವಣಿಗೆಗೆ ಸಂಸದ ಗದ್ದಿಗೌಡರ ಚಾಲನೆ
ಡಿ. ದೇವರಾಜ ಅರಸು ಜಯಂತ್ಯುತ್ಸವ ನಿಮಿತ್ತ ಜಿಲ್ಲಾಡಳಿತ ಭವನದ ಆವರಣದಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಸಂಸದ ಪಿ.ಸಿ. ಗದ್ದಿಗೌಡರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಕಲಾಭವನಕ್ಕೆ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿಸಿಎಂ ಇಲಾಖೆ ವ್ಯಾಪ್ತಿಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಪ್ರೀತಂ ಕೊಣ್ಣೂರ, ಸಾಗರ ಕುರಬೆಟ್ಟ, ಸುನೀಲ ಮುಧೋಳ
ಹಾಗೂ ಪಿಯುಸಿಯಲ್ಲಿ ಪ್ರವೀಣ ಕೊಲಕಾರ, ಮಹೇಶ ಲಮಾಣಿ, ಐಶ್ವರ್ಯ ಕೌಜಲಗಿ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next