Advertisement

SSLC ಫ‌ಲಿತಾಂಶ ಸುಧಾರಣ ಕ್ರಮಕ್ಕೆ ಯಶ ಸಿಗಲಿ

01:41 AM Jul 16, 2024 | Team Udayavani |

ಈ ಬಾರಿ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಯು ನಿರಾಶ ದಾಯಕವಾಗಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಸಾಕಷ್ಟು ಮುಂಚಿತವಾಗಿ ಎಚ್ಚೆತ್ತುಕೊಂಡಿರುವುದು ಒಂದು ಒಳ್ಳೆಯ ಸೂಚನೆ. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಅವರ ಮನೆಗೆ ಶಿಕ್ಷಕರ ಭೇಟಿ, ಡಿಸೆಂಬರ್‌ ಅಂತ್ಯದೊಳಗೆ ನಿಗದಿತ ಪಠ್ಯ ವಿಷಯಗಳನ್ನು ಪೂರ್ಣಗೊಳಿಸಿ ಬಳಿಕದ ಶಾಲಾವಧಿಯನ್ನು ಸಂಪೂರ್ಣ ವಾಗಿ ಪುನರಾವರ್ತನೆ – ಪರೀಕ್ಷೆ ತಯಾರಿಗೆ ಮೀಸಲಿಡುವುದು, ಸರಣಿ ಪರೀಕ್ಷೆ, ಫ‌ಲಿತಾಂಶಗಳ ವಿಶ್ಲೇಷಣೆ, ಹೆತ್ತವರ ಜತೆಗೆ ಸಭೆ – ಹೀಗೆ ಫ‌ಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.

Advertisement

ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸಂಪೂರ್ಣ ಪರೀಕ್ಷೆಯನ್ನು ವೆಬ್‌ ಕಾಸ್ಟಿಂಗ್‌ ನಡೆಸಲಾಗಿತ್ತು. ಇದರ ಪರಿಣಾಮ ವಾಗಿ ವಿದ್ಯಾರ್ಥಿಗಳ ಅಸಾಮರ್ಥ್ಯ ಬಯಲಿಗೆ ಬಂದಿತ್ತು. ಅರ್ಧಕ್ಕರ್ಧ ವಿದ್ಯಾರ್ಥಿ ಗಳು ಅನುತ್ತೀರ್ಣಗೊಳ್ಳುವ ಸ್ಥಿತಿ ಸೃಷ್ಟಿಯಾಗಿದ್ದು, ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ.

ಕಳೆದ ಹಲವು ದಶಕಗಳಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳಲ್ಲಿ ಅನುಸರಿಸುತ್ತ ಬರಲಾಗಿರುವ “ಉದಾರವಾದ’ದ ಫ‌ಲವಾಗಿ ವಿದ್ಯಾರ್ಥಿಗಳಲ್ಲಿ ಈ ರೀತಿಯ ಅಸಾಮರ್ಥ್ಯ ಸೃಷ್ಟಿಯಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. “ಕಡ್ಡಾಯವಾಗಿ ಉತ್ತೀರ್ಣ’ಗೊಳಿಸುವಂತಹ ಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ವಿವಿಧ ಪಠ್ಯವಿಷಯಗಳಿಗೆ ಸಂಬಂಧಿಸಿದ ಮೂಲಭೂತವಾದ ಹಲವು ಕೌಶಲ, ಸಾಮರ್ಥ್ಯ, ತಿಳಿವಳಿಕೆಗಳ ಕೊರತೆ ಇದೆ ಎನ್ನುವುದು ಬಹಿರಂಗ ಸತ್ಯ. ಈ ಹಿಂದೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದವು ಎನ್ನಲಾದ ಪರೀಕ್ಷಾ ಅಕ್ರಮಗಳಿಗೆ ಕಳೆದ ಬಾರಿ ವೆಬ್‌ ಕಾಸ್ಟಿಂಗ್‌ನಂತಹ ಕ್ರಮದಿಂದ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಈ ಅಸಾಮರ್ಥ್ಯ ಬೆಳಕಿಗೆ ಬಂದಿದೆ.

ಅದೇನೇ ಇದ್ದರೂ ವಿದ್ಯಾರ್ಥಿಗಳನ್ನು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ತಯಾರುಗೊಳಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಅನುಸರಿಸಲು ಉದ್ದೇಶಿ ಸಿರುವ ಹೊಸ ಕ್ರಮಗಳು ಸ್ವಾಗತಾರ್ಹ. ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಬೆಳಗ್ಗೆ ಮತ್ತು ಸಂಜೆ, ಶನಿವಾರದ ದಿನಗಳಲ್ಲಿ ಹೆಚ್ಚುವರಿ ವಿಶೇಷ ತಯಾರಿ ತರಗತಿಗಳಂತಹ ಕ್ರಮಗಳನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಅನುಸರಿಸಿ ಯಶಸ್ಸು ಗಳಿಸಲಾಗಿದೆ.

ಕಳೆದ ವರ್ಷ ಸರಣಿ ಪರೀಕ್ಷೆಯನ್ನು ಉಡುಪಿ ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ನಡೆಸಲಾಗಿತ್ತು. ಇದರ ಜತೆಗೆ ಎಸೆಸೆಲ್ಸಿ ಪರೀಕ್ಷೆಗೆ ಹಿಂದಿನ ಕೆಲವು ವಾರ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ವಸತಿ ಕಲ್ಪಿಸಿ ರಾತ್ರಿಯೂ ಅವರನ್ನು ಅಧ್ಯಯನದಲ್ಲಿ ತೊಡಗಿಸುವಂತಹ ವಿಶೇಷ ಪ್ರಯತ್ನಗಳು ಉಡುಪಿ-ದ.ಕ.ದ ಕೆಲವು ಶಾಲೆಗಳಲ್ಲಿ ನಡೆದಿವೆ. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಅವರನ್ನು ಗುಂಪುಗಳಾಗಿ ವಿಂಗಡಿಸಿ, ಫ‌ಲಿತಾಂಶದ ಆಯಾ ಸ್ತರದಿಂದ ಇನ್ನೊಂದು ಸ್ತರಕ್ಕೆ ಎತ್ತರಿಸುವ ಪ್ರಯೋಗವನ್ನೂ ಮಾಡಿ ನೋಡಲಾಗಿದೆ. ಇವುಗಳ ಪರಿಣಾಮವೂ ನಿಚ್ಚಳವಾಗಿದೆ – ಈ ಎರಡು ಜಿಲ್ಲೆಗಳು ಎಸೆಸೆಲ್ಸಿ ಪರೀಕ್ಷೆ ಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿವೆ. ಹೀಗಾಗಿ ಈ ಕ್ರಮಗಳನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ ವಿಸ್ತರಿಸುವ ಮೂಲಕ ಕಡಿಮೆ ಫ‌ಲಿತಾಂಶ ಬರುವ ಜಿಲ್ಲೆಗಳ ಫ‌ಲಿ ತಾಂಶ ವೃದ್ಧಿಗೆ ಸರಕಾರ ಉತ್ತಮ ಹೆಜ್ಜೆಯನ್ನಿಟ್ಟಿದೆ.

Advertisement

ಸಾಮಾನ್ಯವಾಗಿ ಶಿಕ್ಷಣ ಇಲಾಖೆ ಇಂತಹ ಕ್ರಮಗಳ ಅನುಸರಣೆಯಲ್ಲಿ ವಿಳಂಬಕ್ಕೆ ಹೆಸರುವಾಸಿಯಾದದ್ದು. ಈ ಬಾರಿ ಅದರಿಂದ ದೂರ ಸರಿದು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಎಚ್ಚೆತ್ತುಕೊಂಡಿರುವುದು ಶ್ಲಾಘನಾರ್ಹ. ರಾಜ್ಯದೆಲ್ಲೆಡೆ ಇದು ಯಶಸ್ವಿಯಾಗಿ ಅನುಸರಣೆಯಾಗಲಿ. ಎಲ್ಲ ಶಿಕ್ಷಕರು ಇಲಾಖೆಯ ಈ ಉಪಕ್ರಮ ವನ್ನು ಒಂದು ಪಂಥಾಹ್ವಾನವಾಗಿ ಸ್ವೀಕರಿಸಿ ಮಕ್ಕಳ ಫ‌ಲಿತಾಂಶ ಉನ್ನತಿಗೆ ಕೈಜೋ ಡಿಸಲಿ ಹಾಗೂ ಪೋಷಕರೂ ಇದಕ್ಕೆ ಸಹಕರಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next